Advertisement

ಕೈಗಾರಿಕೋದ್ಯಮಿಗಳು ಪರಿಸರ ಕಾಳಜಿವಹಿಸಿ

05:42 PM Mar 07, 2020 | Suhan S |

ನೆಲಮಂಗಲ : ಕೈಗಾರಿಕೋದ್ಯಮಿಗಳು ನೈತಿಕ ಹೊಣೆಗಾರಿಕೆಯಿಂದ ವ್ಯಾಪಾರ ಮಾಡಿ, ಸವಲತ್ತು ಮತ್ತು ಕಾನೂನು ಗಳನ್ನು ದುರುಪಯೋಗಮಾಡಿಕೊಳ್ಳಬೇಡಿ, ಪರಿಸರದ ಬಗ್ಗೆ ಕಾಳಜಿವಹಿಸಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್‌. ಎಂ.ನಾಗರಾಜು ತಿಳಿಸಿದರು.

Advertisement

ಪಟ್ಟಣದ ಹಾಲಿಡೇ ಪಾಮ್ಸ್‌ ಹೊಟೇಲ್‌ ಸಭಾಂಗಣದಲ್ಲಿ ಗ್ರೇಟರ್‌ ನೆಲಮಂಗಲ ಇಂಡಸ್ಟ್ರೀಸ್‌ ಅಸೋಸಿಯೇಷನ್‌ ವತಿಯಿಂದ ಹಮ್ಮಿಕೊಂಡಿದ್ದ ತೆರಿಗೆ ಮತ್ತು ಕಂದಾಯ ನಿಗದಿ ಕುರಿತಾದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.  ನಾಗರೀಕತೆ ವಿಕಸನದ ಬಳಿಕ ಕೃಷಿ ಅವಲಂಭನೆ ಹೆಚ್ಚಾಯಿತು, ನಂತರ ತಾಂತ್ರಿಕತೆ ಬೆಳೆದಂತೆಲ್ಲ ಕೈಗಾರಿಕೆಗಳು ಅಭಿವೃದ್ಧಿಯಾಗಿದೆ. ಕೈಗಾರಿಕಾ ಕ್ರಾಂತಿ ಬಳಿಕ ಕೈಗಾರಿಕೆಗಳ ಬೆಳವಣಿಗೆಯಿಂದಾಗಿ ರಾಷ್ಟ್ರೀಯ ಉತ್ಪನ್ನ ಹಾಗೂ ತಲಾದಾಕೈಗಾರಿಕೆಗಳಿಂದ ಹೆಚ್ಚಾಗಿದೆ. ದೇಶದ ಅಭಿವೃದ್ಧಿಯಲ್ಲಿ ಕೃಷಿಯ  ನಂತರ ಕೈಗಾರಿಕೆಗಳು ಮಹತ್ತರವಾದ ಪಾತ್ರವಹಿಸಿದೆ. ವಿದೇಶಿ ವಿನಿಮಯಗಳು ಹೆಚ್ಚಾಗುತ್ತಿದೆ, 3ನೇ ಪಂಚವಾರ್ಷಿಕ ಯೋಜನೆಯ ಬಳಿಕ ಕೈಗಾರಿಕಾ ನೀತಿಗಳೂ ಬದಲಾಗಿವೆ ಎಂದರು.

ಗ್ರಾಮಾಂತರ ಪ್ರದೇಶಗಳಲ್ಲಿ ಕೈಗಾರಿಕೆಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವುದು ಕೈಗಾರಿಕೋದ್ಯಮಿಗಳಿಂದ ತಿಳಿದುಬಂದಿದೆ. ಕೈಗಾರಿಕೆಗಳ ಕರ ನಿರ್ಧರಣೆ ಮತ್ತು ತೆರಿಗೆ ಪಾವತಿಯ ಕುರಿತಾಗಿ ಸಾಕಷ್ಟು ಗೊಂದಲುಗಳುಂಟಾಗಿತ್ತು. ಅವುಗಳನ್ನು ಪರಿಸಹರಿಸುವಲ್ಲಿ ಸರ್ಕಾರ ಸೂಕ್ತ ಕ್ರಮವಹಿಸಿದೆ, ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಕೈಗಾರಿಕೆಗಳಿಗೆ ತೆರಿಗೆ ನಿಗದಿಪಡಿಸುವಲ್ಲಿ ವ್ಯತ್ಯಾಸಗಳಾಗಬಾರದೆಂಬ ಕಾರಣದಿಂದ ಸಣ್ಣ ಕೈಗಾರಿಕೆಗಳಿಗೆ ಶೇ.4 ಮಾಧ್ಯಮ ಕೈಗಾರಿಕೆಗಳಿಗೆ ಶೇ.5 ಹಾಗೂ ಬೃಹತ್‌ ಕೈಗಾರಿಕೆಗಳಿಗೆ ಶೇ.6ರಷ್ಟು ಕರ ನಿರ್ಧರಣೆ ಮಾಡಲಾಗಿದ್ದು ಕೈಗಾರಿಕಾ ಪ್ರದೇಶದಲ್ಲಿ ರಸ್ತೆ ಹಾಗೂ ಹಸಿರುವಲಯಕ್ಕೆ ತೆರಿಗೆ ವಿನಾಯತಿಯನ್ನು ನೀಡಲಾಗಿದೆ, ತಮಗೆ ಸ್ಥಳೀಯ ಆಡಳಿತ ಮಂಡಳಿ ಅಥವಾ ಅಭಿವೃದ್ಧಿ ಅಧಿಕಾರಿಗಳಿಂದ ಸಮಸ್ಯೆಗಳು ಎದುರಾದರೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ನಂತರ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕೆಂದು ತಿಳಿಸಿದರು.

