Advertisement

ಅವ್ಯವಹಾರ ಮಾಡಿದವರಿಂದಲೇ ತನಿಖೆ?

09:59 AM Nov 20, 2019 | mahesh |

ಬೆಂಗಳೂರು: ರಾಜ್ಯದಲ್ಲಿ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಫ‌ಲಾನುಭವಿಗಳಿಗೆ ಹಂಚಿಕೆಯಾಗಿರುವ ಮನೆಗಳನ್ನು ಅನರ್ಹರಿಗೆ ನೀಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ತನಿಖೆಗೆ ಆದೇಶ ನೀಡಿದೆ. ವಿಶೇಷ ಎಂದರೆ ಯಾರ ಮೇಲೆ ಆರೋಪವಿತ್ತೋ ಅವರ ನೇತೃತ್ವದಲ್ಲಿಯೇ ತನಿಖೆಗೆ ಸೂಚಿಸಲಾಗಿದೆ.

Advertisement

ಜತೆಗೆ ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವ ಅನರ್ಹ ಫ‌ಲಾನುಭವಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಲು ಆದೇಶಿಸಲಾಗಿದೆ. ಹತ್ತು ದಿನಗಳಲ್ಲಿ ತನಿಖೆ ನಡೆಸಿ ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಆದರೆ ಡಿಸಿ, ಸಿಇಒ ಹಾಗೂ ಪಿಡಿಒಗಳ ಮೇಲೆಯೇ ಆರೋಪವಿದ್ದು, ಇವರ ನೇತೃತ್ವದಲ್ಲೇ ತನಿಖೆ ನಡೆಸಿದರೆ ಸತ್ಯಾಂಶ ಹೊರಬರುತ್ತದೆಯೇ ಎಂಬ ಪ್ರಶ್ನೆಗಳು ಎದ್ದಿವೆ.

ತನಿಖೆಗೆ ಆದೇಶಿಸಿದ್ದ ಸೋಮಣ್ಣ
ರಾಜೀವ್‌ ಗಾಂಧಿ ವಸತಿ ನಿಗಮದ ವ್ಯಾಪ್ತಿಯಲ್ಲಿನ ಬಸವ ವಸತಿ, ಅಂಬೇಡ್ಕರ್‌, ಪ್ರಧಾನಮಂತ್ರಿ ವಸತಿ ಯೋಜನೆಯಲ್ಲಿ ಅನರ್ಹರಿಗೆ ಮನೆ ನೀಡಿದ್ದು, ಅರ್ಹರಿಗೆ ಅವಕಾಶ ತಪ್ಪಿಸಲಾಗಿದೆ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ವಸತಿ ಸಚಿವ ಸೋಮಣ್ಣ ತನಿಖೆಗೆ ಆದೇಶಿಸಿದ್ದರು. ಹೀಗಾಗಿ ರಾಜೀವ್‌ ಗಾಂಧಿ ವಸತಿ ನಿಗಮದಿಂದ ಚಿತ್ರದುರ್ಗ ಜಿಲ್ಲೆಯ ಕಣಜನಹಳ್ಳಿ ಗ್ರಾ.ಪಂ., ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಆಯ್ಕೆಯಾದ ಫ‌ಲಾನುಭವಿಗಳ ದಾಖಲೀಕರಣ ಮತ್ತು ಸ್ಥಳ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ನಿಗಮದ ಮಾರ್ಗಸೂಚಿ ನಿಯಮ ಉಲ್ಲಂ ಸಿ ಅಕ್ರಮ ಎಸಗಿರುವುದು ಕಂಡುಬಂದಿದೆ. ಹೀಗಾಗಿ ರಾಜ್ಯದ 6,133 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿನ ವಸತಿ ಯೋಜನೆಗಳಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ.

