Advertisement

ಮೀಸಲಾತಿ ವರ್ಗೀಕರಣ ಸುಲಭವಾಗಿದೆಯೇ?

01:06 PM Jan 17, 2018 | |

ಈಗ ಸರ್ಕಾರ ಕೇವಲ ಸಚಿವ ಸಂಪುಟದಲ್ಲಿ ಒಪ್ಪಿಕೊಳ್ಳುವ ತೀರ್ಮಾನ ತೆಗೆದುಕೊಂಡರೆ ಸಾಲದು. ಇದು ಸಂವಿಧಾನ ತಿದ್ದುಪಡಿಯಂತಹ ಮಹತ್ತರವಾದ ಸಂಗತಿಯಾದ್ದರಿಂದ, ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಿ ಅವರ ಬೆಂಬಲ ಪಡೆಯಬೇಕು. ನಂತರ ವಿಧಾನಮಂಡಲದ ಅಧಿವೇಶನದಲ್ಲಿ ಮೀಸಲಾತಿ ವರ್ಗೀಕರಣವನ್ನು ಅನುಮೋದಿಸುವ ಒಂದು ಒಮ್ಮತದ ತೀರ್ಮಾನ ಕೈಗೊಳ್ಳಬೇಕು. ಆಗ ಈ ವರ್ಗೀಕರಣದ ವಿಷಯಕ್ಕೆ ಕಾರ್ಯಾಂಗ ಮತ್ತು ಶಾಸಕಾಂಗದ ಬೆಂಬಲ ಸಿಕ್ಕಂತಾಗಿ ಕೇಂದ್ರ ಸರ್ಕಾರ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲು ಸಾಧ್ಯವಾಗಬಹುದು.

Advertisement

ಪರಿಶಿಷ್ಟ ಜಾತಿಯ ಶೇ. 15ರ ಮೀಸಲಾತಿ ಪ್ರಮಾಣವನ್ನು ಪಟ್ಟಿಯಲ್ಲಿ ಬರುವ 101 ಜಾತಿಗಳಿಗೂ ತಮ್ಮ ಜನಸಂಖ್ಯೆಗೆ ಅನುಗುಣ ವಾಗಿ ಹಂಚಬೇಕೆನ್ನುವ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯ ಕುರಿತು ಸರಕಾರ ಚಿಂತನೆ ನಡೆಸಿದೆ. ಪರಿಶಿಷ್ಟ ಜಾತಿಯ ಸಚಿವರು ಮತ್ತು ಶಾಸಕರು ಹಾಗೂ ವರದಿ ಪರವಾದ ಹೋರಾಟಗಾರರು ಮತ್ತು ವಿವಿಧ ದಲಿತ ಸಂಘಟನೆಗಳ ನಾಯಕರ ಸಭೆ ಕರೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರ್ಚಿಸಿದ್ದಾರೆ. ಈ ಮೂಲಕ ತಮ್ಮ ಮೇಲಿರುವ ಸಮಸ್ಯೆಯಿಂದ ಬಿಡುಗಡೆಯಾಗಲು ಅವರಿಗೊಂದು ಮುಕ್ತ ಅವಕಾಶ ಸಿಕ್ಕಂತಾಗಿದೆ.

ಇದಕ್ಕಾಗಿ ಕಾನೂನು ತಜ್ಞರ ಸಲಹೆ ಪಡೆದು ಮುನ್ನಡೆಯಲು ನಿರ್ಧರಿಸಿದ್ದಾರೆ. ಇದನ್ನು ಎಲ್ಲರೂ ಒಪ್ಪಿದ್ದಾರೆ. ಮುಖ್ಯವಾಗಿ ಪರಿಶಿಷ್ಟ ಜಾತಿಯ ಮೀಸಲಾತಿ ವರ್ಗೀಕರಣದ ಪ್ರಕರಣ ಹನ್ನೆರಡು ವರ್ಷಗಳ ಹಿಂದೆಯೇ ಸುಪ್ರೀಂ ಕೋರ್ಟ್‌ನಿಂದ ತಿರಸ್ಕೃತಗೊಂಡಿದೆ. ಇದು ಜಾರಿಯಾಗಬೇಕಾದರೆ ಸಂವಿಧಾನದ ಕಲಂ 341ಕ್ಕೆ ತಿದ್ದುಪಡಿ ಆಗಬೇಕು. ಇದು ಆಂಧ್ರ ಪ್ರದೇಶದ ಮೀಸಲಾತಿ ವರ್ಗೀಕರಣದ ವಿಷಯದಲ್ಲಿ ಆಗಿರುವ ಘಟನೆ.

