Advertisement

ಅಭಿವ್ಯಕ್ತಿ ಸ್ವಾತಂತ್ರ್ಯ ಹಳಿ ತಪ್ಪುತ್ತಿದೆಯೇ?

01:46 AM Apr 07, 2021 | Team Udayavani |

ಅಭಿವ್ಯಕ್ತಿ ಮನುಷ್ಯನ ಮೂಲಭೂತ ಗುಣ. ಈ ಸ್ವಾತಂತ್ರ್ಯವನ್ನು “ಭಾರತೀಯ ಸಂವಿಧಾನ’ ವಿಧಿ ಸಂಖ್ಯೆ 19 (1)(ಅ)ಯಲ್ಲಿ ಪ್ರತಿಯೋರ್ವ ಭಾರತೀಯ ಪ್ರಜೆಗೆ ನೀಡಿದೆ. “ವಾಕ್‌ ಮತ್ತು ಅಭಿವ್ಯಕ್ತಿ, ಸ್ವಾತಂತ್ರ್ಯ’ (Freedom of speech and expression) ಎಂದು ಕರೆಯಲ್ಪಡುವ ಈ ವಿಧಿಗೆ 19 (2)ರಲ್ಲಿ ಅದರ ಮಿತಿಗಳನ್ನೂ (Limitations) ತಿಳಿಸಿದೆ.

Advertisement

ಎಳೆ ಅರ್ಭಕನ ರೋದನದಿಂದ ಹಿಡಿದು ಮರಣಶಯ್ಯೆಯಲ್ಲಿರುವ ಜರಠನ ವರೆಗೂ ಅಭಿವ್ಯಕ್ತಿ ವಿವಿಧ ರೀತಿ ಯಲ್ಲಿ ಪ್ರಕಟವಾದೀತು. ಮನುಷ್ಯನ ಯೋಚನೆಗಳು ಸಂವಹನ ಮಾಧ್ಯಮ (Communi catione media)ಗಳ ಮೂಲಕ ಮೂರ್ತ ರೂಪಗೊಳ್ಳುವುದೇ ಅಭಿವ್ಯಕ್ತಿ. ಮಾತು ಮತ್ತದರ ವಿವಿಧ ಪ್ರಕಾರಗಳು, ಬರೆಹ, ಅಭಿನಯ, ಸನ್ನೆ – ಸಂಕೇತ, ಚಿತ್ರ- ಚಲನಚಿತ್ರ, ಸಂಗೀತ, ಸಾಮಾಜಿಕ ಜಾಲ ತಾಣಗಳು…. ಎಲ್ಲವೂ ಅಭಿವ್ಯಕ್ತಿ ವೈವಿಧ್ಯ ಗಳು. ಇವೆಲ್ಲಕ್ಕೂ ಸಂವಿಧಾನ “ಅಸ್ತು’ ಎಂದಿದ್ದರೂ ಪ್ರತಿಯೊಂದಕ್ಕೂ ಹೊಣೆ ಗಾರಿಕೆಯ ಭದ್ರಕೊಂಡಿಯನ್ನು ಬೆಸೆದು ನಿಯಂತ್ರಿಸಿದೆ. ಸ್ವಾತಂತ್ರ್ಯ ಮತ್ತು ಉತ್ತರ ದಾಯಿತ್ವ ಇಲ್ಲಿ ಒಂದೇ ನಾಣ್ಯದ ಎರಡು ಮುಖಗಳು.

