Advertisement

ಐಪಿಎಲ್: ಒಂದು ಕಾಲದಲ್ಲಿ ಮಿಂಚಿ ನಂತರ ಮರೆಯಾದ ಭಾರತೀಯ ಪ್ರತಿಭೆಗಳು

03:37 PM Apr 09, 2021 | ಕೀರ್ತನ್ ಶೆಟ್ಟಿ ಬೋಳ |

ಐಪಿಎಲ್ ನ 14ನೇ ಆವೃತ್ತಿ ಆರಂಭವಾಗಿದೆ. ಹಲವಾರು ಯುವ ಪ್ರತಿಭೆಗಳನ್ನು ಐಪಿಎಲ್ ಪೋಷಿಸಿಕೊಂಡು ಬಂದಿದೆ.  ಹಲವಾರು ಆಟಗಾರರು ಈ ಕೂಟದಿಂದಲೇ ಸ್ಟಾರ್ ಪಟ್ಟಕ್ಕೆ ಏರಿದ್ದಾರೆ. ಐಪಿಎಲ್ ನ ಅದ್ಭುತ ಪ್ರದರ್ಶನದ ಕಾರಣದಿಂದಲೇ ಹಲವರು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಒಂದು ಕಾಲದಲ್ಲಿ ಐಪಿಎಲ್ ನಲ್ಲಿ ಮಿಂಚಿ ನಂತರ ಮರೆಯಾದ ಹಲವು ಆಟಗಾರರೂ ಇದ್ದಾರೆ. ಅವರುಗಳ ಪರಿಚಯ ಇಲ್ಲಿದೆ.

Advertisement

ಸ್ವಪ್ನಿಲ್ ಅಸ್ನೋಡ್ಕರ್

ಗೋವಾ ರಾಜ್ಯದಿಂದ ಐಪಿಎಲ್ ಆಡಿದ ಕೆಲವೇ ಆಟಗಾರರಲ್ಲಿ ಓರ್ವ. ರಾಜಸ್ಥಾನ್ ರಾಯಲ್ಸ್ ತಂಡದ ಪರ 2008 ಮತ್ತು 2009ರಲ್ಲಿ ಆಡಿದ್ದ. ಶೇನ್ ವಾರ್ನ್ ನಾಯಕತ್ವದಲ್ಲಿ ಗ್ರೇಮ್ ಸ್ಮಿತ್ ಜೊತೆ ಇನ್ನಿಂಗ್ಸ್ ಆರಂಭಿಸುವ ಅವಕಾಶ ಪಡೆದಿದ್ದ.

ಆದರೆ ಸ್ಥಿರ ಪ್ರದರ್ಶನ ನೀಡುವಲ್ಲಿ ಸ್ವಪ್ನಿಲ್ ಅಸ್ನೋಡ್ಕರ್ ವಿಫಲನಾಗಿದ್ದ. ಯಾವುದೇ ದೊಡ್ಡ ಇನ್ನಿಂಗ್ಸ್ ಸ್ವಪ್ನಿಲ್ ಬ್ಯಾಟ್ ನಿಂದ ಬರಲಿಲ್ಲ. ಹೀಗಾಗಿ ಮುಂದೆ ಯಾವುದೇ ಫ್ರಾಂಚೈಸಿ ಈತನ ಮೇಲೆ ವಿಶ್ವಾಸ ಇಡಲಿಲ್ಲ. ಮೊದಲ ಚಾಂಪಿಯನ್‌ ತಂಡದ ಆಟಗಾರ ಎರಡೇ ಐಪಿಎಲ್ ಗೆ ಸುಸ್ತಾದ.

Advertisement

ಇದನ್ನೂ ಓದಿ:ಐಪಿಎಲ್ :ಇದುವರೆಗೆ ತಲಾ ನಾಲ್ಕು ಭಾರತೀಯರಿಗಷ್ಟೇ ಸೇರಿದೆ ಪರ್ಪಲ್ ಕ್ಯಾಪ್, ಆರೆಂಜ್ ಕ್ಯಾಪ್!

