Advertisement

ನಗರದಲ್ಲಿ ಪ್ರಸ್ತುತ ನಿದ್ರಾಹೀನತೆ ಸಮಸ್ಯೆ ಹೆಚ್ಚಾಗಿದೆ. ಮಾನಸಿಕ ನೆಮ್ಮದಿ ಹಾಗೂ ದೈಹಿಕ ಯೋಗಕ್ಷೇಮಕ್ಕೆ ನಿದ್ದೆ ಅತ್ಯಗತ್ಯ ಎಂದು ಸಂಶೋಧನೆಗಳು ಸಾಬೀತು ಮಾಡಿವೆ. ನಿದ್ರಾಹೀನತೆ ಬುದ್ಧಿ ಮತ್ತು ಭಾವನಾತ್ಮಕ ಕಾರ್ಯಗಳ ಮೇಲೆಪರಿಣಾಮ ಬೀರುವುದರ ಜತೆಗೆ, ಮಾನಸಿಕ ಖಿನ್ನತೆ, ಆತಂಕ ಮತ್ತು ಇತರ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಮಾನಸಿಕ ರೋಗಗಳಿಗೆ ಕಾರಣವಾಗಬಹುದು.

Advertisement

ಕೊರೊನಾ ಸೋಂಕು  ತಡೆಗಟ್ಟಲು ಬೆಂಗಳೂರು ನಗರದ ಉದ್ಯೋಗಿಗಳಿಗೆ ವರ್ಕ್‌ ಫ್ರಂ ಹೋಮ್‌ ಜಾರಿಗೊಳಿಸಿ 2 ವರ್ಷ ಸಮೀಪಿಸುತ್ತಿದೆ. ಸೋಂಕು ನಿಯಂತ್ರಣದ ಹಂತದಲ್ಲಿದ್ದರೂ, ಸಂಸ್ಥೆಗಳು ವರ್ಕ್‌ ಫ್ರಂ ಹೋಮ್‌ ಮುಂದುವರಿಸಿವೆ. ನಗರದಲ್ಲಿ ದೀರ್ಘ‌ಕಾಲದ ವರ್ಕ್‌ ಫ್ರಾಮ್‌ ಹೋಮ್‌ನಿಂದಾಗಿ ನಿದ್ರಾಹೀನತೆ, ಖಿನ್ನತೆ ಮತ್ತಿತರ ಅಡ್ಡ ಪರಿಣಾಮ ಐಟಿ-ಬಿಟಿ ನೌಕರರನ್ನು ಬಿಟ್ಟು ಬಿಡದೆ ಕಾಡುತ್ತಿದೆ.

ಕಳೆದ ಕೆಲವು ತಿಂಗಳಿನಿಂದ ನಿದ್ರಾಹೀನತೆಗೆ ಸಂಬಂಧಿಸಿದಂತೆ ಆಸ್ಪತ್ರೆಗೆ ಬರುವ ಶೇ.50ರಷ್ಟು ಪ್ರಕರಣಗಳು ವರ್ಕ್‌ ಫ್ರಂ ಹೋಮ್‌ ನಲ್ಲಿರುವ ಉದ್ಯೋಗಿಗಳಾಗಿದ್ದಾರೆ. ಮನುಷ್ಯನಿಗೆ ಬದುಕಲು ಆಹಾರ, ನೀರು ಮತ್ತು ಗಾಳಿ ಅಗತ್ಯವಿರುವಂತೆ ನಿದ್ರೆ ಬೇಕು. ದಿನವಿಡೀ ರಿಫ್ರೆಶ್‌ ಆಗಿ ಕಾರ್ಯನಿರ್ವಹಿಸಲು 8 ಗಂಟೆಗಳ ಉತ್ತಮ ನಿದ್ದೆ ಅನಿವಾರ್ಯ.

ಕೆಲವರಿಗೆ ಸ್ವಲ್ಪ ಹೆಚ್ಚು ಹಾಗೂ ಕಡಿಮೆ ಬೇಕಾಗಬಹುದು. ನಿದ್ದೆದ ಎದ್ದಾಗ ರಿಫ್ರೆಶ್‌ ಮಾತ್ರವಲ್ಲದೇ, ರೀಚಾರ್ಚ್‌ ಕೂಡ ಆಗಿರುತ್ತೇವೆ. ರಾತ್ರಿ ನಿದ್ದೆ ಗೆಡುವುದು, ನಿಮ್ಮ ಮಾನಸಿಕ ಮತ್ತು ದೈಹಿಕವಾಗಿ ಹೆಚ್ಚು ಕೆಟ್ಟ ಪರಿಣಾಮಗಳಾಗುತ್ತದೆ.