ಆಂಧ್ರ ಪ್ರದೇಶಕ್ಕಿಂತ ಮುಂಚಿತವಾಗಿ ಹರಿಯಾಣ ಮತ್ತು ಪಂಜಾಬ್‌ನಲ್ಲಿ ಈ ಪ್ರಯತ್ನ ನಡೆದು ಆಯಾ ರಾಜ್ಯಗಳ ಹೈಕೋರ್ಟುಗಳಲ್ಲಿ ಈ ವರ್ಗೀಕರಣ ಬಿದ್ದುಹೋಗಿದೆ. ಇದೇ ಯತ್ನ ಈಗ ಕರ್ನಾಟಕದಿಂದ ನಡೆದಿದೆಯಷ್ಟೇ. ಎರಡು ದಶಕಗಳ ಹಿಂದೆಯೇ ಪರಿಶಿಷ್ಟ ಜಾತಿಯ ವರ್ಗೀಕರಣ ಕರ್ನಾಟಕದ ಮಾದಿಗ ಯುವಕರನ್ನು ಆಕರ್ಷಿಸಿ ನಿರಂತರವಾಗಿ ಹೋರಾಟ ನಡೆದುಕೊಂಡು ಬಂದಿದೆ.  

ಶೇ. 15ರಷ್ಟು ಮೀಸಲಾತಿಯಲ್ಲಿ ತಮಗೆ ಸಿಗಬೇಕಾದ ನ್ಯಾಯ ಸಿಗಲಿಲ್ಲ ಎನ್ನುವುದು ಮಾದಿಗ (ಎಡಗೈ) ಸಮುದಾಯದ ಆರೋಪ. ಹೊಲೆಯ (ಬಲಗೈ) ಸಮುದಾಯ ತಮಗಿಂತಲೂ ಜನಸಂಖ್ಯೆಯಲ್ಲಿ ಕಡಿಮೆ ಇದ್ದರೂ ಮೀಸಲಾತಿಯಲ್ಲಿ ಸಿಂಹಪಾಲು ಪಡೆದುಕೊಂಡು ಬಂದಿದೆ ಎನ್ನುವುದು ಹಳೆಯ ಆರೋಪ. ಈಗ ಬಿಸಿ ರಕ್ತದ ಮಾದಿಗ ಸಮುದಾಯದ ಯುವಕರು ಬಲಗೈ ಜನರು ಮೀಸಲಾತಿ ತಮಗೆ ಸಿಗದಂತೆ ಕಬಳಿಸಿದ್ದಾರೆ, ನುಂಗಿದ್ದಾರೆ ಹೀಗೆ ಹತ್ತಾರು ಆರೋಪಗಳನ್ನು ಮಾಡಿಕೊಂಡು ಬಂದಿದ್ದಾರೆ. ಈ ಆರೋಪದಲ್ಲಿ ಸ್ವಲ್ಪಮಟ್ಟಿಗೆ ನಿಜವಿರಬಹುದು. ಆದರೆ ಬಲಗೈ ಜನರು ನಾವು ಮೀಸಲಾತಿಯನ್ನು ಸದ್ಬಳಕೆ ಮಾಡಿಕೊಂಡಿದ್ದೇವೆ. ಶೇ 15ರಷ್ಟು ಮೀಸಲಾತಿಯಲ್ಲಿ ನಮ್ಮ ಶ್ರಮ ಮತ್ತು ಸಾಮರ್ಥ್ಯ ದಿಂದ ಬಳಸಿಕೊಂಡಿದ್ದೇವೆ. ನಾವು ಯಾರ ಮೀಸಲಾತಿಯನ್ನೂ ಕಬಳಿಸಿಲ್ಲ ಎನ್ನುತ್ತಾರೆ. 