ನಂತರ ಗೋವಾ ಪರ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಆಟ ಮುಂದುವರಿಸಿದರೂ ಮೊದಲ ಚಾರ್ಮ್ ಕಳೆದುಕೊಂಡಿದ್ದ. ಇದರ ಬೆನ್ನಲ್ಲೇ ಮ್ಯಾಚ್ ಫಿಕ್ಸಿಂಗ್ ವಿವಾದದಲ್ಲಿ ಸ್ವಪ್ನಿಲ್ ಹೆಸರು ಕೇಳಿ ಬಂದಿತ್ತು. ನಂತರ ಪ್ರಕರಣ ಆಟಗಾರನ ಪರವಾಗಿ ಇತ್ಯರ್ಥವಾದರೂ, ವೃತ್ತಿ ಜೀವನ ನಿರಾಶಾದಾಯಕವಾಗಿಯೇ ಕಳೆಯಿತು.

ಕಮ್ರಾನ್ ಖಾನ್

ಈತ ಶೇನ್ ವಾರ್ನ್ ತಂದ ಅಚ್ಚರಿಯ ಆಯ್ಕೆ. ಮತ್ತದೇ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರ. ವಿಭಿನ್ನ ಶೈಲಿಯ ವೇಗದ ಬೌಲರ್. ಶೇನ್ ವಾರ್ನ್ ಈತನನ್ನು ಐಪಿಎಲ್ ಲೋಕಕ್ಕೆ ಪರಿಚಯಿಸಿದಾಗ ಈತನ ಶೈಲಿ ಮತ್ತು ವೇಗಕ್ಕೆ ಎಲ್ಲರೂ ದಂಗಾಗಿದ್ದರು.

ಗಂಟೆಗೆ 140 ಕಿ.ಮೀ ನಂತೆ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದ ಕಮ್ರಾನ್ ಖಾನ್ ಐಪಿಎಲ್ ಜೀವನ ಅಷ್ಟೇ ವೇಗದಲ್ಲಿ ಅಂತ್ಯವಾಗಿತ್ತು. ಈತನ ಬೌಲಿಂಗ್‌ ಶೈಲಿಯ ಶಂಕಾಸ್ಪದವಾಗಿತ್ತು. ನಂತರ ತಂಡದಿಂದ ಹೊರ ಬಿದ್ದ ಈತ ನಂತರ ಪುಣೆ ಸೂಪರ್ ಜೈಂಟ್ಸ್ ತಂಡ ಸೇರಿದನಾದರೂ ನೆಟ್ ಪ್ರಾಕ್ಟೀಸ್ ಗೆ ಮಾತ್ರ ಸೀಮಿತನಾದ. ಸದ್ಯ ಹೈದರಾಬಾದ್‌ ನಲ್ಲಿ ನೆಲೆಸಿರುವ ಕಮ್ರಾನ್ ಖಾನ್ ಸ್ಥಳೀಯ ಕ್ಲಬ್‌ ಗಳ ಪರವಾಗಿ ಆಡುತ್ತಿದ್ದಾನೆ.

ಮನ್ವಿಂದರ್ ಬಿಸ್ಲಾ

ಈತ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌. 2012ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸದಸ್ಯನಾಗಿದ್ದ. ಫೈನಲ್‌ ಪಂದ್ಯದಲ್ಲಿ ಬ್ರೆಂಡನ್ ಮೆಕಲಮ್ ಬದಲಿಗೆ ಅವಕಾಶ ಪಡೆದ ಬಿಸ್ಲಾ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ದ. ಸಿಎಸ್ ಕೆ ನೀಡಿದ 191 ರನ್ ಗುರಿ ಬೆನ್ನತ್ತಿದ ಕೆಕೆಆರ್ ಆರಂಭದಲ್ಲೇ ನಾಯಕ ಗಂಭೀರ್ ರೂಪದಲ್ಲಿ ವಿಕೆಟ್ ಕಳೆದುಕೊಂಡಿತ್ತು.  ಆದರೆ ಎರಡನೇ ವಿಕೆಟ್ ಗೆ ಜ್ಯಾಕ್‌ ಕ್ಯಾಲಿಸ್ ಜೊತೆಯಾದ ಮನ್ವಿಂದರ್ ಎಂದೂ ಮರೆಯದ ಇನ್ನಿಂಗ್ಸ್‌‌ ಕಟ್ಟಿದ್ದ.

