Advertisement

ಬೆಕ್ಕು ಅಡ್ಡ ಬಂದರೆ ಅನಿಷ್ಟವೇ?

12:29 PM Jan 20, 2018 | |

 ಬೆಕ್ಕು ಅಡ್ಡ ಬಂದರೆ ಅಶುಭ ಎಂದು ಲಾಗಾಯ್ತಿನಿಂದಲೂ  ಹೇಳುತ್ತಲೇ ಬಂದಿದ್ದಾರೆ. ಹಾಗಾದರೆ ಬೆಕ್ಕು ಅಡ್ಡ ಬಂದಾಗಲೆಲ್ಲ ಕೆಲಸ ಕೆಟ್ಟಿದೆಯಾ? ಇದನ್ನು ಯಾರು, ಯಾವಾಗ, ಹೇಗೆ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ, ಸಾಧಿಸಿದ್ದಾರೆ? ಬೆಕ್ಕು ಅಡ್ಡ ಬಂದಿದ್ದರಿಂದಲೇ ನಮ್ಮ ಕೆಲಸ ಕೆಟ್ಟಿದೆ ಎಂದು ಈವರೆಗೂ ಯಾರೊಬ್ಬರೂ ಸಾಧಿಸಿ ತೋರಿಸಿಲ್ಲ.  ಸಾಧಿಸುವ ತಾಕತ್ತು ಇರುವವರು ತಮ್ಮ ಕೆಲಸ ಬಿಟ್ಟು ಪುಗಸಟ್ಟೆ ಸಮಾಜ ಸೇವೆ ಮಾಡಲು ಮುಂದೆ ಬರಲಾರರು. 

Advertisement

ಅನಿಷ್ಟಗಳನ್ನು ದೂರಮಾಡುತ್ತೇವೆ ಎಂದು ನಂಬಿಸಿ ಶೋಷಿಸುವವರಿಂದ ಸಮಾಜಕ್ಕೆ ಮತ್ತು ಜನರಿಗೆ ಆಗುವ ತೊಂದರೆಗಳನ್ನು ತಪ್ಪಿಸಲು ಮೌಡ್ಯ ನಿಷೇಧ ಕಾಯ್ದೆ ತರಲು ಸರ್ಕಾರ ಹೆಣಗಾಡುತ್ತಲೇ ಇದೆ.  ಈ ಕಾಯ್ದೆಯಿಂದ ಜನರನ್ನು ಸಂತೋಷದಲ್ಲಿರಿಸಬಹುದು, ಅವರನ್ನು ಶೋಷಣೆಯ ಕಪಿಮುಷ್ಟಿಯಿಂದ ತಪ್ಪಿಸಿ ಹೊರತರಬಹುದು ಎಂಬ ಖಚಿತ ನಂಬಿಕೆ ಸರ್ಕಾರಕ್ಕೆ ಇದ್ದರೆ ಖಂಡಿತ ಇಂಥದೊಂದು ಕಾಯ್ದೆಯನ್ನು ತರಬೇಕಾದುದು ನ್ಯಾಯವಾಗಿದೆ. ಆದರೆ ಕಾಯ್ದೆ ಕಾನೂನುಗಳು ಜಾರಿ ಆಗುವಾಗ, ಹಿಂದಿನ ಇತಿಹಾಸ ಸ್ಪಷ್ಟ ಪಡಿಸಿರುವ ಮೊಹಮ್ಮದ್‌ ಬಿನ್‌ ತುಘಲಕನ ದೇವಗಿರಿಯನ್ನು ತನ್ನ ಸಾಮ್ರಾಜ್ಯದ ರಾಜಧಾನಿಯನ್ನಾಗಿ ಮಾಡುವ ಯೋಚನೆಯೊಂದಿಗೆ, ಹಾಗೆಯೇ ಚಲಾವಣೆಯಲ್ಲಿದ್ದ ನಾಣ್ಯಗಳನ್ನು ರದ್ದು ಮಾಡಿ, ಹೊಸದೇನನ್ನೋ ಜಾರಿಗೆ ತಂದು, ಯಾವುದೂ ಸರಿ ಆಗದೇ ಉಂಟಾದ ಪರದಾಟಗಳನ್ನು ನಿರ್ಮಿಸಿದ ಹಾಗೇ ಬವಣೆಗಳನ್ನು ಸೃಷ್ಟಿಸುವಂತಾಗಬಾರದು. ಹಾಸ್ಯಾಸ್ಪದವಾಗಬಾರದು. 

