Advertisement

ಇನ್‌ಸ್ಟಾಗ್ರಾಂ ಕಲಿಸಿತು ಉಲ್ಲಾಸ್‌ಗೆ ಚಿತ್ರಕಲೆಯ ಪಾಠ

11:27 PM Feb 14, 2020 | Sriram |

ಇನ್‌ಸ್ಟಾಗ್ರಾಂ ನನಗೆ ಚಿತ್ರಗಳನ್ನು ಬಿಡಿಸುವುದನ್ನು ಕಲಿಸಿದ ಗುರು. ಪ್ರಾರಂಭದ ದಿನಗಳಲ್ಲಿ ಸಾಧಾರಣವಾಗಿ ಚಿತ್ರಗಳನ್ನು ಬಿಡಿಸಿ ಅಪ್ಲೋಡ್‌ ಮಾಡುತ್ತಿದ್ದೆ. ಆಗ ಕೆಲವರು ಅದನ್ನು ನೋಡಿ ತಿದ್ದುತ್ತಿದ್ದರು. ಅಲ್ಲಿಂದ ಚಿತ್ರಕಲೆಯ ಸರಿಯಾದ ರೇಖೆಗಳನ್ನು ಹಾಕಬೇಕು ಎಂದು ಆಲೋಚಿಸಿ, ಬರುತ್ತಿದ್ದ ಸಲಹೆಗಳನ್ನು ಸ್ವೀಕರಿಸಿ ಖಾಲಿ ಪುಟಗಳ ಮೇಲೆ ಪ್ರಯೋಗಿಸಲು ಪ್ರಾರಂಭಿಸಿದೆ. ಅದುವೇ ಇಂದು ನನ್ನ ಬೆಳವಣಿಗೆಗೆ ಕಾರಣ ಆಯಿತು ಎನ್ನುತ್ತಾರೆ ಕಲಾಕಾರರ ಜಗತ್ತಿಗೆ ಕಾಲಿಡುತ್ತಿರುವ ಕಾಸರಗೋಡು ಸಮೀಪದ ಪೆರ್ಲದ ಉಲ್ಲಾಸ್‌ ಕೆ.ಯು.

Advertisement

ಇದುವರೆಗೆ ಸುಮಾರು 100ಕ್ಕೂ ಹೆಚ್ಚು ಮುಖ ಚಿತ್ರಗಳನ್ನು ಮಾಡಿದ್ದಾರೆ ಉಲ್ಲಾಸ್‌. ಅದರಲ್ಲಿ ಮುಖ್ಯವಾಗಿ ಪಟ್ಲ ಸತೀಶ್‌ ಶೆಟ್ಟಿ, ತಲೈವ ವಿಜಯ್‌, ಸಾಯಿ ಪಲ್ಲವಿ, ಎ.ಪಿ.ಜೆ. ಅಬ್ದುಲ್‌ ಕಲಾಂ ಹೀಗೆ ಹಲವು. ಅವರು ಬಿಡಿಸಿರುವ ಚಿತ್ರಕ್ಕೆ ಪಟ್ಲ ಸತೀಶ್‌ ಶೆ‌ಟ್ಟಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಇಷ್ಟೇ ಅಲ್ಲದೆ ಬಣ್ಣಗಳನ್ನು ಬಳಸಿ ಸುಂದರ ಚಿತ್ರಗಳನ್ನು ಬರೆಯುತ್ತಾರೆ. ಬರೆದ ಚಿತ್ರಗಳಲ್ಲಿ ಕೆಲವೊಂದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಾಕುತ್ತಾರೆ. ಅವುಗಳಿಗೆ ಹಲವಾರು ಸ್ನೇಹಿತರು ಪ್ರತಿಕ್ರಿಯೆ ಹಾಗೂ ಸಲಹೆಗಳನ್ನು ನೀಡುತ್ತಾರೆ. ಆ ಸಲಹೆಗಳನ್ನು ಹಾಗೂ ಬೇರೆಯವರು ಬರೆದ ಚಿತ್ರಗಳನ್ನು ನೋಡಿ ತಮ್ಮ ತಪ್ಪನ್ನು ತಿದ್ದಿಕೊಂಡು ಕಲಿಕೆಯನ್ನು ಮುಂದುವರಿಸುತ್ತಿದ್ದಾರೆ.

ಕೃಷಿಯಲ್ಲೂ ಆಸಕ್ತಿ
ಇವೆಲ್ಲದರ ಜತೆಗೆ ತಮ್ಮನ್ನು ತಾವು ಕೃಷಿಯ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ. ಆದರಲ್ಲಿಯೂ ನರ್ಸರಿ, ಹೂವಿನ ಬೀಜ ಮೊದಲಾದವುಗಳನ್ನು ಬೆಳೆಸುವುದು ಹಾಗೂ ಸಂಗ್ರಹಿಸುವುದು ಇವರ ನೆಚ್ಚಿನ ಕೆಲಸ. ತಮ್ಮ ವಿದ್ಯಾರ್ಥಿ ಜೀವನದಲ್ಲೇ ಚಿತ್ರಕಲೆ ಹಾಗೂ ಕೃಷಿಯಿಂದ ಸಂಪಾದಿಸಿ ತಮ್ಮ ಕಾಲಮೇಲೆ ನಿಂತಿದ್ದಾರೆ ಉಲ್ಲಾಸ್‌.

