Advertisement

ಡ್ರೋಣ್‌ ಮೂಲಕ ಕೀಟನಾಶಕ ಸಿಂಪರಣೆ

09:41 AM Oct 24, 2021 | Team Udayavani |

ಕಲಬುರಗಿ: ರೈತರ ಹೊಲಗಳಿಗೆ ಇಸ್ರೇಲ್‌ ಮಾದರಿಯಲ್ಲಿ ಡ್ರೋಣ್‌ ಮೂಲಕ ಕೀಟನಾಶಕ ಸಿಂಪಡಿಸುವ ಯೋಜನೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಯಿಂದ ಪ್ರಾಯೋಗಿಕವಾಗಿ ಜಾರಿ ತರಲು ಮುಂದಾಗಲಾಗಿದೆ ಎಂದು ಮಂಡಳಿ ಅಧ್ಯಕ್ಷರಾಗಿರುವ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.

Advertisement

ನಗರದ ಆಳಂದ ರಸ್ತೆಯ ಬೆಣ್ಣೂರು ಕಲ್ಯಾಣ ಮಂಟಪದಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ಒಂಭತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಎರಡು ಸಾವಿರ ರೈತರಿಗೆ ಆರು ಕೋಟಿ ರೂ. ಬಡ್ಡಿ ರಹಿತ ಬೆಳೆಸಾಲ ವಿತರಿಸಿ ಅವರು ಮಾತನಾಡಿದರು.

ಮಂಡಳಿ ವ್ಯಾಪ್ತಿಯ ಏಳು ಜಿಲ್ಲೆಗಳ ತಲಾ ಒಂದು ವಿಧಾನಸಭೆ ಕ್ಷೇತ್ರದಲ್ಲಿ ಡ್ರೋಣ್‌ ಮೂಲಕ ಕೀಟನಾಶಕ ಸಿಂಪಡಿಸುವ ಯೋಜನೆಯೊಂದನ್ನು ಜಾರಿಗೆ ತರಲಾಗುತ್ತಿದೆ. ಇದು ಯಶಸ್ವಿಯಾದಲ್ಲಿ ಉಳಿದೆಡೆ ವಿಸ್ತರಿಸಲಾಗುವುದು ಎಂದರು.

ಕಲ್ಯಾಣ ಕರ್ನಾಟಕದ ಪ್ರತಿಭಾನ್ವಿತ ವಿದ್ಯಾರ್ಥಿಗಳು ವೈದ್ಯಕೀಯ-ಇಂಜಿನೀಯರಿಂಗ್‌ ಸೇರಿದಂತೆ ಇತರ ಕೋರ್ಸುಗಳನ್ನು ಅಭ್ಯಸಿಸುತ್ತಿರುವ ಹಾಗೂ ಐಎಎಸ್‌, ಕೆಎಎಸ್‌ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಅನುಕೂಲವಾಗಲೆಂದು ಬೆಂಗಳೂರಿನಲ್ಲಿ ಕೆಕೆಆರ್‌ ಡಿಬಿ ಮಂಡಳಿಯಿಂದ 60 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ವಸತಿ ನಿಲಯದ ಕಟ್ಟಡ ನಿರ್ಮಾಣ ಕಾರ್ಯ ಭರದಿಂದ ನಡೆದಿದೆ ಎಂದು ಹೇಳಿದರು.

ಇದನ್ನೂ ಓದಿ: ಮಹಿಳೆಯರಿಗೆ ರಾಣಿ ಚನ್ನಮ್ಮ ಆದರ್ಶ: ಪ್ರಕಾಶ ಕುದುರಿ

Advertisement

ಕಲಬುರಗಿ ದಕ್ಷಿಣ ಮತಕ್ಷೇತ್ರದ 30 ಹಳ್ಳಿಗಳಲ್ಲಿ 200 ಕೋಟಿ ರೂ. ವೆಚ್ಚದಲ್ಲಿ 11 ಕೆರೆಗಳನ್ನು ಬೆಣ್ಣೆ ತೋರಾ ಜಲಾಶಯದಿಂದ ನೀರು ಹರಿಸಿ, ಭರ್ತಿ ಮಾಡುವ ಹಾಗೂ ರೈತರ ಹೊಲಗಳಿಗೆ ನೀರುಣಿಸುವ ಮಾದರಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಅದೇ ರೀತಿ ಎಂಎಸ್ಕೆ ಮಿಲ್‌ ಪ್ರದೇಶದಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ಎರಡು ಎಕರೆ ವಿಸ್ತೀರ್ಣದಲ್ಲಿ ಸುಸಜ್ಜಿತ ತರಕಾರಿ ಮಾರುಕಟ್ಟೆ ನಿರ್ಮಿಸಲಾಗುತ್ತಿದೆ ಎಂದು ನೆರೆದ ರೈತ ಸಮೂಹಕ್ಕೆ ತಿಳಿ ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ. ಪ್ರಧಾಮಂತ್ರಿ ಕಿಸಾನ್‌ ಸಮ್ಮಾನ ನಿಧಿ ಯಡಿ ನೇರವಾಗಿ ವರ್ಷಕ್ಕೆ ರೈತರ ಖಾತೆಗೆ ಆರು ಸಾವಿರ ರೂ. ಹಾಗೂ ರಾಜ್ಯ ಸರ್ಕಾರದಿಂದ ಆರು ಸಾವಿರ ರೂ. ಜಮಾ ಮಾಡಲಾಗುತ್ತಿದೆ. ಅದೇ ರೀತಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ತಕ್ಷಣ ರೈತರ ಮಕ್ಕಳಿಗೆ ಶಿಷ್ಯ ವೇತನ ಜಾರಿ ಯೋಜನೆ ಜಾರಿ ಮಾಡಿದ್ದಾರೆ. ಹೀಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದರು.

ಬ್ಯಾಂಕ್‌ ಉಪಾಧ್ಯಕ್ಷ ಸುರೇಶ ಸಜ್ಜನ್‌, ನಿರ್ದೇಶಕರಾದ ಶರಣಬಸಪ್ಪ ಪಾಟೀಲ ಅಷ್ಠಗಾ, ಅಶೋಕ ಸಾವಳೇಶ್ವರ, ಎಂಡಿ ಚಿದಾನಂದ ನಿಂಬಾಳ, ಕಾಡಾ ಆಡಳಿತಾಧಿಕಾರಿ ಶರಣಬಸಪ್ಪ ಬೆಣ್ಣೂರ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next