Advertisement

ಈ ಮಕ್ಕಳ ಬಾಯಲ್ಲೇ ಕೇಳಿ ಇಂದ್ರಾಣಿ ನದಿಯ ದುಃಖವ…

08:51 AM Feb 20, 2020 | mahesh |

ಇಂದ್ರಾಣಿ ನದಿ ತೀರ್ಥದ ಕುರಿತು ಪ್ರಕಟಿಸುತ್ತಿರುವ ಈ ಸರಣಿ ನಿಜಕ್ಕೂ ಭಾವಾವೇಶದಿಂದ ಕೂಡಿದ್ದಲ್ಲ. ಈ ಇಂದ್ರಾಣಿ ನದಿ ಕಲುಷಿತವಾಗಿರುವ ಪ್ರದೇಶಕ್ಕೆ ಭೇಟಿ ಕೊಟ್ಟರೆ ಇವರ ನಿಜವಾದ ಕಷ್ಟ ಅರಿವಿಗೆ ಬರುತ್ತದೆ. ಅದಾಗದೆ ಕೇವಲ ಹವಾ ನಿಯಂತ್ರಿತ ಕೋಣೆಯಲ್ಲಿ ಕುಳಿತು ನಗರದ ಯೋಜನೆ ರೂಪಿಸಿದರೆ ಈ ಸಮಸ್ಯೆಯ ಗಂಭೀರತೆ ನಿಜಕ್ಕೂ ಅರ್ಥವಾಗುವುದಿಲ್ಲ. 22 ವರ್ಷಗಳಿಂದ ಈ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆಯೆಂದರೆ ಯಾರ ನಿರ್ಲಕ್ಷ್ಯ ದೊಡ್ಡದು ಎಂಬುದನ್ನು ತಾಳೆಹಾಕಿ ನೋಡಬೇಕು. ಈ ನಿಟ್ಟಿನಲ್ಲಿ ಜನರೂ ಶುದ್ಧ ಪರಿಸರದ ಬದುಕಿನ ತಮ್ಮ ಹಕ್ಕಿಗಾಗಿ ಹೋರಾಟವನ್ನು ತೀವ್ರಗೊಳಿಸದಿದ್ದರೆ ಇಂದ್ರಾಣಿ ನದಿ ಶುದ್ಧವಾಗುವುದು ಅನುಮಾನ.

Advertisement

ಕೊಡವೂರು: ಇತ್ತೀಚೆಗಷ್ಟೇ ಕೊಡವೂರು ಪೇಟೆ ಯಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆ ಯಲ್ಲಿ ಮಕ್ಕಳ ಸಹಾಯವಾಣಿಯ ತೆರೆದ ಮನೆ ಕಾರ್ಯಕ್ರಮ ನಡೆಯಿತು. ಅದರಲ್ಲಿ ಪರಿಸರವನ್ನು ಶುದ್ಧವಾಗಿಟ್ಟು ಕೊಳ್ಳುವ ಕುರಿತೂ ಚರ್ಚೆಗೆ ಬಂದಿತು. ಅಷ್ಟರಲ್ಲಿ ಕೆಲವು ಮಕ್ಕಳು (ಶಾಲೆಯ ವಿದ್ಯಾರ್ಥಿಗಳು) ಎದ್ದು ನಿಂತು ಬಹಳ ಮುಗ್ಧತೆಯಿಂದ, “ನೋಡಿ, ನಾವು ವಾಸಿಸುತ್ತಿರುವುದು ಇಂದ್ರಾಣಿ ತೀರ್ಥ ನದಿಯ ದಂಡೆಯ ಸುತ್ತಮುತ್ತ. ಇಲ್ಲಿ ನಿತ್ಯವೂ ಸಂಜೆಯಾದರೆ ದುರ್ವಾಸನೆ ಮೂಗಿಗೆ ಬಡಿಯುತ್ತದೆ. ಸಂಜೆ ಐದು ಆದರೆ ಸಾಕು, ಸೊಳ್ಳೆಗಳು ಮುತ್ತಿಕ್ಕುತ್ತವೆ. ಏನು ಮಾಡುವುದು? ನಮ್ಮ ಪರಿಸರವನ್ನು ಹೇಗೆ ಶುದ್ಧವಾಗಿಟ್ಟುಕೊಳ್ಳುವುದು?’ ಎಂದು ಪ್ರಶ್ನೆ ಕೇಳಿದರಂತೆ.