ಅನುದಾನ ಸ್ಥಗಿತ
ರಾಜ್ಯದಲ್ಲಿ ಈಗಾಗಲೇ ಚಾಲನೆಯಲ್ಲಿರುವ ವಸತಿ ಯೋಜನೆಗಳ ಕಾಮಗಾರಿಗಳು ಪ್ರಗತಿಯಲ್ಲಿದ್ದು, 53 ಸಾವಿರ ಫ‌ಲಾನುಭವಿಗಳಿಗೆ ಸುಮಾರು 211 ಕೋಟಿ ರೂಪಾಯಿ ಅನುದಾನ ಬಿಡುಗಡೆಗೆ ಬೇಡಿಕೆ ಇದೆ. ಆದರೆ ಅವ್ಯವಹಾರ ನಡೆದಿರುವ ಸಂಶಯದಲ್ಲಿ ತನಿಖೆಗೆ ಆದೇಶ ನೀಡಿರುವುದರಿಂದ ಅನುದಾನ ಬಿಡುಗಡೆಯನ್ನು ಸರಕಾರ ಸ್ಥಗಿತಗೊಳಿಸಿದೆ.

ತನಿಖೆಯ ಪ್ರಕ್ರಿಯೆ ಹೇಗೆ?
ಸರಕಾರ ನೇಮಿಸಿರುವ ಸಮಿತಿ, ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಅಥವಾ ಗ್ರಾಮ ಲೆಕ್ಕಾಧಿಕಾರಿಗಳು ರಾಜೀವ್‌ ಗಾಂಧಿ ನಿಗಮ ಅಭಿವೃದ್ಧಿ ಪಡಿಸಿರುವ ವಸತಿ ವಿಜಿಲ್‌ ಮೊಬೈಲ್‌ ಆ್ಯಪ್‌ನಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಫ‌ಲಾನುಭವಿಗಳ ಮನೆಗಳನ್ನು ಖುದ್ದಾಗಿ ಪರಿಶೀಲನೆ ನಡೆಸಬೇಕು. ಪಿಡಿಒ ತಯಾರಿಸಿರುವ ವರದಿಯನ್ನು ತಾಲೂಕು ಪಂಚಾಯತ್‌ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಜಿ. ಪಂ. ಸಿಇಒ ಪರಿಶೀಲಿಸಿ ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ಸಲ್ಲಿಸಬೇಕು. ಅಂತಿಮ ವರದಿಗೆ ಮೂವರೂ ಅಧಿಕಾರಿಗಳು ಕಡ್ಡಾಯವಾಗಿ ಸಹಿ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

Advertisement

ಹೊರ ಗುತ್ತಿಗೆ ನೌಕರರ ಮೇಲೆ ಅನುಮಾನ?
ರಾಜ್ಯ ಸರಕಾರ ವಸತಿ ಯೋಜನೆಗಳಿಗೆ ಫ‌ಲಾನು ಭವಿಗಳನ್ನು ಕಡ್ಡಾಯವಾಗಿ ಗ್ರಾಮ ಸಭೆಗಳ ಮೂಲಕ ಆಯ್ಕೆ ಮಾಡಬೇಕೆಂಬ ನಿಯಮ ಮಾಡಿದೆ. ಇಲ್ಲಿ ಆಯ್ಕೆಯಾದ ಅನಂತರ ಸರಕಾರದ ಅನುದಾನ ಪಡೆಯಲು ಫ‌ಲಾನುಭವಿಯು ತನ್ನ ನಿವೇಶನದ ಮುಂದೆ ನಿಂತು ಫೋಟೊ ತೆಗೆದು ರಾಜೀವ್‌ ಗಾಂಧಿ ನಿಗಮಕ್ಕೆ ಕಳುಹಿಸಬೇಕು. ಈ ಸಂದರ್ಭದಲ್ಲಿ ಫ‌ಲಾನುಭವಿಗಳ ಮನೆಗಳನ್ನು ಜಿಪಿಎಸ್‌ ಮಾಡಲು ನಿಗಮವೇ ಹೊರ ಗುತ್ತಿಗೆ ಆಧಾರದ ಮೇಲೆ ನೌಕರರನ್ನು ನೇಮಕ ಮಾಡಿಕೊಂಡಿದೆ. ಈ ಸಿಬಂದಿಯೇ ನಿಗಮದ ಅಧಿಕಾರಿಗಳೊಂದಿಗೆ ಸೇರಿಕೊಂಡು ಅವ್ಯವಹಾರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪಿಡಿಒಗಳೇ ಹೊಣೆಗಾರರು?
ರಾಜ್ಯ ಸರಕಾರ ಗ್ರಾ. ಪಂ. ಅಧಿಕಾರಿಗಳು ಅವ್ಯವಹಾರದಲ್ಲಿ ಪಾಲ್ಗೊಂಡಿದ್ದಾರೆ ಎಂಬ ಅನುಮಾನ ದಿಂದ ತನಿಖೆಗೆ ಮುಂದಾಗಿದೆ. ಪಿಡಿಒಗಳು ಫ‌ಲಾನುಭವಿಗಳನ್ನು ಆಯ್ಕೆ ಮಾಡಿ, ಈಗ ಅನರ್ಹ ಫ‌ಲಾನುಭವಿಗಳನ್ನು ಗುರುತಿಸಲು ಅವರೇ ನೀಡಿದ ಆದೇಶವನ್ನು ಅವರೇ ತಪ್ಪು ಎಂದು ಹೇಗೆ ಹೇಳುತ್ತಾರೆ ಎಂಬ ಪ್ರಶ್ನೆ ಉದ್ಭವವಾಗಿದೆ.

