Advertisement

ಶೇಷಭಾರತದೆದುರು ಮೆರೆದ ವಿದರ್ಭ

05:04 AM Feb 15, 2019 | |

ನಾಗ್ಪುರ: ಎಂಟನೇ ಕ್ರಮಾಂಕದ ಆಟಗಾರ ಅಕ್ಷಯ್‌ ಕರ್ಣೆವರ್‌ ಬಾರಿಸಿದ ಬಹುಮೂಲ್ಯ ಶತಕ ಸಾಹಸದಿಂದ ರಣಜಿ ಚಾಂಪಿಯನ್‌ ವಿದರ್ಭ ತಂಡ “ಇರಾನಿ ಕಪ್‌’ ಪಂದ್ಯದಲ್ಲಿ ಮಹತ್ವದ ಇನಿಂಗ್ಸ್‌ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.

Advertisement

ಶೇಷ ಭಾರತದ 330ಕ್ಕೆ ಜವಾಬಾಗಿ 6 ವಿಕೆಟಿಗೆ 245 ರನ್‌ ಮಾಡಿದ್ದ ವಿದರ್ಭ, 3ನೇ ದಿನವಾದ ಗುರುವಾರ 425 ರನ್‌ ಬಾರಿಸಿ ಮೆರೆದಾಡಿತು. ಇದರಲ್ಲಿ ಅಕ್ಷಯ್‌ ಕರ್ಣೆವರ್‌ ಕೊಡುಗೆ ಅಮೋಘ 102 ರನ್‌. 95 ರನ್‌ ಹಿನ್ನಡೆ ಬಳಿಕ ದ್ವಿತೀಯ ಇನಿಂಗ್ಸ್‌ ಆರಂಭಿಸಿರುವ ಶೇಷ ಭಾರತ, 2 ವಿಕೆಟಿಗೆ 102 ರನ್‌ ಮಾಡಿದೆ.

ಮಾಯಾಂಕ್‌ ಅಗರ್ವಾಲ್‌ (27) ಮತ್ತು ಅನ್ಮೋಲ್‌ಪ್ರೀತ್‌ ಸಿಂಗ್‌ (6) ಈಗಾಗಲೇ ಪೆವಿಲಿಯನ್‌ ಸೇರಿದ್ದು, ಹನುಮ ವಿಹಾರಿ (40) ಮತ್ತು ನಾಯಕ ಅಜಿಂಕ್ಯ ರಹಾನೆ (25) ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಗೆಲುವು ಸಾಧಿಸಿದರಷ್ಟೇ ಶೇಷ ಭಾರತ ಇರಾನಿ ಕಪ್‌ ಚಾಂಪಿಯನ್‌ ಆಗಲಿದೆ. ಪಂದ್ಯ ಡ್ರಾಗೊಂಡರೆ ಇನಿಂಗ್ಸ್‌ ಮುನ್ನಡೆ ಆಧಾರದಲ್ಲಿ ವಿದರ್ಭ ಇರಾನಿ ಕಪ್‌ ಅನ್ನೂ ತನ್ನಲ್ಲೇ ಕಾಯ್ದುಕೊಳ್ಳಲಿದೆ.

ಮುನ್ನಡೆಯ ಸೂತ್ರಧಾರ: 50 ರನ್‌ ಮಾಡಿ ಅಜೇಯರಾಗಿದ್ದ ಅಕ್ಷಯ್‌ ವಡ್ಕರ್‌ ಮೇಲೆ ವಿದರ್ಭ ಹೆಚ್ಚಿನ ನಿರೀಕ್ಷೆ ಇರಿಸಿತ್ತು. ಇನ್ನೊಂದೆಡೆ ಶೇಷ ಭಾರತ ಉಳಿದ 4 ವಿಕೆಟ್‌ಗಳನ್ನು ಬಹಳ ಬೇಗ ಉರುಳಿಸಿ ಮುನ್ನಡೆಯ ಯೋಜನೆಯಲ್ಲಿತ್ತು. ಆದರೆ ಅಕ್ಷಯ್‌ ಕರ್ಣೆವರ್‌ ಭರ್ಜರಿ ಶತಕವೊಂದನ್ನು ಸಿಡಿಸಿ ಪಂದ್ಯದ ಗತಿಯನ್ನೇ ಬದಲಿಸಿದರು.

ಶೇಷ ಭಾರತ ಬೌಲರ್‌ಗಳನ್ನು ಏಕಪ್ರಕಾರವಾಗಿ ದಂಡಿಸತೊಡಗಿದ ಕರ್ಣೆವರ್‌, ವಿದರ್ಭ ಮುನ್ನಡೆಯ ಸೂತ್ರಧಾರನಾಗಿ ಮೂಡಿಬಂದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಈವರೆಗೆ 2 ಅರ್ಧ ಶತಕಗಳನ್ನಷ್ಟೇ ಹೊಡೆದಿದ್ದ ಅವರಿಲ್ಲಿ ಶತಕ ಸಂಭ್ರಮ ಆಚರಿಸಿದರು. 133 ಎಸೆತಗಳ ಈ ಜವಾಬ್ದಾರಿಯುತ ಆಟದ ವೇಳೆ 13 ಬೌಂಡರಿ, 2 ಸಿಕ್ಸರ್‌ ಸಿಡಿಯಿತು. ಅಕ್ಷಯ್‌ ವಖಾರೆ (20) ಮತ್ತು ರಜನೀಶ್‌ ಗುರ್ಬಾನಿ (ಔಟಾಗದೆ 28) ಕೂಡ ಉಪಯುಕ್ತ ಬ್ಯಾಟಿಂಗ್‌ ಮೂಲಕ ಗಮನ ಸೆಳೆದರು. ವಡ್ಕರ್‌ ಜತೆಗೆ ಕರ್ಣೆವರ್‌ 15 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದು ಕೊಂಡಿದ್ದರು. ಇವರಿಬ್ಬರ ಜತೆಯಾಟ 305ರ ತನಕ ವಿಸ್ತರಿಸಿತು. ಆಗ 73 ರನ್‌ ಮಾಡಿದ ವಡ್ಕರ್‌ ಚಹರ್‌ಗೆ ಬೌಲ್ಡ್‌ ಆದರು (139 ಎಸೆತ, 14 ಬೌಂಡರಿ). ಮುಂದಿದ್ದೆಲ್ಲ ಕರ್ಣೆವರ್‌ ಮಹಿಮೆ.

Advertisement

ಸಂಕ್ಷಿಪ್ತ ಸ್ಕೋರ್‌: ಶೇಷ ಭಾರತ-330 ಮತ್ತು 102/2. ವಿದರ್ಭ-425 (ಕರ್ಣೆವರ್‌ 102, ವಡ್ಕರ್‌ 73, ರಘುನಾಥ್‌ 65, ಜಿ.ಸತೀಶ್‌ 48, ಚಹರ್‌ 112ಕ್ಕೆ 4, ಕೆ. ಗೌತಮ್‌ 33ಕ್ಕೆ 2, ರಜಪೂತ್‌ 84ಕ್ಕೆ 2, ಜಡೇಜ 111ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next