Advertisement

ಕಾರ್ತಿಕ್‌ ಬಳಗಕ್ಕೆ ಕಾದಿದೆ ರಾಜಸ್ಥಾನ್‌ ಟೆಸ್ಟ್‌

11:01 PM Sep 29, 2020 | mahesh |

ದುಬಾೖ: ಸುಂಟರಗಾಳಿಯಂತೆ ಬ್ಯಾಟಿಂಗ್‌ ಮಾಡುತ್ತಿರುವ ರಾಜಸ್ಥಾನ್‌ ರಾಯಲ್ಸ್‌ ಪಡೆ ಕೋಲ್ಕತಾ ನೈಟ್‌ರೈಡರ್ಗೆ ಹೋಗಿ ಅಪ್ಪಳಿಸೀತೇ ಅಥವಾ ದಿನೇಶ್‌ ಕಾರ್ತಿಕ್‌ ಬಳಗ ಇದನ್ನು ತಡೆದು ನಿಂತೀತೇ ಎಂಬ ಕುತೂಹಲದೊಂದಿಗೆ ಬುಧವಾರದ ಐಪಿಎಲ್‌ ಪಂದ್ಯ ಎಲ್ಲರನ್ನೂ ತುದಿಗಾಲಲ್ಲಿ ನಿಲ್ಲಿಸಿದೆ.

Advertisement

ಕೂಟದ “ಅಂಡರ್‌ ಡಾಗ್ಸ್‌’ ಆಗಿದ್ದ ರಾಜಸ್ಥಾನ್‌ ಈಗ ಅರಬ್‌ ನಾಡಿನಲ್ಲಿ “ಡೆಸರ್ಟ್‌ ಸ್ಟಾರ್ಮ್’ ಆಗಿ ಪರಿವರ್ತನೆಗೊಂಡಿರುವುದು ಈ ಕೂಟದ ಅಚ್ಚರಿ. ಕಳೆದ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಐಪಿಎಲ್‌ ಇತಿಹಾಸದಲ್ಲೇ ಸರ್ವಾಧಿಕ ಮೊತ್ತವನ್ನು ಬೆನ್ನಟ್ಟಿ ದಾಖಲೆ ಸ್ಥಾಪಿಸಿದ ಹೆಗ್ಗಳಿಕೆ ಸ್ಮಿತ್‌ ಬಳಗದ್ದು. ಸಂಜು ಸ್ಯಾಮ್ಸನ್‌, ರಾಹುಲ್‌ ತೆವಾತಿಯಾ ಸಿಡಿದ ದೃಶ್ಯಾವಳಿ ಇನ್ನೂ ಕಣ್ಮಂದೆ ನರ್ತಿಸುತ್ತಿದೆ. ಎದುರಾಳಿ ಪಾಲಿಗೆ ಇದೊಂದು ದುಃಸ್ವಪ್ನ.

ಇದಕ್ಕೂ ಮೊದಲು ಚೆನ್ನೈ ವಿರುದ್ಧವೂ ರಾಜಸ್ಥಾನ್‌ ಸಿಡಿದು ನಿಂತಿತ್ತು. ಅಲ್ಲಿಯೂ ಸ್ಯಾಮ್ಸನ್‌ ಪ್ರಚಂಡ ಆಟವಾಡಿದ್ದರು. ಅವರ ಸ್ಟ್ರೈಕ್‌ರೇಟ್‌ 214.86ರಷ್ಟಿದೆ. ನಾಯಕ ಸ್ಮಿತ್‌ ಕೂಡ ಕಳೆದ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದ್ದರು. ಆದರೆ ಸ್ಯಾಮ್ಸನ್‌, ತೆವಾತಿಯಾ ಅಬ್ಬರದಲ್ಲಿ ಇದು ಸುದ್ದಿಯೇ ಆಗಲಿಲ್ಲ. ಜಾಸ್‌ ಬಟ್ಲರ್‌ ಮೊದಲ ಪಂದ್ಯದಲ್ಲಿ ಕ್ಲಿಕ್‌ ಆಗಿಲ್ಲ ನಿಜ, ಆದರೆ ಅವರಿಂದ ಅಪಾಯ ತಪ್ಪಿದ್ದಲ್ಲ.

ಎರಡೂ ಪಂದ್ಯಗಳಲ್ಲಿ ಇನ್ನೂರರ ಗಡಿ ದಾಟಿದ ಹೆಗ್ಗಳಿಕೆ ಹೊಂದಿರುವ ರಾಜಸ್ಥಾನ್‌ ಇದೇ ಜೋಶ್‌ನಲ್ಲಿ ಸಾಗಿದರೆ ಕೆಕೆಆರ್‌ ದಾಳಿಯನ್ನೂ ಪುಡಿಗೈಯುವುದರಲ್ಲಿ ಅನುಮಾನವಿಲ್ಲ.

