Advertisement

ಅಕ್ಷರ ದಾಸೋಹದಲ್ಲಿ ಅವ್ಯವಹಾರ

04:28 PM Aug 14, 2019 | Team Udayavani |

ತುಮಕೂರು: ಅಕ್ಷರ ದಾಸೋಹದಲ್ಲಿ ಅಧಿಕಾರಿಗಳು ಲಕ್ಷಾಂತರ ರೂ. ಅವ್ಯವಹಾರ ನಡೆಸಿರುವುದು ಬಯಲಾಗಿದೆ. ಕೂಡಲೇ ಅವ್ಯವಹಾರ ನಡೆಸಿರುವವರನ್ನು ಅಮಾನತು ಮಾಡಬೇಕು ಎಂದು ಜಿಪಂ ಸದಸ್ಯರು ಒತ್ತಾಯಿಸಿದರು.

Advertisement

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಅಧ್ಯಕ್ಷೆ ಎಂ. ಲತಾ ರವಿಕುಮಾರ್‌ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯುತ್ತಿದ್ದಾಗ ಸದಸ್ಯ ಮಹಾಲಿಂಗಪ್ಪ ಮಾತನಾಡಿ, ಚಿಕ್ಕನಾಯಕನಳ್ಳಿ ಅಕ್ಷರದಾಸೋಹದಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆದಿದೆ. ಈ ಅವ್ಯವಹಾರವನ್ನು ಕಂಪ್ಯೂಟರ್‌ ಆಪರೇಟರ್‌ ಆಗಿದ್ದ ಶ್ರುತಿ ಎಂಬುವವರ ಮೇಲೆ ಹೊರಿಸಿ 16 ಲಕ್ಷ ರೂ. ಹಣ ಕಟ್ಟಿಸಿದ್ದಾರೆ. ಬಡ ಕುಟುಂಬ ನೋವು ತಾಳಲಾರದೇ ಆತ್ಮಹತ್ಯೆಗೂ ಯತ್ನಿಸಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ದನಿಗೂಡಿಸಿದ ಸದಸ್ಯರಾದ ವೈ.ಎಚ್. ಹುಚ್ಚಯ್ಯ, ವೈ.ಸಿ. ಸಿದ್ದರಾಮಯ್ಯ, ರಾಮಚಂದ್ರಯ್ಯ, ಸೊಗಡು ವೆಂಕಟೇಶ್‌ ಇತರರು ತಪ್ಪಿತಸ್ಥರ ಅಮಾನತಿಗೆ ಪಟ್ಟು ಹಿಡಿದರು.

40 ಲಕ್ಷ ರೂ. ದುರ್ಬಳಕೆ: ಅಕ್ಷರ ದಾಸೋಹ ಅನುದಾನದ ಸುಮಾರು 40 ಲಕ್ಷ ರೂ. ದುರ್ಬಳಕೆಯಾಗಿದೆ. 2015ರಿಂದ ನಡೆದಿರುವ ಅಕ್ರಮದಲ್ಲಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರು ಬಡ ಕುಟುಂಬವನ್ನು ಬಲಿಪಶು ಮಾಡಿದ್ದಾರೆ. ಆದರೂ ಕ್ರಮ ಆಗಿಲ್ಲ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಬೇಕು. ಅಧಿಕಾರಿಗಳನ್ನು ಅಮಾನತು ಮಾಡಿ ಬಂಧಿಸಲು ಸರ್ಕಾರಕ್ಕೆ ಸಭೆ ನಿರ್ಣಯ ಕಳಿಸಬೇಕೆಂದು ಎಂದು ಸದಸ್ಯೆ ಶಾಂತಲಾ ಒತ್ತಾಯಿಸಿದರು.

