Advertisement

ರಾಹುಲ್ ಎಂಬ ಕನಸುಗಾರ..ಇದು ಕ್ಯಾನ್ಸರ್ ಜತೆ ಹೋರಾಡಿ ಗೆದ್ದ “ಯೋಧಾಸ್” ಕಥೆ

10:03 AM Aug 16, 2019 | Team Udayavani |

ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ರಾಹುಲ್ ಯಾದವ್ ಮೂಲತಃ ದೆಹಲಿಯವರು. ಅದೊಂದು ದಿನ ಹೊಟ್ಟೆ ನೋವು, ಕೆಮ್ಮು, ಶೀತ ಒಮ್ಮೆಲೆ ಆರಂಭವಾಗಿತ್ತು. ಔಷಧಿಗಳನ್ನು ತೆಗೆದುಕೊಂಡರು ಕೂಡ ಗುಣವಾಗಿರಲಿಲ್ಲ. ಅದೇ ಸಮಯದಲ್ಲಿ ಬೆಂಗಳೂರಿನ ಸರಹದ್ದಿನಲ್ಲಿ ಡೆಂಗ್ಯೂ ಪ್ರಮಾಣ ಏರಿಕೆಯಾಗಿತ್ತು. ತನಗಾಗುತ್ತಿರುವ ರೋಗ ಲಕ್ಷಣಗಳು ಕೂಡ ಡೆಂಗ್ಯೂಗೆ ಸಂಬಂಧಪಟ್ಟಿರಬಹುದು ಎಂದು ಭಾವಿಸಿದ ರಾಹುಲ್ 2013 ರಲ್ಲಿ ಮಣಿಪಾಲ್ ಆಸ್ಪತ್ರೆಗೆ ಬಂದು ಪರೀಕ್ಷಿಸಿಕೊಂಡರು. ಎಲ್ಲಾ ಮಾದರಿಯ ಪರೀಕ್ಷೆಗಳಲ್ಲೂ ಡೆಂಗ್ಯೂಗೆ ಸಂಬಂಧಪಟ್ಟ ಯಾವುದೇ ಲಕ್ಷಣಗಳೂ ಗೋಚರಿಸಲಿಲ್ಲ. ಅದಾಗ್ಯೂ ಕೂಡ ವೈದ್ಯರಿಗೆ ಕೆಲವು ಅನುಮಾನಗಳು ಬಂದು ಮತ್ತಿತರ ಪರೀಕ್ಷೆಗಳನ್ನು ಕೂಡ ನಡೆಸಿದರು. ಅದರ ಫಲಿತಾಂಶ ಬಂದಾಗ ರಾಹುಲ್ ಅವರ ಪತ್ನಿ, ತಂದೆ, ತಾಯಿ ನಿಂತಲ್ಲೆ ಕುಸಿದಿದ್ದರು.

Advertisement

ರಾಹುಲ್ ಅವರಿಗೆ ಪ್ಲಾಸ್ಮ ಸೆಲ್ ಲ್ಯೂಕೇಮಿಯಾ (ಪಿಸಿಎಲ್) ಎಂಬ ಮಾರಕ ಕ್ಯಾನ್ಸರ್ ಕಾಯಿಲೆ ಇರುವುದು ಪತ್ತೆಯಾಗಿತ್ತು. ಅಕ್ರಮಣಕಾರಿ ಕ್ಯಾನ್ಸರ್‌ನಲ್ಲಿ ಅಸಹಜ ಪ್ಲಾಸ್ಮಾ ಕೋಶಗಳು ಹೆಚ್ಚಿನ ಮಟ್ಟದಲ್ಲಿ ರಕ್ತದಲ್ಲಿ ಹರಡುತ್ತದೆ. ಕೆಲವು ಅರೋಗ್ಯಕರ ಪ್ಲಾಸ್ಮ ಕೋಶಗಳು ಈ ಸೋಂಕಿನ ವಿರುದ್ಧ ಹೋರಾಡುತ್ತವೆ. ಅದರೇ ಪಿಸಿಎಲ್ ರೋಗಿಯಲ್ಲಿ ರೋಗನಿರೋಧಕಗಳಿಗೆ ಬದಲಾಗಿ ದೇಹವು ಸೋಂಕುಗಳ ವಿರುದ್ಧ ಹೋರಾಡಲು ಸಾಧ್ಯವಾಗದ ಪ್ಯಾರಾಪ್ರೊಟಿನ್‌ಗಳನ್ನು ಉತ್ಪಾದಿಸುತ್ತದೆ. ಸಾಮಾನ್ಯವಾಗಿ ಪಿಸಿಎಲ್ ರೋಗಿಗಳಿಗೆ ಕಿಮೋಥೆರಪಿ ಮತ್ತು ಸ್ಟೆಮ್ ಸೆಲ್ ಟ್ರಾನ್ಸ್ ಪ್ಲ್ಯಾಂಟ್(ಕಸಿ) ಚಿಕಿತ್ಸಾ ವಿಧಾನವನ್ನು ಬಳಸಲಾಗುತ್ತದೆ. ಅದರೆ ಬದುಕುಳಿಯುವ ಪ್ರಮಾಣ ಮಾತ್ರ ತೀರಾ ಕಡಿಮೆ. ರಾಹುಲ್‌ಗೆ ೧೫ ಭಾರಿ ಕಿಮೋಥೆರಪಿ ಮತ್ತು ಇನ್ನಿತರ ಶಸ್ತ್ರ ಚಿಕಿತ್ಸೆಗಳು ನಿರಂತರವಾಗಿ ನಡೆಯಿತು. ಸಾಮಾಜಿಕವಾಗಿ ಮುಕ್ತವಾಗಿ ಬೆರೆಯುವ ರಾಹುಲ್ ಆಸ್ಪತೆಯಲ್ಲಿದ್ದ ವೇಳೆ ಹಲವಾರು ಸ್ನೇಹಿತರನ್ನು ಸಂಪಾದಿಸಿದರು.