ಅದಕ್ಕೆ ಮಕ್ಕಳ ಸಹಾಯವಾಣಿಯವರಲ್ಲಿ ಉತ್ತರವಿರಲಿಲ್ಲ. ಯಾಕೆಂದರೆ, ಅವ ರಿಗೆ ಈ ಸಮಸ್ಯೆ ತೀರಾ ಹೊಸತು. ಇಲ್ಲವೇ ಸಮಸ್ಯೆಯ ತೀವ್ರತೆ ಬಗ್ಗೆ ಅಷ್ಟೊಂದು ಮಾಹಿತಿ ಇಲ್ಲ. ಆ ಬಳಿಕ ಸಹಾಯ ವಾಣಿ ಯವರಿಗೆ ಮಕ್ಕಳು ತಮ್ಮ ಸಮಸ್ಯೆಯನ್ನು ಬಗೆಹರಿಸುವಂತೆ ಇವರ ಮುಖೇನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಸಮಸ್ಯೆ ಒಂದಲ್ಲ, ಹನ್ನೊಂದು !
ಈ ಮಕ್ಕಳ ಬಾಯಲ್ಲೇ ಸಮಸ್ಯೆಯನ್ನು ಕೇಳಿದರೆ ಯಾರಿಗೂ ಬೇಸರವಾಗುತ್ತದೆ. ಒಂದು, ಎರಡಲ್ಲ ಸಮಸ್ಯೆ, ಹಲವಾರು. ಮಕ್ಕಳಿಗೆ ಶುದ್ಧ ಪರಿಸರವೆಂಬುದೇ ಅರ್ಥ ವಾಗದ ಸ್ಥಿತಿ ಇದೆ.
ಇಂದ್ರಾಣಿ ತೀರ್ಥ ನದಿಯ ದಂಡೆಗೆ ಹೊಂದಿ ಕೊಂಡಂತಿರುವ ಸ್ಥಳದಿಂದ ಬರುವ ವಿದ್ಯಾರ್ಥಿನಿಯೊಬ್ಬಳು, ನಮ್ಮ ಬಾವಿ ನೀರು ಹಾಳಾಗಿ ಹೋಗಿದೆ. ಮನೆಯಲ್ಲಿ ಹತ್ತು ಮಂದಿ ಇದ್ದಾರೆ (ಚಿಕ್ಕಪ್ಪ, ಮಾವ, ಅತ್ತೆ ಇತ್ಯಾದಿ. ಎಲ್ಲರೂ ದೂರದಿಂದ ನೀರು ತರಬೇಕು. ನನ್ನ ತಂದೆ, ಮಾವ ಎಲ್ಲರೂ ಕೆಲಸಕ್ಕೆ ಹೋದಾಗ ಬಹಳ ಕಷ್ಟವಾಗುತ್ತೆ. ಹೊರಗೆ ಸಂಜೆ ಹೊತ್ತಿಗೆ ಸೊಳ್ಳೆ ಕಾಟ ತಡೆಯೋಕ್ಕಾಗೋಲ್ಲ. ಊದುಬತ್ತಿ ಹಚ್ಚಿದರೂ, ಸೊಳ್ಳೆ ಬತ್ತಿ ಹಚ್ಚಿದರೂ ಕಡಿಮೆ ಯಾಗೋಲ್ಲ. ರಾತ್ರಿ ಹೊತ್ತಿನಲ್ಲಿ ದುರ್ವಾಸನೆ ಎಂದು ವಿವರಿಸುತ್ತಾರೆ.

ಮತ್ತೂಬ್ಬ ವಿದ್ಯಾರ್ಥಿಯ ಮನೆಯೂ ಇದೇ ನದಿಯ ದಂಡೆಯ (ಹತ್ತಿರದ ಪ್ರದೇಶ) ಮೇಲೆ ಬರುತ್ತದೆ. ಅವನ ಕುಟುಂಬದ ಕಷ್ಟವೂ ಇದೇ. “ರಾತ್ರಿ ಹೊತ್ತು ವಾಸನೆ ತಡೆದುಕೊಳ್ಳೋಕೆ ಆಗೋಲ್ಲ. ನಾವು ಆರೋಗ್ಯ ವಿಭಾಗದವರಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ದೂರು ಕೊಟ್ಟಾಗ ಒಮ್ಮೆ ಬಂದು ಫಾಗಿಂಗ್‌ ಮಾಡಿ ಹೋಗ್ತಾರೆ. ಅದು ಎಷ್ಟು ದಿನ? ಗಾಳಿ ಬಂದ ಕೂಡಲೇ ಅದರ ಪವರ್‌ ಎಲ್ಲ ಹೋಗುತ್ತೆ. ಸೊಳ್ಳೆ ಮತ್ತೆ ಕಚ್ಚುತ್ತೆ’ ಎಂದು ತನ್ನ ಸಂಕಷ್ಟವನ್ನು ವಿವರಿಸಿದರು.

Advertisement

ಮತ್ತೂಬ್ಬ ವಿದ್ಯಾರ್ಥಿ ಹೇಳುವ ಕಷ್ಟವನ್ನು ಅವನ ಮಾತುಗಳಲ್ಲೇ ಕೇಳಿ. “ನೀರು ಹಾಳಾಗಿತ್ತು. ಬಾವಿಯನ್ನು ಇತ್ತೀಚೆಗಷ್ಟೇ ಸ್ವಚ್ಛ ಮಾಡಿಸಿದೆವು. ಆದರೂ ನೀರು ಕಪ್ಪೇ. ಸ್ನಾನಕ್ಕೆ ಇದನ್ನೇ ಬಳಸ್ತೇವೆ, ಏನೂ ಮಾಡುವಂತಿಲ್ಲ. ಕುಡಿಯಲಿಕ್ಕೆ ಬೇರೆ ಕಡೆಯಿಂದ ಮುನಿಸಿಪಾಲಿಟಿ ನೀರು ತರುತ್ತಿದ್ದೇವೆ’.

