Advertisement

ಸಂಘಟಿತ ಪ್ರಯತ್ನದಿಂದ ಗೆಲುವು: ರೋಹಿತ್‌

03:15 AM May 04, 2019 | Sriram |

ಮುಂಬಯಿ: ಒಂದಿಬ್ಬರು ಆಟಗಾರರನ್ನು ಅವಲಂಬಿತವಾಗದೆ ಮತ್ತು ಆತ್ಮವಿಶ್ವಾಸದಿಂದ ಒತ್ತಡದ ಸನ್ನಿವೇಶಗಳನ್ನು ನಿಭಾಯಿಸಿರುವುದು ತಂಡ ಪ್ಲೇ ಆಫ್ ಪ್ರವೇಶಿಸಲು ಪ್ರಮುಖ ಕಾರಣವಾಗಿದೆ ಎಂದು ಮುಂಬೈ ಇಂಡಿಯನ್ಸ್‌ ತಂಡದ ಕಪ್ತಾನ ರೋಹಿತ್‌ ಶರ್ಮ ಹೇಳಿದ್ದಾರೆ.

Advertisement

ಮುಂಬೈ ತಂಡವು ಸನ್‌ರೈಸರ್ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಸೂಪರ್‌ ಓವರ್‌ನಲ್ಲಿ ಗೆದ್ದು ಪ್ಲೇ ಆಫ್ಗೆ ಪ್ರವೇಶಿಸಿದ 3ನೇ ತಂಡ ಎಂದೆನಿಸಿಕೊಂಡಿತಲ್ಲದೇ ಅಂಕಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಹಿಂದಿಕ್ಕಿ 2ನೇ ಸ್ಥಾನ ಅಲಂಕರಿಸಿತು.

“ಹಲವು ಆಟಗಾರರು ಜವಾಬ್ದಾರಿಯನ್ನು ಕೈಗೆತ್ತಿ ಕೊಂಡರು. ಇದು ಕೇವಲ ಒಂದಿಬ್ಬರ ಆಟವಲ್ಲ. ಈ ಕೂಟ ದಲ್ಲಿ ಜಯಿಸಬೇಕಾದರೇ ಎಲ್ಲರೂ ಉತ್ತಮ ರೀತಿಯಲ್ಲಿ ಆಡಬೇಕು. ಇದು ತಂಡದ ಗೆಲುವಿನ ರಹಸ್ಯವಾಗಿದೆ. ರಾಹುಲ್‌ ಚಹರ್‌ ಆಗಿರಲಿ ಅಥವಾ ಕ್ವಿಂಟನ್‌ ಆಗಿರಲಿ. ಒಬ್ಬರ ಆಟದಿಂದ ತಂಡ‌ ಜಯಿಸುವುದರ ಬಗ್ಗೆ ನಮಗೆ ನಂಬಿಕೆ ಇಲ್ಲ. ತಂಡವನ್ನು ಮೇಲಕ್ಕೆತ್ತಲು ಎಲ್ಲರ ಆಟವೂ ಅಗತ್ಯ’ ಎಂದು ರೋಹಿತ್‌ ಶರ್ಮ ಹೇಳಿದ್ದಾರೆ.

ಗುರುವಾರ ರಾತ್ರಿ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ-ಹೈದರಾಬಾದ್‌ ನಡುವಿನ ಪಂದ್ಯ ಟೈ ಆಗಿ, ಸೂಪರ್‌ ಓವರ್‌ ಮೂಲಕ ಫ‌ಲಿತಾಂಶ ದೊರಕಿತ್ತು. ಸೂಪರ್‌ ಓವರ್‌ನಲ್ಲಿ ಮುಂಬೈ ಜಯಭೇರಿ ಬಾರಿಸಿತು.

ಗೆಲುವಿಗೆ 17 ರನ್‌
ಹೈದರಾಬಾದ್‌ ಇನ್ನಿಂಗ್ಸ್‌ನ ಕೊನೆಯಲ್ಲಿ ಮನೀಷ್‌ ಪಾಂಡೆ ಮತ್ತು ಮೊಹಮ್ಮದ್‌ ನಬಿ ತಂಡಕ್ಕೆ ಗೆಲುವು ತಂದುಕೊಡುವ ಉತ್ಸಾಹದಲ್ಲಿದ್ದರು. ಕೊನೆಯ ಓವರ್‌ನಲ್ಲಿ ಹೈದರಾಬಾದ್‌ನ ಗೆಲುವಿಗೆ 17 ರನ್‌ ಬೇಕಾಗಿತ್ತು. ಹಾರ್ದಿಕ್‌ ಪಾಂಡ್ಯ ಎಸೆದ ಆ ಓವರ್‌ನಲ್ಲಿ ಮನೀಷ್‌ ಪಾಂಡೆ, ನಬಿ ಬಿರುಸಿನ ಆಟ ವಾಡಿದರು.