ಹಲವಾರು ಕ್ಯಾನ್ಸರ್ ಪೀಡಿತ ರೋಗಿಗಳು ಮುಜುಗರದಿಂದಲೋ ಅಥವಾ ಸಹಾನುಭೂತಿಯಿಂದಲೋ ತಮಗಿರುವ ಕ್ಯಾನ್ಸರ್ ರೋಗದ ಕುರಿತು ಮುಕ್ತವಾಗಿ ಮಾತನಾಡುವುದಿಲ್ಲ. ಈ ಬಗ್ಗೆ ಆಲೋಚಿಸಿದ ರಾಹುಲ್ ಕ್ಯಾನ್ಸರ್ ರೋಗಿಗಳಿಗೆ ಮುಕ್ತವಾಗಿ ಮಾತನಾಡಲು ವೇದಿಕೆಯೊಂದನ್ನು ಸ್ಥಾಪಿಸಬೇಕೆಂದು ಪಣತೊಟ್ಟರು. ಕ್ಯಾನ್ಸರ್ ಎಂಬುದು ಒಂದು ಹೋರಾಟ. ಪ್ರತಿ ನಿತ್ಯ ಹೋರಾಡುತ್ತಲೆ ಇರಬೇಕು. ಫಲಿತಾಂಶ ಯಾವುದೇ ಬಂದರೂ ಯುದ್ಧ ಮಾತ್ರ ನಿರಂತರ. ಆ ಕಾರಣಕ್ಕಾಗಿಯೇ ರಾಹುಲ್ ತಮ್ಮ ಕನಸಿಗೆ “ಯೋಧಾಸ್” ಎಂಬ ಹೆಸರಿಟ್ಟರು. ಒಂದೆರಡು ತಿಂಗಳಿನಲ್ಲಿ ಭಾರತದಾದ್ಯಂತ ಸುಮಾರು ೩೦೦ ಕ್ಯಾನ್ಸರ್ ರೋಗಿಗಳು ಈ “ಯೋಧಾಸ್” ಗುಂಪಿನ ಭಾಗವಾಗಿದ್ದರು.

ಕ್ಯಾನ್ಸರ್ ರೋಗಿಗಳಿಗೆ ತಮ್ಮ ಸ್ಥಿತಿಯನ್ನು ಮುಕ್ತವಾಗಿ ಸ್ವೀಕರಿಸಲು ಮತ್ತು ಅದರ ಕುರಿತು ಮಾತನಾಡಲು ಈ ಗುಂಪು ಪ್ರೆರೇಪಿಸಿತು. ಕ್ಯಾನ್ಸರ್‌ನೊಂದಿಗೆ ವಾಸಿಸುತ್ತಿರುವ ಜನರನ್ನು ಒಟ್ಟುಗೂಡಿಸಿ ಅವರ ದೈನಂದಿನ ಅಗ್ನಿಪರೀಕ್ಷೆಗಳನ್ನು ಹಂಚಿಕೊಳ್ಳಲು ಇಲ್ಲಿ ಅವಕಾಶವಿತ್ತು. ಕ್ಯಾನ್ಸರ್ ಜೊತೆಗೆ ಹೋರಾಡಿ ಗೆದ್ದ ಜನರನ್ನು ಮಾತುಕಥೆಗೆ ಆಹ್ವಾನಿಸಲಾಗುತ್ತದೆ. ಸಾರ್ವಜನಿಕವಾಗಿ ಹಣ ಸಂಗ್ರಹಿಸುವ ಮೂಲಕ ಕ್ಯಾನ್ಸರ್ ರೋಗಿಗಳಿಗೆ ನೆರವಾಗುತ್ತಾರೆ. ರಾಹುಲ್ ಅವರ ಚಿಕಿತ್ಸೆಗಾಗಿ ಕೂಡ ಇದೇ ರೀತಿಯಲ್ಲಿ ಹಣವನ್ನು ಸಂಗ್ರಹಿಸಲಾಗಿತ್ತು. ಈ ರೀತಿ ಸಹಾಯ ಹಸ್ತ ಚಾಚುವ ಮೂಲಕ ಕ್ಯಾನ್ಸರ್ ರೋಗಿಗಳ ಕುಟುಂಬಗಳ ಆರ್ಥಿಕ ಹೊರೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ, ವೈದ್ಯರು ಮತ್ತು ರೋಗಿಗಳ ನಡುವಿನ ಸಂಪರ್ಕ ಸೇತುವಾಗಿ ಈ ಗುಂಪು ಕೆಲಸ ಮಾಡಲು ಆರಂಭಿಸಿತು.

