Advertisement

ಮಧ್ಯಂತರ ಚುನಾವಣೆ: ಗುಮ್ಮವೋ, ತಯಾರಿಯೋ?

12:29 AM Jun 26, 2019 | mahesh |

ಲೋಕಸಭೆ ಚುನಾವಣೆ ನಂತರ ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬದಲಾವಣೆಗಳು ನಡೆಯಲಿವೆ ಎಂಬ ಮಾತುಗಳು ಚುನಾವಣೆಗೆ ಮುನ್ನ ಕೇಳಿ ಬಂದವಾದರೂ 28 ಸ್ಥಾನಗಳ ಪೈಕಿ 25 ಸ್ಥಾನ ಬಿಜೆಪಿ ಪಡೆದರೂ ಅಂತಹ ಯಾವುದೇ ವಿದ್ಯಮಾನಗಳು ನಡೆಯಲಿಲ್ಲ. ಆದರೆ, ಕಾಂಗ್ರೆಸ್‌ನ ಕೆಲವು ನಾಯಕರು ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದೇ ಕಳಪೆ ಫ‌ಲಿತಾಂಶಕ್ಕೆ ಕಾರಣ ಎಂದು ಬಹಿರಂಗವಾಗಿ ಹೇಳಿಕೆ ನೀಡಿದರು. ಇದರ ಬೆನ್ನಲ್ಲೇ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿಯವರನ್ನು ಭೇಟಿ ಮಾಡಿ ಬಂದರು.

Advertisement

ಆದಕ್ಕೂ ಮುಂಚೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರೂ ಭೇಟಿ ಮಾಡಿ ಬಂದಿದ್ದರು. ಸಿದ್ದರಾಮಯ್ಯ ಅವರ ಭೇಟಿ ಬೆನ್ನಲ್ಲೇ ಎಚ್.ಡಿ.ದೇವೇಗೌಡರು ಏಕಾಏಕಿ ಈ ಸರ್ಕಾರ ಎಷ್ಟು ದಿನ ಇರುತ್ತೋ, ಯಾವಾಗ ಚುನಾವಣೆ ಬರುತ್ತೋ ಎಂದು ಹೇಳಿಕೆ ನೀಡಿದರು. ಅಷ್ಟೇ ಅಲ್ಲದೆ ಮರುದಿನ ಕಾಂಗ್ರೆಸ್‌- ಜೆಡಿಎಸ್‌ ಹೊಂದಾಣಿಕೆಯಿಂದ ಇದ್ದರೆ ನಾಲ್ಕು ವರ್ಷದ ನಂತರ ಚುನಾವಣೆ ಬರಲಿದೆ ಎಂದರು.

ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಸಿ ಬರ ಪರಿಶೀಲನೆ ಮಾಡಿ ಪ್ರಮುಖ ಇಲಾಖಾವಾರು ಸಭೆ ನಡೆಸಿ ಆಡಳಿತ ಯಂತ್ರ ಚುರುಕುಗೊಳಿಸಿ ದೆಹಲಿಗೆ ಹೋಗಿ ಪ್ರಧಾನಿ ಸಹಿತ ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಯೋಜನೆಗಳಿಗೆ ಅನುಮತಿ ಕೋರಿ ಗ್ರಾಮವಾಸ್ತವ್ಯ ನಡೆಸಿ ಜನರ ಹತ್ತಿರಕ್ಕೆ ಆಡಳಿತ ಕೊಂಡೊಯ್ಯಲು ಮುಖ್ಯ ಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರು ಮುಂದಾ ಗಿದ್ದಾರೆ.