ಜನರನ್ನು ಶೋಷಿಸುವುದು
ಜನರ ಪರದಾಟಗಳು ಯಾವಾಗಲೂ ಆಡಳಿತ ನಡೆಸುವ ಜನರ ವೈಫ‌ಲ್ಯದಿಂದಾಗಿ ಎದುರಾದಷ್ಟು, ಇತರ ಶಕ್ತಿಗಳಿಂದ ಎದುರಾಗದು. ಕಾನೂನು, ಸುವ್ಯವಸ್ಥೆಗಳನ್ನು ಸರಕಾರ ಕಟ್ಟು ನಿಟ್ಟಿನಿಂದ ಜಾರಿಗೆ ತಂದರೆ, ಜ್ಯೋತಿಷಿಯಾಗಲಿ, ವ್ಯಾಪಾರಿಯಾಗಲಿ, ಸರಕಾರಿ ಕೆಲಸಗಾರನಾಗಲೀ, ಖಾಸಗಿ ಸಂಸ್ಥೆಗಳಾಗಲೀ, ಸಮಾಜ ವಿರೋಧಿ ಮಾಫಿಯಾಗಳಾಗಲೀ ಏನನ್ನೂ ಮಾಡಲಾಗುವುದಿಲ್ಲ. ದುರ್ದೈವವಶಾತ್‌ ಕಾನೂನು ಸುವ್ಯವಸ್ಥೆಗಳು ಗಟ್ಟಿಯಾದ ತಳಹದಿಯ ಮೇಲೆ ನಿಂತಿಲ್ಲ, ಇದರಿಂದ ಆಗುತ್ತಿರುವ  ಪರಿಣಾಮ ಬಣ್ಣಿಸಲು ಶಬ್ದಗಳಿಲ್ಲ. ಇಲ್ಲಿ ಕಾನೂನುಗಳಿವೆ, ಸಂವಿಧಾನ ಇದೆ. ಸರ್ಕಾರ ಇದೆ. ಯಾವುದೂ ಇಲ್ಲ  ಎಂಬುದಿಲ್ಲ. ಆದರೂ ಎಲ್ಲಾ ನಿಟ್ಟಿನಿಂದ ಶೋಷಣೆ, ಅಸಹಾಯಕತೆ ಉಂಟುಮಾಡುವ ಕೆಲಸ ನಡೆಯುತ್ತಲೇ ಇದೆ, ಏಕೆ? ಮನುಷ್ಯನ ನಾಗರಿಕತೆ ಆರೋಗ್ಯಕರವಾಗಿರಲು ಮನುಷ್ಯ ಮನುಷ್ಯನಾಗದೇ ಉಳಿದರೆ ಸಾಧ್ಯವಿಲ್ಲ. ಜ್ಯೋತಿಷಿಯಾಗಲೀ, ಮಂತ್ರವಾದಿಯಾಗಲಿ ಹಣದ ಆಸೆಗೆ ಬಿದ್ದರೆ ಜ್ಯೋತಿಷಿ ಅಥವಾ ಒಂದು ಜನಪರವಾದ ನಿಗೂಢ ಸಕಾರಾತ್ಮಕ ಶಕ್ತಿ ಏನನ್ನೂ ಮಾಡಲಾಗುವುದಿಲ್ಲ. ಶೋಷಣೆ ಮಾಡುವವರನ್ನು ನಿರ್ಬಂಧಿಸಬೇಕು ಎಂಬುದು ಸರಿ. ಮೂಢ ನಂಬಿಕೆಯನ್ನು ವೈಭವೀಕರಿಸ ಬಾರದು ಎಂಬುದೂ ಸರಿ. ಆದರೆ ಸಮಾಜ ಮುಖೀಯಾದ ಇತರ ಕೆಲಸಗಳು, ಜನರು ಸಂಸ್ಕಾರದ ಸಾರ ಕಳಕೊಂಡರೆ ಜೀವನ ನರಕವಾಗುತ್ತದೆ. 

