Advertisement

ವಿಶೇಷ ಶಿಕ್ಷಕರಿಗೆ ಅಭದ್ರತೆ

04:04 PM Oct 21, 2022 | Team Udayavani |

ಗುಳೇದಗುಡ್ಡ: ದೈಹಿಕ ವಿಕಲಾಂಗತೆ ಹೊಂದಿ ಆತ್ಮವಿಶ್ವಾಸವೇ ಕುಗ್ಗಿ ಹೋಗಿರುವ ವಿಶೇಷಚೇತನ ಮಕ್ಕಳಿಗೆ ದೈನಂದಿನ ಕೌಶಲ್ಯ ಕಲಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡುತ್ತಿರುವ ವಿಶೇಷ ಸಂಪನ್ಮೂಲ ಶಿಕ್ಷಕರಿಗೆ ಅಭದ್ರತೆ ಕಾಡುತ್ತಿದೆ.

Advertisement

ರಾಜ್ಯದಲ್ಲಿ ಕಳೆದ 20 ವರ್ಷಗಳಿಂದ ಸರಕಾರದ ಸಮನ್ವಯ ಶಿಕ್ಷಣ ಯೋಜನೆಯಡಿ ನೇರಗುತ್ತಿಗೆ ಮೂಲಕ ಕಾರ್ಯ ನಿರ್ವಹಿಸುತ್ತಿರುವ 347 ವಿಶೇಷ ಸಂಪನ್ಮೂಲ ಶಿಕ್ಷಕರು ಸೇವಾ ಭದ್ರತೆ ಇಲ್ಲದೇ ಸರಕಾರ ನೀಡುವ ವೇತನದ ಮೂಲಕವೇ ಜೀವನ ಸಾಗಿಸುತ್ತಿದ್ದಾರೆ. ಆದರೆ ಈವರೆಗೂ ಯಾವುದೇ ರೀತಿಯ ಭದ್ರತೆ ಇಲ್ಲವಾಗಿದೆ.

ಇವರ ಕೆಲಸ ಏನು: ರಾಜ್ಯದಲ್ಲಿ ವಿಶೇಷ ಸಂಪನ್ಮೂಲ ಶಿಕ್ಷಕರಾಗಿ ನೇಮಕವಾಗಿರುವ ಶಿಕ್ಷಕರು 21ರೀತಿಯ ದೈಹಿಕ ನ್ಯೂನತೆಗಳನ್ನು ಹೊಂದಿರುವ ಮಕ್ಕಳಿಗೆ ದೈನಂದಿನ ಚಟುವಟಿಕಾ ಕೌಶಲ್ಯಗಳನ್ನು ಕಲಿಸುವುದು, ಬುದ್ಧಿಮಾಂದ್ಯ ಮಕ್ಕಳ ಮನೆಗೆ ಭೇಟಿ ನೀಡಿ, ಮಗುವಿಗೆ ಹಲ್ಲುಜ್ಜುವುದು, ಸ್ವಚ್ಛವಾಗಿಟ್ಟುಕೊಳ್ಳುವುದು ಸೇರಿದಂತೆ ಇಂತಹ ದೈನಂದಿನ ಕೌಶಲ್ಯ ಕಲಿಸುವುದು ಅಲ್ಲದೇ ಇದರ ಜತೆಗೆ ತಾಲೂಕಿನಲ್ಲಿನ ವಿಶೇಷಚೇತನ ಮಕ್ಕಳಿಗೆ ಸ್ಕಾಲರಶಿಪ್‌, ಪಿಂಚಣಿ ಸೇರಿದಂತೆ ಸರಕಾರದ ಸೌಲಭ್ಯಗಳು ಸಿಗುತ್ತಿವೆಯೋ ಇಲ್ಲವೋ ಎಂಬುದರ ಬಗ್ಗೆ ಮಾಹಿತಿ ಪಡೆದು ಅವು ಸಿಗುವಂತೆ ಮಾಡುವುದು ಅಲ್ಲದೇ ವಿಶೇಷ ಕ್ಯಾಂಪ್‌ಗ್ಳ ಬಗ್ಗೆ ಮಾಹಿತಿ ನೀಡಿ, ವ್ಹೀಲ್‌ಚೇರ್‌, ಕನ್ನಡಕ, ಸ್ಟೀಕ್‌ನಂತಹ ಸಾಧನಗಳನ್ನು ಕೊಡಿಸುವುದು ಶಿಕ್ಷಕರ ಕೆಲಸವಾಗಿದೆ.

