Advertisement

ಅಕಾಡೆಮಿ ಕ್ಯಾಂಪಸ್‌ ಮೂಲನಕ್ಷೆ ಬದಲು

10:58 AM Feb 10, 2020 | Suhan S |

ಧಾರವಾಡ: ಜಾಗತಿಕ ಮಟ್ಟದ ಉನ್ನತ ಶಿಕ್ಷಣವನ್ನು ಮನಮುಟ್ಟುವಂತೆ ಬೋಧನೆ ಮಾಡುವ ಮತ್ತು ಪ್ರಾಧ್ಯಾಪಕರಿಗೆ ಬೋಧನಾ ತರಬೇತಿ, ಆಡಳಿತ ನಡೆಸುವ ಪ್ರಾಂಶುಪಾಲರಿಗೆ ಆಡಳಿತ ತರಬೇತಿ ಸೇರಿದಂತೆ ಒಟ್ಟಾರೆ ಉನ್ನತ ಶಿಕ್ಷಣವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೇರಿಸಲು ಸ್ಥಾಪನೆಗೊಂಡಿರುವ ಕರ್ನಾಟಕ ಉನ್ನತ ಶಿಕ್ಷಣ ಅಕಾಡೆಮಿ ನೂತನ ಕಟ್ಟಡ ಕಾರ್ಯ ಒಂದು ವರ್ಷ ವಿಳಂಬಗೊಂಡಿದೆ.

Advertisement

ಸತತ ಐದು ವರ್ಷಗಳಿಂದ ನನೆಗುದಿಗೆ ಬಿದ್ದು ಕೊನೆಗೂ ಸ್ವಂತ ಕಟ್ಟಡ ಭಾಗ್ಯ ಪಡೆದುಕೊಂಡಿರುವ ಉನ್ನತ ಶಿಕ್ಷಣ ಅಕಾಡೆಮಿಯ ಸುಂದರ ಕಟ್ಟಡ ಕರ್ನಾಟಕ ವಿಶ್ವವಿದ್ಯಾಲಯ ಆವರಣದ ಹಳಿಯಾಳರಸ್ತೆ ಸಮೀಪ 27 ಎಕರೆ ಜಾಗದಲ್ಲಿ ತಲೆ ಎತ್ತುತ್ತಿದೆ. ಆದರೆ ಮೂಲ ನಕ್ಷೆಯನ್ನು ತಿದ್ದುಪಡಿ ಮಾಡಿದ್ದರಿಂದ ಮತ್ತು ಕಳೆದ ವರ್ಷ ತೀವ್ರ ಮಳೆಗಾಲ ಹಿಡಿದಿದ್ದರಿಂದ ಕ್ಯಾಂಪಸ್‌ ನಿರ್ಮಾಣ ಕಾರ್ಯ ಆಮೆಗತಿಯಲ್ಲಿ ಸಾಗಿದ್ದು ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ಕಾಯಬೇಕಿದೆ.

ಪೂರ್ಣಗೊಂಡ ನಂತರ ಕವಿವಿ ಆವರಣದಲ್ಲಿ ನಿರ್ಮಾಣವಾಗಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರ, ಗಣಿತ ಸಂಶೋಧನಾ ಕೇಂದ್ರ ಮತ್ತು ಮಹನೀಯರ ಪೀಠಗಳಂತೆ ಕಾರ್ಯನಿರ್ವಹಿಸುವ ಪ್ರತ್ಯೇಕ ಮತ್ತು ಸ್ವಾಯತ್ತ ಸಂಸ್ಥೆಗಳ ಪಟ್ಟಿಗೆ ಉನ್ನತ ಶಿಕ್ಷಣ ಅಕಾಡೆಮಿಯೂ ಸೇರ್ಪಡೆಯಾಗಲಿದೆ.