Advertisement

ಈ ಎರಡು ಪ್ರಬಲ ಸಮುದಾಯಗಳ ಕುಲಕಸಬು ಮತ್ತು ಅವರು ನೆಲೆಸಿರುವ ಪ್ರದೇಶ, ಅಲ್ಲಿ ಲಭ್ಯವಿರುವ ಉದ್ಯೋಗಾವ ಕಾಶಗಳು ಹೀಗೆ ಅದರ ಹಿನ್ನೆಲೆಯೇ ಬೇರೆ ಇದೆ. ಎಡಗೈ ಸಮು ದಾಯ ಮುಖ್ಯವಾಗಿ ಚರ್ಮೋದ್ಯಮ, ಕೂಲಿಯನ್ನು ಅವಲಂಬಿಸಿ ದ್ದರೆ, ಬಲಗೈ ಸಮುದಾಯ ಕೃಷಿಯಲ್ಲೇ ಪ್ರಧಾನವನ್ನಾಗಿ ಬೆಳೆದು ಬಂದಿರುವುದರಿಂದ ಹೆಚ್ಚಾಗಿ ನೀರಾವರಿ ಪ್ರದೇಶದಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇವರು ತಮ್ಮ ಮಕ್ಕಳ ಶಿಕ್ಷಣಕ್ಕೆ ನೀಡುವ ಆದ್ಯತೆ ಎಡಗೈ ಸಮುದಾಯದಲ್ಲಿ ಕಂಡು ಬರದೇ ಇರುವುದೇ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಏರುಪೇರಿಗೆ ಕಾರಣವಿರಬಹುದು.

ಎಡಗೈ ಸಮುದಾಯದ ಹೋರಾಟವು ಹೊಸದಾಗಿ ಮೀಸ ಲಾತಿ ಕೇಳುತ್ತಿಲ್ಲ. ಈಗಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಎಂತಲೂ ಹೇಳುತ್ತಿಲ್ಲ. ಇರುವ ಮೀಸಲಾತಿಯಲ್ಲೇ ತನಗೆ ಹೆಚ್ಚಿನ ಪಾಲು ಬೇಕು. ಅದು ತನಗಾಗಿಯೇ ಇರಬೇಕೆನ್ನುವುದು ಅದರ ಬೇಡಿಕೆ. ಹಾಗಾಗಿ ರಾಜಮಾರ್ಗವನ್ನು ಬಿಟ್ಟು ತನ್ನ ನೇತೃತ್ವದಲ್ಲಿ ನನ್ನಂತೆಯೇ ಕಿರಿದಾದ ಓಣಿಗಳಲ್ಲಿ ಎಲ್ಲರೂ ನಡೆಯೋಣ ಎನ್ನುವಂತಿದೆ. ಅಂತೂ ರಾಜ್ಯ ಸರ್ಕಾರ ಈ ವರ್ಗಗಳ ನೋವಿಗೆ ದನಿಗೂಡಿ ಸುತ್ತಿರುವುದು ಸರಿ. ಆದರೆ ಆಯೋಗದ ವರದಿಯಲ್ಲಿ ಏನಿದೆ? 101 ಜಾತಿಗಳನ್ನು ಗುಂಪುಗಳನ್ನಾಗಿ ಮಾಡಿ ಅವರಿಗೆ ಹಂಚಿರುವ ಮೀಸಲಾತಿಗೆ ಯಾವ ಮಾನದಂಡವನ್ನು ಉಪಯೋಗಿಸಲಾಗಿದೆ ಎನ್ನುವ ಸತ್ಯಸಂಗತಿ ಸಾರ್ವಜನಿಕರಿಗೆ ತಿಳಿಯಬಾರದೆ? ವರದಿ ಯನ್ನು ಪ್ರಕಟಿಸದೆ ಕೇವಲ ಮೀಸಲಾತಿಯ ಶೇಕಡಾವಾರು ಹಂಚಿಕೆಯ ಪ್ರಮಾಣದ ಮೇಲೆ ಚರ್ಚೆ ಮತ್ತು ತೀರ್ಮಾನ ವಾಗುತ್ತಿರುವುದು ವಿಚಿತ್ರ. ಈಗಲೂ ಕಾಲ ಮಿಂಚಿಲ್ಲ. ವರದಿಯನ್ನು ಬಹಿರಂಗಪಡಿಸುವುದು ಪ್ರಜಾಸತ್ತಾತ್ಮಕ ಕ್ರಮ.