ರಾಜ್ಯದಲ್ಲಿ 82 ಸಾವಿರ ವಿಶೇಷಚೇತನ ಮಕ್ಕಳು: ರಾಜ್ಯದಲ್ಲಿ ಸರಕಾರದ ಅಂಕಿ ಸಂಖ್ಯೆ ಪ್ರಕಾರ ಬಾಗಲಕೋಟೆ 4100, ವಿಜಯಪರ 4400, ಗದಗ 2900, ಹಾವೇರಿ 3400 ಹೀಗೆ ರಾಜ್ಯದಲ್ಲಿ 21ರೀತಿಯ ನ್ಯೂನತೆ ಹೊಂದಿರುವ ಒಟ್ಟು 82 ಸಾವಿರ ವಿಶೇಷ ಚೇತನ ಮಕ್ಕಳಿದ್ದಾರೆ.

ನೇರಗುತ್ತಿಗೆ ಮೂಲಕ ನೇಮಕ: ಕಳೆದ 2001ರಲ್ಲಿ ಕೇಂದ್ರ ಸರಕಾರದ ವಿಶೇಷಚೇತನ ಮಕ್ಕಳಿಗೆ ಸಮನ್ವಯ ಶಿಕ್ಷಣ(ಐಇಡಿಸಿ)ಯೋಜನೆಯಡಿ ಈ ಶಿಕ್ಷಕರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ನಂತರ 2006ರಿಂದ 2017ರವರೆಗೆ ಈ ಯೋಜನೆಯನ್ನು ಸರ್ವಶಿಕ್ಷಣ ಅಭಿಯಾನ ಅಡಿ ಸೇರಿಸಲಾಯಿತು. 2018ರಿಂದ ಎಲ್ಲ ವಿಶೇಷ ಸಂಪನ್ಮೂಲ ಶಿಕ್ಷಕರನ್ನು ಹೊರಗುತ್ತಿಗೆ ಆಧಾರ ಕೈ ಬಿಟ್ಟು ನೇರಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳಲಾಯಿತು. ಸದ್ಯ ಇದು ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ನಡೆಯುತ್ತಿದೆ. ಒಂದು ತಾಲೂಕಿಗೆ ಒಟ್ಟು 4 ಶಿಕ್ಷಕರಿದ್ದು, ಇದರಲ್ಲಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗೆ ತಲಾ ಇಬ್ಬರಂತೆ ಶಿಕ್ಷಕರಿರುತ್ತಾರೆ. ವಿಶೇಷ ಬಿಇಡಿ ಶಿಕ್ಷಣ ವಿದ್ಯಾರ್ಹತೆ ಹೊಂದಿದವರನ್ನು ನೇಮಕ ಮಾಡಿಕೊಳ್ಳಲಾಗಿದೆ.

Advertisement

ರಾಜ್ಯದಲ್ಲಿದ್ದಾರೆ 347 ವಿಶೇಷ ಸಂಪನ್ಮೂಲ ಶಿಕ್ಷಕರು: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪುರಸ್ಕೃತ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ರಾಜ್ಯದ ವಿಜಯನಗರ ಹಾಗೂ ಬಳ್ಳಾರಿ-34, ಬೆಳಗಾವಿ 14, ಬೆಂಗಳೂರು 26, ಧಾರವಾಡ 5, ಬಾಗಲಕೋಟೆ 6. ಗದಗ 14 ಹೀಗೆ ರಾಜ್ಯದ 30 ಜಿಲ್ಲೆಗಳಲ್ಲಿ ಒಟ್ಟು 347 ಜನರು ನೇರಗುತ್ತಿಗೆ ಮೂಲಕ ವಿಶೇಷ ಸಂಪನ್ಮೂಲ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಈ ಶಿಕ್ಷಕರನ್ನು ಪ್ರತಿ ವರ್ಷ ಮೇ 31ರಂದು ಬಿಡುಗಡೆ ಮಾಡಿ ಜೂನ್‌ 1 ರಂದು ಪುನಃ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಆಗಸ್ಟ್‌ ಬಂದರೂ ನೇಮಕಾತಿ ಆದೇಶ ನೀಡಿಲ್ಲ.