ಫ‌ಲಾನುಭವಿಗಳ ವಿರುದ್ಧವೂ ಕ್ರಮ
ಅಲ್ಲದೇ ಈಗಾಗಲೇ ಸರಕಾರದ ಅನುದಾನ ಪಡೆದು ಮನೆ ನಿರ್ಮಿಸಿಕೊಂಡಿರುವ ಫ‌ಲಾನುಭವಿಯನ್ನೂ ತಪ್ಪಿತಸ್ಥರ ಸ್ಥಾನದಲ್ಲಿ ನಿಲ್ಲಿಸಲು ಸರಕಾರ ಮುಂದಾಗಿದ್ದು, ತಪ್ಪಿತಸ್ಥ ಅಧಿಕಾರಿಗಳು ಹಾಗೂ ಫ‌ಲಾನುಭವಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ಧಮೆ ಹಾಗೂ 1964 ಭೂ ಕಂದಾಯ ಕಾಯ್ದೆಯಲ್ಲಿರುವ ಅವಕಾಶಗಳನ್ವಯ ಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲಿ ಮಾಡಿ ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ಹಣ ಭರಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

ಯಾರಿಂದ ತನಿಖೆ?
ಗ್ರಾಮೀಣ ಪ್ರದೇಶ
-  ಅಧ್ಯಕ್ಷರು-ಜಿ.ಪಂ. ಸಿಇಒ
-  ಸದಸ್ಯರು – ತಾಪಂ ಇಒ
-  ಸದಸ್ಯ ಕಾರ್ಯದರ್ಶಿಗಳು – ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಲೆಕ್ಕಿಗರು

ನಗರ ಪ್ರದೇಶ
-  ಅಧ್ಯಕ್ಷರು – ಜಿಲ್ಲಾಧಿಕಾರಿಗಳು
-  ಸದಸ್ಯರು-ಪುರಸಭೆ ಮುಖ್ಯಾಧಿಕಾರಿ ಅಥವಾ ಆಯುಕ್ತರು
-  ಸದಸ್ಯ ಕಾರ್ಯದರ್ಶಿಗಳು-ಸ್ಥಳೀಯ ಸಂಸ್ಥೆಯ ವಸತಿ ಯೋಜನೆ ವಿಷಯ ನಿರ್ವಾ ಹಕರು ಹಾಗೂ ಕರ ವಸೂಲಿಗಾರರು

ಆಶ್ರಯ ಮನೆಗಳ ಹಂಚಿಕೆಯಲ್ಲಿ ಅವ್ಯವಹಾರ ಆಗಿರುವ ಬಗ್ಗೆ ಆರೋಪ ಕೇಳಿ ಬಂದಿರುವುದರಿಂದ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒ ಮೂಲಕ ತನಿಖೆಗೆ ಆದೇಶ ನೀಡಲಾಗಿದೆ.
-ಮನೋಜ್‌ಕುಮಾರ್‌ ಮೀಣ, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ

- ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next