Advertisement

ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಮಾನತೆ ನೀಡಿ

01:43 AM Jun 13, 2019 | Team Udayavani |

ವಿಶ್ವಾದ್ಯಂತ ಹಲವರು ಜನ ಅಲ್ಬಿನಿಸಂ (ಬಿಳಿ ತೊನ್ನು) ರೋಗದಿಂದ ಬಳಲುತ್ತಿದ್ದಾರೆ. ಅಲ್ಬಿನಿಸಂ ಅನ್ನು ಸಾಮಾಜಿಕವಾಗಿ ಮತ್ತು ವೈದ್ಯಕೀಯವಾಗಿ ತಪ್ಪಾಗಿ ಗ್ರಹಿಸಲ್ಪಟ್ಟಿದ್ದು, ಮೂಢನಂಬಿಕೆಗಳಿಂದ ಪ್ರಭಾವಿತಗೊಂಡಿದೆ. ಇದೊಂದು ದೇವರ ಶಾಪ ಎಂಬ ತಪ್ಪು ಕಲ್ಪನೆ ಜನರಲ್ಲಿ ಬಿಂಬಿತಗೊಂಡಿದ್ದು, ಇದರಿಂದ ಅವರು ಸಾಮಾಜಿಕ ಕಳಂಕವಾಗಿ ಬದುಕುವಸ್ಥಿತಿ ನಿರ್ಮಾಣವಾಗಿದೆ. ಅಲ್ಬನಿಸಂ ಹೊಂದಿರುವವರು ಯಾವುದೋ ನಿರ್ದಿಷ್ಟ ಸಮುದಾಯದವರು ಎಂಬ ತಪ್ಪು ಕಲ್ಪನೆ ನಮ್ಮದಾಗಿದ್ದು ಇದು ಒಂದು ಆನುವಂಶಿಕ ಸ್ಥಿತಿಯಾಗಿದೆ. ಕೆಲವರು ದೇಹದಲ್ಲಿ ಸಾಮಾನ್ಯವಾಗಿ ಬೇಕಾದ ವರ್ಣದ್ರವ್ಯ (ಬಣ್ಣ) ಇಲ್ಲದೆ ಜನಿಸುತ್ತಾರೆ. ಇದರಿಂದ ಅವರ ಶರೀರದಲ್ಲಿ ಕಣ್ಣಿನ ಚರ್ಮ, ಕೂದಲಿನ ಬಣ್ಣದಲ್ಲಿ ವ್ಯತ್ಯಾಸ ಕಂಡು ಬರುವುದಲ್ಲದೆ ತುಂಬಾ ತೆಳುವಾದ ಚರ್ಮವನ್ನು ಹೊಂದಿರುತ್ತಾರೆ.

Advertisement

ಕಣ್ಣುಗಳ ಮೇಲೆ ಪರಿಣಾಮ
ಕೆಲವರಿಗೆ ಅಲ್ಬಿನಿಸಂ ಕಣ್ಣುಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ .ಇದನ್ನು ಆಕ್ಯುಲರ್‌ ಅಲ್ಬಿನಿಸಂ ಎನ್ನಲಾಗುತ್ತದೆ. ಇಂಥವರು ಸಾಮಾನ್ಯವಾಗಿ ನೀಲಿ ಕಣ್ಣುಗಳನ್ನು ಹೊಂದಿದ್ದು ಕೆಲವು ಸಂದರ್ಭ ಕಣ್ಣಿನ ಭಾಗ ಬಹಳ ಕಡಿಮೆ ಬಣ್ಣವನ್ನು ಹೊಂದಿರುತ್ತದೆ. ಇದರಿಂದ ಕಣ್ಣಿನ ನರಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಕೂಡ ಇರುತ್ತದೆ.

ಇದು ಸಾಮಾನ್ಯವಾಗಿ ಹುಟ್ಟಿನಿಂದ ಬರುವ ಕಾಯಿಲೆಯಾಗಿದ್ದು, ಯಾವುದೇ ರೀತಿಯಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ. ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ. ಬದಲಾಗಿ ಅವರು ಸೂರ್ಯನ ಕಿರಣಗಳಿಂದ ರಕ್ಷಣೆ ಪಡೆಯುವುದು ದೊಡ್ಡ ಸವಾಲಾಗಿದೆ.

ಅಲ್ಬನಿಸ್‌ಂ ಹೊಂದಿರುವವರು ಹದಿಹರೆಯದಲ್ಲಿ ಕೆಲವೊಮ್ಮೆ ಹತಾಶೆ, ದುಃಖದಿಂದ ಬಳಲುತ್ತಾರೆ. ಅಂತಹ ಸಂದರ್ಭಗಳಲ್ಲಿ ಕುಟುಂಬದವರು, ಸ್ನೇಹಿತರು ಇವರಿಗೆ ಸ್ವಾಂತನ ಹೇಳಬೇಕಾಗುತ್ತದೆ. ಇವರಿಗೆ ನೈತಿಕ ಸ್ಥೈರ್ಯ ತುಂಬುವುದೇ ಸಮಾಜದ ಬಹುದೊಡ್ಡ ಉಪಕಾರವಾಗುತ್ತದೆ.