ಹೊಣೆ ಮರೆತ ಅಭಿವ್ಯಕ್ತಿ ಅಪಾಯಕಾರಿ
ಸಮಾಜ ವೈವಿಧ್ಯಮಯ, ಒಬ್ಬನಂತೆ ಇನ್ನೊಬ್ಬ ನಿಲ್ಲ. ಅಭಿಪ್ರಾಯ ವೈವಿಧ್ಯ, ವೈರುಧ್ಯಗಳು, ಪ್ರತ್ಯೇಕ ಯೋಚನೆ- ಯೋಜನೆಗಳು, ಕಲ್ಪನೆ- ಪರಿಕಲ್ಪನೆಗಳು. ಈ ಮಧ್ಯದಲ್ಲಿ ಎಲ್ಲ ಗೊಂದಲ ಗಳನ್ನು ಸರಿ ದೂಗಿಸಿಕೊಂಡು ಬಾಳಬಲ್ಲವನೇ ಜಾಣ; ತಪ್ಪಿದರೆ ಅಪಾಯ ಶತಃಸಿದ್ಧ. ಅಭಿವ್ಯಕ್ತ ಗೊಳಿಸುವ ಮೊದಲು ಅದರ ಪರಿಣಾಮವನ್ನು ಊಹಿಸುವ ಪ್ರೌಢಿಮೆಯನ್ನು ಕತೃì ಬೆಳೆಸಿ ಕೊಳ್ಳಲೇ ಬೇಕಾಗುತ್ತದೆ. ಮತ್ತೆ ಹೊಣೆಯಿಂದ ನುಣುಚಿಕೊಳ್ಳುವುದು ಸುಲಭವಲ್ಲ. ತಪ್ಪಿದರೆ ನಿಂದನೆ, ಟೀಕೆ, ಮುಜುಗರಕ್ಕೆ ಒಳಗಾಗುವುದ ರೊಂದಿಗೆ ಸಾರ್ವಜನಿಕ ಸೊತ್ತುಗಳಿಗೆ ಹಾನಿ ಯುಂಟಾಗುವ ಗಂಭೀರ ಸನ್ನಿವೇಶಗಳೂ ಸೃಷ್ಟಿಯಾಗಬಹುದು. ಒಂದು ಹೇಳಿಕೆ, ಕಿರು ಬರೆಹ, “ಟ್ವೀಟ್‌’ ಸಾಕು “ಡಿಜೆ ಹಳ್ಳಿ, ಕೆಜೆ ಹಳ್ಳಿ’ ಸೃಷ್ಟಿ ಮಾಡಲು. ಒಂದು ಪೈಂಟಿಂಗ್‌, ಒಂದು ಚಲನಚಿತ್ರ, ಕಾದಂಬರಿ, ಕಾವ್ಯ-ವಿಮರ್ಶೆ ಚೌಕಟ್ಟು ಮೀರಿದರೆ ಅಶಾಂತಿಗೆ ಆಹ್ವಾನ ನೀಡೀತು. ಎಲ್ಲವೂ ಧರ್ಮ, ಜಾತಿ, ಸಮುದಾಯ, ವರ್ಗ, ಲಿಂಗ “ತಾರತಮ್ಯವಾಗಿದೆಯೋ’? ಎಂದು “ಸ್ಕ್ಯಾನ್‌’ (Scan) ಆಗುತ್ತಲೇ ಇರುತ್ತವೆ. ಕೆಲವೊಮ್ಮೆ ಇದಕ್ಕೆಂದೇ ಬಹಳಷ್ಟು ಸಮಯಸಾಧಕರು ಕಾಯು ತ್ತಲೂ ಇರುತ್ತಾರೆ.

ತಣ್ಣೀರನ್ನಾದರೂ ತಣಿಸಿ ಕುಡಿಯಬೇಕು
“ಸತ್ಯವನ್ನೇ ಹೇಳು; ಪ್ರಿಯವಾದುದನ್ನೇ ಹೇಳು; ಅಪ್ರಿಯ ಸತ್ಯವನ್ನು ಹೇಳದಿರು. ಪ್ರಿಯವೆಂದು ಸುಳ್ಳು ಹೇಳದಿರು; ಇದುವೇ ಸನಾತನ ಧರ್ಮ’.

ಎಲ್ಲೆಡೆಯೂ ಸುಭಾಷಿತಕಾರ ಅವಧಾರ ಣಾತ್ಮಕವಾದ ಕ್ರಿಯಾಪದಗಳನ್ನೇ ಬಳಸಿ ರುತ್ತಾನೆ. ಅಭಿವ್ಯಕ್ತಗೊಳಿಸುವ ಗುಂಗಿನಲ್ಲಿ ಇತರೆಲ್ಲೆಡೆ ಅವಾಜ್ಞೆಯಿಂದ ಅಥವಾ ತನ್ನದೇ ಸರಿಯೆಂಬ ಪೂರ್ವಗ್ರಹದಿಂದ ಹೇಳ ಹೊರಟರೂ ಸಮಾಜ “ನಿಕಷ’ (ಒರೆಗಲ್ಲು)ದಲ್ಲಿ “ಸರಿ’ಯೆನ್ನಿಸಿಕೊಂಡೇ ಬರಬೇಕು. ಇಲ್ಲವಾದರೆ ಅನರ್ಥ ಕಾದಿದೆ ಎಂದರ್ಥ. ಒಂದೊಮ್ಮೆ ಅದು ಕಠೊರ ಸತ್ಯವಾಗಿದ್ದರೆ ಸಾಕ್ರೆಟಿಸ್‌, ಮಹಾತ್ಮಾ, ಯೇಸುವಿನಂತೇ ಎದುರಿಸುವ ಎದೆಗಾರಿಕೆ ಬೇಕು.