ಇದು ಸಣ್ಣ ಅಂಗಳವಲ್ಲ!
ಆದರೆ ಇಲ್ಲೊಂದು ಸಂಗತಿ ಇದೆ. ರಾಜಸ್ಥಾನ್‌ ತನ್ನ ಎರಡೂ ಪಂದ್ಯಗಳನ್ನು ಆಡಿದ್ದು ಶಾರ್ಜಾದಲ್ಲಿ. ಇದು ಯುಎಇಯ ಅತೀ ಸಣ್ಣ ಅಂಗಳ. ಬೌಂಡರಿ ಅಂತರವೂ ಚಿಕ್ಕದು. ಹೀಗಾಗಿ ಬಾರಿಸಿದ್ದೆಲ್ಲ ಬೌಂಡರಿ, ಸಿಕ್ಸರ್‌ ಆಗಿ ಪರಿವರ್ತನೆಗೊಳ್ಳುತ್ತದೆ. ಅಲ್ಲಿನದೇ ರೀತಿಯಲ್ಲಿ ತಮಾಷೆಯಾಗಿ ಹೇಳಬೇಕೆಂದರೆ, ಶಾರ್ಜಾದಲ್ಲಿ ಬಾರಿಸಿದ ಚೆಂಡು ದುಬಾಯಿಗೋ, ಅಬುಧಾಬಿಗೋ ಹೋಗಿ ಬೀಳುತ್ತದೆ! ಆದರೆ ರಾಜಸ್ಥಾನ್‌ ಮೊದಲ ಸಲ ಶಾರ್ಜಾದ ಆಚೆ ಆಡಲಿಳಿ ಯುತ್ತದೆ. ಹೀಗಾಗಿ ದುಬಾೖ ಅಂಗಳ ಸ್ಮಿತ್‌ ಪಡೆಗೆ ನಿಜವಾದ ಅಗ್ನಿಪರೀಕ್ಷೆ. ಇಲ್ಲಿಯೂ ಸ್ಫೋಟಕ ಆಟವಾಡಿದರೆ ರಾಜಸ್ಥಾನ್‌ ನಿಜಕ್ಕೂ ಗ್ರೇಟ್‌ ಎನಿಸಲಿದೆ.

Advertisement

ರಕ್ಷಣಾತ್ಮಕ ಆಟ ನಡೆಯದು
ಕೋಲ್ಕತಾ ಕೂಡ ಬಿಗ್‌ ಹಿಟ್ಟರ್‌ಗಳನ್ನು ಹೊಂದಿದೆ. ಶುಭಮನ್‌ ಗಿಲ್‌, ಆ್ಯಂಡ್ರೆ ರಸೆಲ್‌, ಸುನೀಲ್‌ ನಾರಾಯಣ್‌, ಮಾರ್ಗನ್‌ ಬಲವನ್ನು ಹೊಂದಿದೆ. ಆದರೆ ಇವರು ರಕ್ಷಣಾತ್ಮಕ ಆಟವನ್ನು ಬದಲಿಸಿ ಮುನ್ನುಗ್ಗಿ ಬಾರಿಸ ಬೇಕಾದುದು ಅನಿವಾರ್ಯ. ಇವರಲ್ಲಿ ಇಬ್ಬರಾದರೂ ಸಿಡಿದು ನಿಲ್ಲುವುದು ಮುಖ್ಯ. ಹಾಗೆಯೇ ಕಾರ್ತಿಕ್‌ ಕಪ್ತಾನನ ಆಟ ಆಡುವುದೂ ಅಗತ್ಯ. ರಾಜಸ್ಥಾನ್‌ನಂತೆ ಕೆಕೆಆರ್‌ ಕೂಡ ಇದೇ ಮೊದಲ ಸಲ ದುಬಾೖಯಲ್ಲಿ ಆಡುತ್ತಿದೆ. ಈ ಸಾಲಿನ ಎರಡೂ ಸೂಪರ್‌ ಓವರ್‌ ಪಂದ್ಯಗಳಿಗೆ ಸಾಕ್ಷಿಯಾದ ಸ್ಟೇಡಿಯಂ ಇದಾಗಿದೆ. ಇಲ್ಲಿ 5 ಪಂದ್ಯಗಳು ನಡೆದಿದ್ದು, ಎಲ್ಲದರಲ್ಲೂ ಮೊದಲು ಬ್ಯಾಟಿಂಗ್‌ ನಡೆಸಿದ ತಂಡಗಳೇ ಗೆಲುವು ಕಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next