ಈಗಾಗಲೇ ಒಳ ಮೀಸಲಾತಿ ನೀತಿಯನ್ನು ಜಾರಿಗೆ ತಂದು ಪೇಚಿಗೆ ಸಿಕ್ಕ ಪಂಜಾಬ್‌, ಹರಿಯಾಣ ಮತ್ತು ಆಂಧ್ರ ಪ್ರದೇಶದ ಪ್ರಕರಣಗಳನ್ನು ಇಲ್ಲಿ ನೆನಪಿಸಿಕೊಳ್ಳುವುದು ಅವಶ್ಯ. ದಿವಂಗತ ರಾಷ್ಟ್ರಪತಿ ಗ್ಯಾನಿ ಜೈಲ್‌ಸಿಂಗ್‌ ಪಂಜಾಬ್‌ನ ಮುಖ್ಯಮಂತ್ರಿ ಯಾಗಿದ್ದಾಗ 1975ರಲ್ಲಿ ಆದೇಶವೊಂದನ್ನು ಹೊರಡಿಸಿ ಖಾಲಿ ಇರುವ ಸರ್ಕಾರಿ ಹುದ್ದೆಗಳಲ್ಲಿ ಶೇ. 50ರಷ್ಟನ್ನು ಪರಿಶಿಷ್ಟ ಜಾತಿಯಲ್ಲಿ ಬರುವ ವಾಲ್ಮೀಕಿ ಸಿಖ್‌ ಮತ್ತು ಮಜಬಿ ಸಿಖರಿಗೆ ಮೀಸಲಿಟ್ಟರು. ಇದರಿಂದ ಸ್ಫೂರ್ತಿ ಪಡೆದ ಪಕ್ಕದ ಹರಿಯಾಣ ಸರ್ಕಾರವೂ 1994ರಲ್ಲಿ ಪರಿಶಿಷ್ಟರಲ್ಲಿಯೇ ಎ ಮತ್ತು ಬಿ ಗುಂಪುಗಳನ್ನಾಗಿ ಮಾಡಿ ಶೇ 50ರಷ್ಟು ಮೀಸಲಾತಿಯನ್ನು ಸರ್ಕಾರಿ ಹುದ್ದೆಗಳಲ್ಲಿ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಜಾರಿಗೆ ತಂದಿತು. ಆದರೆ ಈ ವರ್ಗೀಕೃತ ಮೀಸಲಾತಿ ವ್ಯವಸ್ಥೆಯನ್ನು ಸಂವಿಧಾನಬಾಹಿರ ಎಂದು ಆಯಾ ರಾಜ್ಯಗಳ ಹೈಕೋರ್ಟುಗಳು ಅಸಿಂಧುಗೊಳಿಸಿದವು.

ನಂತರ ಈ ಪ್ರಕರಣ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿತು. ಈ ಸಂಬಂಧ ನಾಲ್ಕು ಅರ್ಜಿಗಳು ವಿಚಾರಣೆಗೆ ಬಂದವು. ನ್ಯಾಯ ಮೂರ್ತಿಗಳಾದ ಸಂತೋಷ ಹೆಗ್ಡೆ, ಎಸ್‌.ಎನ್‌. ವರಿಯಾವ, ಬಿ.ಪಿ. ಸಿಂಗ್‌, ಎಚ್‌.ಕೆ. ಸೆಮಾ ಮತ್ತು ಎಸ್‌.ಬಿ. ಸಿನ್ಹಾ ಅವರನ್ನೊಳಗೊಂಡ ನ್ಯಾಯಪೀಠ ಸುದೀರ್ಘ‌ವಾಗಿ ವಿಚಾರಣೆ ನಡೆಸಿತು. ಈ ನ್ಯಾಯಪೀಠವು ಮೀಸಲಾತಿ ಮತ್ತು ಒಳಮೀಸಲಾತಿಯ ಬಗೆಗೆ ಸಂವಿಧಾನದಲ್ಲಿ ಇರುವ ಎಲ್ಲ ಕಲಂಗಳನ್ನು ಎಳೆ ಎಳೆಯಾಗಿ ಬಿಡಿಸಿ ವ್ಯಾಖ್ಯಾನಿಸಿತು.

