Advertisement

ಮ್ಯಾಚ್‌ ನಂ. ಎಂಟು: ಮುಂಬೈಗೆ ಇದೆಯೇ ಅದೃಷ್ಟ ನಂಟು?

11:27 PM Apr 23, 2022 | Team Udayavani |

ಮುಂಬಯಿ: ಮುಂಬೈ ಇಂಡಿಯನ್ಸ್‌ ಐಪಿಎಲ್‌ ಇತಿಹಾಸದ ಅತ್ಯಂತ ಯಶಸ್ವಿ ತಂಡವೂ ಹೌದು, ಈ ವರ್ಷದ ಮಟ್ಟಿಗೆ ಆತಿಥೇಯ ತಂಡವೂ ಹೌದು. ಆದರೆ ರೋಹಿತ್‌ ಪಡೆ ಮಾತ್ರ 7 ಪಂದ್ಯ ಆಡಿದರೂ ಇನ್ನೂ ಗೆಲುವಿನ ಮುಖ ಕಾಣದಿರುವುದು ಮುಂಬೈ ಅಭಿಮಾನಿಗಳಿಗಷ್ಟೇ ಅಲ್ಲ, ಐಪಿಎಲ್‌ ಆಸಕ್ತರಿಗೆಲ್ಲರಿಗೂ ಆಘಾತ ಉಂಟುಮಾಡಿದೆ. ರವಿವಾರ ಇದೇ ಸಂಕಟದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ 8ನೇ ಪಂದ್ಯ ಆಡಲಿಳಿಯಲಿದೆ. ಎಂಟರ ನಂಟು ಮುಂಬೈ ಪಾಲಿಗೆ ಅದೃಷ್ಟದ ನಂಟಾಗಿ ಪರಿಣಮಿಸೀತೇ? ಇದು ಎಲ್ಲರ ಕುತೂಹಲ.

Advertisement

ಐಪಿಎಲ್‌ಗೇ ನಷ್ಟ!
ಇಲ್ಲಿ ಇನ್ನೊಂದು ಸಂಗತಿ ಇದೆ. ಈ 7 ಸೋಲುಗಳ ಪರಿಣಾಮವಾಗಿ ಈಗಾಗಲೇ ಮುಂಬೈ ತಂಡದ ಪ್ಲೇ ಆಫ್‌ ಪ್ರವೇಶದ ಸಾಧ್ಯತೆ ಕ್ಷೀಣಿಸಿದೆ. ಅಕಸ್ಮಾತ್‌ ರವಿವಾರ ಲಕ್ನೋ ವಿರುದ್ಧವೂ ಎಡವಿದರೆ ತಂಡದ ನಿರ್ಗಮನ ಬಹುತೇಕ ಖಚಿತಗೊಳ್ಳಲಿದೆ. ಇದರಿಂದ ಐಪಿಎಲ್‌ಗೆ ಭಾರೀ ನಷ್ಟ ಸಂಭವಿಸುವುದರಲ್ಲಿ ಅನುಮಾನವಿಲ್ಲ. ಮುಂಬೈ ಕೂಟದಿಂದ ಬೇಗ ಹೊರಬಿದ್ದರೆ ವೀಕ್ಷಕರ ಆಸಕ್ತಿ ಹೊರಟು ಹೋಗಿ ಅವರು ಸ್ಟೇಡಿಯಂಗೆ ಬಾರದಿರುವ ಸಾಧ್ಯತೆ ಇದೆ ಎಂಬುದೊಂದು ಲೆಕ್ಕಾಚಾರ.