ಕೇವಲ 48 ಎಸೆತಗಳಲ್ಲಿ 89 ರನ್ ಗಳಿಸಿದ್ದ ಬಿಸ್ಲಾ ತಂಡದ ಗೆಲುವಿಗೆ ಪ್ರಮುಖ ಕಾರಣವಾಗಿದ್ದ. ಒಂದೇ ಪಂದ್ಯದಲ್ಲಿ ದೊಡ್ಡ ಹೀರೋ ಆದ ಬಿಸ್ಲಾ, ಮುಂದಿನ ಆವೃತ್ತಿಯಲ್ಲೂ ಉತ್ತಮ ಅವಕಾಶ ನೀಡಿದರೂ ಅದನ್ನು ಸದುಪಯೋಗ ಪಡಿಸಲು ವಿಫಲನಾಗಿದ್ದ. ಐಪಿಎಲ್ ನಿಂದ ಹೊರಬಿದ್ದ ಈತನಿಗೆ ರಾಜ್ಯ ತಂಡವೂ ದೂರವಾಯಿತು. ಸದ್ಯ ಏರ್ ಇಂಡಿಯಾ ಪರ ಮನ್ವಿಂದರ್ ಬಿಸ್ಲಾ ಆಡುತ್ತಿದ್ದಾರೆ.

ಪಾಲ್ ವಲ್ತಾಟಿ

2011ರ ಐಪಿಎಲ್ ನಲ್ಲಿ ಗಮನ ಸೆಳೆದ ಪ್ರಮುಖ ಆಟಗಾರ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸದಸ್ಯನಾಗಿದ್ದ ಪಾಲ್ ವಲ್ತಾಟಿ ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧದ ಒಂದೇ ಪಂದ್ಯದಲ್ಲಿ ಹೀರೋ ಆಗಿದ್ದ. ಚೆನ್ನೈ ನೀಡಿದ್ದ 189 ರನ್ ಗುರಿ ಬೆನ್ನತ್ತಿದ ತಂಡಕ್ಕೆ ವಲ್ತಾಟಿ ಸಿಡಿಲಬ್ಬರದ ಶತಕ ನೆರವಾಗಿತ್ತು. ವಲ್ತಾಟಿ ಕೇವಲ 63 ಎಸೆತದಲ್ಲಿ 120 ರನ್ ಬಾರಿಸಿದ್ದ. ಆ ಸೀಸನ್ ನಲ್ಲಿ 14 ಪಂದ್ಯಗಳಲ್ಲಿ 463 ರನ್ ಗಳಿಸಿದ್ದ ವಲ್ತಾಟಿ ಮುಂದೆ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯುತ್ತಾನೆ ಎನ್ನುವಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದಿದ್ದ. ಐಪಿಎಲ್ ಬಳಿಕ ಚಾಲೆಂಜರ್ ಟ್ರೋಫಿಯಲ್ಲಿ ಇಂಡಿಯಾ ಬ್ಲೂ ಪರ ಅವಕಾಶ ಗಿಟ್ಟಿಸಿದ್ದ. ಆದರೆ ಮೊಣಕೈ ಗೆ ಗಾಯ ಮಾಡಿಕೊಂಡ ವಲ್ತಾಟಿ ನಂತರ ಹಿಂದಿನಂತೆ ಬ್ಯಾಟಿಂಗ್ ನಡೆಸಲಾಗಲಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next