ಈ ಪ್ರದೇಶದಿಂದಲೂ ಬರುವ ಶಿಕ್ಷಕಿಯೊಬ್ಬರೂ ತಮ್ಮ ಕಷ್ಟವನ್ನು ತೋಡಿ ಕೊಂಡದ್ದು ಹೀಗೆ-“ನಾವು ಹೋರಾಟ ಮಾಡುವಷ್ಟು ಮಾಡಿದ್ದೇವೆ. ಆದರೂ ಸಂಕಷ್ಟ ಬಗೆಹರಿದಿಲ್ಲ. ಮುಂದೊಂದು ದಿನ ಬಗೆಹರಿಯ ಬಹುದೆಂದು ನಿರೀಕ್ಷಿಸಿದ್ದೇವೆ. ಸಂಕಷ್ಟವನ್ನು ಹೇಳಿ ಸುಖವಿಲ್ಲ. ಬೆಳಗ್ಗೆ 6ರ ಹೊತ್ತಿಗೆ ಬರುವ ದುರ್ವಾಸನೆಯನ್ನು ತಡೆದು ಕೊಳ್ಳಲು ಆಗೋದಿಲ್ಲ. ಸಂಜೆಯೂ ಇದರ ಪುನರಾವರ್ತನೆ. ಹೊಟ್ಟೆ  ಯಲ್ಲಿರುವುದೆಲ್ಲ ತೊಳೆ‌ಸಿ ವಾಂತಿ ಮಾಡಿಕೊಳ್ಳಬೇಕೆನ್ನುವ ಪರಿಸ್ಥಿತಿ. ಬಾವಿ ನೀರು ಚೆನ್ನಾಗಿದೆ ಅಂತಾರೆ, ನಮಗೆ ಗೊತ್ತಿಲ್ಲ. ನೀರು ಪರೀಕ್ಷೆ ಮಾಡಿದ ಪ್ರಯೋಗಾಲಯದವರು ಎಂಥದೋ ಪೌಡರ್‌ ಕೊಟ್ಟು ಬಾವಿಗೆ ಹಾಕಿ ಎನ್ನುತ್ತಾರೆ’.

ಮಕ್ಕಳ ಮನವಿಯೇನು?
ನಮ್ಮೂರಿನಲ್ಲಿ ಪವಿತ್ರವಾದ ಇಂದ್ರಾಣಿ ನದಿ ಹರಿಯುತ್ತದೆ. ಆ ನದಿಯ ದಂಡೆ ಮತ್ತು ಆಸುಪಾಸಿನಲ್ಲಿ ನಾವು ವಾಸಿಸುತ್ತಿದ್ದೇವೆ. ನದಿಗೆ ನಗರದ ಮಲಿನ ನೀರನ್ನು ಬಿಡುವುದ ರಿಂದ ದುರ್ವಾಸನೆಯಿಂದ ಕೂಡಿದ ಪರಿಸರದಲ್ಲಿ ಬದುಕುವಂತಾಗಿದೆ. ಇದರಿಂದ ಸೊಳ್ಳೆ ಕಾಟ ಹೆಚ್ಚಾಗಿದ್ದು, ಇಡೀ ಪರಿಸರವೆ ವಾಕರಿಕೆ ಬರುವಂತಿದೆ. ಈ ವಿಷಯ ನಿಮಗೆ ತಿಳಿದಿರುವುದರಿಂದ, ದಯವಿಟ್ಟು ಇದನ್ನು ಸರಿಪಡಿಸಿ ಶುದ್ಧ ಪರಿಸರದಲ್ಲಿ ಬದುಕಲು ಅವಕಾಶ ಕಲ್ಪಿಸಬೇಕೆಂಬುದು ಡಿ.ಸಿ.ಗೆ ಮಕ್ಕಳ ಮನವಿ. ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಎಂಬ ಆಶಾವಾದ ನಮ್ಮದು.

ಸಮಸ್ಯೆಗಳು ಮುಗಿಯುವುದಿಲ್ಲ
ಈ ವಿದ್ಯಾರ್ಥಿಗಳ ಸಮಸ್ಯೆಗಳು ಇಲ್ಲಿಗೇ ಮುಗಿಯಲಿಲ್ಲ. ಹಲವರು ಎಲ್ಲಿಂದಲೋ ಬಂದು ಕಸವನ್ನೂ ಸುರಿದು ಹೋಗುತ್ತಾರೆ. ಹತ್ತಿರದಲ್ಲೇ ಮನೆ ಇರುವುದರಿಂದ ಅದು ಕೊಳೆತು ಸಮಸ್ಯೆ ಹೆಚ್ಚಿಸುತ್ತದೆ. ಇದನ್ನು° ಯಾರೂ ತಡೆಯುತ್ತಿಲ್ಲ ಎನ್ನುವುದು ