Advertisement

ಮಾನಸಿಕ ಕಾಯಿಲೆಗೂ ಸಿಗಲಿದೆ ವಿಮೆ 

06:00 AM Aug 29, 2018 | |

ಹುಬ್ಬಳ್ಳಿ: ಎಷ್ಟೇ ಹಣ ವ್ಯಯ ಮಾಡಿ ಆರೋಗ್ಯ ವಿಮೆ ಮಾಡಿದರೂ ಮಾನಸಿಕ ಕಾಯಿಲೆ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಭರಿಸಲಾಗದು ಎಂದು ಹೇಳುತ್ತಿದ್ದ ವಿಮಾ ಕಂಪನಿಗಳಿಗೆ ಕೇಂದ್ರ ಸರ್ಕಾರ ಮೂಗುದಾರ ಹಾಕಿದೆ. ಇನ್ಮುಂದೆ ವಿವಿಧ ಕಾಯಿಲೆಗಳಿಗೆ ನೀಡುವಂತೆ ಮಾನಸಿಕ ಕಾಯಿಲೆ ಚಿಕಿತ್ಸೆಗೂ ವಿಮಾ ವೆಚ್ಚ ಭರಿಸಲೇಬೇಕು ಎಂದು ಸೂಚಿಸಿದ್ದು, ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಆದೇಶ ಜಾರಿಗೊಳಿಸಿದೆ. 

Advertisement

ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮೆಂಟಲ್‌ ಹೆಲ್ತ್‌ ಅಕ್ಟ್-2017 ಮಸೂದೆ ಅನುಮೋದನೆಯಾಗಿದ್ದು, ಮೇ 29, 2018 ಸೆಕ್ಷನ್‌ 21(4) ಕಾಯ್ದೆ ಅನ್ವಯ ತುರ್ತು ಅದೇಶ ಹೊರಡಿಸುವಂತೆ ಕೇಂದ್ರ ಸರ್ಕಾರ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಆದೇಶ ನೀಡಿತ್ತು. ಈ ಕುರಿತು ಆದೇಶ ಹೊರಡಿಸಲಾಗಿದ್ದು, ಮಾನಸಿಕ ಆರೋಗ್ಯ ಚಿಕಿತ್ಸೆಗೂ ವಿಮಾ ಸೌಲಭ್ಯ ನೀಡುವಂತೆ ಸೂಚಿಸಿದೆ. ಮೇ 29ರಿಂದಲೇ ಈ ಆದೇಶ ಜಾರಿಯಾಗುವಂತೆ ತಾಕೀತು ಮಾಡಲಾಗಿದೆ. ಸಾಮಾನ್ಯವಾಗಿ ಭಾರತದಲ್ಲಿರುವ ಪ್ರತಿಷ್ಠಿತ ವಿಮಾ ಕಂಪನಿಗಳು ಇಷ್ಟು ದಿನ ತಮ್ಮ ಷರತ್ತುಗಳಲ್ಲಿ ಮಾನಸಿಕ ಕಾಯಿಲೆಗೆ ಸಂಬಂಧಿಸಿದಂತೆ ಯಾವುದೇ ವೆಚ್ಚ ಭರಿಸಲಾಗುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳುತ್ತಿದ್ದವು.
ಇದರಿಂದ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿತ್ತು. ಆರೋಗ್ಯ ವಿಮೆ ಪಡೆಯುವಾಗ ಈ ಕುರಿತು ಹೆಚ್ಚಾಗಿ ತಲೆಕೆಡಿಸಿಕೊಳ್ಳದ ಗ್ರಾಹಕರು, ಸಮಸ್ಯೆ ಎದುರಾದಾಗ ಪರಿತಪಿಸುವಂತಾಗಿತ್ತು.  ಅಪಘಾತ ಸಂಭವಿಸಿದಾಗ ರೋಗಿಗಳು ತಾತ್ಕಾಲಿಕ, ಕೆಲವೊಮ್ಮೆ ಶಾಶ್ವತ ಮಾನಸಿಕ ಆಘಾತಕ್ಕೊಳಗಾಗುತ್ತಾರೆ. ಅಂತಹ ಸಂದರ್ಭ ದಲ್ಲಿ ರೋಗಿಯನ್ನು ಮನೋರೋಗ ತಜ್ಞರ ಬಳಿ ಚಿಕಿತ್ಸೆಗಾಗಿ ಕಳುಹಿಸಿ ಕೊಡಲಾಗುತ್ತದೆ. ಇಂಥ ಸಂದರ್ಭದಲ್ಲಿ ವಿಮಾ ಕಂಪನಿಗಳು ಸಹಾಯಕ್ಕೆ ಬರುತ್ತಿರಲಿಲ್ಲ. ಸಾಮಾನ್ಯ ಆರೋಗ್ಯ ವಿಮೆ ಮಾತ್ರ ಭರಿಸುವುದಾಗಿ ಹೇಳುತ್ತಿದ್ದವು. ಮನೋರೋಗ ತಜ್ಞರ ಬಳಿ ತಗಲುವ ವೆಚ್ಚ ಸಾಮಾನ್ಯವಾಗಿ ಸ್ವಲ್ಪ ಹೆಚ್ಚೇ ಇರುವುದರಿಂದ ಗ್ರಾಹಕರು ಮತ್ತಷ್ಟು ತಲೆಕೆಡಿಸಿಕೊಳ್ಳುತ್ತಿದ್ದರು.
ಹೀಗಾಗಿ ಕೇಂದ್ರ ಸರ್ಕಾರ ದೇಶದ ಎಲ್ಲ ಆರೋಗ್ಯ ವಿಮೆ ಕಂಪನಿಗಳಿಗೆ ನೂತನ ಕಾಯ್ದೆ ಮೂಲಕ ಮಾನಸಿಕ ಕಾಯಿಲೆ ಚಿಕಿತ್ಸೆಗೂ ಅನ್ವಯಿಸುವಂತೆ ಸೂಚಿಸಿದೆ.