Advertisement

ಯೋಧಾಸ್ ಗುಂಪಿನ ಈ ಸಾಮಾಜಿಕ ಕಾರ್ಯಗಳು ದೇಶದಾದ್ಯಂತ ಗುರುತಿಸಲ್ಪಟ್ಟು ರಾಹುಲ್ ಅವರಿಗೆ ಪ್ರತಿನಿತ್ಯ ಹಲವಾರು ಕರೆಗಳು ಬರಲು ಅರಂಭವಾಯಿತು. ರಾಹುಲ್ ಅವರ ಕನಸು ನನಸಾಗಿ ಭಾರತದಲ್ಲಿ ತಮ್ಮ ಗುಂಪಿನ ಬೇರನ್ನು ಇನ್ನಷ್ಟು ಗಟ್ಟಿ ಗಳಿಸಿಕೊಂಡರು. ರಾಹುಲ್ ಐಸಿಯುನಲ್ಲಿದ್ದಾಗಲೂ ಕೂಡ ಯೋಧಾಸ್ ಸಂಘಟನೆಯ ಮುಂಬರುವ ಕಾರ್ಯಕ್ರಮಗಳ ಕುರಿತು ವಿಚಾರಿಸುತ್ತಿದ್ದರು. ಜನರಿಗೆ ಶಿಕ್ಷಣ ಕೊಡಬೇಕೆಂಬ ಅವರ ಅದಮ್ಯ ಉತ್ಸಾಹ, ಸೂಜಿ, ಮೆಡಿಸಿನ್‌ಗಳಿಗಿಂತಲೂ ದೊಡ್ಡದಾಗಿತ್ತು. ಒಂದರ್ಥದಲ್ಲಿ ಕ್ಯಾನ್ಸರ್‌ನಿಂದ ಹೋರಾಡುತ್ತಿರುವ ಜನರಿಗೆ ಮತ್ತು ಅವರ ಕುಟುಂಬಗಳಿಗೆ ಯೋಧಾಸ್ ಸಂಘಟನೆ ಸ್ಪೂರ್ತಿಯ ಚಿಲುಮೆಯಾಗಿತ್ತು. ಹೆಚ್ಚು ಜನರೊಂದಿಗೆ ಬೆರೆಯಲು ವಾಟ್ಸಾಪ್ ಮತ್ತು ಫೇಸ್‌ಬುಕ್ ಗ್ರೂಪ್‌ಗಳನ್ನು ಕೂಡ ಆರಂಭಿಸಿದರು.

ಒಂದೆಡೆ ಆರೋಗ್ಯವೂ ಹದಗೆಡುತ್ತಿದ್ದರೂ ಶಾಲೆಗಳು, ಕ್ಲಬ್‌ಗಳು ಮತ್ತು ವಿವಿಧ ಸಂಘಟನೆಗಳಿಂದ ಪಿಸಿಎಲ್ ಕುರಿತು ಮಾತನಾಡಲು ಆಹ್ವಾನವನ್ನು ಸ್ವೀಕರಿಸಿದರು. ಜೊತೆಗೆ ಯೋಧಾಸ್ ಗುಂಪಿನ ಕೆಲಸವನ್ನು ಕೂಡ ಮುಂದುವರಿಸಿದರು. ತಮ್ಮ ಗುಂಪಿನ ಕಾರ್ಯಗಳನ್ನು ವಿಶ್ವದಾದ್ಯಂತ ಪಸರಿಸಬೇಕೆಂದು ಪಣತೊಟ್ಟ ರಾಹುಲ್ ಇದಕ್ಕಾಗಿ ಯುವ ಉದ್ಯಮಶೀಲ ಸ್ಪರ್ಧೆ-2014 ಕ್ಕೆ ಅರ್ಜಿಯನ್ನು ಸಲ್ಲಿಸಿದರು. ನಂತರದಲ್ಲಿ ಯೋಧಾಸ್ ಪೀಪಲ್ಸ್ ಚಾಯ್ಸ್ ಪ್ರಶಸ್ತಿ ಮತ್ತು ಅತ್ಯುತ್ತಮ ಯೋಜನೆ ವಿಭಾಗದಡಿಯಲ್ಲಿ ಬಹುಮಾನವನ್ನು ಕೂಡ ಪಡೆದರು.