ಎರಡನೇ ಸುತ್ತಿನ ಪಂದ್ಯ
ಈ ಪಂದ್ಯದೊಂದಿಗೆ 2ನೇ ಸುತ್ತಿನ ಹಣಾಹಣಿ ಮೊದಲ್ಗೊಳ್ಳಲಿದೆ. ಎ. 16ರಂದು ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಲಕ್ನೋ 18 ರನ್ನುಗಳಿಂದ ಮುಂಬೈಯನ್ನು ಮಣಿಸಿತ್ತು. ಇದರಲ್ಲಿ ನಾಯಕ ಕೆ.ಎಲ್‌. ರಾಹುಲ್‌ ಅಜೇಯ 103 ರನ್‌ ಬಾರಿಸಿದ್ದರು. ಲಕ್ನೋ 4 ವಿಕೆಟಿಗೆ 199 ರನ್‌ ಪೇರಿಸಿತ್ತು. ಜವಾಬಿತ್ತ ಮುಂಬೈ 9 ವಿಕೆಟಿಗೆ 181ರ ತನಕ ಬಂದು ಶರಣಾಗಿತ್ತು. ಲಕ್ನೋ ವಿರುದ್ಧ ದ್ವಿತೀಯ ಸುತ್ತಿನ ಹೋರಾಟ ಆರಂಭಿಸುವ ಮೂಲಕವಾದರೂ ಮುಂಬೈಗೆ ಲಕ್‌ ಒಲಿದೀತೇ? ನಿರೀಕ್ಷೆ ಸಹಜ,

ಮತ್ತದೇ ವೈಫಲ್ಯ…
ಮುಂಬೈ ವೈಫಲ್ಯದ ಬಗ್ಗೆ ಸಾಕಷ್ಟು ಬರೆದಾಗಿದೆ. ಮತ್ತೆ ಮತ್ತೆ ಇದನ್ನೇ ಹೇಳುತ್ತ ಹೋಗುವುದು ಕ್ರಿಕೆಟ್‌ ಅಭಿಮಾನಗಳಿಗೆ ಖಂಡಿತವಾಗಿಯೂ ಬೇಸರ ತರಿಸಲಿದೆ. ಆದರೆ ಮುಂಬೈ ಇಂಥದೊಂದು ಸ್ಥಿತಿಯನ್ನು ತಾನಾಗಿ ಆಹ್ವಾನಿಸಿಕೊಂಡಿರುವುದು ಸುಳ್ಳಲ್ಲ.

ಮೆಗಾ ಹರಾಜಿನ ಲಾಭವೆತ್ತುವಲ್ಲಿ ವಿಫಲವಾದಾಗಲೇ ಮುಂಬೈ ಮುಗ್ಗರಿಸಿತ್ತು. ಕೆಲವು ಸ್ಟಾರ್‌ ಆಟಗಾರರನ್ನು, ಮ್ಯಾಚ್‌ ವಿನ್ನರ್‌ಗಳನ್ನು ಕೈಬಿಟ್ಟಿತು. ಇವರ ಬದಲಿಗೆ ಖರೀದಿಯಾದವರೆಲ್ಲ ತೀರಾ ಸಾಮಾನ್ಯ ಮಟ್ಟದ ಆಟಗಾರರು. ಮುಖ್ಯವಾಗಿ ಬೌಲಿಂಗ್‌ ವಿಭಾಗವಂತೂ ತೀರಾ ದುರ್ಬಲ.

Advertisement

ನಾಯಕ ರೋಹಿತ್‌ ಶರ್ಮ, ಇವರ ಜತೆಗಾರ ಇಶಾನ್‌ ಕಿಶನ್‌ ಅವರ ವೈಫಲ್ಯದೊಂದಿಗೆ ಮುಂಬೈ ಸಂಕಟ ಮೊದಲ್ಗೊಳ್ಳುತ್ತದೆ. ಮಿಡ್ಲ್ ಆರ್ಡರ್‌ ಅಷ್ಟೇನೂ ಬಲಿಷ್ಠವಿಲ್ಲದ ಕಾರಣ ಇಲ್ಲಿನ ಯುವ ಆಟಗಾರರ ಮೇಲೆ ಒತ್ತಡ ಬೀಳುತ್ತಿದೆ. ನಿವೃತ್ತಿಯ ಗಂಟೆ ಬಡಿದಿರುವ ಪೊಲಾರ್ಡ್‌ ಮೇಲೆ ನಂಬಿಕೆ ಇಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದು ಸಾಬೀತಾಗಿದೆ.

ನಿಜಕ್ಕಾದರೆ ಚೆನ್ನೈ ಎದುರಿನ ಕಳೆದ ಪಂದ್ಯದಲ್ಲಿ ಮುಂಬೈಗೆ ಗೆಲುವಿನ ಸುವರ್ಣಾವಕಾಶವಿತ್ತು. ಆದರೆ ಧೋನಿ ಇದಕ್ಕೆ ಆಸ್ಪದ ಕೊಡಲಿಲ್ಲಿ. ಜೈದೇವ್‌ ಉನಾದ್ಕತ್‌ ಅವರ ಅಂತಿಮ ಓವರ್‌ನಲ್ಲಿ ಮುಂಬೈ ನಿರೀಕ್ಷೆಯೆಲ್ಲ ಮಣ್ಣುಗೂಡಿತು!