ರಾಜ್ಯ ಕಾಷಿಯಾ ಅಧ್ಯಕ್ಷ ಆರ್‌.ರಾಜು ಮಾತನಾಡಿ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳ ಪಾತ್ರ ಪರಿಣಾಮಕಾರಿ ಹಾಗೂ ಮಹತ್ವದ್ದಾಗಿದೆ. ಮಹಾನಗರಗಳು ಹಾಗೂ ಪಂಚಾಯಿತಿ ಮಟ್ಟದ ಅಭಿಪ್ರಾಯಗಳು ವಿಭಿನ್ನವಾಗಿರುತ್ತವೆ. ಕೈಗಾರಿಕೆಗಳು ಮತ್ತು ಕೈಗಾರಿಕೋದ್ಯಮಿಗಳು ಎಂದರೆ ಸ್ಥಳೀಯ ಆಡಳಿತಮಂಡಳಿ ಹಾಗೂ ಅಧಿಕಾರಿಗಳಲ್ಲಿ ಬೇರೆಯಿದ್ದು ಇಚ್ಚೆಗನುಸಾರವಾಗಿ ಕಂದಾಯ ತೆರಿಗೆಗಳನ್ನು ನಿಗದಿಪಡಿಸುತ್ತಾರೆ. ಕಾನೂನುಗಳನ್ನು ಸಮರ್ಪಕವಾಗಿ ಅನುಸರಿಸಬೇಕು ಕುಂದು ಕೊರತೆಗಳಿದ್ದರೆ ಸಂಬಂಧಪಟ್ಟವರೊಂದಿಗೆ ಮುಕ್ತವಾಗಿ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂದರು.

ಗ್ರೇಟರ್‌ನೆಲಮಂಗಲ ಇಂಡಸ್ಟ್ರೀಸ್‌ ಅಸೋಸಿಯೇಷನ್‌ ಅಧ್ಯಕ್ಷ ಇಟಿಕೆ ರಾಜು ಮಾತನಾಡಿ, ಕೈಗಾರಿಕೋದ್ಯಮಿಗಳು ಮತ್ತು ಅಧಿಕಾರಿಗಳಿಗೆ ಕಾನೂನು ಕಾಯ್ದೆಗಳ ಅರಿವನ್ನು ಮೂಡಿಸುವ ಕಾರ್ಯಕ್ರಮವನ್ನು ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದು ಪ್ರತಿಯೊಬ್ಬರಿಗೂ ಕಾನೂನು ಅರಿವು ಅತ್ಯವಶ್ಯಕವಾಗಿದೆ. ಕಾಲಕಾಲಕ್ಕೆ ಬದಲಾಗುವ ಕಾಯ್ದೆಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಪಾಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕರೆನೀಡಿದರು.

Advertisement

ಕಾರ್ಯಕ್ರಮದ ಅಂಗವಾಗಿ ಜಿಪಂ ಸಿಇಓ ಎನ್‌.ಎಂ. ನಾಗರಾಜು ಹಾಗೂ ತಾಪಂ ಇಓ ಲಕ್ಷ್ಮೀನಾರಾಯಣ್‌ ಅವರುಗಳು ಕೈಗಾರಿಕೋದ್ಯಮಿಗಳು, ಕೈಗಾರಿಕೆಗಳ ಅಧಿಕಾರಿಗಳು ಮತ್ತು ಜಿಎನ್‌ಐಎ ಸದಸ್ಯರೊಂದಿಗೆ ಸಂವಾದವನ್ನು ನಡೆಸಿದರು.

ಕಾರ್ಯಕ್ರಮದಲ್ಲಿ ತಾ ಪಂಇಓ. ಲಕ್ಷ್ಮೀನಾರಾಯಣ್‌, ಕಾಷಿಯಾ ಕಾರ್ಯದರ್ಶಿ ಎಂ.ಜಿ. ರಾಜ ಗೋಪಾಲ್‌, ಜಿಎನ್‌ಐಎ ಉಪಾಧ್ಯಕ್ಷ ಜಿಎನ್‌.ಶೇಖರ್‌, ಹರ್ಷ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶಿವಕುಮಾರ್‌, ಮಂಜುನಾಥ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next