Advertisement

ಪರಸ್ಪರ ಟೀಕೆಯೇ ಪ್ರಚಾರಾಸ್ತ್ರ

03:10 PM Apr 22, 2019 | Team Udayavani |

ಹಾವೇರಿ: ಈ ಬಾರಿಯ ಕ್ಷೇತ್ರದ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಎಲ್ಲ ರಾಷ್ಟ್ರೀಯ ಪಕ್ಷಗಳು ಸ್ಥಳೀಯ ವಿಚಾರಗಳನ್ನು ಕಡೆಗಣಿಸಿ, ಕೇಂದ್ರೀಯ ವಿಚಾರ, ಆರೋಪ, ಪ್ರತ್ಯಾರೋಪವನ್ನೇ ತಮ್ಮ ಪ್ರಮುಖ ಪ್ರಚಾರಾಸ್ತ್ರವನ್ನಾಗಿಸಿಕೊಂಡು ಗಮನಸೆಳೆದವು.

Advertisement

ಸ್ಥಳೀಯವಾಗಿ ಸಾಕಷ್ಟು ಸಮಸ್ಯೆಗಳಿದ್ದರೂ ಅವುಗಳ ಬಗ್ಗೆ ಚಕಾರ ಎತ್ತದ ಪ್ರಮುಖ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು, ಪರಸ್ಪರ ಟೀಕೆಯಲ್ಲಿಯೇ ಪ್ರಚಾರ ಪೂರ್ಣಗೊಳಿಸಿದವು. ಈ ನಡುವೆ ಕೆಲ ಪಕ್ಷೇತರರು ಹಾಗೂ ಪ್ರಾದೇಶಿಕ ಪಕ್ಷದ ಕೆಲ ಅಭ್ಯರ್ಥಿಗಳು ಸ್ಥಳೀಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿರುವುದು ಸಮಾಧಾನಕರ ಸಂಗತಿ. ಮುಖ್ಯವಾಗಿ ಪ್ರಚಾರದಲ್ಲಿ ಈ ಬಾರಿ ಕಾಂಗ್ರೆಸ್‌ ಪ್ರಧಾನಿ ಮೋದಿಯವರ ವಿರುದ್ಧ ಹರಿಹಾಯುವ ಕೆಲಸ ಮಾಡಿತು. ಇದರ ಜತೆಗೆ ಸರ್ಜಿಕಲ್ ಸ್ಟ್ರೈಕ್‌, ಯುದ್ಧದ ವಿಚಾರವೂ ಟೀಕಾಸ್ತ್ರವಾಗಿ ಪಯೋಗಿಸಿತು. ಇತ್ತ ಬಿಜೆಪಿ ಮೋದಿ ಸಾಧನೆ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬಗ್ಗೆ ಟೀಕೆ, ಕಾಂಗ್ರೆಸ್‌ ಪಕ್ಷ ಹಾಗೂ ಅದರ ಪ್ರಣಾಳಿಕೆ ಟೀಕೆ ವಿಚಾರವನ್ನೇ ಪ್ರಚಾರದಲ್ಲಿ ಬಳಸಿಕೊಂಡಿತು.

ಕಾವು ಹೆಚ್ಚಿಸಿದ ಸಮಾವೇಶ: ಚುನಾವಣೆ ಘೋಷಣೆಗೆ 15-20 ದಿನ ಇರುವ ಪೂರ್ವದಲ್ಲಿಯೇ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಎರಡೂ ಪಕ್ಷಗಳು ತಲಾ ಒಂದೊಂದು ಸಮಾವೇಶಗಳನ್ನು ನಡೆಸಿದವು. ಈ ಸಮಾವೇಶಗಳೇ ಕ್ಷೇತ್ರದಲ್ಲಿ ಪ್ರಚಾರ ಕಾವಿನ ಕಿಡಿ ಹೊತ್ತಿಸಿದವು. ಹಾವೇರಿಯಲ್ಲಿ ಬಿಜೆಪಿ ಫೆಬ್ರುವರಿ 25ರಂದು ವಿಜಯ ಸಂಕಲ್ಪ ಯಾತ್ರೆ ಸಮಾವೇಶ ಸಂಘಟಿಸಿತ್ತು. ಈ ಸಮಾವೇಶದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆದಿಯಾಗಿ ಎಲ್ಲ ರಾಜ್ಯ ಮುಖಂಡರು ಭಾಗಿಯಾಗಿ ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ಮಾಡಿದರು.

