Advertisement

8 ತಿಂಗಳ ವೇತನ ಪಾವತಿಗೆ ಒತ್ತಾಯ

02:25 PM May 15, 2019 | Team Udayavani |

ಕುಮಟಾ: ಕಳೆದ 8 ತಿಂಗಳಿಂದ ಸಂಬಳ ಬಟವಡೆಯಾಗದ ಹಿನ್ನೆಲೆಯಲ್ಲಿ ಹೋರಾಟ ನಡೆಸಿರುವ ಬಿಎಸ್‌ಎನ್‌ಎಲ್ ಗುತ್ತಿಗೆ ಆಧಾರಿತ ದಿನಗೂಲಿ ನೌಕರರು ಕುಮಟಾದ ಬಿಎಸ್‌ಎನ್‌ಎಲ್ ಕಾರ್ಯಾಲಯಕ್ಕೆ ಮಂಗಳವಾರ ಆಗಮಿಸಿದ ಬಿಎಸ್‌ಎನ್‌ಎಲ್ ಕಾರವಾರ ಜನರಲ್ ಮ್ಯಾನೇಜರ್‌ ರಾಜಕುಮಾರ್‌ ಅವರನ್ನು ಭೇಟಿಯಾಗಿ ಸಮಸ್ಯೆ ತೋಡಿಕೊಂಡರು.

Advertisement

ದಿನಗೂಲಿ ನೌಕರರ ವತಿಯಿಂದ ಮಂಜನಾಥ ಶೆಟ್ಟಿ ಮಾತನಾಡಿ, ನಾವು ಕುಮಟಾ ಹಾಗೂ ಹೊನ್ನಾವರ ವ್ಯಾಪ್ತಿಯಲ್ಲಿ ಕಳೆದ 15-20 ವರ್ಷಗಳಿಂದ ಬಿಎಸ್‌ಎನ್‌ಎಲ್ನಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದೇವೆ. ಕಳೆದ ಒಂದು ವರ್ಷದಿಂದ ಸಮಯಕ್ಕೆ ಸರಿಯಾಗಿ ಸಂಬಳ ಸಿಗುತ್ತಿಲ್ಲ. ಕಳೆದ 8 ತಿಂಗಳಿಂದ ಸಂಬಳ ಬಂದೇ ಇಲ್ಲ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮೌಖೀಕವಾಗಿ ಹಾಗೂ ಲಿಖೀತವಾಗಿಯೂ ದೂರು ನೀಡಿದ್ದೇವೆ. ಕಾರವಾರದಲ್ಲಿರುವ ಜನರಲ್ ಮ್ಯಾನೇಜರ್‌ ಕಾರ್ಯಾಲಯದ ಎದುರು ಧರಣಿ ಮಾಡಿ ಮನವಿ ಕೊಟ್ಟಿದ್ದೇವೆ. ಆದರೂ ಸಂಬಳ ಪಾವತಿಯಾಗಿಲ್ಲ. ಹೀಗಾಗಿ ನಮ್ಮೆಲ್ಲರ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಮೇ 3 ರಿಂದ ನಮ್ಮ ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟಿಸುವ ನಿರ್ಧಾರ ಮಾಡಲಾಗಿತ್ತಾದರೂ ಸದ್ಯ ಕೆಲಸ ಮಾಡುತ್ತಲೇ ನಮ್ಮ ನ್ಯಾಯಯುತ ಬೇಡಿಕೆಗಾಗಿ ಹೋರಾಟ ನಡೆಸಿದ್ದೇವೆ. ನಮಗೆ ನ್ಯಾಯ ಕೊಡಿ ಎಂದು ಕೋರಿದರು. ಜನರಲ್ ಮ್ಯಾನೇಜರ್‌ ರಾಜಕುಮಾರ ಮಾತನಾಡಿ, ನಿಮ್ಮ ಸಮಸ್ಯೆ ಗಮನದಲ್ಲಿದೆ. ನಿಮ್ಮ ಪರಿಶ್ರಮದ ಆದಾಯ ಎಲ್ಲೂ ಹೋಗುವುದಿಲ್ಲ. ನಿಮಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ. ಕಾರಣಾಂತರದಿಂದ ಸಂಬಳ ಬಟವಡೆಗೆ ವಿಳಂಬವಾಗಿದೆ. ಈ ತಿಂಗಳಾಂತ್ಯದೊಳಗೆ ಸಾಧ್ಯವಾದಷ್ಟು ಸಂಬಳ ಪಾವತಿ ಮಾಡಿಸುವುದಾಗಿ ಭರವಸೆ ನೀಡಿದರು.

ಬಿಎಸ್‌ಎನ್‌ಎಲ್ ಕಾರವಾರ ಡೆಪ್ಯೂಟಿ ಜನರಲ್ ಮ್ಯಾನೇಜರ್‌ ನಂದಿ ಹಾಗೂ ಇತರ ಅಧಿಕಾರಿಗಳು ಇದ್ದರು. ಕುಮಟಾ ಹಾಗೂ ಹೊನ್ನಾವರ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಬಿಎಸ್‌ಎನ್‌ಎಲ್ ದಿನಗೂಲಿ ನೌಕರರಾದ ಗೋವಿಂದ ಮುಕ್ರಿ, ರತ್ನಾಕರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next