ನಗರದಲ್ಲಿ ಪ್ರಸ್ತುತ ನಿದ್ರಾಹೀನತೆ ಸಮಸ್ಯೆ ಹೆಚ್ಚಾಗಿದೆ. ಮಾನಸಿಕ ನೆಮ್ಮದಿ ಹಾಗೂ ದೈಹಿಕ ಯೋಗಕ್ಷೇಮಕ್ಕೆ ನಿದ್ದೆ ಅತ್ಯಗತ್ಯ ಎಂದು ಸಂಶೋಧನೆಗಳು ಸಾಬೀತು ಮಾಡಿವೆ. ನಿದ್ರಾಹೀನತೆ ಬುದ್ಧಿ ಮತ್ತು ಭಾವನಾತ್ಮಕ ಕಾರ್ಯಗಳ ಮೇಲೆ ಪರಿಣಾಮ ಬೀರುವುದರ ಜತೆಗೆ, ಮಾನಸಿಕ ಖಿನ್ನತೆ, ಆತಂಕ ಮತ್ತು ಇತರ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಮಾನಸಿಕ ರೋಗಗಳಿಗೆ ಕಾರಣವಾಗಬಹುದು. ಮನೆಯಿಂದ ಕೆಲಸ ಮಾಡುತ್ತಿರುವವರು ಮತ್ತು ಅತಿಯಾದ ಸ್ಕ್ರೀನಿಂಗ್‌ ಬಳಕೆದಾರರಲ್ಲಿ ನಿದ್ರಾಹೀನತೆ ವರದಿಯಾಗುತ್ತಿದೆ. ಈ ವರ್ಗವು ಸೂರ್ಯ ಬೆಳಕಿನಿಂದ ದೂರ ಉಳಿದ್ದು, ಎಲೆಕ್ಟ್ರಾನಿಕ್‌ ಸಾಧನಗಳಿಂದ ಹೊರಸೂಸುವ ಹೆಚ್ಚು ನೀಲಿ ಬೆಳಕು ಸ್ವೀಕರಿಸುತ್ತಿದ್ದಾರೆ. ಇದು ದೇಹದ ಜೈವಿಕ ಕ್ರಿಯೆ ಹಾಗೂ ನಿದ್ರೆಯ ಗುಣಮಟ್ಟವನ್ನು ಪರಿಣಾಮ ಬೀರುತ್ತದೆ. ಜತೆಗೆ ಆಲಸ್ಯ ಜೀವನ ಶೈಲಿ, ಚಟುವಟಿಕೆಯ ಕೊರತೆ, ದೀರ್ಘಾವಧಿಯ ಕೆಲಸದ ನಿದ್ರೆಯ ಅಸ್ವಸ್ಥತೆಗಳು ಹೆಚ್ಚಾಗಿವೆ ಎಂದು ಮಣಿಪಾಲ ಆಸ್ಪತ್ರೆ ಮನೋರೋಗ ತಜ್ಞ ಡಾ|ಸತೀಶ್‌ ಕುಮಾರ್‌ ತಿಳಿಸಿದ್ದಾರೆ.