ಬೆಕ್ಕು ಅಡ್ಡ ಬಂದರೆ ಅಶುಭವೇ?
ಲಾಗಾಯ್ತಿನಿಂದಲೂ, ಬೆಕ್ಕು ಅಡ್ಡ ಬಂದರೆ ಅಶುಭ ಎಂದು ಹೇಳುತ್ತಲೇ ಬಂದಿದ್ದಾರೆ. ಹಾಗಾದರೆ ಬೆಕ್ಕು ಅಡ್ಡ ಬಂದಾಗಲೆಲ್ಲ ಕೆಲಸ ಕೆಟ್ಟಿದೆಯಾ? ಇದನ್ನು ಯಾರು, ಯಾವಾಗ, ಹೇಗೆ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದ್ದಾರೆ? ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತದೆಯೇ ? ಜ್ಯೋತಿಷಿಯನ್ನು ತಬ್ಬಿಬ್ಬು ಗೊಳಿಸುವ ಪ್ರಶ್ನೆ ಇದು. ” ಹೌದು, ಉದುರುತ್ತದೆ’‌ ಎಂಬುದನ್ನು ಸಾಬೀತುಗೊಳಿಸಬಹುದು. ಆದರೂ ಜ್ಯೋತಿಷಿ “ಹೌದು, ಉದುರುತ್ತದೆ’‌ ಎಂಬುದನ್ನು ಹೇಳುವುದಿಲ್ಲ. ಹೇಳಬೇಕು, ಜ್ಯೋತಿಷಿ ಹೇಳಿದ್ದನ್ನು ಮಾಡಲೇ ಬೇಕು ಎಂದು ಯಾರು ಒತ್ತಡ ತರುತ್ತಾರೆ? ಒತ್ತಡಕ್ಕೆ ಮಣಿಯುವುದು ಮಣಿದವರ ತಪ್ಪು. ಶೋಷಿಸುವವರ ಬಳಿ ಹೋಗಿ ಶೋಷಿಸಲು ಅವಕಾಶ ಮಾಡಿಕೊಡುವುದು ತಪ್ಪು. ನಿನ್ನ ಕೆಲಸ ನೀನು ನೋಡಿಕೋ, ನನ್ನ ತಂಟೆಗೆ ಬರಬೇಡ ಎಂದು ಯಾರಿಗಾದರೂ ಮುಖಕ್ಕೆ ಹೊಡೆದಂತೆ ಹೇಳಿದರೆ ಯಾವ ಜ್ಯೋತಿಷಿ, ಯಾರ ಬಳಿ ಹೋಗುತ್ತಾನೆ. ? ಬೆಕ್ಕು ಅಡ್ಡ ಬಂದರೆ ಅಶುಭವಾಗುವುದನ್ನು ಈವರೆವಿಗೆ ಯಾರೂ ಪ್ರಯೋಗಾಲಯದಲ್ಲಿ ಪ್ರಯೋಗ ನಡೆಸಿ ಸಾಧಿಸಿಲ್ಲ. ಸಾಧಿಸುವ ತಾಕತ್ತು ಇರುವವರು ತಮ್ಮ ಕೆಲಸ ಬಿಟ್ಟು ಪುಗಸಟ್ಟೆ ಸಮಾಜ ಸೇವೆ ಮಾಡಲು ಮುಂದೆ ಬರಲಾರರು.  ಹೀಗೆಂದ ಮಾತ್ರಕ್ಕೆ ಯಾರು ಕೆಟ್ಟವರು, ಯಾರು ಕೆಟ್ಟವರಲ್ಲ ಎಂಬುದನ್ನು ಅಖೈರಾಗಿ ಇದಮಿತ್ಥಂ ಅಂತ ಹೇಳಲು ಸಾಧ್ಯವಾಗುವುದಿಲ್ಲ. 

ಕೇತುವಿನ ದೋಷ ಕೂಡಿ ಬಂದಾಗ ಬೆಕ್ಕು ಅಡ್ಡ ಬಂದರೆ ಕೆಡುಕಾಗುತ್ತದೆ. ಬುಧ ಚಂದ್ರ ದೋಷ ಇದ್ದರೆ ಬುದ್ಧಿ ಮಂಕಾಗುವುದು ಮಕ್ಕಳಲ್ಲಿ ಸಾಮಾನ್ಯ. ರಾಹು ನೀಚ ಗ್ರಹದೊಡನೆ ಇರುವಾಗ ಕಣ್ಣು( ಗಂಡಸರಿಗೇ ಆಗಲಿ, ಹೆಂಗಸರಿಗೇ ಆಗಲಿ) ಹಾರಿದರೆ ಕೆಡುಕು ಸಂಭವಿಸುತ್ತದೆ.  ಕೇಮದ್ರುಮ ಯೋಗ ಬಂದಾಗ ಲಕ್ಷ್ಮೀ  ಮನೆಗೆ ಬರದಂತೆ ಹಸಿಮೆಣಸುಗಳನ್ನು ಲಿಂಬೆ ಹಣ್ಣಿಗೆ ಚುಚ್ಚಿಕಟ್ಟಿಬಿಡುವುದು ಅನಿವಾರ್ಯ. ಮರಣಾಧಿಪತಿಯ ದಶಾಕಾಲದಲ್ಲಿ ಕಾಗೆ ಕುಕ್ಕಿದರೆ ಕೆಟ್ಟದರ ಸೂಚನೆ ಇರುತ್ತದೆ. ರಾಹು ಕಾಲದಲ್ಲಿ ಕೆಲಸಗಳಲ್ಲಿ ವಿಘ್ನ ಸಂಭವಿಸುವ ಅಪಾಯ ಇರುವುದರಿಂದ ರಾಹು ದಶಾ ಇರುವಾಗ, ರಾಹು ಇದ್ದು ಶನಿಕಾಟ ನಡೆಯುತ್ತಿರುವಾಗ ಶುಭ ಕೆಲಸವನ್ನು ರಾಹು ಕಾಲದಲ್ಲಿ ನಡೆಸಬಾರದು. 