2015ರಲ್ಲಿ ಆರಂಭಗೊಂಡ ಉನ್ನತ ಶಿಕ್ಷಣ ಅಕಾಡೆಮಿ ಈವರೆಗೂ ಸಾವಿರಾರು ಬೋಧಕರಿಗೆ ಮತ್ತು ಪ್ರಾಧ್ಯಾಪಕರಿಗೆ ಬೋಧನಾ ತರಬೇತಿ, ಆಡಳಿತ ಕೌಶಲ್ಯ, ಕಲಿಕಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದಕ್ಕೆ ಪೂರಕವಾದ ಬೌದ್ಧಿಕ ಕೌಶಲ್ಯಾಭಿವೃದ್ಧಿ ನೀಡಲು ಪ್ರಯತ್ನಿಸುತ್ತಿದೆ. ಸದ್ಯಕ್ಕೆ ಕವಿವಿಯ ಸುವರ್ಣ ಮಹೋತ್ಸವ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕಾಡೆಮಿ ನೂತನ ಕಟ್ಟಡ ಬರೊಬ್ಬರಿ 90 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಮೈಸೂರು ಮತ್ತು ಪಾಶ್ಚಿಮಾತ್ಯ ಶಿಕ್ಷಣ ಸಂಸ್ಥೆಗಳ ಮಾದರಿಯ ಸುಂದರ ಕಟ್ಟಡ ಇಲ್ಲಿ ತಲೆ ಎತ್ತಲಿದ್ದು, ಶಿಕ್ಷಣ ಕಾಶಿ ಧಾರವಾಡಕ್ಕೆ ಮತ್ತೂಂದು ಶಿಕ್ಷಣ ಸಂಸ್ಥೆಯ ಮೆರಗಿನ ಗರಿ ಸೇರಿಕೊಂಡಂತಾಗಿದೆ.

ಹಸಿರು ಕ್ಯಾಂಪಸ್‌: ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ದೇಶದಲ್ಲಿಯೇ ಮೊದಲ ಹಸಿರು ಐಐಟಿ ಎಂಬ ಹೆಗ್ಗಳಿಕೆ ಪಡೆದುಕೊಂಡು ನಿರ್ಮಾಣವಾಗುತ್ತಿದೆ. ಅದೇ ಮಾದರಿಯಲ್ಲಿಯೇ ಉನ್ನತ ಶಿಕ್ಷಣ ಅಕಾಡೆಮಿಯ ಕ್ಯಾಂಪಸ್‌ ಕೂಡ ಪ್ರಾಕೃತಿಕವಾಗಿ ಉತ್ತಮ ಸ್ಥಳದಲ್ಲಿದ್ದು, ಹಸಿರು ಕ್ಯಾಂಪಸ್‌ ಮತ್ತು ಮಳೆನೀರು ಸಂಗ್ರಹಣೆಗೆ ಹೇಳಿ ಮಾಡಿಸಿದಂತಿದೆ. ಮೂಲನಕ್ಷೆಯಲ್ಲಿ ಹಸಿರೀಕರಣಕ್ಕೆ ಒತ್ತು ನೀಡಲಾಗಿದೆ.

