Advertisement

ನಮ್ಮ ಭಕ್ತಿ ವಾಸ್ತವವೇ, ಢೋಂಗಿಯೇ?

09:48 AM Feb 17, 2020 | mahesh |

ಕೆಲವರು ಮನೆಯಲ್ಲಿ ಪೂಜೆಯನ್ನು ಎಷ್ಟು ಅದ್ದೂರಿಯಾಗಿ ಮಾಡುತ್ತಾರೆಂದರೆ, ಭಕ್ತಿಗಿಂತ ಹೆಚ್ಚಾಗಿ ಇದೊಂದು ಶಕ್ತಿ ಪ್ರದರ್ಶನ‌ವಾಗಿರುತ್ತದೆ. ಬಂಧು ಬಳಗದವರಿಗೆ, ನೆರೆಹೊರೆಯವರಿಗೆ “ನಾವೆಷ್ಟು ಸುಸ್ಥಿತಿಯಲ್ಲಿ ಇದ್ದೇವೆ’ ಎಂದು ತೋರಿಸಿಕೊಳ್ಳುವ ಪ್ರಯತ್ನವಾಗಿರುತ್ತದೆ.

Advertisement

ಒಬ್ಬ ವ್ಯಕ್ತಿ ಮಂದಿರಕ್ಕೆ ಹೋದ. ಚಪ್ಪಲಿ ಹೊರಬಿಟ್ಟು ಮಂದಿರ ಪ್ರವೇಶಿಸಿದ. ದೇವರ ಮುಂದೆ ಕಣ್ಣುಮುಚ್ಚಿ ನಿಂತು ಪ್ರಣಾಮವನ್ನೇನೋ ಮಾಡಿದ. ಆದರೆ ಅವನ ಮನಸ್ಸೆಲ್ಲ ಚಪ್ಪಲಿಯ ಮೇಲೆಯೇ ಇತ್ತು! “ತ್ವಮೇವ ಮಾತಾಚ…ಪಿತಾ ತ್ವಮೇವ'(ನೀನೇ ತಾಯಿ-ನೀನೇ ತಂದೆ) ಎಂದು ಅವನ ಬಾಯಿ ಮಂತ್ರ ಹೇಳಿತು. ಆದರೆ ಅವನ ಕಣ್ಣು ಮಾತ್ರ ನಿಧಾನಕ್ಕೆ ಚಪ್ಪಲಿ ಇದ್ದ ಜಾಗದತ್ತ ಸುಳಿಯಲಾರಂಭಿಸಿತು. ಚಪ್ಪಲಿ ಸುರಕ್ಷಿತವಾಗಿದೆ ಎಂದು ಖಾತ್ರಿಯಾದ ತಕ್ಷಣ ಮಂತ್ರ ಮುಂದುವರಿಸಿದ. ಇದರರ್ಥವೇನು? ಚಪ್ಪಲಿಯೇ ಇವನ ತಂದೆ-ತಾಯಿ ಎಂದೇನು? ಮನಸ್ಸನ್ನು ಭಗವಂತನ ಮೇಲಿಡದೇ, ಚಪ್ಪಲಿಯ ಮೇಲಿಟ್ಟರೆ, ಅದು ಭಗವಂತನ ಉಪಾಸನೆ ಹೇಗಾದೀತು? ಚಪ್ಪಲಿಯ ಉಪಾಸನೆ ಆದಂತಾಯಿತಲ್ಲವೇ?

ಇದು ಒಬ್ಬನ ಕಥೆಯಲ್ಲ…ಇಂದು ಬಹುತೇಕರ ಕಥೆಯಾಗಿದೆ. ಭಗವಂತನ ಮೇಲಿನ ಭಕ್ತಿ ಎನ್ನುವುದು ತೋರಿಕೆಗೆ ಎಂಬಂತಾಗಿದೆ. ಕೆಲವರಂತೂ, ಮನೆಯಲ್ಲಿ ದೇವರ ಪೂಜೆಯನ್ನು ಎಷ್ಟು ಅದ್ದೂರಿಯಾಗಿ ಮಾಡುತ್ತಾರೆ ಎಂದರೆ, ದೇವರ ಮೈತುಂಬಾ ಬಂಗಾರದ ಒಡವೆಗಳನ್ನು ಹಾಕಿರುತ್ತಾರೆ, ಬೆಳ್ಳಿಯ ಸಾಮಗ್ರಿಗಳು ಥಳಥಳ ಹೊಳೆಯುತ್ತಿರುತ್ತವೆ, ಘಮಘಮಿಸುವ ಊದಿನಕಡ್ಡಿ ಹಚ್ಚಿರುತ್ತಾರೆ, ತರಹೇವಾರಿ ಹೂವುಗಳ ರಾಶಿಯನ್ನೇ ಸುರಿದಿರುತ್ತಾರೆ. ಇದರಲ್ಲಿ ದೇವರ ಮೂರ್ತಿ ಎಲ್ಲಿದೆಯೋ ಎಂದು ಹುಡುಕಿ ನೋಡಬೇಕಾಗುತ್ತದೆ!