Advertisement

ವ್ಯಕ್ತಿ ಮತ್ತಿತರ ಘಟಕಗಳಿಗೆ (ಕುಟುಂಬ, ಸಮಾಜ, ದೇಶ) ನೋವಾಗದಂತೇ ಸಂವ ಹನಗೊಳಿಸಲು ಸಮಾಧಾನ ಬೇಕು. ಸಾಕಷ್ಟು ಚಿಂತನೆ, ವಿಚಾರವನ್ನು ವಿವಿಧ ಕೋನಗಳಿಂದ ಅವಲೋಕಿಸುವ ಜಾಣ್ಮೆ ಬೇಕು. “ಮೌನ ಮೊಗ್ಗೆಯನೊಡೆದು ಮಾತರಳಿ’ (ಕವಿ ಜಿ.ಎನ್‌.ಎಸ್‌.) ಬರಬೇಕು. ಅರಳಿದಾಗ ಸೇರುವ ಸೌಂದರ್ಯ, ಪರಿಮಳ ಮಾತಿಗಿರಬೇಕು. ಸತ್ಯ ನುಡಿಯು ವಾಗ ಸೌಜನ್ಯ ಮುಖ್ಯವಾಗಬೇಕು; ತಣ್ಣೀರನ್ನೂ ತಣಿಸಿದಂತೇ!

ಸೃಷ್ಟಿಶೀಲರ ವೈಚಾರಿಕ ನೆಲೆಗಟ್ಟಿನ ಅಭಿವ್ಯಕ್ತಿ ಗಳೂ ಕೂಡಾ ಪ್ರಶ್ನಾತೀತವಾಗಿ ಉಳಿಯಲಿಲ್ಲ . ಕುವೆಂಪುರವರ “ಶೂದ್ರ ತಪಸ್ವೀ’ (ನಾಟಕ) ಅನಂತಮೂರ್ತಿಯವರ “ಘಟಶ್ರಾದ್ಧ’, ಭೈರಪ್ಪನ ವರ “ಪರ್ವ’ ಕೃತಿಗಳೂ ದೀಪಾ ಮೆಹ್ತಾರ “ಫೈರ್‌’, “ವಾಟರ್‌’ (ಸಿನೆಮಾ) ಇತ್ತೀಚೆಗಿನ “ಪೊಗರು’ ಸಹಿತ ಇನ್ನೂ ಹೆಸರಿಸದ ಹಲವಾರು ಅಭಿವ್ಯಕ್ತಿಗಳು ಕೆಲವು ವರ್ಗಗಳ ಅವಗಣನೆಗೆ ಗುರಿಯಾಗದುಳಿಯಲಿಲ್ಲ. ಈ ಹಿಂದೆ ಸಲ್ಮಾನ್‌ ರಶಿªಯವರ “ಸೈತಾನನ ಹಾಡುಗಳು’ ತಸ್ಲಿಮಾ ನಸ್ರಿàನ್‌ ಅವರ “ಲಜ್ಜಾ’ ಕೂಡಾ ಇದೇ ಧಾಟಿಯವು.

ಈಗೀಗ ನಮ್ಮ ನಾಯಕರೂ ಕೊಡುವ ಹೇಳಿಕೆಗಳು, ಎದುರಾಳಿಗೆ ಪ್ರಯೋಗಿಸುವ ಏಕವಚನ, ಪ್ರಜಾಪ್ರಭುತ್ವದ ಸನ್ನಿಧಿಯಲ್ಲಿ ಮಂಡಿಸುವ-ಖಂಡಿಸುವ ಪರಿ ಮೌಲ್ಯ ಗಳನ್ನೂ ಪ್ರಶ್ನಾರ್ಹವಾಗಿಸುತ್ತಿವೆ. ದೃಶ್ಯ ಮಾಧ್ಯಮಗಳು ವಿಷಯಗಳನ್ನು ಇನ್ನಷ್ಟು “ಹೈಪ್‌’ ಮಾಡಿ “ಕ್ಲೀಷೆ’ಯುಂಟು ಮಾಡುತ್ತಿವೆ. ಇವೆಲ್ಲವೂ ಸಾಮಾಜಿಕರಲ್ಲಿ ಪ್ರತಿಫ‌ಲನಗೊಂಡಾಗ ಅಭಿವ್ಯಕ್ತಿ ಸ್ವಾತಂತ್ರ್ಯದ ಹಳಿ ತಪ್ಪುತ್ತಿರುವಿಕೆ ಅನುಭವ ವಾಗದಿರದು.

“ಯೇನ ಕೇನ ಪ್ರಕಾರೇಣ ಯಸ್ಯಕನ್ಯಾಪಿ ಜೀವಿನಃ ಸಂತೋಷಂ ಜಿನಿಯೇತ್‌ ಪ್ರಾಜ್ಞಃ ತದೇವೇಶ್ವರ ಪೂಜನಂ’- ಯಾವುದೇ ಪ್ರಕಾರದಿಂದಾಗಿ ಯಾರಿಗಾದರೂ ಸರಿ ಸಂತೋಷವನ್ನುಂಟುಮಾಡುವುದು ಪ್ರಾಜ್ಞನ ಲಕ್ಷಣ. ಅದೇ ದೇವಪೂಜೆ.

– ಪದ್ಯಾಣ ಪರಮೇಶ್ವರ ಭಟ್‌, ಬೆರ್ಬಲಜೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next