ಅಗ್ರ ನಾಲ್ಕರಲ್ಲಿ ಲಕ್ನೋ
ಲಕ್ನೋ ಕೂಡ ತನ್ನ ಕಳೆದ ಪಂದ್ಯದಲ್ಲಿ ಸೋಲನುಭವಿಸಿದೆ. ಆರ್‌ಸಿಬಿ ಎದುರಿನ ಮುಖಾಮುಖಿಯನ್ನು 18 ರನ್ನುಗಳಿಂದ ಕಳೆದುಕೊಂಡಿದೆ. ಆದರೆ ಏಳರಲ್ಲಿ ನಾಲ್ಕನ್ನು ಗೆದ್ದು ಟಾಪ್‌-4 ಸ್ಥಾನವನ್ನು ಕಾಯ್ದುಕೊಳ್ಳವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ಮೊದಲ ಸುತ್ತಿನಲ್ಲಿ ಮುಂಬೈಯನ್ನು ಕೆಡವಿದ ಉತ್ಸಾಹದಲ್ಲಿದೆ.

ಈಗಿನ ಸ್ಥಿತಿಯಲ್ಲಿ ಎಲ್ಲ ತಂಡಗಳೂ ಮುಂಬೈಗಿಂತ ಭಾರೀ ಬಲಿಷ್ಠವಾಗಿ ಗೋಚರಿಸುತ್ತಿವೆ. ಇದಕ್ಕೆ ಲಕ್ನೋ ಕೂಡ ಹೊರತಲ್ಲ. ನಾಯಕ ರಾಹುಲ್‌, ಡಿ ಕಾಕ್‌, ಪಾಂಡೆ, ಕೃಣಾಲ್‌ ಪಾಂಡ್ಯ, ಹೂಡಾ, ಬದೋನಿ, ಆಲ್‌ರೌಂಡರ್‌ಗಳಾದ ಸ್ಟೋಯಿನಿಸ್‌, ಹೋಲ್ಡರ್‌ ಅವರನ್ನೊಳಗೊಂಡ ಲಕ್ನೋ ಬ್ಯಾಟಿಂಗ್‌ ಲೈನ್‌ಅಪ್‌ ಸಾಕಷ್ಟು ವೈವಿಧ್ಯಮಯ. ಆದರೂ ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ 182 ರನ್‌ ಗಳಿಸಲಾಗದೆ ಎಡವಿದ್ದನ್ನು ಗಮನಿಸುವಾಗ ಲಕ್ನೋ ಬ್ಯಾಟಿಂಗ್‌ನಲ್ಲೂ ದೊಡ್ಡ ಮಟ್ಟದ ಸುಧಾರಣೆ ಆಗಬೇಕಿದೆ ಎಂಬುದು ತಿಳಿದು ಬರುತ್ತದೆ.

ಬೌಲಿಂಗ್‌ ವಿಭಾಗವೂ ಅಷ್ಟೇ. ಆರ್‌ಸಿಬಿ ವಿರುದ್ಧ ದುಷ್ಮಂತ ಚಮೀರ ಮೊದಲ ಓವರ್‌ನಲ್ಲೇ 2 ವಿಕೆಟ್‌ ಕೆಡವಿದರೂ ಅವರಿಗೆ ಇನ್ನೊಂದು ತುದಿಯಿಂದ ಸೂಕ್ತ ಬೆಂಬಲ ಸಿಕ್ಕಿರಲಿಲ್ಲ. ಹೀಗಾಗಿ ಆರ್‌ಸಿಬಿ ಮೊತ್ತ 181ರ ತನಕೆ ಬೆಳೆದಿತ್ತು. ಆವೇಶ್‌ ಖಾನ್‌, ರವಿ ಬಿಷ್ಣೋಯಿ ಇನ್ನಷ್ಟು ಘಾತಕವಾಗಿ ಪರಿಣಮಿಸಬೇಕಿದೆ.

 

Advertisement

Udayavani is now on Telegram. Click here to join our channel and stay updated with the latest news.

Next