ಆಂಧ್ರ ಪ್ರದೇಶ ಸರ್ಕಾರ ಜಾರಿಗೆ ತಂದಿದ್ದ ಪರಿಶಿಷ್ಟ ಜಾತಿಗಳ (ಮೀಸಲಾತಿಯ ಸಮೀಕರಣ/ ಪುನರ್‌ರಚನೆ) 2000ರ ಕಾಯ್ದೆಯು ಸಂವಿಧಾನದ ಕಲಂ 341, 14, 15, 16 ಮತ್ತು ಪರಿಶಿಷ್ಟ ಜಾತಿಯ ಪಟ್ಟಿಗೆ ಹೊಸದಾಗಿ ಸೇರಿಸುವ ಸಂಬಂಧದ 41, 3 ಮತ್ತು 25ನೇ ಕಲಂ ಪ್ರಕಾರ ಅಸಿಂಧು ಆಯಿತು. ಅಷ್ಟು ಮಾತ್ರವಲ್ಲದೆ ಸಂವಿಧಾನದ ಕಲಂ 341ರ ಪ್ರಕಾರ ಪರಿಶಿಷ್ಟ ಜಾತಿಯ ಪಟ್ಟಿಗೆ ನೀಡಿರುವ ರಕ್ಷಣೆಯನ್ನು “ಅಭದ್ರಗೊಳಿಸುವ’,(The Constituent Assembly Debate coupled  with the fact that Article  341 makes it clear that the State Legislature or its Executive has no power of “disturbing” (term used by Dr. Ambedkar)the Presidential List of Scheduled Castes for the State.) This is quoted in the judgement of EV Chinnaiah V State of Andhra Pradesh 2005 SC -AIR page 169.. ಅಧಿಕಾರ ರಾಜ್ಯ ಶಾಸಕಾಂಗ ಅಥವಾ ಕಾರ್ಯಾಂಗ ಮಾಡುವ ಯಾವುದೇ ಕಾಯ್ದೆ ಅಥವಾ ಆಜ್ಞೆಗೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿತು. ಅಲ್ಲಿಗೆ ಆಂಧ್ರಪ್ರದೇಶ ಒಳಮೀಸಲಾತಿಯ ಕತೆ ಮುಗಿದಂತಾಯಿತು. ಆಂಧ್ರ ಸರ್ಕಾರ ತನ್ನ ಕೆಲಸ ಇಲ್ಲಿಗೆ ಮುಗಿಯಿತು. ಇನ್ನು ನಾನೇನೂ ಮಾಡಲಾರೆ ಎಂದು ಅಸಹಾಯಕವಾಗಿ ಕೈ ಚೆಲ್ಲಿ ಕುಳಿತಿತು.

ನ್ಯಾ. ಸದಾಶಿವ ಆಯೋಗದ ವರದಿಯಂತೆ ಎಡಗೈ ಗುಂಪಿನ ಜನಸಂಖ್ಯೆ ಶೇ. 33.47 ಇದ್ದು ಅವರಿಗೆ ಶೇ. 6ರಷ್ಟನ್ನು, ಮೀಸಲಾತಿಯನ್ನು ಹೆಚ್ಚಾಗಿ ಬಳಸಿಕೊಂಡಿದ್ದಾರೆನ್ನಲಾದ ಬಲಗೈ ಗುಂಪಿನ ಜನಸಂಖ್ಯೆ 32 ಇದ್ದು, ಇವರಿಗೆ ಶೇ.5ರಷ್ಟನ್ನು, ಶೇ. 3ರಷ್ಟಿರುವ ಸ್ಪೃಶ್ಯ ಜಾತಿಗಳಿಗೆ ಅಂದರೆ ಬೋವಿ, ಲಂಬಾಣಿ, ಕೊರಚ, ಕೊರಮ ಇತ್ಯಾದಿ ಅವರಿಗೆ ಶೇ 3ರಷ್ಟು ಮತ್ತು ಇತರರಿಗೆ ಶೇ. 1ರಷ್ಟು ಮೀಸಲಾತಿ ಪ್ರಮಾಣವನ್ನು ಹಂಚಲಾಗಿದೆ. 