Advertisement

ರಾಜಧಾನಿ ಬೆಂಗಳೂರಿನಲ್ಲಿ ವರ್ಕ್‌ ಫ್ರಂ ಹೋಂನಿಂದಾಗಿ ನಿದ್ರಾಹೀನತೆ ಸೇರಿ ಆರೋಗ್ಯ ಸಮಸ್ಯೆ ಎದುರಿಸಿದವರ ಮಾತುಗಳಲ್ಲೇ ಕೇಳುವುದಾದರೆ, ಪ್ರತಿಷ್ಠಿತ ಕಂಪನಿಯಲ್ಲಿ ಕಳೆದ 5 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ವಾರದಲ್ಲಿ 5ದಿನಗಳ ಎಂಟೂವರೆ ಗಂಟೆ ಕೆಲಸ ಮಾಡಿ, ಎರಡು ದಿನ ತುಂಬಾ ಸಂತೋಷದಿಂದ ಊಟ, ನಿದ್ದೆಯಲ್ಲಿ ಕಾಲ ಕಳೆಯುತ್ತಿದೆ. ವರ್ಕ್‌ ಫ್ರಂ ಹೋಮ್‌ ಬಳಿಕ ಜೀವನ ಶೈಲಿ ಬದಲಾಗಿದೆ. ಕಳೆದ ಒಂದು ವರ್ಷದಿಂದ ಕೆಲಸ ಮುಗಿಸಿ ಮಲಗಿದ್ದರೂ ನಿದ್ದೆ ಬರುತ್ತಿಲ್ಲ. ಇದರಿಂದಾಗಿ ರಾತ್ರಿ ಪೂರ್ತಿ ಫಿಲ್ಮಂ ನೋಡುತ್ತೇನೆ. ಮುಂಜಾನೆ ಹೊತ್ತಿಗೆ ನಿದ್ದೆ ಆವರಿಸುತ್ತದೆ. 8 ತಿಂಗಳ ಹಿಂದೆ ಮನಸ್ಸು ನಿಯಂತ್ರಿಸಲು ಸಾಧ್ಯವಾಗದೇ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದೆ. ಅದೃಷ್ಟದಿಂದ ಬದುಕಿದ್ದೇನೆ. ನಿರಂತವಾಗಿ ವೈದ್ಯರ ಸಲಹೆ ಮೇರೆಗೆ ನಿಯಮಿತ ದಿನಚರಿಯನ್ನು ರೂಢಿಸಿಕೊಂಡಿದ್ದೇನೆ ಎನ್ನುತ್ತಾರೆ ಐಟಿ-ಬಿಟಿ ಸಂಸ್ಥೆಯ ಉದ್ಯೋಗಿ ವಿವೇಕ.

ಡ್ರಗ್ಸ್‌ ಸೇವನೆ: ಅತಿಯಾದರೆ ಅಮೃತವೂ ವಿಷವಾಗುತ್ತದೆ. ಅಂತೆಯೇ ವರ್ಕ್‌ ಫ್ರಂ ಹೋಮ್‌ ನಿಂದ ನೆಮ್ಮದಿ ಹಾಳಾಗಿದೆ. ಕೆಲಸದ ಅವಧಿಯೂ ಹೆಚ್ಚಾಗಿದೆ. ಕಂಪ್ಯೂಟರನ್ನು ನಿರಂತರವಾಗಿ ನೋಡುತ್ತಿರುವುದರಿಂದ ಕಣ್ಣುಗಳು ನೋಯುತ್ತಿವೆ. ಹಿಂದಿನ ಶಿಸ್ತಿನ ದಿನಚರಿ ಬದಲಾಗಿದೆ. ಮುಂಜಾನೆ 3 ಗಂಟೆಗೆ ಮಲಗಿ ಬೆಳಗ್ಗೆ 11

ಗಂಟೆಗೆ ಎದ್ದೇಳುವ ಪರಿಪಾಠ ಪ್ರಾರಂಭವಾಗಿದೆ. ಒತ್ತಾಯ ಪೂರ್ವಕವಾಗಿ ರಾತ್ರಿ 10ಕ್ಕೆ ಮಲಗಲು ಪ್ರಯತ್ನಿಸಿದ್ದರೂ ನಿದ್ದೆ ಬರುತ್ತಿರಲಿಲ್ಲ. ಇದರಿಂದಾಗಿ ಡ್ರಗ್ಸ್‌ ಸೇವನೆಗೆ ಒಳಗಾದೆ. ಇದು ನನ್ನ ಕೆಲಸ ಹಾಗೂ ಆರೋಗ್ಯದ ಮೇಲೆ ಪರಿಣಾಮವನ್ನು ಬೀರಿತ್ತು.ಇದು ಆಸ್ಪತ್ರೆಯನ್ನು ಸೇರುವಂತೆ ಮಾಡಿರುವುದರ ಜತೆಗೆಉದ್ಯೋಗದ ಮೇಲೆ ಕರಿ ನೆರಳು ಹರಡಿತ್ತು ಎನ್ನುತ್ತಾರೆ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಐಟಿ ಉದ್ಯೋಗಿ ವಿಜೇತಾ ಅವರು.