ಇದಕ್ಕುತ್ತರಿಸಿದ ಅಕ್ಷರ ದಾಸೋಹ ಅಧಿಕಾರಿ, ಚಿಕ್ಕನಾಯಕನಹಳ್ಳಿಯ ಅಕ್ಷರ ದಾಸೋಹದ ಅನುದಾನ ಮೂರು ಖಾತೆಯಲ್ಲಿ 34.35 ಲಕ್ಷ ಅಕ್ರಮವಾಗಿರುವುದು ಪ್ರಾಥಮಿಕ ವರದಿಯಿಂದ ಖಚಿತವಾಗಿದೆ. 16. 68 ಲಕ್ಷ ರೂ. ಶಾಲೆ ಹೆಸರಲ್ಲಿ ತುಂಬಿದ್ದಾರೆ. ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

Advertisement

ಉನ್ನತ ಮಟ್ಟದ ತನಿಖೆ: ಅಕ್ಷರ ದಾಸೋಹದಲ್ಲಾಗಿರುವ ಅವ್ಯವಹಾರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅವ್ಯಹಾರದಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ಪ್ರಾಥಮಿಕ ತನಿಖೆಯಿಂದ ಅಕ್ರಮವಾಗಿರುವುದು ಖಚಿತವಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ತನಿಖೆ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶುಭಾ ಕಲ್ಯಾಣ್‌ ಭರವಸೆ ನೀಡಿದರು.

1.99 ಕೋಟಿ ರೂ. ವಾಪಸ್‌: ಅನುಪಾಲನಾ ವರದಿಯಲ್ಲಾದ ಲೋಪಗಳ ಬಗ್ಗೆ ಎತ್ತಿಹಿಡಿದ ಸದಸ್ಯ ವೈ.ಎಚ್. ಹುಚ್ಚಯ್ಯ, ಅಧಿಕಾರಿಗಳು ಕಾಟಾಚಾರದ ಕೆಲಸ ಮಾಡುತ್ತಾರೆ. ಸಭೆಯಲ್ಲಿ ಆಗುವುದೊಂದು, ನಿರ್ಣಯ ಬರೆಯುವುದೇ ಮತ್ತೂಂದು. ಗ್ರಾಮೀಣಾಭಿವೃದ್ಧಿ ಯೋಜನೆಯ 1.99 ಕೋಟಿ ರೂ. ವಾಪಸ್‌ ಹೋಗಿದೆ. ಇದಕ್ಕೆ ಹೊಣೆಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸದಸ್ಯರಾದ ಕೆಂಚಮಾರಯ್ಯ, ಜಿ.ಜೆ. ರಾಜಣ್ಣ ದನಿಗೂಡಿಸಿದರು.

ಸದಸ್ಯೆ ಶಾಂತಲಾ ರಾಜಣ್ಣ ಮಾತನಾಡಿ, ಸರಿಯಾದ ರೀತಿಯಲ್ಲಿ ನಿರ್ಣಯ ಆಗದಿದ್ದರೆ ಸಭೆಯ ಅವಶ್ಯಕತೆ ಏನು ಎಂದು ಪ್ರಶ್ನಿಸಿದರು. ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. 13ನೇ ಹಣಕಾಸು ಯೋಜನೆಯಿಂದ ಪ್ರಾರಂಭವಾದ ಕಾಮಗಾರಿ ಪೂರ್ಣಗೊಂಡಿಲ್ಲ. ಉಳಿಕೆ ಕಾಮಗಾರಿಗೆ ವಿಶೇಷ ಅನುದಾನ ತರಿಸಿ ಪೂರ್ಣಗೊಳಿಸಿ ಎಂದು ಆಗ್ರಹಿಸಿದರು.

ಸೂಕ್ತ ದಿನಾಂಕದೊಳಗೆ ಬಿಲ್ ಪಾವತಿಸಿರುವ ಬಗ್ಗೆ ಖಾತರಿಪಡಿಸಿಕೊಂಡು ಬಿಲ್ ರದ್ದಾಗಿರುವ ಬಗ್ಗೆ ಪರಿಶೀಲನೆ ನಡೆಸಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸಿಇಒ ಸೂಚಿಸಿದರು.ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಪಂ ಸದಸ್ಯರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next