Advertisement

ಅಗತ್ಯಕ್ಕಿಂತಲೂ ಹೆಚ್ಚು ನೀರಿನ ಬಳಕೆಯೇ ಕೊರತೆಗೆ ಕಾರಣ?

09:40 AM Apr 27, 2019 | Suhan S |

••ವಿಶೇಷ ವರದಿ

Advertisement

ಉಡುಪಿ, ಎ. 26: ನಗರದ ನೀರಿನ ಅಭಾವಕ್ಕೆ ಅಗತ್ಯಕ್ಕಿಂತ ಹೆಚ್ಚು ಬಳಕೆಯೇ ಕಾರಣ ಎಂಬುದು ಇದೀಗ ಶ್ರುತಪಟ್ಟಿದೆ. ಇದರಿಂದ ವರ್ಷವೂ ಎಪ್ರಿಲ್, ಮೇ ಅಂತ್ಯಕ್ಕೆ ಇಡೀ ನಗರವೇ ನೀರಿಗಾಗಿ ಪರದಾಡುವಂತಾಗಿದೆ.

ನಗರದ ಜನಸಂಖ್ಯೆ ಆಧಾರದ ಪ್ರಕಾರ ವೈಜ್ಞಾನಿಕವಾಗಿ ದಿನಕ್ಕೆ 18 ದಶಲಕ್ಷ ಲೀ. ನೀರು ಸಾಕು. ಆದರೆ ಈಗ ನಗರಸಭೆ 24 ದಶಲಕ್ಷ ಲೀ. ನೀರು ಪೂರೈಸುತ್ತಿದ್ದು, ನೀರಿನ ಅಭಾವ ಎದುರಾಗಿದೆ. ನಾಗರಿಕರು ತುಸು ಕಾಳಜಿ ವಹಿಸಿದಲ್ಲಿ 6 ದಶಲಕ್ಷ ಲೀ. ಹೆಚ್ಚುವರಿ ನೀರು ಪೋಲನ್ನು ತಡೆಗಟ್ಟಿ ಅಭಾವವನ್ನು ನಿಭಾಯಿಸಲು ಸಾಧ್ಯವಿದೆ.

ಸ್ವರ್ಣಾ ನದಿಯಿಂದ 2 ಹಂತಗಳಲ್ಲಿ ನಗರಕ್ಕೆ ನೀರು ಸರಬರಾಜಾಗುತ್ತಿದೆ. ಬಜೆ ಅಣೆಕಟ್ಟು ನಿರ್ಮಾಣವಾದ ಬಳಿಕ ಮೊದಲ ಹಂತದಲ್ಲಿ ಪ್ರತಿದಿನ 9 ದಶಲಕ್ಷ ಲೀ. ನೀರು ಸರಬರಾಜು ಆಗಿತ್ತು. 2006ರಲ್ಲಿ ಆರಂಭಗೊಂಡ ಎರಡನೇ ಹಂತದ ಯೋಜನೆಯಲ್ಲಿ ಪ್ರತಿದಿನ 24 ಎಂಎಲ್ಡಿ ನೀರು ಸರಬರಾಜು ಯೋಜನೆಯಾಗಿದೆ. ಫೆಬ್ರವರಿ – ಮೇ ನಡುವಿನ ಅವಧಿಯಲ್ಲಿ ನದಿಯಲ್ಲಿ ನೀರಿನ ಹರಿವಿರದು. ಆದರೆ ನೀರು ಖರ್ಚಾಗುತ್ತಲೇ ಇರುತ್ತದೆ.