ಅದೇ ರೀತಿ ಮಾರ್ಚ್‌ 9ರಂದು ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಪರಿವರ್ತನಾ ರ್ಯಾಲಿಗೆ ಆಗಮಿಸಿ, ಮೋದಿ ವಿರುದ್ಧ ವಾಕ್ಸಮರ ನಡೆಸಿದರು. ಹೀಗಾಗಿ ಚುನಾವಣೆ ಘೋಷಣೆಗೂ ಮುನ್ನವೇ ಕ್ಷೇತ್ರದಲ್ಲಿ ಚುನಾವಣಾ ಕಾವು ಪಡೆದುಕೊಂಡಿತ್ತು. ಬಳಿಕ ಸ್ಟಾರ್‌ ಪ್ರಚಾರಕರು, ಪಕ್ಷದ ನಾಯಕರಿಂದ ರೋಡ್‌ ಶೋ, ಪ್ರಚಾರ ಸಭೆಗಳು, ಮನೆ ಭೇಟಿ ಪ್ರಚಾರ ನಡೆಯಿತು.

ಮೋದಿ-ರಾಹುಲ್ ಸ್ಪರ್ಧೆ: ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಚಾರ ವೈಖರಿ ನೋಡಿದರೆ ಸ್ಪರ್ಧೆ ಕಣದಲ್ಲಿರುವ ಅಭ್ಯರ್ಥಿಗಳ ನಡುವೆ ನಡೆಯುತ್ತಿಲ್ಲ. ಬದಲಾಗಿ ಮೋದಿ ಹಾಗೂ ಕಾಂಗ್ರೆಸ್‌ ನಡುವೆ ಸ್ಪರ್ಧೆ ನಡೆಯುತ್ತಿರುವಂತೆ ಭಾಸವಾಯಿತು. ಕಾಂಗ್ರೆಸ್‌ನವರು ಮೋದಿಯನ್ನೇ ಗುರಿಯಾಗಿಸಿಕೊಂಡು ಟೀಕಾಸ್ತ್ರ ಬಿಟ್ಟರೆ, ಬಿಜೆಪಿಯವರು ಈ ಹಿಂದೆ ಆಡಳಿತ ಮಾಡಿದ ಕಾಂಗ್ರೆಸ್‌ ಸರ್ಕಾರ ಮತ್ತು ರಾಹುಲ್ ಗಾಂಧಿಯನ್ನು ಮುಖ್ಯವಾಗಿಸಿಕೊಂಡು ಟೀಕಾ ಪ್ರಹಾರ ಮಾಡಿದರು. ಹೀಗಾಗಿ ಕಣದಲ್ಲಿ ಮೋದಿ-ರಾಹುಲ್ ಅವರೇ ಸ್ಪರ್ಧೆಗೆ ನಿಂತಂಥ ಅನುಭವ ನೀಡಿತು.

Advertisement

‘ಮೋದಿ ಮೊತ್ತೂಮ್ಮೆ’, ‘ದೇಶದ ರಕ್ಷಣೆಗೆ ಮೋದಿ ಅವಶ್ಯ’ ಎಂದು ಬಿಜೆಪಿಯವರು ಪ್ರಚಾರ ಮಾಡಿದರೆ, ಕಾಂಗ್ರೆಸ್‌ನವರು ‘ಪ್ರಜಾಪ್ರಭುತ್ವದ ಉಳಿವಿಗೆ ಕಾಂಗ್ರೆಸ್‌ ಅವಶ್ಯ’, ‘ಕೋಮುವಾದಿ ಬಿಜೆಪಿಯನ್ನು ದೂರವಿಟ್ಟರೆ ಮಾತ್ರ ದೇಶದಲ್ಲಿ ಐಕ್ಯತೆ, ಸರ್ವ ಜನಾಂಗದ ನೆಮ್ಮದಿ ಸಾಧ್ಯ’ ಎಂದು ಪ್ರಚಾರ ಮಾಡಿದರು.