ವೃತ್ತಿ ಬದುಕಿಗೆ ಹಿನ್ನಡೆ :

ಹಿಂದೆಲ್ಲ ಒಂದು ನಿಗದಿತ ಸಮಯದಲ್ಲಿ ಎದ್ದು ಕೆಲಸಕ್ಕೆ ಹೋಗಬೇಕು ಎನ್ನುವ ಗುರಿ ಇತ್ತು. ಆದರೆ, ವರ್ಕ್‌ ಫ್ರಂ ಹೋಮ್‌ ನಿಂದ ಜೀವನ ಶೈಲಿ ಬದಲಾಗಿದೆ. ನಿದ್ದೆಯ ದಿನಚರಿ ಬದಲಾಗಿದೆ. ಆಲಸ್ಯ ಹೆಚ್ಚಾಗಿದೆ. ಮೊದಲಿನಂತೆ ಕೆಲಸ ಮಾಡುವ ಹುಮ್ಮಸ್ಸು ಇಲ್ಲ. ಕೆಲಸದ ಅವಧಿಯಲ್ಲಿ ನಿದ್ದೆ ಬರುತ್ತದೆ. ಉತ್ತಮ ಕೆಲಸ ನಿರ್ವಹಿಸಿ ಬೆಸ್ಟ್‌ ಎಂಪ್ಲಾಯಿ ಎನ್ನುವ ಆವಾರ್ಡ್‌ ಪಡೆದುಕೊಂಡ ನನಗೆ ಅಶಿಸ್ತಿನ ನಿದ್ರಾ ಕ್ರಮದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ. ಕಳೆದ 6 ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ ಎನ್ನುತ್ತಾರೆ ವರ್ಕ್‌ ಫ್ರಂ ಹೋಮ್‌ ಉದ್ಯೋಗಿ ನಿರ್ಮಲಾ.

ಕೋವಿಡ್‌ ವೇಳೆ ಹೊಸದಾಗಿ ಎಂಜಿನಿಯರ್‌ ಉದ್ಯೋಗಕ್ಕೆ ಸೇರ್ಪಡೆಯಾದೆ. ಪ್ರಾರಂಭಿಕ ಹಂತದಲ್ಲಿ ಎಲ್ಲವೂ ಚೆನ್ನಾಗಿತ್ತು. ಅನಂತರ ದಿನದಲ್ಲಿ ಕೆಲಸದಲ್ಲಿ ಉತ್ಸಾಹ ಇರಲಿಲ್ಲ. ಮನೆಯವರ ಜತೆಗೆ ಜಗಳ, ಕೋಪ ಹಾಗೂ ಮೂಡಿಯಾಗಿ ಬದಲಾದೆ. ನಿದ್ದೆ ಬಾರದ ಹಿನ್ನೆಲೆಯಲ್ಲಿ ಮುಂಜಾನೆ 3ಗಂಟೆಗೆ ಮಲಗಿಬೆಳಗ್ಗೆ 11ಗಂಟೆಗೆ ಎದ್ದೇಳುತ್ತಿದೆ. ಈ ವೇಳೆ ಕೆಲಸ ಮಾಡಲು ಮನಸ್ಸು ಆಗುತ್ತಿರಲಿಲ್ಲ. ಸಮಸ್ಯೆ ಅರಿವು ಮೂಡುತ್ತಿದ್ದಂತೆ ವೈದ್ಯರನ್ನು ಸಂಪರ್ಕಿಸಿದ್ದೇನೆ. ಅವರುಸೂಚಿಸಿದಂತೆ ದಿನಚರಿ ಬದಲಾಯಿಸಿಕೊಂಡೆ. ಆಹಾರಪದ್ಧತಿ ಬದಲಾಗಿರುವುದರಿಂದ ರಾತ್ರಿ 10ಕ್ಕೆ ಮಲಗಿದ್ದರೆಬೆಳಗ್ಗೆ 6ಗಂಟೆಗೆ ಎಚ್ಚರವಾಗುತ್ತದೆ ಎಂದು ಎಂಜಿನಿಯರ್‌ ಚೆùತ್ರಾ ತಿಳಿಸಿದರು.