Advertisement

ಒಂದು ಎಸೆತ 7 ರನ್‌
ಅಂತಿಮ ಎಸೆತದಲ್ಲಿ 7 ರನ್‌ಗಳ ಅಗತ್ಯವಿತ್ತು. ಪಾಂಡೆ ಸಿಕ್ಸರ್‌ ಸಿಡಿಸುವ ಮೂಲಕ ಪಂದ್ಯವನ್ನು ಸೂಪರ್‌ ಓವರ್‌ಗೆ ಸಾಗಿಸಿದರು. ಆದರೆ ಸೂಪರ್‌ ಓವರ್‌ನಲ್ಲಿ ಹೈದರಾಬಾದ್‌ 2 ವಿಕೆಟ್‌ ಕಳೆದುಕೊಂಡು 8 ರನ್‌ ಬಾರಿಸಿತು. ಮುಂಬೈ ಪರ ಆಟಕ್ಕಿಳಿದ ಬಿಗ್‌ ಹಿಟ್ಟರ್‌ಗಳಾದ ಹಾರ್ದಿಕ್‌ ಪಾಂಡ್ಯ-ಕೈರನ್‌ ಪೊಲಾರ್ಡ್‌ ಮೂರೇ ಎಸೆತಗಳಲ್ಲಿ 9 ರನ್‌ ಮಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಸ್ಪಿನ್ನರ್‌ಗಳ ಅದ್ಭುತ ಆಟ
ಹೈದರಾಬಾದ್‌ ವಿರುದ್ಧ ಸೂಪರ್‌ ಓವರ್‌ ಗೆಲುವನ್ನು ತಂಡದ ನಾಯಕ ರೋಹಿತ್‌ ಶರ್ಮ ಸ್ಪಿನ್ನರ್‌ಗಳಾದ ರಾಹುಲ್‌ ಚಹರ್‌ ಮತ್ತು ಕೃಣಾಲ್‌ ಪಾಂಡ್ಯ ಅವರಿಗೆ ಅರ್ಪಿಸಿದ್ದಾರೆ.
“ಎಂಟು ಓವರ್‌ಗಳ ಸ್ಪಿನ್‌ನಲ್ಲಿ ಪಂದ್ಯದ ಗತಿ ಬದಲಾಯಿತು. ಅವರು ಚೆನ್ನಾಗಿ ಬೌಲಿಂಗ್‌ ಮಾಡಿದರು ಮತ್ತು ಆ ಹಂತದಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವುದು ಅತೀ ಮುಖ್ಯವಾಗಿತ್ತು. ಸ್ಪಿನ್ನರ್‌ಗಳು ಸನ್ನಿವೇಶವನ್ನು ಸರಿಯಾಗಿ ಅರ್ಥ ಮಾಡಿಕೊಂಡರು ಎಂದರು.