ಸರ್ಕಾರ ಈಗ ಈ ವರದಿಯನ್ನು ಒಪ್ಪಿಕೊಳ್ಳುವ ಮನಸ್ಥಿತಿಗೆ ತಲುಪಿದೆ. ಆದರೆ ಈ ವರದಿ ಜಾರಿಗೆ ತರುವುದಾದರೆ ಸಂವಿಧಾನ ತಿದ್ದುಪಡಿಗೆ ಕೇಂದ್ರ ಸರ್ಕಾರವನ್ನು ಮನವೊಲಿಸುವ ಯಾವ ಪ್ರಯತ್ನ ನಡೆದಿದೆ? ರಾಜ್ಯ ಸರ್ಕಾರಗಳು ಎದುರಿಸುತ್ತಿರುವ ಇಂತಹ ಸಮಸ್ಯೆಗಳನ್ನು ಚರ್ಚಿಸಲು ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆಗಳೇ ನಡೆಯುತ್ತಿಲ್ಲ. ಆಂಧ್ರ ಬಿಟ್ಟರೆ ಬೇರಾವ ರಾಜ್ಯಗಳ ಮುಂದೆ ಈ ಸಮಸ್ಯೆಯೂ ಇಲ್ಲ. ವಸ್ತುಸ್ಥಿತಿ ಹೀಗಿರುವಾಗ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಯ ವರ್ಗೀಕರಣ ಮೀಸಲಾತಿ ಜಾರಿಗೆ ಬರುವುದೇ ಎನ್ನುವುದು ಮಿಲಿಯನ್‌ ಡಾಲರ್‌ ಪ್ರಶ್ನೆ!

ಈಗ ಸರ್ಕಾರ ಕೇವಲ ಸಚಿವ ಸಂಪುಟದಲ್ಲಿ ಒಪ್ಪಿಕೊಳ್ಳುವ ತೀರ್ಮಾನ ತೆಗೆದುಕೊಂಡರೆ ಸಾಲದು. ಇದು ಸಂವಿಧಾನ ತಿದ್ದುಪಡಿಯಂತಹ ಮಹತ್ತರವಾದ ಸಂಗತಿಯಾದ್ದರಿಂದ, ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಿ ಅವರ ಬೆಂಬಲ ಪಡೆಯಬೇಕು. ನಂತರ ವಿಧಾನಮಂಡಲದ ಅಧಿವೇಶನದಲ್ಲಿ ಮೀಸಲಾತಿ ವರ್ಗೀ ಕರಣವನ್ನು ಅನುಮೋದಿಸುವ ಒಂದು ಒಮ್ಮತದ ತೀರ್ಮಾನ ಕೈಗೊಳ್ಳಬೇಕು. ಆಗ ಈ ವರ್ಗೀಕರಣದ ವಿಷಯಕ್ಕೆ ಕಾರ್ಯಾಂಗ ಮತ್ತು ಶಾಸಕಾಂಗದ ಬೆಂಬಲ ಸಿಕ್ಕಂತಾಗಿ ಕೇಂದ್ರ ಸರ್ಕಾರ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲು ಸಾಧ್ಯವಾಗಬಹುದು.

ಸದ್ಯಕ್ಕಂತೂ ಈಗಿನ ಕೇಂದ್ರದಲ್ಲಿನ ಬಿಜೆಪಿ ಮತ್ತು ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರದ ವ್ಯವಸ್ಥೆಯಿಂದ ಇದು ಸಾಧ್ಯವಿಲ್ಲದ ಮಾತು ಎನಿಸುತ್ತದೆ. ದೇಶದಲ್ಲೇ ಕಾಂಗ್ರೆಸ್‌ ಮುಕ್ತ ಭಾರತ ಮಾಡಲು ಶಪಥ‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿನ ಕಾಂಗ್ರೆಸ್‌ ಸರ್ಕಾರದ ಶಿಫಾರಸ್ಸಿಗೆ ಮಣೆ ಹಾಕುತ್ತಾರೆಂದು ಯಾರಾದರೂ ನಂಬಿದ್ದರೆ ಅದು ಮೂರ್ಖತನ‌ವಾದೀತು.

