Advertisement

ಮಧ್ಯಂತರ ಚುನಾವಣೆಗೆ ಅವಕಾಶ ನೀಡಲ್ಲ

07:31 AM Jun 08, 2019 | Team Udayavani |

ಹುಬ್ಬಳ್ಳಿ/ಬಾಗಲಕೋಟೆ: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆಗೆ ಅವಕಾಶ ನೀಡುವುದಿಲ್ಲ. ಕಾಂಗ್ರೆಸ್‌-ಜೆಡಿಎಸ್‌ನವರಿಗೆ ಸರ್ಕಾರ ನಡೆಸಲು ಸಾಧ್ಯವಾಗದಿದ್ದರೆ ಬಿಟ್ಟು ಕೊಡಲಿ. 105 ಶಾಸಕರನ್ನು ಹೊಂದಿರುವ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್‌ ಕುಮಾರಸ್ವಾಮಿ ಯಾವುದೇ ಸಮಯಕ್ಕೆ ಮಧ್ಯಂತರ ಚುನಾವಣೆ ಎದುರಾಗಬಹುದು, ಅದಕ್ಕೆ ಸಿದ್ಧರಾಗಿ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಮಧ್ಯಂತರ ಚುನಾವಣೆಗೆ ಬಿಜೆಪಿ ಅವಕಾಶ ನೀಡುವುದಿಲ್ಲ. ವಿಧಾನಸಭೆ ಚುನಾವಣೆಗೆ ಜನರ ಬಳಿ ಹೋಗಲು ಇನ್ನೂ ನಾಲ್ಕು ವರ್ಷ ಕಾಲಾವಕಾಶವಿದೆ. ಸಮ್ಮಿಶ್ರ ಸರ್ಕಾರ ಪತನಗೊಂಡರೆ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದರು.

ಜೂ.13ರಿಂದ ಸತ್ಯಾಗ್ರಹ: ರಾಜ್ಯ ಸರ್ಕಾರ ಜಿಂದಾಲ್‌ ಕಂಪನಿಗೆ ಮತ್ತೆ ಜಮೀನು ಕೊಡಲು ಹೊರಟಿರುವುದನ್ನು ವಿರೋಧಿಸಿ ಜೂ.13ರಿಂದ 15ರವರೆಗೆ ಸತ್ಯಾಗ್ರಹ ನಡೆಸಲಾಗುವುದು. ಜಿಂದಾಲ್‌ಗೆ ಕೊಡುತ್ತಿರುವ ಜಮೀನಲ್ಲಿ ಉತ್ತಮ ಖನಿಜಗಳಿವೆ. ಅದಕ್ಕೆ ಈಗಾಗಲೇ ಕೊಟ್ಟಿರುವ ಜಮೀನು ಸಾಕಷ್ಟಾಗಿದೆ. ಮತ್ತೆ ಅದಕ್ಕೆ ಜಮೀನು ಕೊಡುವ ಅವಶ್ಯಕತೆಯಿಲ್ಲ. ಈಗ ಮತ್ತೆ ಆ ಕಂಪನಿಗೆ ಪ್ರತಿ ಎಕರೆಗೆ 1.22 ಲಕ್ಷ ರೂ.ನಂತೆ 3,666 ಎಕರೆ ಕೊಡಲು ಸರ್ಕಾರ ಹೊರಟಿದೆ. ಅದಕ್ಕೆ ಕೊಡುವ ಬದಲು ಬೇರೆ ಕಂಪನಿಗೆ ಕೊಟ್ಟು ಪ್ರೋತ್ಸಾಹಿಸುವುದು ಒಳ್ಳೆಯದು. ಯಾವುದೋ ಒಂದು ಕಂಪನಿಗೆ ಒಲವು ತೋರುವ ಮೂಲಕ ಸಿಎಂ ಕುಮಾರಸ್ವಾಮಿ ವ್ಯವಹಾರ ಕುದುರಿಸಿಕೊಳ್ಳಲು ಹೊರಟಿರುವುದು ಖಂಡನೀಯ ಎಂದರು.

ಗ್ರಾಮ ವಾಸ್ತವ್ಯ ದೊಂಬರಾಟ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯಕ್ಕೆ ಅರ್ಥವಿಲ್ಲ. ಹಿಂದೆ ವಾಸ್ತವ್ಯ ಮಾಡಿದ ಗ್ರಾಮಗಳಿಗೆ ಒಂದು ಕೋಟಿ ರೂ. ಅನುದಾನ ಕೊಡುತ್ತೇನೆ ಎಂದಿದ್ದರು. ಯಾವುದೇ ಸೂಕ್ತ ಕ್ರಮ ಗೊಂಡಿಲ್ಲ. ಆ ಗ್ರಾಮಗಳ ಸ್ಥಿತಿಗತಿ ಏನಾಗಿದೆ ಎಂಬುದು ಗೊತ್ತಾಗಿಲ್ಲ. ಬರಗಾಲ ಪೀಡಿತ ಪ್ರದೇಶಗಳಿಗೆ ತೆರಳಿ ಅಲ್ಲಿನ ಪರಿಸ್ಥಿತಿ ತಿಳಿದುಕೊಂಡು, ಸಮಸ್ಯೆ ಬಗೆಹರಿಸುವತ್ತ ಕುಮಾರಸ್ವಾಮಿ ಗಮನ ಹರಿಸಬೇಕು. ಅದನ್ನು ಬಿಟ್ಟು ಶಾಲೆಯೊಂದರಲ್ಲಿ ವಾಸ್ತವ್ಯ ಮಾಡುವ ಅಗತ್ಯತೆ ಇರಲಿಲ್ಲ. ಜನ ಇದನ್ನು ಮೆಚ್ಚಲ್ಲ. ಇದೊಂದು ರೀತಿ ರಾಜಕೀಯ ದೊಂಬರಾಟ ಎಂದರು.

ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನವಾಗಿ ಸಿಎಂ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಜೂನ್‌ ತಿಂಗಳು ಬಂದರೂ ರಾಜ್ಯದಲ್ಲಿ ಮಳೆಯಿಲ್ಲ. ಭೀಕರ ಬರಗಾಲ ಮುಂದುವರಿದಿದೆ. ಬಿತ್ತನೆ ಶೇ.2-3ರಷ್ಟಾಗಿದೆ. ಇವರು ಅಧಿಕಾರಕ್ಕೆ ಬಂದ 24 ತಾಸಿನೊಳಗೆ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ, ಒಂದು ವರ್ಷವಾದರೂ 3-4 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿಲ್ಲ ಎಂದು ಆರೋಪಿಸಿದರು.

Advertisement

ಸಿದ್ದು ಕ್ಷೇತ್ರದಲ್ಲಿ ಬಿಎಸ್‌ವೈ ಬರ ಅಧ್ಯಯನ: ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ಬಾಗಲಕೋಟೆ ಜಿಲ್ಲೆ ಬಾದಾಮಿ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರು ಶುಕ್ರವಾರ ಬರ ಅಧ್ಯಯನ ನಡೆಸಿದರು. ಶುಕ್ರವಾರ ಬೆಳಗ್ಗೆ ಬಾದಾಮಿ ತಾಲೂಕು ಮುಷ್ಟಿಗೇರಿಗೆ ಆಗಮಿಸಿದ ಅವರು, ರಸ್ತೆಯ ಪಕ್ಕದ ಹೊಲಗಳಿಗೆ ಭೇಟಿ ನೀಡಿದರು. ಅಲ್ಲಿಂದ ಬಾದಾಮಿಗೆ ತೆರಳಿ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.

ಸಭೆಯಲ್ಲಿ ಸರಿಯಾಗಿ ಮಾಹಿತಿ ನೀಡದ ಹಾಗೂ ಜನರು ಗುಳೆ ಹೋಗುತ್ತಿದ್ದರೂ ತಪ್ಪು ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಗರಂ ಆದರು. ಬಾದಾಮಿ ಕ್ಷೇತ್ರದ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯನವರು ಇಲ್ಲಿ ಸಭೆ ನಡೆಸಿದ್ದಾರಾ ಎಂದು ಪ್ರಶ್ನಿಸಿದರು. ಚುನಾವಣೆ ನೀತಿ ಸಂಹಿತೆ ಇದ್ದಿದ್ದರಿಂದ ಅವರು ಸಭೆ ನಡೆಸಿಲ್ಲ. ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದರು.

ಬಾದಾಮಿಯಲ್ಲಿ ಅಧಿಕಾರಿಗಳ ಸಭೆ ಬಳಿಕ ತಾಲೂಕಿನ ರಂಗಸಮುದ್ರ ಕೆರೆಗೆ ಭೇಟಿ ನೀಡಿ, ವೀಕ್ಷಣೆ ಮಾಡಿದರು. ಅಲ್ಲಿಂದ ಹುನಗುಂದ ತಾಲೂಕಿನ ಗುಡೂರ ಗ್ರಾಮಕ್ಕೆ ತೆರಳಿ, ಕುಡಿಯುವ ನೀರಿನ ಸಮಸ್ಯೆ ಕುರಿತು ಪರಿಶೀಲಿಸಿದರು. ಬಳಿಕ ಸೂಳೆಬಾವಿ, ರಕ್ಕಸಗಿ ಗ್ರಾಮಕ್ಕೆ ಭೇಟಿ ನೀಡಿದರು. ಸಂಜೆ ಹುನಗುಂದಕ್ಕೆ ತೆರಳಿ, ಬರ ನಿರ್ವಹಣೆ ಕಾಮಗಾರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಕೇಂದ್ರ ಸಚಿವ ಸಂಪುಟದಲ್ಲಿ ಲಿಂಗಾಯತರಿಗೆ ಅವಕಾಶ ಕೊಡುವುದು ಪ್ರಧಾನಿಗೆ ಬಿಟ್ಟ ವಿಚಾರ. ಸುಮಲತಾ ಅವರ ಬಿಜೆಪಿ ಸೇರ್ಪಡೆ ಬಗ್ಗೆ ಅವರನ್ನು ನಾವು ಸಂಪರ್ಕ ಮಾಡಿಲ್ಲ.
-ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next