ಉಮೇಶ್‌ ಕೆ. ಪೆರ್ಲ ಹಾಗೂ ಹರಿಣಾಕ್ಷಿ ಬಿ. ಅವರ ಪುತ್ರ ಉಲ್ಲಾಸ್‌. ತಂದೆ, ತಾಯಿ ಇಬ್ಬರೂ ಶಾಲಾ ಶಿಕ್ಷಕರು ಹಾಗೂ ಕೃಷಿಯಲ್ಲೂ ಆಸಕ್ತಿಯನ್ನು ಹೊಂದಿದವರು. ಚಿಕ್ಕಂದಿನಿಂದಲೂ ತಂದೆಯ ಕೃಷಿ ಚಟುವಟಿಕೆಗಳನ್ನು ನೋಡುತ್ತಾ ಬೆಳೆದ ಉಲ್ಲಾಸ್‌ ಅವರಿಗೂ ಕೃಷಿಯತ್ತ ಆಸಕ್ತಿ ಹೆಚ್ಚಾಯಿತು. ತನ್ನ ಆಸಕ್ತಿ ಕೃಷಿ ಎಂದು ನಿರ್ಧರಿಸಿದ ಅವರು ಪ್ರಸ್ತುತ ಕಾರಡ್ಕRದ ಜಿ.ವಿ.ಎಚ್‌.ಎಸ್‌.ಎಸ್‌. ಕಾಲೇಜಿನಲ್ಲಿ ಕೃಷಿ (ಐ.ಜಿ.ಎ.) ವಿಷಯದಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾರೆ.

ಉಲ್ಲಾಸ್‌ ಅವರ ಪ್ರಕಾರ ಸಾಮಾಜಿಕ ಜಾಲತಾಣಗಳು ನಾವು ಬಳಸಿದಂತೆ ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಅದನ್ನು ಸಮಚಿತ್ತದಿಂದ ಕಲಿಕೆಯ ಹಾದಿಯಲ್ಲಿ ಬಳಸಿದರೆ ಏನು ಬೇಕಾದರೂ ಕಲಿಯಬಹುದು. ಇಂದು ಹಲವಾರು ಹೊಸ ಪರಿಚಯಗಳು ಹಾಗೂ ಸುಂದರ ಪ್ರತಿಭೆಗಳು ಹೊರ ಜಗತ್ತಿಗೆ ಕಾಣಿಸಿಕೊಳ್ಳುತ್ತಿರುವುದು ಇದೇ ಜಾಲತಾಣಗಳಿಂದ. ಯುವಪ್ರತಿಭೆ ಉಲ್ಲಾಸ್‌ ಅವರ ಕಲೆಯ ಬದುಕು ಮೇರುಮಟ್ಟಕ್ಕೇರಲಿ.

Advertisement

ಗ್ರಾಫಿಕ್‌ ವಿನ್ಯಾಸದಲ್ಲೂ ಆಸಕ್ತಿ
ಚಿತ್ರಕಲೆಗೆ ಮಾತ್ರ ತನ್ನನ್ನು ತಾನು ಸೀಮಿತಗೊಳಿಸಿಕೊಳ್ಳದೆ ಡಿಜಿಟಲ್‌ ಪೈಂಟಿಂಗ್‌, ಟ್ಯುಟೋರಿಯಲ್ಸ್‌, ಗ್ರಾಫಿಕ್‌ ವಿನ್ಯಾಸಗಳಲ್ಲೂ ಆಸಕ್ತಿಯನ್ನು ಇರಿಸಿಕೊಂಡಿದ್ದಾರೆ. ಅದರೊಂದಿಗೆ ಹಲವಾರು ಆಯಾಮಗಳಲ್ಲಿ ನಿಸರ್ಗದ ಆಗು-ಹೋಗುಗಳನ್ನು ಫೋಟೋ ಮೂಲಕ ಸೆರೆ ಹಿಡಿಯುವುದು ಅವರ ಇಷ್ಟದ ಕೆಲಸ. ಬದಿಯಡ್ಕದ ಪಿ.ಕೆ. ಆನಂದ ಅವರ ಬಳಿ ಪರ್ಪಲ್‌ ಬೆಲ್ಟ್ ತನಕ ಕರಾಟೆಯನ್ನು ಕಲಿತಿದ್ದಾರೆ. ಅದರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 5ಕ್ಕಿಂತ ಹೆಚ್ಚು ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಾರೆ. ಎನ್‌ಸಿಸಿಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
-ಮೇಘಾ ಆರ್‌. ಸಾನಾಡಿ
ವಿವೇಕಾನಂದ ಕಾಲೇಜು ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next