ಸ್ಟಾರ್‌ ಪ್ರಚಾರಕರು: ಕ್ಷೇತ್ರಕ್ಕೆ ಬಿಜೆಪಿಯಿಂದ ಚಲನಚಿತ್ರ ನಟಿಯರಾದ ಮಾಳವಿಕಾ, ಶೃತಿ, ಮುಖಂಡರಾದ ಯಡಿಯೂರಪ್ಪ, ಜಗದೀಶ ಶೆಟ್ಟರ್‌, ಬಸನಗೌಡ ಪಾಟೀಲ ಯತ್ನಾಳ, ಬಸವರಾಜ ಬೊಮ್ಮಾಯಿ ಹೀಗೆ ಅನೇಕರು ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿದರು. ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ, ಸಿ.ಎಂ. ಇಬ್ರಾಹಿಂ, ಎಚ್.ಕೆ. ಪಾಟೀಲ, ಜಮೀರ್‌ ಅಹ್ಮದ್‌, ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಹೀಗೆ ಇನ್ನಿತರರು ಆಗಮಿಸಿ ಪ್ರಚಾರದಲ್ಲಿ ತೊಡಗಿಕೊಂಡು ಭಾಷಣದ ಮೂಲಕ ಎದುರಾಳಿಗಳಿಗೆ ಟಾಂಗ್‌ ಕೊಟ್ಟರು.

ಯೋಜನೆ, ಯೋಚನೆ ಇಲ್ಲ..
ಕ್ಷೇತ್ರದ ಅಭ್ಯರ್ಥಿಗಳು ತಮ್ಮ ವಿಚಾರ, ಯೋಜನೆ, ಆಲೋಚನೆಗಳ ಬಗ್ಗೆ ಜನರಿಗೆ ತಿಳಿಸುವ ಬದಲಿಗೆ ಎದುರಾಳಿ ಪಕ್ಷ, ಅಭ್ಯರ್ಥಿ ವಿರುದ್ಧದ ಆರೋಪಗಳೇ ಹೆಚ್ಚು ಪ್ರಚಾರದಲ್ಲಿ ಪ್ರತಿಬಿಂಬಿಸಿದವು. ಪ್ರಚಾರದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ಪಕ್ಷ ಬಿಡುಗಡೆಗೊಳಿಸಿದ ಪ್ರಣಾಳಿಕೆ ಪತ್ರ, ತಮ್ಮ ಪಕ್ಷದ ಸರ್ಕಾರಗಳು ಅಧಿಕಾರದಲ್ಲಿದ್ದಾಗ ಜಾರಿಗೆ ತಂದಿದ್ದ ಯೋಜನೆಗಳ ಕರಪತ್ರಗಳನ್ನು ಮತದಾರರಿಗೆ ಹಂಚುವುದೇ ಪ್ರಚಾರವಾಗಿಸಿಕೊಂಡವು.

ಸಮಸ್ಯೆಗಳ ಪ್ರಸ್ತಾಪವಿಲ್ಲ..
ಕ್ಷೇತ್ರ ಕೃಷಿ ಪ್ರಧಾನವಾಗಿದ್ದು ಕೃಷಿಗೆ ನೀರಾವರಿ ಯೋಜನೆ, ಕ್ಷೇತ್ರದ ಬಹುತೇಕ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು ಅವುಗಳ ನಿವಾರಣೆಗೆ ವಿಶೇಷ ಯೋಜನೆ, ಬರಪೀಡಿತ ಜಿಲ್ಲೆಗೆ ವಿಶೇಷ ಅನುದಾನ, ಜಿಲ್ಲೆಯ ಕೆರೆಗಳನ್ನು ತುಂಬಿಸುವ ಯೋಜನೆ ಸೇರಿದಂತೆ ಇನ್ನಿತರ ಬೇಡಿಕೆಗಳ ಬಗ್ಗೆ ಯಾವ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಯೂ ಚಕಾರ ಎತ್ತದೆ ಇರುವುದು ವಿಷಾದನೀಯ.

ಒಟ್ಟಾರೆ ಈ ಬಾರಿಯ ಪ್ರಚಾರದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳೇ ಸ್ಥಾನ ಜಾಸ್ತಿಯಾಗಿ, ಅಭಿವೃದ್ಧಿ ವಿಚಾರನಾಸ್ತಿಯಾಯಿತು.

•ಎಚ್.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next