ಒಂದು ವೇಳೆ ಕೇಂದ್ರ ಸರ್ಕಾರವು ಮೀಸಲಾತಿ ವರ್ಗೀಕರಣ ವನ್ನು ಗಂಭೀರವಾಗಿ ತೆಗೆದುಕೊಂಡು ಸಂವಿಧಾನ ತಿದ್ದುಪಡಿ ಮಾಡಬೇಕೆನಿಸಿದರೆ ಮೊದಲು ಈ ಸಮಸ್ಯೆ ಪ್ರಧಾನಿಗೆ ಮನವರಿಕೆ ಆಗಬೇಕು. ನಂತರ ಅವರು ತಮ್ಮ ಪಕ್ಷದ ಸಂಸದೀಯ ಸಭೆಕರೆದು ಚರ್ಚಿಸಿ ಬೆಂಬಲ ಪಡೆಯಬೇಕು. ಆ ಮೇಲೆ‌ ಸರ್ವಪಕ್ಷಗಳ ನಾಯಕರ ಸಭೆ ಕರೆದು ಅವರಿಗೆ ಮನವರಿಕೆ ಮಾಡಿ ಅವರ ಬೆಂಬಲ ಪಡೆಯಬೇಕಾಗುತ್ತದೆ. ಆಗ ಮೀಸಲಾತಿ ವರ್ಗೀಕರಣ ಇಡೀ ದೇಶಕ್ಕೆ ಸಂಬಂಧಿಸಿದ್ದರಿಂದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚಿಸಿ ಅವರಿಗೆ ಮನವರಿಕೆ ಮಾಡಿ ಅವರ ಬೆಂಬಲ ಪಡೆಯಬೇಕು.

ಇದಕ್ಕೆ ಪೂರಕವಾಗಿ ಮೊದಲೇ ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಆಯೋಗದ ಶಿಫಾರಸ್ಸನ್ನು ಪಡೆದು ಕೊಳ್ಳಬೇಕು. ಇದು ಸಂವಿಧಾನ ತಿದ್ದುಪಡಿಗೆ ಅನುಸರಿಸಬೇಕಾದ ಸಾಂವಿಧಾನಿಕ ಕ್ರಮಗಳು. ಇಷ್ಟೆಲ್ಲ ಆಗುವ ಮೊದಲು ಪûಾತೀತ ವಾಗಿ ರಚನೆಗೊಂಡಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗ ಡದ ಸಂಸದೀಯ ವೇದಿಕೆಯ ಗಮನಕ್ಕೆ ತಂದು ಅವರ ಮೇಲೆ ಒತ್ತಡ ಹಾಕಬೇಕು. ಪ್ರಧಾನಿಯನ್ನು ಮನವೊಲಿಸುವ ಬಹುತೇಕ ಹೊಣೆಯನ್ನು ಈ ವೇದಿಕೆ ಹೊತ್ತುಕೊಳ್ಳುವ ಸಾಧ್ಯತೆ ಇರುತ್ತದೆ. ಮೀಸಲಾತಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮಸ್ಯೆಗಳು ಬಂದಾಗ ಅದಕ್ಕೆ ಪರಿಹಾರ ಕಂಡುಹಿಡಿಯುವ ಕ್ರಮ ಹೀಗೆ ನಡೆದು ಬಂದಿದೆ.

ಈ ಎಲ್ಲ ಕಸರತ್ತು ಮಾಡಬೇಕಾದರೆ ಕನಿಷ್ಠ ಆರು ತಿಂಗಳಾದರೂ ಬೇಕು. ಇಷ್ಟೆಲ್ಲ ಕಸರತ್ತು ಮಾಡುವ ನಾಯಕ ಪಡೆ ಈಗ ಕರ್ನಾಟಕದಲ್ಲಿದೆಯೇ? ಈ ಹಿಂದೆ ಇಂತಹ ಗಂಭೀರ ಸಮಸ್ಯೆ ಗಳನ್ನೆಲ್ಲ ನಿಭಾಯಿಸುವಲ್ಲಿ ಬೂಟಾ ಸಿಂಗ್‌ ಮತ್ತು ರಾಂ ವಿಲಾಸ್‌ ಪಾಸ್ವಾನ್‌ ಮುಂಚೂಣಿಯಲ್ಲಿರುತ್ತಿದ್ದರು. ಆದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಈ ಸಮಿತಿಯ ಚಟುವಟಿಕೆಯೇ ನಿಂತಿದೆ. ಇಂತಹ ಸಂದರ್ಭದಲ್ಲಿ ಏನು ಮಾಡಬೇಕೆನ್ನುವ ಎದೆಗಾರಿಕೆಯನ್ನು ರಾಜ್ಯದಲ್ಲಿ ಪ್ರದರ್ಶಿಸುವವರಾರು ಎನ್ನುವುದು ಈಗಿನ ಪ್ರಶ್ನೆ.

ಶಿವಾಜಿ ಗಣೇಶನ್‌

Advertisement

Udayavani is now on Telegram. Click here to join our channel and stay updated with the latest news.

Next