Advertisement

ಬದುಕು ಬದಲಿಸಿದ ಕಾಂತಾರ; ಮೂಗುತಿ ಸುಂದರಿಯ ಮನದ ಮಾತು

02:38 PM Oct 21, 2022 | Team Udayavani |

ಸದ್ಯ ದಕ್ಷಿಣದಿಂದ ಉತ್ತರದವರೆಗೂ ಎಲ್ಲರ ಬಾಯಲ್ಲೂ ಇರುವ ಹೆಸರು “ಕಾಂತಾರ’. ಕನ್ನಡ ಚಿತ್ರವೊಂದು ತನ್ನ ಕಂಟೆಂಟ್‌ನಿಂದ ಇಡೀ ದೇಶದ ಜನರ ಮನ ಗೆದ್ದಿದೆ. ಈ ಚಿತ್ರದ ಮೂಲಕ ಕನ್ನಡಕ್ಕೆ ಭರವಸೆಯ ನಟಿಯೂ ದೊರೆತಿದ್ದಾರೆ. ಅವರು ಸಪ್ತಮಿ ಗೌಡ. “ಕಾಂತಾರ’ ಮೂಲಕ ಪ್ರೇಕ್ಷಕರ ಮನ ಕದ್ದ ಮೂಗುತಿ ಸುಂದರಿ ಸಪ್ತಮಿ ಗೌಡ ಚಿತ್ರದ ಯಶಸ್ಸು, ಮುಂದಿನ ಕನಸು, ಆಫ‌ರ್ ಗಳ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.

Advertisement

“ಕಾಂತಾರ’ದ ದೊಡ್ಡ ಯಶಸ್ಸಿನ ಬಗ್ಗೆ ಏನು ಹೇಳುತ್ತೀರಿ?

ಈ ಚಿತ್ರದ ಸಕ್ಸಸ್‌ ಗೆ ಕಾರಣ ಕರ್ನಾಟಕದ ಜನ. ಕನ್ನಡ ಜನತೆ ಇತರ ಭಾಷೆ ಗೆಳೆಯರಿಗೆ ಚಿತ್ರವನ್ನು ತೋರಿಸಲು ಆರಂಭಿಸಿದ ಮೇಲೆ ಸಿನಿಮಾ ಅವರ ಭಾಷೆಗೆ ಡಬ್‌ ಮಾಡಲು ಡಿಮ್ಯಾಂಡ್‌ ಮತ್ತಷ್ಟು ಜಾಸ್ತಿಯಾಯಿತು. ಈ ಮೊದಲು ಚಿತ್ರವನ್ನು ಪ್ಯಾನ್‌ ಇಂಡಿಯಾ ಮಾಡಬೇಕು ಅನ್ನುವ ಯೋಚನೆ ಇರಲಿಲ್ಲ. ಅಷ್ಟು ಪ್ರೀತಿ, ಅಭಿಮಾನ ಬೇರೆ ರಾಜ್ಯಗಳಿಂದ ಬಂದ ಮೇಲೆ ಚಿತ್ರವನ್ನು ಪ್ಯಾನ್‌ ಇಂಡಿಯಾ ಮಾಡಿದ್ದು.

ಈಗ ನೀವು ಪ್ಯಾನ್‌ ಇಂಡಿಯಾ ಹೀರೋಯಿನ್‌?

ನನ್ನ ಕೆರಿಯರ್‌ನಲ್ಲಿ ಇಷ್ಟು ಬೇಗ ಇಂತಹ ಚಿತ್ರ ಸಿಗುತ್ತೆ ಎಂದು ಭಾವಿಸಿರಲಿಲ್ಲ. ಕನ್ನಡದಲ್ಲೇ ಇಂತಹ ದೊಡ್ಡ ಸಿನಿಮಾ ಸಿಗುತ್ತೆ ಅಂತಲೂ ಅಂದು ಕೊಂಡಿರಲಿಲ್ಲ. ಅದರಲ್ಲೂ ಪ್ಯಾನ್‌ ಇಂಡಿಯಾ ಹೀರೋಯಿನ್‌ ಆಗಿರೋದು ನನ್ನ ಅದೃಷ್ಟ ಹಾಗೂ ದೇವರ ಆಶೀರ್ವಾದ. ಸಿನಿಮಾ ಹೇಗೆ ತೆಗೆದುಕೊಂಡು ಹೋಗುತ್ತಿದೆಯೋ ಹಾಗೆ ನಾವು ಹೋಗುತ್ತಿದ್ದೇವೆ ಅಷ್ಟೆ. ತುಂಬಾ ಖುಷಿ ಇದೆ. ಜನರ ಪ್ರೀತಿ, ಅಭಿಮಾನವೇ ಎಲ್ಲದಕ್ಕೂ ಕಾರಣ.

Advertisement

ನಿಮ್ಮ ಪಾತ್ರಕ್ಕೆ ಸಿಕ್ಕ ಪ್ರಶಂಸೆ?