ರಾಹುಲ್ ತಮಗಿರುವ ಮಾರಣಾಂತಿಕ ಕಾಯಿಲೆಯ ಪರಿಣಾಮ 2017ರ ಜೂನ್ 13 ರಂದು ಇಹಲೋಕವನ್ನು ತ್ಯಜಿಸಿದರು. ರಾಹುಲ್ ನಿಧನರಾದಗ ಎಲ್ಲೆಡೆಯಿಂದ ತೀವ್ರ ಸಂತಾಪ ಹರಿದುಬಂತು. ರಾಶಿ ಯಾದವ್ ತನ್ನ ಗಂಡನ ಅಗಲಿಕೆ ನಂತರ ಮಾನಸಿಕವಾಗಿ ಜರ್ಜರಿತವಾಗಿದ್ದರೂ ಗಂಡನ ಕನಸನ್ನು ಮುಂದುವರಿಸಲು ಪಣತೊಟ್ಟ ಪರಿಣಾಮ ಇಂದು ಸುಮಾರು 15,000 ಕ್ಕಿಂತಲೂ ಹೆಚ್ಚು ಸ್ವಯಂ ಸೇವಕರೂ ಈ ಗುಂಪಿನ ಭಾಗವಾಗಿದ್ದಾರೆ. ಮಕ್ಕಳಿಗೆ ಮತ್ತು ಕಾರ್ಪೋರೇಟರ್ ಸಂಸ್ಥೆಗಳಿಗೆ ಶಿಕ್ಷಣದ ಕುರಿತು ಜಾಗೃತಿ ಮೂಡಿಸುವುದು. ಅನಾರೋಗ್ಯ ಪೀಡಿತರಿಗೆ ಸಹಾಯಹಸ್ತ ಅವರ ಆರೈಕೆ, ಹಣದ ಸಹಾಯ ಮುಂತಾದ ಹಲವು ಸಹಕಾರಿ ಕಾರ್ಯಗಳು ನಿರಂತರ ನಡೆಯುತ್ತಿದೆ. ರಾಹುಲ್ ಪ್ರಾರಂಭಿಸಿದ ಈ ಗುಂಪು ಇಂದು ಹಲವಾರು ಜೀವಗಳಿಗೆ ಬದುಕಿನ ಮೌಲ್ಯವನ್ನು ತಿಳಿಸಿಕೊಡುತ್ತಿದೆ.
ಕ್ಯಾನ್ಸರ್ ಎಂಬುದು ಒಂದು ರೋಗ. ಆದರೆ ಅದು ರೋಗಿಗೆ ನೇರವಾಗಿ ಪರಿಣಾಮ ಬೀರುವುದಿಲ್ಲ. ಬದಲಿಗೆ ಕುಟುಂಬದ ಸದಸ್ಯರಿಗೆ ಮತ್ತು ಸ್ನೇಹಿತರಿಗೆ ಮಾನಸಿಕ ಆಘಾತವನ್ನುಂಟು ಮಾಡುತ್ತದೆ. ಈ ಭಾವನಾತ್ಮಕ ಯಾತನೆಯಿಂದ ಹೆಚ್ಚು ಜರ್ಜರಿತರಾಗುವವರೆ ಅವರು. ಈ ಸಮಯದಲ್ಲಿ ಅವರಿಗೆ ಮಾನಸಿಕ ಸ್ಥೈರ್ಯ ತುಂಬುವಂತಹ ಕೆಲಸ ಮಾಡಬೇಕಾಗುತ್ತದೆ. ಈ ಕೆಲಸವನ್ನು ಇಂದು ಅತ್ಯುತ್ಸಾಹದಿಂದ ಮಾಡುತ್ತಿರುವವರು ರಾಹುಲ್ ಪತ್ನಿ ರಾಶಿ ಯಾದವ್.

 

– ಮಿಥುನ್ ಮೊಗೇರ

Advertisement

Udayavani is now on Telegram. Click here to join our channel and stay updated with the latest news.

Next