18 ದಶಲಕ್ಷ ಲೀ. ನೀರು ಸಾಕು:

Advertisement

ನಗರದಲ್ಲಿ ಸುಮಾರು 10,500 ಮನೆಗಳು, ಮಣಿಪಾಲ ಕೈಗಾರಿಕಾ ವಲಯದಲ್ಲಿ 70ರಿಂದ 80 ಕೈಗಾರಿಕಾ ಘಟಕ, 570 ಫ್ಲ್ಯಾಟ್‌ಗಳಿವೆ. ಸುಮಾರು 1,000 ವಾಣಿಜ್ಯ ಸಂಸ್ಥಾಪನೆಗಳು ಇವೆ. ಸುಮಾರು 600 ಹೊಟೇಲ್, 40 ಲಾಡ್ಜ್ ಗಳಿವೆ. ಸರಕಾರದ ಪ್ರಕಾರ ಪ್ರತಿ ಪ್ರಜೆಗೆ ದಿನಕ್ಕೆ 135 ಲೀ. ನೀರು ಒದಗಿಸಬೇಕು. ನಗರದ ಜನಸಂಖ್ಯೆ 1.6 ಲಕ್ಷ. ಅದರ ಪ್ರಕಾರ ಪ್ರತಿನಿತ್ಯ ನಗರಕ್ಕೆ ಸುಮಾರು 18 ದಶಲಕ್ಷ ಲೀ. ನೀರು ಸಾಕಾಗುತ್ತದೆ. ಆದರೆ ಇತರ ಕಡೆಗಳಿಗೆ ಹೋಲಿಕೆ ಮಾಡಿದರೆ ನಗರದಲ್ಲಿ ನೀರಿನ ಬಳಕೆ ಹೆಚ್ಚು.

ಬಜೆಯಲ್ಲಿ ಅಂದು 1972ರ‌ ಜನಸಂಖ್ಯೆ ಹಾಗೂ ಅಭಿವೃದ್ಧಿ ಆಧಾರದ ಮೇಲೆ ಅಣೆಕಟ್ಟು ನಿರ್ಮಿಸಲಾಗಿತ್ತು. ಆರಂಭದಲ್ಲಿದ್ದ 1,000 ನಳ್ಳಿ ನೀರು ಸಂಪರ್ಕ ಇದೀಗ 19,200ಕ್ಕೆ ಏರಿಕೆಯಾಗಿದೆ.

ಪ್ರತಿನಿತ್ಯ 24 ದಶಲಕ್ಷ ಲೀಟರ್‌ ಪೂರೈಕೆ:

ಪ್ರಸ್ತುತ ನಗರಸಭೆಯ 35 ವಾರ್ಡ್‌ ಹಾಗೂ 7 ಗ್ರಾಮ ಪಂಚಾಯತ್‌ನ 1.6 ಲಕ್ಷ ಜನತೆಗೆ ಪ್ರತಿದಿನ 24 ದಶಲಕ್ಷ ಲೀ. ನೀರು ಪೂರೈಸಲಾಗುತ್ತದೆ.

ಆದರೆ ಬೇಸಗೆಯಲ್ಲಿ ಡ್ಯಾಂನಲ್ಲಿರುವ ನೀರಿನ ಮಟ್ಟದ ಆಧಾರದ ಮೇಲೆ ನೀರು ಒದಗಿಸಲಾಗುತ್ತಿದೆ. ನಗರಸಭೆ ನೀರಿನ ಪೂರೈಕೆಗೆ ಬಳಸುತ್ತಿದ್ದ ಕೆಲವೊಂದು ತೆರೆದ ಬಾವಿಗಳೂ ಸಹ ಮುಚ್ಚಲ್ಪಟ್ಟಿವೆ. ಇದರ ಜತೆಗೆ ನಗರಸಭೆ ನೀರನ್ನು ನಂಬಿಕೊಂಡು ಮತ್ತು ಒಳಚರಂಡಿಯ ಅಧ್ವಾನದಿಂದ ನೀರು ಹಾಳಾಗಿ ಇದ್ದ ಬಾವಿಗಳನ್ನು ಮುಚ್ಚಿದ್ದಾರೆ ಜನರು ನಳ್ಳಿ ತಿರುಗಿಸುತ್ತಿದ್ದಾರೆ.