ಹೆಂಡತಿಯಿಂದ ವಿಚ್ಛೇದನಕ್ಕೆ ಅರ್ಜಿ :

ಮನೆಯಿಂದ ಕೆಲಸ ಮಾಡುವ ವ್ಯವಸ್ಥೆ ಪ್ರಾರಂಭಗೊಂಡು ಎರಡೂವರೆ ವರ್ಷ ಸಮೀಪಿಸಿದೆ. ಊಟ, ಕರುಕಲು ತಿಂಡಿ, ಒತ್ತಡ ಹಾಗೂ ಅಲಸ್ಯ ಜೀವನ ಶೈಲಿಯಿಂದ ಅಧಿಕ ರಕ್ತದೊತ್ತಡ ಹಾಗೂ ತೂಕ ಏರಿಕೆಯಾಗಿದೆ. ಕೇವಲ 9 ತಿಂಗಳಿನಲ್ಲಿ ನನ್ನ ತೂಕ 55ರಿಂದ 69 ಕೆ.ಜಿ. ದಾಟಿತ್ತು. ಈ ವೇಳೆ ಸ್ಲಿಪ್‌ ಆಪ್ನಿಯ ಎನ್ನುವುದು ನಿದ್ರೆಗೆ ಸಂಬಂಧಿಸಿದ ತೊಂದರೆ ಕೂಡ ಕಾಡ ತೊಡಗಿತ್ತು. ಪ್ರಾರಂಭದಲ್ಲಿ ಇದರ ಅರಿವು ನನಗಿರಲಿಲ್ಲ. ಹೆಂಡತಿ ಎಚ್ಚರಿಸಿದರೂ ಅದನ್ನು ವೈದ್ಯರಿಗೆ ತೋರಿಸುವ ಕೆಲಸಕ್ಕೆ ಮುಂದಾಗಿರಲಿಲ್ಲ. ಜತೆಗೆ ಕಿರಿಕಿರಿಯ ಭಾವ ಹೆಚ್ಚಾಗಿತ್ತು. ಹೆಂಡತಿ ಮೇಲೂರೇಗಾಡಲು ಪ್ರಾರಂಭಿಸಿದೆ. ಇದರಿಂದ ಬೇಸತ್ತ ಹೆಂಡತಿ ವಿಚ್ಛೇದನಕ್ಕೆ ಮೊರೆ ಹೋದರು. ಈ ವೇಳೆಯೇ ನನಗೆ ನಿದ್ರಾಹೀನತೆಯಿಂದಾಗುತ್ತಿರುವ ಸಮಸ್ಯೆಯ ಅರಿವು ಮೂಡಿತ್ತು ಎನ್ನುತ್ತಾರೆ ವರ್ಕ್‌ ಫ್ರಂ ಹೋಮ್‌ ಉದ್ಯೋಗಿ ಮಹೇಶ್ವರ.

ಸಲಹೆಗಳೇನು? :

  • ನಿಯಮಿತಿ ನಿದ್ರೆ-ಎಚ್ಚರ ದಿನಚರಿ ನಿರ್ವಹಿಸಿ
  • ಕೊಠಡಿಯನ್ನು ಕತ್ತಲೆಯಾಗಿಸಲು ಬ್ಲೈಂಡ್ಸ್‌, ಬ್ಲಾಕ್‌ಔಟ್‌ ಕರ್ಟನ್‌ ಬಳಸಿ
  • ಮಲಗುವ ಕೋಣೆ ತಂಪಾಗಿಸಿ
  • ಕೆಫೀನ್‌, ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ.
  • ಕೆಲಸ ಮಾಡುವ ಸ್ಥಳದಿಂದ ಮಲಗುವ ಸ್ಥಳ ಪ್ರತ್ಯೇಕಿಸಿ
  • ದಿನ ಪ್ರಾರಂಭವಾಗುವ ವೇಳೆ ವ್ಯಾಯಾಮ ಮಾಡಿ
  • ಮಲಗುವ ಮೊದಲು ದೇಹವನ್ನು ಆರಾಮವಾಗಿರಿಸಿಕೊಳ್ಳಿ.
  • ಮಲಗುವ ಸಮಯಕ್ಕೆ ಕನಿಷ್ಠ 1 ಗಂಟೆಮೊದಲು ಸ್ಮಾರ್ಟ್‌ ಫೋನ್‌ ಅಥವಾ ಟೀವಿ ಬಳಕೆ ತಪ್ಪಿಸಿ.