ಕುಟುಂಬ ನಿರ್ವಹಣೆ ಕಷ್ಟ: ಪ್ರಾಥಮಿಕ ಹಂತದ ಶಿಕ್ಷಕರಿಗೆ ಮಾಸಿಕ 20 ಸಾವಿರ ರೂ., ಪ್ರೌಢಹಂತದ ವಿಶೇಷ ಶಿಕ್ಷಕರಿಗೆ ಮಾಸಿಕ 25 ಸಾವಿರ ವೇತನ ನೀಡಲಾಗುತ್ತಿದೆ. ಅಲ್ಲದೇ ಈ ವೇತನ ಎರಡೂ¾ರು ತಿಂಗಳಿಗೊಮ್ಮೆ ಕೊಡುವುದರಿಂದ ಶಿಕ್ಷಕರಿಗೆ ಕುಟುಂಬ ನಿರ್ವಹಣೆ ದುಸ್ತರವಾಗಿದೆ. ಈಗಾಗಲೇ ಈ ಶಿಕ್ಷಕರಲ್ಲಿ ಬಹುತೇಕರು 45 ವಯಸ್ಸು ಮೀರಿದವರಿದ್ದು, ಇನ್ನೇನು 10-12 ವರ್ಷ ಕೆಲಸ ಮಾಡಿದರೆ ಅವರು ಸಹ ನಿವೃತ್ತಿಯಾಗುತ್ತಾರೆ. ಕಳೆದ ವರ್ಷ 5-6 ಜನರು 60 ವರ್ಷ ವಯಸ್ಸಾಗಿದ್ದರಿಂದ ನಿವೃತ್ತಿಯಾಗಿದ್ದಾರೆ. ಇದರಿಂದ ಈಗಿರುವ ವಿಶೇಷ ಸಂಪನ್ಮೂಲ ಶಿಕ್ಷಕರಿಗೂ ಅಭದ್ರತೆ ಕಾಡುತ್ತಿದ್ದು, ಕಾಲ ಕಾಲಕ್ಕೆ ವೇತನ ಹೆಚ್ಚಳ ಮಾಡಬೇಕು. ಸೇವಾ ಭದ್ರತೆ ನೀಡಿ ಸೇವೆಯನ್ನು ಕಾಯಂ ಮಾಡಬೇಕೆಂದು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಸರಕಾರ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ.

ರಾಜ್ಯದಲ್ಲಿ ಕಳೆದ 20 ವರ್ಷಗಳಿಂದಲೂ ಕೆಲಸ ಮಾಡುತ್ತಿರುವ ನಮಗೆ ಯಾವುದೇ ಭದ್ರತೆ ಇಲ್ಲ. ವೇತನ ಹೆಚ್ಚಳ ಇಲ್ಲ. ಪ್ರತಿ ವರ್ಷ ಮುಂದುವರಿಸಿಕೊಂಡು ಹೋಗುತ್ತಿರುವುದರಿಂದ ನಮಗೆ ತೊಂದರೆಯಾಗುತ್ತಿದೆ. ಮಾನವೀಯತೆಯಿಂದ ಸೇವೆಯನ್ನು ಪರಿಗಣಿಸಿ ಕಾಯಂಗೊಳಿಸಬೇಕು.  –ತಿಮ್ಮೇಶ ಎಚ್‌, ಪ್ರಕಾಶ ಪೂಜಾರ, ಶಿವುಕುಮಾರ, ಶಶಿಧರ ಚಳಗೇರಿ, ಹನಮಂತ ಕಡಿವಾಲ, ಶಿಕ್ಷಕರ ಸಂಘದ ಮುಖಂಡರು

ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ನೇರಗುತ್ತಿಗೆ ವಿಶೇಷ ಸಂಪನ್ಮೂಲ ಶಿಕ್ಷಕರ ಮಾಹಿತಿಯನ್ನು ಸರಕಾರಕ್ಕೆ ಕಳುಹಿಸಲಾಗುತ್ತಿದೆ. ಸರಕಾರ ಭದ್ರತೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದೆ. – ಬಿ.ಬಿ.ಕಾವೇರಿ, ರಾಜ್ಯ ಯೋಜನಾ ನಿರ್ದೇಶಕಿ, ಎಸ್‌.ಎಸ್‌.ಕೆ.ಬೆಂಗಳೂರು

„ಮಲ್ಲಿಕಾರ್ಜುನ ಕಲಕೇರಿ

Advertisement

Udayavani is now on Telegram. Click here to join our channel and stay updated with the latest news.

Next