ಪ್ರತಿ ತಿಂಗಳು 1 ಲ.ಲೀ.:

ಬೇಸಗೆ ಕಾಲದಲ್ಲಿ ಇಡೀ ನಗರದ ಜನರು ನೀರಿಗಾಗಿ ತತ್ತರಿಸಿ ಹೋಗುತ್ತಿದ್ದರೆ, ಮಣಿಪಾಲದಲ್ಲಿ ಶೇ. 68ರ ಪೈಕಿ ಪ್ರತಿಯೊಬ್ಬರೂ ಪ್ರತಿ ತಿಂಗಳು 1 ಲ.ಲೀ. ನೀರು ಬಳಕೆ ಮಾಡುತ್ತಿದ್ದಾರೆ. ಮೂರ್‍ನಾಲ್ಕು ಜನರು ವಾಸಿಸುವ ಮನೆಗಳಲ್ಲಿ ಭಾರೀ ನೀರು ಬಳಕೆ ಮಾಡಲಾಗುತ್ತಿದೆ. ಬಿಲ್ಲು ಕಟ್ಟುತ್ತೇವೆಂಬ ನೆಪವೊಡ್ಡಿ ಬೇಕಾಬಿಟ್ಟಿ ನೀರು ಬಳಕೆ ಮತ್ತು ಗಿಡಗಳಿಗೆ ಹಾಕುವುದರಿಂದ ಕೊರತೆಯಾಗುತ್ತಿದೆ.

 

8,000 ಲೀ. ವರೆಗೆ ಪ್ರತಿ ಲೀ. 7 ರೂ.

15,000 ಲೀ. ವರೆಗೆ ಪ್ರತಿ ಲಿ 9 ರೂ.

45,000 ಲೀ. ವರೆಗೆ ಪ್ರತಿ ಲಿ 11ರೂ.

50,000 ಲೀ ವರೆಗೆ ಪ್ರತಿ ಲೀ. 13ರೂ.

(ವಾಣಿಜ್ಯ ಸಂಸ್ಥೆಗಳಿಗೆ ದುಪ್ಪಟ್ಟು, ಕೈಗಾರಿಕೆ ಗಳಿಗೆ ನಾಲ್ಕು ಪಟ್ಟು ಶುಲ್ಕ .)

 

ಪ್ರವಾಸಿಗರ ಸಂಖ್ಯೆ ಹೆಚ್ಚಳ:

ಪ್ರತೀ ವರ್ಷ ಮಾರ್ಚ್‌ ಹಾಗೂ ಮೇ ತಿಂಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಡುಪಿ ನಗರಕ್ಕೆ ಬಂದು ಲಾಡ್ಜ್ಗಳಲ್ಲಿ ನೆಲೆ ನಿಲ್ಲುತ್ತಿದ್ದಾರೆ.

ನಗರ ಪ್ರದೇಶದ ಶೇ. 90ರಷ್ಟು ವಾಣಿಜ್ಯ ಕಟ್ಟಡಗಳು ನಗರಸಭೆಯ ನೀರನ್ನೇ ಅವಲಂಬಿಸಿರುವುದರಿಂದ ಬೇಸಗೆ ಕಾಲದಲ್ಲಿ ಹೊಟೇಲ್ಗಳಲ್ಲಿ ನೀರಿನ ಬಳಕೆ ಪ್ರಮಾಣ ಹೆಚ್ಚಾಗಿದೆ.

ಒಂದೇ ಜಾಗದಲ್ಲಿ 10 ಸಂಪರ್ಕ:

ಇಂದು ನಗರ ಸಂಪೂರ್ಣವಾಗಿ ಬದಲಾಗಿದೆ. ಹಿಂದೆ ಒಂದು ಮನೆ ನಿರ್ಮಾಣವಾಗುತ್ತಿದ್ದ ಜಾಗದಲ್ಲಿ ಫ್ಲ್ಯಾಟ್ ತಲೆ ಎತ್ತಿದೆ. ಆ ಒಂದು ಪ್ರದೇಶದಲ್ಲಿ ಹತ್ತಾರು ನೀರಿನ ಸಂಪರ್ಕ ನೀಡಬೇಕಾಗಿದೆ.