ರೋಗಿಯ ಸ್ಥಿತಿ ಮೇಲೆ ಚಿಕಿತ್ಸಾ ವಿಧಾನವೂ ನಿರ್ಧಾರವಾಗಲಿದ್ದು, ಸಣ್ಣ ಪುಟ್ಟ ಸಮಸ್ಯೆ ಇದ್ದಲ್ಲಿ ಒಪಿಡಿಯಲ್ಲಿ ವೈದ್ಯರು ಪರೀಕ್ಷಿಸಿ ಮಾತ್ರೆಗಳನ್ನು ಬರೆದುಕೊಡುತ್ತಾರೆ. ಇನ್ನೂ ಕೆಲವು ಸಲ ಕನಿಷ್ಠ ವಾರದಿಂದ ಒಂದು ತಿಂಗಳವರೆಗೆ ಆಸ್ಪತ್ರೆಯಲ್ಲಿ ದಾಖಲಾಗಬೇಕಾಗುತ್ತದೆ. ಕೆಲವು ಬಾರಿ ರೋಗಿಗೆ ಶಾಕ್‌ ಟ್ರಿಟ್‌ ಮೆಂಟ್‌ ನೀಡಬೇಕಾಗುತ್ತದೆ. ವಾರದಲ್ಲಿ ಕನಿಷ್ಠ ಮೂರು ಬಾರಿ ಈ ಚಿಕಿತ್ಸೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಇದಕ್ಕೆ 2 ಸಾವಿರದಿಂದ 5 ಸಾವಿರ ಬಿಲ್‌ ಮಾಡಬಹುದು. ಮಾನಸಿಕ ಕಾಯಿಲೆ ಗುಣಪಡಿಸುವ ಅವಧಿ ದೀರ್ಘ‌ವಾಗಿರುವ ಕಾರಣ ರೋಗಿಗೆ ತಗಲುವ ವೆಚ್ಚ ಅಧಿಕವಿರುತ್ತದೆ. 
● ಡಾ. ಶಿವಕುಮಾರ ಹಿರೇಮಠ, ಮನೋರೋಗ ತಜ್ಞ

● ಸೋಮಶೇಖರ ಹತ್ತಿ

Advertisement

Udayavani is now on Telegram. Click here to join our channel and stay updated with the latest news.

Next