ನಿಗದಿತ ಅವಧಿಯ ನಿದ್ದೆ ಪ್ರತಿಯೊಬ್ಬರಿಗೂ ಅಗತ್ಯ. ಇಲ್ಲವಾದರೆ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಹಾಗೂ ನಿಯಮಿತ ವ್ಯಾಯಾಮ ಹಾಗೂ ಸ್ಕ್ರೀನಿಂಗ್‌ ಅವಧಿಯನ್ನು ಕಡಿತಗೊಳಿಸುವುದರಿಂದ ಉತ್ತಮ ನಿದ್ದೆ ಮಾಡಲು ಸಾಧ್ಯ. ಸಕ್ಕರೆ ಆಹಾರ ಮತ್ತು ಕೆಫೀನ್‌ ಸೇವನೆಯನ್ನು ಮಿತಿಗೊಳಿಸಿ. ಡಾ. ಗಿರೀಶ್ಚಂದ್ರ, ಮನೋವೈದ್ಯಶಾಸ್ತ್ರ, ಆಸ್ಟರ್‌ ಸಿಎಂಐ ಆಸ್ಪತ್ರೆ

ವರ್ಕ್‌ ಫ್ರಂ ಹೋಮ್‌ ನಿಂದಾಗಿ ಉದ್ಯೋಗಿಗಳಲ್ಲಿ ನಿದ್ರಾ ಹೀನತೆ, ವ್ಯಾಯಾಮವಿಲ್ಲ. ಜೀವನ ಶೈಲಿಯಿಂದ ಸ್ಲೀಪ್‌ ಅಪ್ನಿಯಾ, ಡಿಲೈಡ್‌  ಸ್ಲೀಪ್‌ ಫೇಸ್‌ ಡಿಸ್‌ ಆರ್ಡರ್‌ನಿಂದ ಬಳಲುತ್ತಿದ್ದಾರೆ. ಇದು ಅವರ ಜೀವನ ಕ್ರಮದ ಮೇಲೆ ದುಷ್ಪರಿಣಾಮಬೀರುತ್ತದೆ. ಪ್ರಸ್ತುತ ಆಸ್ಪತ್ರೆಗೆ ಬರುವ ನಿದ್ರಾಹೀನತೆ ಪ್ರಕರಣದಲ್ಲಿ ಶೇ.50ರಷ್ಟು ಪ್ರಕರಣಗಳು  ವರ್ಕ್‌ ಫ್ರಂ ಹೋಮ್‌ ಮಾಡುವವರಲ್ಲಿ ವರದಿಯಾಗುತ್ತಿದೆ. ಡಾ. ಪವನ್‌ ಯಾದವ್‌, ಇಂಟರ್ವೆನÒನಲ್‌ ಪಲ್ಮನಾಲಜಿ ಮತ್ತು ಲಂಗ್‌ ಟ್ರಾನ್ಸ್‌ ಪ್ಲ್ರಾಂಟೇಶನ್‌, ಆಸ್ಟರ್‌ ಆರ್‌ವಿ ಆಸ್ಪತ್ರೆ

ಪ್ರಸ್ತುತ ನಮ್ಮ ಕಂಪನಿಯಲ್ಲಿ ವರ್ಕ್‌ ಫ್ರಂ ಹೋಮ್‌ ಮುಂದುವರಿಸಲಾಗುತ್ತಿದೆ. ಸಿಬ್ಬಂದಿ ನಿದ್ರಾಹೀನತೆಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಅಗತ್ಯವಿರುವವರಿಗೆ ಆನಾರೋಗ್ಯದ ಚಿಕಿತ್ಸೆಗೆ ಸಂಬಂಧಿಸಿದಂತೆ ರಜೆ ನೀಡಲಾಗುತ್ತಿದೆ. ನಮ್ಮಲ್ಲಿ ವರ್ಕ್‌ ಫ್ರಂ ಹೋಮ್‌ ಅನಿರ್ವಾಯವಾಗಿದೆ. ಸೋಂಕು ಸಂಪೂರ್ಣವಾಗಿ ಹಿಡಿತಕ್ಕೆ ಬಂದರೆ ವರ್ಕ್‌ ಫ್ರಂ ಹೋಮ್‌ ಸ್ಥಗಿತಗೊಳಿಸಲಾಗುತ್ತದೆ. ವೀಣಾ ಭಟ್‌, ಖಾಸಗಿ ಸಂಸ್ಥೆಯ ಎಚ್‌.ಆರ್‌.

ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next