Advertisement

ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸಿ

10:43 AM May 04, 2019 | Team Udayavani |

ಕೋಲಾರ: ರೈತರು ತಮ್ಮ ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸಿದರೆ 20 ರಿಂದ 80 ಸಾವಿರ ರೂ.ವರೆಗೆ ನಷ್ಟ ಪರಿಹಾರ ಪಡೆದುಕೊಳ್ಳಲು ಅವಕಾಶವಿದೆ. ಇದರ ಸದುಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಸಲಹೆ ನೀಡಿದರು.

Advertisement

ನಗರದಲ್ಲಿನ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ತೋಟಗಾರಿಕೆ ಇಲಾಖೆ ಮತ್ತು ವಿಮಾ ಕಂಪನಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ವಿಮೆ ಸಂಬಂಧ ರೈತರು ತಪ್ಪದೇ ಸಮೀಪದ ಬ್ಯಾಂಕ್‌ಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

2016ನೇ ಸಾಲಿನಿಂದ ವಿಮೆ ಸೌಲಭ್ಯವನ್ನು ಇಲಾಖೆಯಿಂದ ತೋಟಗಾರಿಕೆ ಬೆಳೆಗಳಿಗೆ ಕಲ್ಪಿಸಲಾಗಿದೆ. 16-17ನೇ ಸಾಲಿನಲ್ಲಿ 3599, 17-18ನೇ ಸಾಲಿನಲ್ಲಿ 1500, 18-19ನೇ ಸಾಲಿನಲ್ಲಿ 2100 ಮಂದಿ ಮಾತ್ರವೇ ನೋಂದಣಿ ಮಾಡಿಸಿಕೊಂಡು ಪರಿಹಾರ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

12 ಸಾವಿರ ರೈತರ ನೋಂದಣಿ ಗುರಿ: ಪ್ರತಿ ಹೆಕ್ಟೇರ್‌ ಬೆಳೆಗೆ ವಿಮೆ 3.5 ಸಾವಿರ ರೂ.ಗಳಿದ್ದು, ಜಿಲ್ಲೆಯಲ್ಲಿ 60 ಸಾವಿರಕ್ಕೂ ಅಧಿಕ ತೋಟಗಾರಿಕೆ ಬೆಳೆಗಾರರಿದ್ದಾರೆ. ಹೀಗಾಗಿ ತಮ್ಮ ಸಮೀಪದ ಬ್ಯಾಂಕ್‌ಗಳಲ್ಲಿ ನೋಂದಣಿ ಮಾಡಿಸಿಕೊಳ್ಳುವುದರಿಂದ ಅನುಕೂಲವಾಗಲಿರುವುದಾಗಿ ಹೇಳಿದ ಅವರು, ಈ ಸಾಲಿನಲ್ಲಿ ಕನಿಷ್ಠ 12 ಸಾವಿರಕ್ಕೂ ಹೆಚ್ಚು ಮಂದಿಯನ್ನು ನೋಂದಣಿ ಮಾಡಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು.

ಹವಾಮಾನ ವೈಫರೀತ್ಯಕ್ಕೆ ಸಂಬಂಧಿಸಿದಂತೆ ಬೆಳೆ ಹಾನಿಯಾದರೆ ವಿಮೆ ಯೋಜನೆಯ ಮೂಲಕ ನಷ್ಟ ಪರಿಹಾರವನ್ನು ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದಕ್ಕಾಗಿ 4 ರೀತಿಯ ವರ್ಗಗಳಲ್ಲಿ ಹಾನಿಯನ್ನು ಪರಿಗಣಿಸಲಾಗುತ್ತಿದೆ ಎಂದು ಹೇಳಿದರು.

Advertisement

ವಿಶೇಷವಾಗಿ ಇದರಲ್ಲಿ ಹೆಚ್ಚಾಗಿ ಮಾವು ಬೆಳೆಗೆ ಅನ್ವಯವಾಗಿದ್ದು, ಜೂನ್‌ನಿಂದ ಆಗಸ್ಟ್‌, ಸೆಪ್ಟೆಂಬರ್‌ವರೆಗೆ ಮಳೆಯ ಮೂಲಕ ಪರಿಗಣಿಸಲಾಗುವುದು, ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ರೋಗಗಳ ಮೂಲಕ, ಆ ಬಳಿಕ ಹೂಗಳು ಬಿಡುವ ಸಂದರ್ಭದಲ್ಲಿ ಆಗುವ ಸಮಸ್ಯೆ ಮತ್ತು ಏಪ್ರಿಲ್ ತಿಂಗಳವರೆಗೆ ಮತ್ತೆ ಮಳೆಯನ್ನು ಆಧರಿಸಿ ನಷ್ಟವನ್ನು ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.