ಪ್ರತಿಪಕ್ಷ ನಾಯಕ ಬಿ.ಎಸ್‌ಯಡಿ ಯೂರಪ್ಪ ಅವರು ಬಿಜೆಪಿಯವರು ಪ್ರತಿಪಕ್ಷದಲ್ಲಿ ಕುಳಿತು ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದ್ದರು. ಇನ್ನೇನು ಎಲ್ಲ ಸರಿ ಹೋಯಿತು ಎನ್ನುವಾಗಲೇ ದೇವೇಗೌಡರ ಹೇಳಿಕೆ ರಾಜಕೀಯ ವಲಯದಲ್ಲಿ ನಾನಾ ರೀತಿಯ ವ್ಯಾಖ್ಯಾನಗಳಿಗೆ ಕಾರಣ ಆಗಿದೆ ಎನ್ನುವುದಂತೂ ಸತ್ಯ.

ಇದರ ಬೆನ್ನಲ್ಲೇ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಮತ್ತೆ ಅಹಿಂದ ಮತಗಳ ಕ್ರೋಡೀಕರಣದತ್ತ ಚಿತ್ತ ಹರಿಸಿ ಸಭೆಗಳನ್ನು ನಡೆಸುತ್ತಿದ್ದಾರೆ. ಇತ್ತ ದೇವೇಗೌಡರೂ ಸಮುದಾಯವಾರು ಮುಖಂಡರ ಸಭೆ ನಡೆಸುತ್ತಿದ್ದಾರೆ. ಇವೆಲ್ಲವೂ ಎಲ್ಲೋ ಒಂದು ಕಡೆ ಮಧ್ಯಂತರ ಚುನಾವಣೆ ಸಿದ್ಧತೆಯೇ ಎಂಬ ಅನುಮಾನ ಮೂಡುವುದಕ್ಕೆ ಕಾರಣವಾಗಿವೆ.

Advertisement

ಹಾಗೆಂದು, ಸದ್ಯದಲ್ಲೇ ವಿಧಾನಸಭೆ ವಿಸರ್ಜನೆಯಾಗಿ ಚುನಾವಣೆಗೆ ಹೋಗುವ ತೀರ್ಮಾನ ಕೈಗೊಳ್ಳಬಹುದು ಎಂದಲ್ಲ. ಆದರೆ, ಎರಡೂ ಪಕ್ಷಗಳಲ್ಲಿನ ಸಿದ್ಧತೆಗಳನ್ನು ನೋಡಿದರೆ ಯಾವಾಗ ಬೇಕಾದರೂ ಚುನಾವಣೆ ಎದುರಿಸಲು ಸಜ್ಜಾಗುತ್ತಿರಬಹುದು ಎಂದೆನಿಸುತ್ತದೆ.

ಆದರೆ, ಮೂರೂ ಪಕ್ಷಗಳ ಶಾಸಕರಿಗೆ ಮಧ್ಯಂತರ ಚುನಾವಣೆ ಬಗ್ಗೆ ಒಲವಿಲ್ಲ. ಬಿಜೆಪಿಯಂತೂ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಪ್ರಶ್ನೆಯೆ ಇಲ್ಲ, ನಾವು ಅಧಿಕಾರ ನಡೆಸಲು ರೆಡಿಯಾಗಿದ್ದೇವೆ ಎಂಬ ಸಂದೇಶ ಸಹ ರವಾನಿಸಿದೆ. ಆದರೆ, ಸರ್ಕಾರದ ಅಳಿವು-ಉಳಿವಿನ ತೀರ್ಮಾನ ಸದ್ಯಕ್ಕೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕೈಯಲ್ಲಿ ಇದೆ. ಮುಂದೆ ಯಾವ ರೀತಿಯ ಬೆಳವಣಿಗೆಗಳು ಆಗಬಹುದು ಎಂಬುದನ್ನು ಕಾದು ನೋಡಬೇಕಿದೆ.

ಸರ್ಕಾರದ ಅಳಿವು-ಉಳಿವಿನ ತೀರ್ಮಾನ ಸದ್ಯಕ್ಕೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕೈಯಲ್ಲಿ ಇದೆ. ಮುಂದೆ ಯಾವ ರೀತಿಯ ಬೆಳವಣಿಗೆಗಳು ಆಗಬಹುದು ಎಂಬುದನ್ನು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next