ಉಡುಪಿ ನಗರಕ್ಕೆ ಸ್ವರ್ಣಾ ನದಿಯಿಂದ 365 ದಿನಗಳು ಕೂಡ ನೀರು ಪೂರೈಕೆ ಮಾಡಲು ಅಸಾಧ್ಯವಾದ ಹಿನ್ನೆಲೆಯಲ್ಲಿ ವಾರಾಹಿ ನದಿಯ ನೀರನ್ನು ನಗರಕ್ಕೆ 24 ಗಂಟೆ ಕಾಲ ಸರಬರಾಜು ಮಾಡುವ ನಿಟ್ಟಿನಲ್ಲಿ ಅಮೃತ್‌ ಹಾಗೂ ಎಡಿಬಿಯ ಒಟ್ಟು 295.6 ಕೋ.ರೂ. ಅನುದಾನದಲ್ಲಿ ವಾರಾಹಿಯಿಂದ 2046ರ ವರೆಗೆ 41 ಎಂಎಲ್ಡಿ ನೀರು ಪಂಪ್‌ ಮಾಡುವ ಯೋಜನೆ ರೂಪಿಸಲಾಗಿದೆ.

ಪರಿಹಾರಕ್ಕೆ ಮುಂದಿನ ದಿನಗಳಲ್ಲಿ ಮಾಹಿತಿ:

ಸದ್ಯಕ್ಕೆ ವಾರ್ಡ್‌ಗಳಿಗೆ 3 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ನೀರಿನ ಸಮಸ್ಯೆಗೆ ಪರಿಹಾರ ನೀಡುವ ಕುರಿತು ಕೈಗೊಳ್ಳುವ ಕ್ರಮಗಳ ಕುರಿತು ಮುಂದಿನ ದಿನದಲ್ಲಿ ಮಾಹಿತಿ ನೀಡಲಾಗುತ್ತದೆ.
-ಆನಂದ್‌ ಸಿ.ಕಲ್ಲೊಳಿಕರ್‌, ಪೌರಾಯುಕ್ತರು, ಉಡುಪಿ ನಗರಸಭೆ.
ನೀರನ್ನು ಮಿತವಾಗಿ ಬಳಸಿ:

ನೀರಿನ ಅಗತ್ಯ ಹೆಚ್ಚಿದ್ದು, ಪೂರೈಕೆ ಕಡಿಮೆಯಾಗಿದೆ. ನೀರನ್ನು ಬಳಕೆ ಮಾಡುವಾಗ ಹಿತಮಿತವಾಗಿ ಬಳಸಿ. ಎತ್ತರ ಪ್ರದೇಶದಲ್ಲಿ ವಾಸಿಸುವವರಿಗೂ ಬಳಕೆ ಅವಕಾಶ ಕಲ್ಪಿಸಬೇಕು.

-ರಾಘವೇಂದ್ರ,, ಪರಿಸರ ಎಂಜಿನಿಯರ್‌ ನಗರಸಭೆ, ಉಡುಪಿ.

 

ನೀರಿನ ತೀವ್ರ ಸಮಸ್ಯೆಇದ್ದಲ್ಲಿ ತಮ್ಮ ಹೆಸರಿನ ಸಹಿತ ‘ಉದಯವಾಣಿ’ ವಾಟ್ಸಪ್‌ ನಂಬರ್‌ 9148594259 ಬರೆದು ಕಳುಹಿಸಿ.

Advertisement

Udayavani is now on Telegram. Click here to join our channel and stay updated with the latest news.

Next