ಎಕ್ಸ್‌ಟ್ರಾ ಇನ್ನಿಂಗ್ಸ್‌
– ಮುಂಬೈ ಇಂಡಿಯನ್ಸ್‌-ಸನ್‌ರೈಸರ್ ಹೈದರಾಬಾದ್‌ ನಡುವಿನ ಪಂದ್ಯ ವಾಂಖೇಡೆ ಸ್ಟೇಡಿಯಂನಲ್ಲಿ ದಾಖಲಾದ ಮೊದಲ ಟೈ ಪಂದ್ಯವಾಗಿದೆ. ಇಲ್ಲಿಯವರೆಗೆ 72 ಪಂದ್ಯಗಳ ಅತಿಥ್ಯವಹಿಸಿರುವ ವಾಂಖೇಡೆಯಲ್ಲಿ ಇಲ್ಲಿಯವರೆಗೆ ಒಂದೇ ಒಂದು ಪಂದ್ಯ ಟೈ ಆಗಿರಲಿಲ್ಲ. 72 ಪಂದ್ಯಗಳಲ್ಲಿ ತವರಿನ ತಂಡ ಮುಂಬೈ ಇಂಡಿಯನ್ಸ್‌ 66 ಪಂದ್ಯಗಳನ್ನಾಡಿದೆ.
– ವಾಂಖೇಡೆಯಲ್ಲಿ 7 ಪಂದ್ಯಗಳನ್ನಾಡಿರುವ ಹೈದರಾಬಾದ್‌ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಮುಂಬೈ ವಿರುದ್ಧ 2013, 2016 ಮತ್ತು 2017ರ ಆವೃತ್ತಿಯಲ್ಲಿ ಸತತವಾಗಿ ಸೋಲನುಭವಿಸಿತ್ತು. 2018ರ ಆವೃತ್ತಿಯಲ್ಲಿ ಮುಂಬೈಗೆ ಹೈದರಾಬಾದ್‌ ಸೋಲುಣಿಸಿತ್ತು. ಪ್ಲೇ ಆಫ್ ಹಂತದಲ್ಲಿ ಚೆನ್ನೈ ವಿರುದ್ಧ 2 ಬಾರಿ ಸೋತಿದೆ.
– 58 ಎಸೆತಗಳಲ್ಲಿ ಅಜೇಯ 69 ರನ್‌ ಹೊಡೆದ ಕ್ವಿಂಟನ್‌ ಡಿ ಕಾಕ್‌ ಅವರ ಸ್ಟ್ರೈಕ್‌ ರೇಟ್‌ 118.97. ಇದು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ 60 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳ ಇನ್ನಿಂಗ್ಸ್‌ನಲ್ಲಿ 4ನೇ ಅತೀ ಕಡಿಮೆ ಸ್ಟ್ರೈಕ್‌ ರೇಟ್‌ ಆಗಿದೆ. 2012ರಲ್ಲಿ ಕೋಲ್ಕತಾದಲ್ಲಿ ನಡೆದ ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ಹರ್ಷಲ್‌ ಗಿಬ್ಸ್ 58 ಎಸೆತಗಳಲ್ಲಿ ಅಜೇಯ 66 ರನ್‌ ಗಳಿಸಿದಾಗ ಅವರ ಸ್ಟ್ರೈಕ್‌ ರೇಟ್‌ 113.79 ಆಗಿತ್ತು.
– ಖಲೀಲ್‌ ಅಹ್ಮದ್‌ ಅವರ 42ಕ್ಕೆ 3 ವಿಕೆಟ್‌ ಐಪಿಎಲ್‌ನಲ್ಲಿ ಸನ್‌ರೈಸರ್ ಪರ 3ನೇ ಅತ್ಯಂತ ದುಬಾರಿ ಬೌಲಿಂಗ್‌ ಆಗಿದೆ. ತಿಸರ ಪೆರೇರ 2013ರಲ್ಲಿ ಚೆನ್ನೈ ವಿರುದ್ಧ 45 ರನ್‌ ನೀಡಿ 3 ವಿಕೆಟ್‌ ಪಡೆದಿದ್ದರು. 2015ರಲ್ಲಿ ಭುವನೇಶ್ವರ್‌ ಕುಮಾರ್‌ ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 44 ರನ್‌ ನೀಡಿ 3 ವಿಕೆಟ್‌ ಹಾಗೂ 2017ರಲ್ಲಿ ಆಶೀಶ್‌ ನೆಹ್ರಾ 42 ರನ್‌ ನೀಡಿ ಪಂಜಾಬ್‌ನ 3 ವಿಕೆಟ್‌ ಕಿತ್ತಿದ್ದರು.
– ಮೊಹಮ್ಮದ್‌ ನಬಿ ಪಂದ್ಯವೊಂದರಲ್ಲಿ 30 ಪ್ಲಸ್‌ ರನ್‌, ಒಂದು ವಿಕೆಟ್‌ ಮತ್ತು 2 ಕ್ಯಾಚ್‌ ಹಿಡಿದ ಹೈದರಾಬಾದ್‌ ತಂಡದ 2ನೇ ಮತ್ತು ಐಪಿಎಲ್‌ನಲ್ಲಿ 12ನೇ ಆಟಗಾರ. ರಶೀದ್‌ ಖಾನ್‌ 2018ರಲ್ಲಿ ಕೆಕೆಆರ್‌ ವಿರುದ್ಧದ ಕ್ವಾಲಿಫ‌ಯರ್‌ ಪಂದ್ಯದಲ್ಲಿ ಹೈದರಾಬಾದ್‌ ಪರ ಈ ಸಾಧನೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next