ಸದ್ಬಳಕೆ ಮಾಡಿಕೊಳ್ಳಿ: ನೋಂದಣಿ ಮಾಡಿಸಿಕೊಳ್ಳದವರಿಗೆ ಕೇವಲ 18 ಸಾವಿರ ರೂ. ಸಹಾಯಧನ ಮಾತ್ರವೇ ನೀಡಲಾಗುತ್ತದೆ. 3,500 ರೂ. ನೀಡಿ ನೋಂದಣಿ ಮಾಡಿಸಿದರೆ ಕನಿಷ್ಠ 20 ಸಾವಿರ ರೂ.ನಿಂದ 80 ಸಾವಿರ ರೂ.ವರೆಗೆ ವಿಮೆ ಪಡೆದುಕೊಳ್ಳಬಹುದಾಗಿದೆ. ಹೀಗಾಗಿ ಯೋಜನೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೋರಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ವಿಮೆ ಯೋಜನೆಯಿಂದಾಗುವ ಸೌಲಭ್ಯಗಳನ್ನುಪವರ್‌ ಪಾಯಿಂಟ್ ಪ್ರಸೆಂಟೇಶನ್‌ ಮೂಲಕ ವಿವರಿಸಿದರು.

ಸೌಲಭ್ಯ ವಂಚನೆ: ಪ್ರಗತಿಪರ ರೈತ ನೆನುಮನಹಳ್ಳಿ ಚಂದ್ರಶೇಖರ್‌ ಮಾತನಾಡಿ, ವಿಮೆ ಯೋಜನೆಯ ಆರಂಭದಲ್ಲಿ ರೈತರಿಗೆ ಇಲ್ಲಸಲ್ಲದ ಆಸೆಗಳನ್ನು ಹೇಳುತ್ತಾರೆ. ಆನಂತರ ಸರಿಯಾದ ಸೌಲಭ್ಯಗಳನ್ನು ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ತಾರತಮ್ಯಗಳ ಮೂಲಕ ರೈತರನ್ನು ವಂಚಿಸಲಾಗುತ್ತಿದ್ದು, ಯಾವುದೇ ರೀತಿಯಲ್ಲದರೂ ಸರಿಯಾಗಿ ಪರಿಹಾರವನ್ನು ಕಲ್ಪಿಸಬೇಕು ಹಾಗೂ 3500 ರೂ. ಇರುವ ಪ್ರೀಮಿಯಂ ಹಣವನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಜಿಪಂ ಸಿಇಒ ಜಿ.ಜಗದೀಶ್‌, ಎಡಿಸಿ ಎಚ್.ಪುಷ್ಪಲತಾ ಮತ್ತಿತರರ ಅಕಾರಿಗಳು ಉಪಸ್ಥಿತರಿದ್ದರು.

ಕೃಷಿ ಭಾಗ್ಯ ಯೋಜನೆಯಡಿ ಅರ್ಜಿ ಆಹ್ವಾನ:

ಕೃಷಿ ಭಾಗ್ಯ ತೋಟಗಾರಿಕೆ ಯೋಜನೆಯಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾರ್ಯಕ್ರಮಗಳಿಗೆ ಮಂಜೂರಾತಿ ದೊರೆತಿದ್ದು, ಆಸಕ್ತ ರೈತರು ಮೇ 31ರವರೆಗೆ ತೋಟಗಾರಿಕೆ ಇಲಾಖೆ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಕೋಲಾರ ಜಿಲ್ಲೆಗೆ ಕೃಷಿ ಭಾಗ್ಯ ಯೋಜನೆಯಡಿ ಪಾಲಿಮನೆ, ಮಳೆ ನೀರು ಸಂಗ್ರಹಣಾ ಘಟಕ, ಡೀಸಲ್, ಸೋಲಾರ್‌, ಪಂಪ್‌ ಸೆಂಟ್, ಅಧಿಕ ಮೌಲ್ಯದ ಬೆಳೆಗಳಿಗೆ ತೋಟಗಾರಿಕೆ ಇಲಾಖೆ ವತಿಯಿಂದ ಸಹಾಯಧನ ನೀಡಲಾಗುವುದು. ರೈತರು ತಾಲೂಕು ಮಟ್ಟದ ತೋಟಗಾರಿಕೆ ಇಲಾಖೆ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಮೇ 31ರೊಳಗೆ ಮೂಲ ದಾಖಲಾತಿಗಳೊಂದಿಗೆ ಆಯಾ ತಾಲೂಕು ಮಟ್ಟದ ತೋಟಗಾರಿಕೆ ಕಚೇರಿಗೆ ಸಲ್ಲಿಸಲು ಕೋರಿದೆ ಹಾಗೂ ತಾಲೂಕು ಮಟ್ಟದ ಗುರಿಗಿಂತ ಹೆಚ್ಚಿನ ಅರ್ಹ ಅರ್ಜಿಗಳನ್ನು ಸ್ವೀಕೃತ ವಾದಲ್ಲಿ ಲಾಟರಿ ಮೂಲಕ ಗುರಿಗೆ ಅನುಗುಣವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಉಳಿದ ಅರ್ಜಿಗಳನ್ನು ಲಾಟರಿ ಮೂಲಕವೇ ಜೇಷ್ಠ ತೆಯ ಆಧಾರದ ಮೇಲೆ ಪಟ್ಟಿ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪ ನಿರ್ದೇಶಕರು, ಕೋಲಾರ ಇವರ ದೂ.ಸಂ.9448999215 ಇವರನ್ನು ತಾಲೂಕು ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಹಾಗೂ ಸ್ಥಳೀಯ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ, ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next