ಸಾಕಷ್ಟು ಜನ ಲೀಲಾ ಅನ್ನುವ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅದರಲ್ಲೂ ನಾನು ಚಿತ್ರದಲ್ಲಿ ಮಂಗಳೂರು ಕನ್ನಡ ಮಾತನಾಡಿರುವ ಕುರಿತು ಸಾಕಷ್ಟು ಜನರಿಂದ ಪ್ರಸಂಶೆ ಸಿಕ್ಕಿದೆ. “ನೀವು ಬೆಂಗಳೂರಿಗರು ಅಂತ ಅನಿಸೋದಿಲ್ಲ. ಅಲ್ಲೇ ಹುಟ್ಟಿ ಬೆಳದವರ ರೀತಿ ಮಾತನಾಡಿದ್ದೀರಿ’ ಎಂಬ ಮಾತುಗಳು ಕೇಳಿಬಂತು. ನಾನು ಕೂಡಾ ಚಿತ್ರದಲ್ಲಿ ಭಾಷೆ ಎಲ್ಲೂ ಮಿಸ್‌ ಆಗಬಾರದು, ನಾನು ಮಂಗಳೂರು ಹುಡುಗಿಯಾಗಿಯೇ ಕಾಣಿಸಿಕೊಳ್ಳಬೇಕು ಎಂದು ನಡೆಸಿದ ತಯಾರಿ ಸಾರ್ಥಕವಾಯಿತು ಎನಿಸಿತ್ತು.

ಸಾಕಷ್ಟು ಆಫ‌ರ್ ಬಂದಿರಬೇಕಲ್ಲ?

ಸದ್ಯ ಸಾಕಷ್ಟು ಆಫ‌ರ್ ನನ್ನೆದುರಿಗೆ ಇದೆ. ಆದರೆ ಯಾವುದನ್ನೂ ಒಪ್ಪಿಕೊಂಡಿಲ್ಲ. ನನಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ನಾನು ಕೆಲವೊಬ್ಬರ ಬಳಿ ಮಾತನಾಡಿ ಅವರ ಸಲಹೆ ಪಡೆಯಬೇಕಿದೆ. ಅವರೆಲ್ಲಾ ನನಗೆ ಹೇಳಿದ್ದು, ಒಂದು ಸ್ವಲ್ಪ ಸಮಯ ಕಾಯಿ, ನಂತರ ನಿರ್ಧಾರ ತಗೋ ಅಂತ. ಹಾಗಾಗಿ ಯೋಚಿಸಿ ಹೆಜ್ಜೆ ಇಡಬೇಕು ಎಂದು ನಿರ್ಧರಿಸಿದ್ದೇನೆ. ಬಂದ ಸ್ಕ್ರಿಪ್ಟ್, ಅವಕಾಶಗಳ ಕುರಿತು ಆಲೋಚಿಸಿ ಮುಂದುವರೆಯುವ ನಿರ್ಧಾರ ಮಾಡಿದ್ದೇನೆ. ಗಡಿಬಿಡಿಯಲ್ಲಿ ಎಲ್ಲವನ್ನೂ ಒಪ್ಪಿಕೊಳ್ಳುವುದಿಲ್ಲ. ಕಾಂತಾರದ ಪಾತ್ರಕ್ಕಾಗಿ ಒಂದೂವರೆ ವರ್ಷ ಕಾದೆ ಮುಂದಿನ ಪಾತ್ರಕ್ಕೆ ದಿನಗಳು, ವಾರ, ತಿಂಗಳು ಆಗುತ್ತೋ ಗೊತ್ತಿಲ್ಲ. ಒಳ್ಳೆಯದಕ್ಕಾಗಿ ಕಾಯುತ್ತೇನೆ.

ಅನ್ಯ ಭಾಷೆಗಳಿಂದ ಆಫ‌ರ್‌ ಬಂದಿದೆಯಾ?

ಬೇರೆ ಭಾಷೆಗಳಿಂದಲೂ ಆಫ‌ರ್‌ಗಳು ಬಂದಿವೆ. ಆದರೆ ನನಗೆ ಒಂದು ಚಿಕ್ಕ ಸ್ವಾರ್ಥ ಕನ್ನಡದಲ್ಲೇ ಅತಿ ಹೆಚ್ಚು ಚಿತ್ರ ಮಾಡಬೇಕು ಎಂಬುದು. ಕನ್ನಡದಲ್ಲೇ ಭಿನ್ನ ಭಿನ್ನ ಪಾತ್ರಗಳನ್ನು ಮಾಡಬೇಕು ಅನ್ನುವ ಆಸೆ. ಹಾಗೇ ನನಗೆ ಕನ್ನಡ, ಇಂಗ್ಲೀಷ್‌ ಬಿಟ್ಟರೆ ಮತ್ಯಾವ ಭಾಷೆಯೂ ಕೂಡಾ ಅಷ್ಟು ಚೆನ್ನಾಗಿ ಬರೋದಿಲ್ಲ. ಬೇರೆ ಭಾಷೆ ಮೇಲೆ ಹಿಡಿತಾ ಇಲ್ಲ. ಬೇರೆ ಭಾಷೆಗಳಲ್ಲಿ ತುಂಬಾ ಒಳ್ಳೆಯ ಆಫ‌ರ್‌ ಬಂದರೆ ಯೋಚನೆ ಮಾಡ್ತಿನಿ.

ವಾಣಿ ಭಟ್ಟ

Advertisement

Udayavani is now on Telegram. Click here to join our channel and stay updated with the latest news.

Next