Advertisement

ಚಂದ್ರನ ಸ್ಥಿತಿಗತಿಗಳಿಂದಾಗಿ ಬೆಳಕಿನ ಸಮೃದ್ಧಿಸಿಗುವುದು ಕಷ್ಟವಾದುದರಿಂದ ಆಷಾಢ ಮಾಸದಲ್ಲಿ ಮದುವೆ ಮಾಡುವ ಅಥವಾ ಇತರ ಯಾವುದೇ ಶುಭ ಕೆಲಸ ನಿಷಿದ್ಧ. ಕಪ್ಪುಘಾತಕ ಶಕ್ತಿಗಳು ನಿರ್ಜನವಾದ ದಟ್ಟ ಪೊದೆಗಳ್ಳೋ, ಬಿಳಿಲುಗಳ್ಳೋ ತುಂಬಿ ವಿಕಾರವಾಗಿನಿಂತ ಮರಗಳ ಕೊಂಬೆಯಲ್ಲಿ ಬೀಡು ಬಿಟ್ಟಿರುತ್ತವೆ. ಅಮಾವಾಸ್ಯೆಯ ದಿನಗಳಂದು ಬೆಳಕಿನ ಮೂಲ ಶಕ್ತಿಗಳಿಗೆ ಧಕ್ಕೆ ಇರುವುದರಿಂದ ಸೂರ್ಯ ಹಾಗೂ ಚಂದ್ರರು ಅಸಮತೋಲನ ಉಂಟು ಮಾಡುವ ದುರ್ಬಲ ಮನಸ್ಥಿತಿ ಉಂಟುಮಾಡುತ್ತಾರೆ. 

ಗ್ರಹಣಗಳ ಸಂದರ್ಭದಲ್ಲಿ ಸಕಾರಾತ್ಮಕ ಶಕ್ತಿಗಳು ತೇಜೋಹೀನವಾಗುತ್ತವೆ. ಹಲವರಿಗೆ ಕಾಣಿಸದೇ ಇರುವ ಅಗೋಚರ ಶಕ್ತಿಗಳು ವ್ಯಕ್ತಿ ಸ್ವರೂಪದಲ್ಲಿ ಕೆಲವು ಜನರಿಗೆ ರಾಹು, ಕೇತು, ಕುಜ, ಗ್ರಹಗಳ ವೈಪರಿತ್ಯಗಳಿಂದಾಗಿ ಗೋಚರಿಸಲು ಪ್ರಾರಂಭವಾಗುತ್ತವೆ. ಯಾವುದೋ ನಿಗೂಢ ವ್ಯಕ್ತಿ, ಶಕ್ತಿಗಳು ನಡೆಸುವ ಸಂಭಾಷಣೆ ಹಾಗೂ ಸದ್ದುಗಳನ್ನು ಒಂದು ಹದ ತಪ್ಪಿ ಪಡೆದ ಹೆಚ್ಚಿನ ಸಾಂದ್ರತೆಯ ನೈಪುಣ್ಯತೆ ಇರುವವರು ಗ್ರಹಿಸುತ್ತಾರೆ. ಅವರಿಗೆ ಇತರರಿಗೆ ಕೇಳದೇ ಇರುವ ವಿಚಾರ ಕೇಳಿಸುತ್ತದೆ. ಇದನ್ನು ಹಲವರು ಹುಚ್ಚತನ, ಭ್ರಮೆ, ಬುದ್ಧಿ ವಿಕಲತೆ ಎಂದು ಗ್ರಹಿಸುತ್ತಾರೆ. 