Advertisement

ಸದ್ಯಕ್ಕೆ ಇಲ್ಲಿ ಉನ್ನತ ಶಿಕ್ಷಣ ಅಕಾಡೆಮಿ ಪ್ರಧಾನ ಕಟ್ಟಡ, ಹೈಟೆಕ್‌ ಬೋಧನಾ ಕೊಠಡಿಗಳು, ಕಾರ್ಯಕ್ರಮ ಸಭಾಂಗಣ, ಕಂಪ್ಯೂಟರ್‌ ಹೈಟೆಕ್‌ ಲ್ಯಾಬೋರೆಟರಿ, ಸಿಬ್ಬಂದಿಗೆ ವಸತಿ ನಿಲಯಗಳು, ಕ್ರೀಡಾ ಸಮುಚ್ಛಯ, ಯೋಗ ಮತ್ತು ಜಿಮ್‌ ಹಾಲ್‌ ಸೇರಿದಂತೆ ಸುಸಜ್ಜಿತವಾದ ಪ್ರತ್ಯೇಕವಾಗಿ ಮತ್ತು ಸ್ವತಂತ್ರವಾಗಿ ಅಕಾಡೆಮಿ ಕಾರ್ಯನಿರ್ವಹಿಸಲು ಅಗತ್ಯವಾದ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ. ಈವರೆಗೂ ಅಕಾಡೆಮಿಯು ಧಾರವಾಡ ಮಾತ್ರವಲ್ಲ, ಕರ್ನಾಟಕದ ಇತರ ಜಿಲ್ಲೆಗಳಲ್ಲಿಯೂ ಕೂಡ ಬೋಧನಾ ಕೌಶಲ್ಯ ಮತ್ತು ಸಂಶೋಧನೆಗೆ ಅಗತ್ಯವಾದ ಮಾಹಿತಿ ಮತ್ತು ತರಬೇತಿಗಳನ್ನು ನಡೆಸಿಕೊಂಡು ಬಂದಿದೆ.

ಒಂದಿಷ್ಟು ವಿಳಂಬ: ಅಕಾಡೆಮಿಯ ಒಂದಿಷ್ಟು ಕಟ್ಟಡಗಳ ನಿರ್ಮಾಣ ಕಾರ್ಯ ಮುಗಿಯುವ ಹಂತದಲ್ಲಿದ್ದರೆ, ಇನ್ನಷ್ಟು ಕಟ್ಟಡಗಳ ನಿರ್ಮಾಣ ಕಾರ್ಯ ಇನ್ನೂ ಒಂದು ವರ್ಷ ವಿಳಂಬವಾಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಮೊದಲ ಹಂತದಲ್ಲಿ ವಿದ್ಯಾರ್ಥಿ ನಿಲಯ ಕಟ್ಟಡ ಪೂರ್ಣಗೊಂಡು ಇದೀಗ ಬಣ್ಣ ಬಳೆಯಲಾಗುತ್ತಿದೆ. ನಿರ್ಮಾಣ ಕಂಪನಿಗೆ ಗುತ್ತಿಗೆ ನೀಡುವ ಸಂದರ್ಭದಲ್ಲಿ 18 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ಇದೀಗ 18 ತಿಂಗಳು ಮುಗಿಯುತ್ತ ಬಂದರೂ ಅಕಾಡೆಮಿ ಕ್ಯಾಂಪಸ್‌ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ.

ಒಂದೂವರೇ ವರ್ಷದಲ್ಲಿ ಅಕಾಡೆಮಿಯ ನಿರ್ಮಾಣ ಕಾರ್ಯ ಮುಗಿಯಬೇಕಿತ್ತು. ಈಗ ಶೇ.50 ರಷ್ಟು ಕೆಲಸ ಮುಗಿದಿವೆ. ಆದರೆ ಆರಂಭದಲ್ಲಿಯೇ ಅಕಾಡೆಮಿಯ ಮೂಲನಕ್ಷೆ ಬದಲಿಸಿ ಹೊಸ ನಕ್ಷೆ ಸಿದ್ದಗೊಳಿಸಬೇಕಾಯಿತು. ಕಳೆದ ವರ್ಷ ತೀವ್ರ ಮಳೆಗಾಲದಿಂದ ನಿರ್ಮಾಣ ಕಾರ್ಯ ವಿಳಂಬವಾಯಿತು. ಹೀಗಾಗಿ ಇನ್ನು ಒಂದು ವರ್ಷದಲ್ಲಿ ಅಕಾಡೆಮಿ ಪರಿಪೂರ್ಣ ಕ್ಯಾಂಪಸ್‌ ಹೊಂದಲಿದೆ. ಡಾ| ಎಸ್‌.ಎಂ. ಶಿವಪ್ರಸಾದ್‌, ನಿರ್ದೇಶಕರು,ಉನ್ನತ ಶಿಕ್ಷಣ ಅಕಾಡೆಮಿ

 

-ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next