Advertisement

ಬುದ್ದಿ ಜೀವಿಗಳು ಸಮಾಜದತ್ತ ನೋಡಲ್ಲ: ಕಾಂತಾ ಕಳವಳ

10:46 AM May 16, 2022 | Team Udayavani |

ಕಲಬುರಗಿ: ಬುದ್ಧಿ ಜೀವಿಗಳು, ಹೆಚ್ಚು ತಿಳಿವು ಉಳ್ಳವರು ಮತ್ತು ಪ್ರಗತಿಪರ ಮನಸ್ಸಿನವರು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಕೆಲಸಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ತುಂಬಾ ಜಾಣ್ಮೆಯಿಂದ ದೂರವೇ ಇರುತ್ತಾರೆ. ಇಂತಹವರ ಕುರಿತೇ ಬಾಬಾ ಸಾಹೇಬರು ಕಟುವಾಗಿ ಟೀಕಿಸಿದ್ದಾರೆ ಎಂದು ಮಾಜಿ ಕಾರ್ಮಿಕ ಸಚಿವ ಎಸ್‌. ಕೆ.ಕಾಂತಾ ಹಳಹಳಿಸಿದರು.

Advertisement

ನಗರದ ಕನ್ನಡ ಭವನದಲ್ಲಿ ರವಿವಾರ ಕನ್ನಡ ಜನಶಕ್ತಿ ಕೇಂದ್ರ ಹಮ್ಮಿಕೊಂಡಿದ್ದ ಕೆರೆಯ ಚಂದಮ್ಮ ಅವರಿಗೆ 24ನೇ ವರ್ಷದ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತಿಳಿವು ಪಡೆದವರ ಸಮಾಜವಾದ ಎಂಬುದು ಪುಸ್ತಕ, ಭಾಷಣದಲ್ಲಿ ಉಳಿದಿದೆ. ಆದರೆ, ಕೃತಿಯಲ್ಲಿ ಇಲ್ಲ. ಈ ವಿಷಯದಲ್ಲಿ ಪ್ರಶಸ್ತಿ ಪಡೆದ ಕೆರೆ ಚಂದಮ್ಮ ಅವರಿಂದ ಹೆಚ್ಚು ಕಲಿಯುವುದಿದೆ. ಹೆಣ್ಣುಮಕ್ಕಳಲ್ಲಿ ನಿಷ್ಠೆ ಪ್ರಾಮಾಣಿಕತೆಯಿದೆ. ಡಾಕ್ಟರೇಟ್‌ ಗಿಂತ ಹೆಚ್ಚಿನ ಜ್ಞಾನ ಅವರಲ್ಲಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಚಂದಮ್ಮ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ ಗುವಿವಿ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥ ಪ್ರೊ| ಎಚ್‌.ಟಿ.ಪೋತೆ ಮಾತನಾಡಿ, ಸಾಮಾಜಿಕ ಪ್ರಜಾಪ್ರಭುತ್ವ ಬಹಳ ಮುಖ್ಯವಾದದ್ದು, ಇದು ಇರದಿದ್ದರೆ ಸಮಾಜ ಅಶಾಂತಿಯಲ್ಲಿ ತೇಲಾಡುತ್ತದೆ. ಪ್ರಗತಿಪರವಾಗಿ ಆಲೋಚನೆ ಮಾಡಿ ಸಮಾಜಮುಖೀಯಾಗಿ ದೇಶವನ್ನು ಕಟ್ಟಲು ಹೊರಟವರಲ್ಲಿ ಶಾಂತವೇರಿ ಗೋಪಾಲಗೌಡರೂ ಒಬ್ಬರು ಎಂದರು.

ಜಿಲ್ಲಾ ಕಸಾಪ ಮಾಜಿ ಕೋಶಾಧ್ಯಕ್ಷರಾದ ಡಾ| ಸೂರ್ಯಕಾಂತ ಪಾಟೀಲ, ಡಾ| ಪ್ರಭು ಖಾನಾಪುರೆ ಮಾತನಾಡಿದರು. ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷರಾದ ಸಿ.ಕೆ. ರಾಮೇಗೌಡ ಪ್ರಾಸ್ತಾವಿಕ ಮಾತನಾಡಿ ದರು. ಎಂ.ಎಲ್‌.ರಾಮಕೃಷ್ಣ, ಎಂ.ಕೆ. ರಂಗಪ್ಪ, ಸಿ.ಆರ್‌.ವಿನಯಕುಮಾರ, ಸಿ.ಕೆ.ದಾಸಪ್ಪ ಮತ್ತಿತರರು ಇದ್ದರು. ಕನ್ನಡ ಹೋರಾಟಗಾರ ನಂ.ವಿಜಯಕುಮಾರ ನಿರೂಪಿಸಿದರು. ಜಗದೇವಿ ತಂಡ ದವರು ಪ್ರಾರ್ಥಿಸಿದರು. ಲೇಖಕ ಡಾ| ಚಂದ್ರಶೇಖರ ದೊಡ್ಡಮನಿ ಸ್ವಾಗತಿಸಿ, ನಿರೂಪಿಸಿದರು ಹಾಗೂ ಸಿ.ಪುಟ್ಟರಾಜ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next