ಭಕ್ತಿಗಿಂತ ಹೆಚ್ಚಾಗಿ ಇದೊಂದು ಶಕ್ತಿ ಪ್ರದರ್ಶನದ ಭಾಗವಾಗಿರುತ್ತದೆ. ಮನೆಗೆ ಬಂದ ಬಂಧು ಬಳಗದವರಿಗೆ, ನೆರೆಹೊರೆಯವರಿಗೆ “ನೋಡಿ ನಾವೆಷ್ಟು ಸುಸ್ಥಿತಿಯಲ್ಲಿ ಇದ್ದೇವೆ’ ಎಂದು ತೋರಿಸಿಕೊಳ್ಳುವ ಪ್ರಯತ್ನವಾಗಿರುತ್ತದೆ. ಪೂಜೆಗೆ ಬಂದವರೂ ಕೂಡ ದೇವರಿಗಿಂತ ಹೆಚ್ಚಾಗಿ, ಈ ಐಶ್ವರ್ಯಾದಿಗಳತ್ತಲೇ ಹೆಚ್ಚು ಗಮನ ಹರಿಸುತ್ತಾರೆ. ಹೊಟ್ಟೆಕಿಚ್ಚುಪಡುತ್ತಲೇ, ಆ ಬಂಗಾರ-ಬೆಳ್ಳಿಯ ಆಭರಣಗಳನ್ನು ನೋಡುತ್ತಾ ಮಂತ್ರ ಹೇಳುತ್ತಾರೆ-“ತ್ವಮೇವ ಮಾತಾಚ, ಪಿತಾ ತ್ವಮೇವ’! ಅಂದರೆ, ದೇವರಲ್ಲ…ಬಂಗಾರವೇ ಅವರಿಗೆ ತಾಯಿ- ತಂದೆಯ ಸಮಾನ ಎಂದಂತಾಯಿತು!

ಇದು ಒಂದು ವರ್ಗವಾಯಿತು. ಇನ್ನೊಂದು ವರ್ಗದ ಭಕ್ತರಿದ್ದಾರೆ. “”ದೇವರೇ…ನನಗೆ ಬೇಗನೇ ವೀಸಾ
ಸಿಗುವಂತೆ ಮಾಡು. ಆಗ ನೂರು ತೆಂಗಿನಕಾಯಿ ಒಡೆಸಿ, ಅರ್ಚನೆ ಮಾಡಿಸುತ್ತೇನೆ” ಎಂದು ಬೇಡಿಕೊಳ್ಳುತ್ತಾರೆ. ಅಂದರೆ, ವೀಸಾ ಸಿಗದಿದ್ದರೆ ದೇವರಿಗೆ ಅರ್ಚನೆಯೂ ಇಲ್ಲ, ತೆಂಗಿನಕಾಯಿಯೂ ಇಲ್ಲ! ಇವರದ್ದು ದೇವ ರೊಂದಿಗೆ ಕೊಡು-ಕೊಳ್ಳುವಿಕೆಯ ವ್ಯವಹಾರವಷ್ಟೇ. ದೇವರಿಗೆ ಪ್ರಾರ್ಥನೆ ಮಾಡುವುದು ಎಂದರೆ, ಏನನ್ನಾದರೂ ಬೇಡಿಕೊಳ್ಳುವುದು ಎಂದು ಇವರು ಭಾವಿಸುತ್ತಾರೆ. ಸದ್ಬುದ್ಧಿ ಕೊಡು, ಸನ್ಮಾರ್ಗದಲ್ಲಿ ನಡೆಸು, ಸಕಲರಿಗೂ ಒಳ್ಳೆಯದನ್ನು ಮಾಡು ಎಂದು ಬೇಡಿಕೊಳ್ಳುವ ಉದಾತ್ತ ಭಕ್ತಿ ನಮ್ಮದಾಗಬೇಕು. ದೇವರು ನಿಮಗೆ ಬೇಗನೇ ವೀಸಾ ಸಿಗುವಂತೆ ಮಾಡಲು, ಪರೀಕ್ಷೆಯಲ್ಲಿ ಪಾಸು ಮಾಡಿಸಲು, ನೌಕರಿ ಕೊಡಿಸಲು ಇದ್ದಾನೇನು?