ಇದೆಲ್ಲ ಕಾರಣಗಳಿಂದ ಈ ರೋಗದ ಬಗ್ಗೆ ಜಾಗೃತಿ ವಹಿಸುವ ನಿಟ್ಟಿನಲ್ಲಿ 2014 ಡಿಸೆಂಬರ್‌ 18ರಂದು ಜನರಲ್ ಅಸೆಂಬ್ಲಿ ಜೂ. 13ರಂದು ಅಂತಾರಾಷ್ಟ್ರೀಯ ಅಲ್ಬಿನಿಸಮ್‌ ಜಾಗೃತಿ ದಿನವಾಗಿ ಘೋಷಿಸಿತು.

Advertisement

ಸವಾಲುಗಳಿಗೆ ಮುಕ್ತಿ ಸಿಗಲಿ
ಇಂದು ಅಲ್ಬನಿಸಂ ತಾರತಮ್ಯತೆಯಿಂದ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ಸವಾಲುಗಳಿಗೆ ಮುಕ್ತಿ ನೀಡಬೇಕು. ಇಂದಿಗೂ ಕೆಲವು ರಾಷ್ಟ್ರಗಳಲ್ಲಿ ಉಳ್ಳವರ ದಾಳಿಗೆ ಇವರು ಬಲಿಯಾಗುತ್ತಿದ್ದಾರೆ .ಇದೆಲ್ಲವೂ ಕೊನೆಗೊಳ್ಳಲಿ ಎಂಬುದು ಈ ದಿನದ ಆಚರಣೆಯ ಉದ್ದೇಶ.

ಯಾಕಾಗಿ ಆಚರಿಸುತ್ತೇವೆ?
ಈ ದಿನದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಆಚರಿಸುತ್ತೇವೆ. ಇದು ಜನರಲ್ಲಿ ಮಾನವೀಯ ಮೌಲ್ಯವನ್ನು ಹುಟ್ಟುಹಾಕಿ ಜನರಲ್ಲಿ ಜಾಗೃತಿ ಮೂಡಿಸುತ್ತದೆ.

ಈ ವರ್ಷದ ಥೀಮ್‌ ಅನ್ನು ಇನ್ನು ಪ್ರಬಲವಾಗಿ ಎಂಬ ವಿಷಯದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ಇದರ ಪ್ರಕಾರ ವಿಶ್ವದಾದ್ಯಂತ ಇರುವ ಅಲ್ಬಿನಿಸಂ ವ್ಯಕ್ತಿಗಳೊಂದಿಗೆ ಏಕತೆ ಸಾಧಿಸುವುದು ಮತ್ತು ಅವರ ಸಾಧನೆಗೆ, ಧನಾತ್ಮಕ ಯೋಚನೆಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕು ಎನ್ನುವುದು ಈ ವರ್ಷದ ಥೀಮ್‌ನ ಸಾರವಾಗಿದೆ.

ಜಗತ್ತಿನಲ್ಲಿ ಪ್ರತಿಯೊಬ್ಬರೂ ಸಮಾನರು. ಮೈ ಬಣ್ಣಗಳಿಂದ ತಾರತಮ್ಯ ಮಾಡುವುದು ತರವಲ್ಲ. ಅಲ್ಬಿನಿಸಂ ಇರುವ ವ್ಯಕ್ತಿಗಳನ್ನು ಕೂಡ ಸಮಾಜದಲ್ಲಿ ಅಪಹಾಸ್ಯವಾಗಿ ಕಾಣದೆ ಪ್ರೀತಿಯಿಂದ ಕಾಣಿರಿ. ಅವರು ಅನುಭವಿಸುತ್ತಿರುವ ಕಷ್ಟಗಳಿಗೆ ಸ್ವಲ್ಪವಾದರೂ ಮುಕ್ತಿ ದೊರಕಿದಂತಾಗುತ್ತದೆ. ಸಮಾಜದಲ್ಲಿ ಎಲ್ಲರಿಗೂ ಸಮಾನವಾದ ಸ್ಥಾನಮಾನ ಲಭ್ಯವಾಗಬೇಕು ಎಂಬುದೇ ನಮ್ಮ ಆಶಯ.

ಏಕತೆ ಸಾಧಿಸುವ ಉದ್ದೇಶ
ಈ ವರ್ಷದ ಥೀಮ್‌ ಅನ್ನು ಇನ್ನು ಪ್ರಬಲವಾಗಿ ಎಂಬ ವಿಷಯದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ಇದರ ಪ್ರಕಾರ ವಿಶ್ವದಾದ್ಯಂತ ಇರುವ ಅಲ್ಬಿನಿಸಂ ವ್ಯಕ್ತಿಗಳೊಂದಿಗೆ ಏಕತೆ ಸಾಧಿಸುವುದು ಮತ್ತು ಅವರ ಸಾಧನೆಗೆ, ಧನಾತ್ಮಕ ಯೋಚನೆಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕು ಎನ್ನುವುದು ಈ ವರ್ಷದ ಥೀಮ್‌ನ ಸಾರವಾಗಿದೆ.

  • ಪ್ರೀತಿ ಭಟ್ ಗುಣವಂತೆ
Advertisement

Udayavani is now on Telegram. Click here to join our channel and stay updated with the latest news.

Next