ಅತೀಂದ್ರಿಯ ಅಥವಾ ಆರನೇ ಇಂದ್ರಿಯದ ಗುಪ್ತ ಸ್ಥಿತಿ
ರಾಹು, ಕೇತು, ಶನಿ, ಸೂರ್ಯ, ಚಂದ್ರ ಅಥವಾ ಕುಜ ಗ್ರಹಗಳು ಅತೀಂದ್ರಿಯ ಶಕ್ತಿಯನ್ನು ಕೊಡುತ್ತವೆ. ಕೆಲವು ಸಲ ಇದು ಸಕಾರಾತ್ಮಕವಾಗಿದ್ದರೆ ಹಲವು ಸಲ ಬುದ್ಧಿ ಮಾಂದ್ಯತೆಗೆ ಕೊಂಡಿ ಕೂಡಿಕೊಂಡ ಅತೀಂದ್ರಿಯ ಶಕ್ತಿಯಾಗುತ್ತದೆ. ಶಕ್ತಿ ಬೀಜ ಮಂತ್ರಗಳು, ಮೂಲ ಬೀಜಾಕ್ಷರ ಶಕ್ತಿ ಮಂತ್ರಗಳು, ರವಿ ಬುಧರ ಸುಹಾಸಕರ ಬುದ್ಧಿಯೋಗ ನಿಗೂಢಕ್ಕೆ ಪ್ರವೇಶಿಸಿ ಹಲವಾರು (ಇತರರು ತಿಳಿಯಲಾಗದ) ವಿಚಾರಗಳನ್ನು ತಿಳಿದುಕೊಳ್ಳುತ್ತಾರೆ. ಇವರು ಸಾತ್ವಿಕರಾದಾಗ ಮಂತ್ರಕ್ಕೆ ಮಾವಿನ ಕಾಯಿ ಉದುರಿಸುವ ಶಕ್ತಿ ಸಾಧ್ಯವಾಗುತ್ತದೆ. 

ಕನಸುಗಳು ಭವಿಷ್ಯ ಸೂಚಕವೇ?
 ನಂಬಿದರೆ ನಂಬಿ ಬಿಟ್ಟರೆ ಬಿಡಿ. ಜಾನ್‌ ಎಫ್ ಕೆನಡಿಯವರ ಕಗ್ಗೊಲೆ ನಡೆದ ಕ್ಷಣಗಳಿಗೂ ತುಸು ಮುಂಚೆಯೇ “ಕೆನಡಿಯನ್ನು ರಕ್ಷಿಸಿ, ಕೆನಡಿಯನ್ನು ರಕ್ಷಿಸಿ’ ಎಂದು ಚೀರುತ್ತ ಡಲ್ಲಾಸ್‌ನ ಬೀದಿಯಲ್ಲಿ ಕೂಗಿ ಕೊಳ್ಳುತ್ತಿದ್ದ ಮಹಿಳೆಯನ್ನು ಗುರುತಿಸಿದವರಿದ್ದಾರೆ. ಆಕೆಯನ್ನು ಹುಚ್ಚಿ ಎಂದು ಕೊಂಡವರೇ ಬಹಳ. ಆಕೆ ನಿದ್ದೆಯಿಂದೆದ್ದು ಓಡಿ ಬಂದಿದ್ದಳು. ಕೆನಡಿ ಕೊಲೆಯಾಗುವ ಕೆಟ್ಟ ಕನಸವನ್ನು ಕಂಡಿದ್ದಳು ಅವಳು. ಜಿಯಾಉಲ್‌ಹಕ್‌, ಮಿಲಿಟರಿ ಜನರಲ್‌ ಅಧ್ಯಕ್ಷರಾಗಿ ಪಾಕಿಸ್ತಾನವನ್ನು ಆಳುತ್ತಿದ್ದಾಗ ವಿಮಾನದಲ್ಲಿ ಸಂಭವಿಸಿದ ( ಪ್ರಯಾಣದ ವೇಳೆಯಲ್ಲಿ) ನ್ಪೋಟದಲ್ಲಿ ಮರಣ ಹೊಂದಿದರು. ಈ ಘಟನೆ ನಡೆದ ಕೆಲವೇ ಗಂಟೆಗಳ ಮೊದಲು ಜಿಯಾ ಸಾಯುತ್ತಿದ್ದಾರೆ ಎಂದು ಮಂಗಳೂರಿನಲ್ಲಿ ಮಹಿಳೆಯೋರ್ವಳು ನಿದ್ದೆಯಿಂದೆದ್ದು ಕೂಗುತ್ತ ಮನೆಯಿಂದ ಹೊರಬಂದಿದ್ದಳು. 

 ಅನಂತ ಶಾಸ್ತ್ರಿ 

Advertisement

Udayavani is now on Telegram. Click here to join our channel and stay updated with the latest news.

Next