Advertisement

ಮತ್ತೂಂದು ವರ್ಗದ ಭಕ್ತರಿದ್ದಾರೆ. ಇವರು, ತಮಗೆ ಎದುರಾಗುವ ಎಲ್ಲಾ ಕಷ್ಟಕ್ಕೂ ದೇವರನ್ನೇ ದೂರುತ್ತಾರೆ. ದೇವರು ನನಗೆ ಕಷ್ಟ ಕೊಟ್ಟ, ದೇವರು ನನ್ನ ಜೀವನದೊಂದಿಗೆ ಆಟ ಆಡುತ್ತಿದ್ದಾನೆ….ಎಂದುಬಿಡುತ್ತಾರೆ. ಏನು? ಸಕಲ ಚರಾಚರಗಳ ಸೃಷ್ಟಿಕರ್ತನಾದ ಭಗವಂತ ನಿಮ್ಮ ಜೀವನದ ಜತೆಗೆ ಆಟವಾಡುತ್ತಾನಾ?ಎಂಥ ಬಾಲಿಶ, ಮೂರ್ಖತನದ ಭಾವನೆ ಇದು! ಭಗವಂತ ಕರುಣಾಮಯಿ. ಜೀವನವೆಂಬ “ಅಮೂಲ್ಯ’ ಸಂಪತ್ತನ್ನು ಕೊಟ್ಟ ದಯಾಮಯಿ. ದೇವರು ನಮಗೆ ಕಷ್ಟ ಕೊಟ್ಟ ಎಂದು ಮಾತನಾಡುವವನು, ಜೀವನಕ್ಕೆ ಮತ್ತು ಸೃಷ್ಟಿಗೆ ಕೃತಜ್ಞನಾಗಿಲ್ಲ ಎಂದೇ ಅರ್ಥ. ದೇವರೇನು ಮನುಷ್ಯನೇನು? ಇನ್ನೊಬ್ಬರ ಜೀವನ ಜತೆ ಆಟವಾಡಲು?

ಹಾಗಿದ್ದರೆ ಭಕ್ತಿ ಎಂದರೆ ಏನು ಎನ್ನುವ ಪ್ರಶ್ನೆ ಈಗ ಉದ್ಭವವಾಗುವುದು ಸಹಜ. ಜೀವನವನ್ನು ಸಂಭ್ರಮಿಸುವುದು, ಸೃಷ್ಟಿಕರ್ತನಿಗೆ ಕೃತಜ್ಞನಾಗಿರುವುದು, ಆತನ ಸೃಷ್ಟಿಯನ್ನು ಗೌರವಿಸುವುದು. ದೇವರಿಗೆ ಸಾವಿರ ಬಾರಿ ನಮಿಸಿ, ದೇವರ ನಾಮವನ್ನು ಸಾವಿರ ಬಾರಿ ಜಪಿಸಿ, ಇನ್ನೊಬ್ಬರನ್ನು ಕಂಡು ಸಂಕಟ ಪಟ್ಟರೆ, ದ್ವೇಷಸಾಧಿಸಿದರೆ, ನೋವು ಕೊಟ್ಟರೆ ಏನುಪಯೋಗ? ನಿಜವಾದ ಭಕ್ತಿಯಲ್ಲಿ ಸಹಾನುಭೂತಿಯಿರುತ್ತದೆ, ಸಂತೋಷವಿರುತ್ತದೆ, ಸಮಷ್ಟಿಭಾವವಿರುತ್ತದೆ, ಸೌಜನ್ಯವಿರುತ್ತದೆ…

ನಿಮಗೆ ಕಷ್ಟಗಳು ಎದುರಾದಾಗ…”ನನಗೆ ಕಷ್ಟಗಳನ್ನು ಎದುರಿಸುವ ಶಕ್ತಿ ಕೊಡಪ್ಪ ತಂದೆ’ ಎಂದು ವಿನಂತಿಸಬೇಕೇ ಹೊರತು, “ಕಷ್ಟಗಳನ್ನು ನೀನೇ ಪರಿಹರಿಸಬೇಕು’ ಎಂದು ತಾಕೀತು ಮಾಡುವುದಲ್ಲ! ಭಕ್ತಿಯೆಂಬುದು ವ್ಯವಹಾರವಾಗದಿರಲಿ…ಶುಭಮಸ್ತು.!

 ಸ್ವಾಮಿ ಸತ್ಪ್ರಾಪ್ತಾನಂದ

Advertisement

Udayavani is now on Telegram. Click here to join our channel and stay updated with the latest news.

Next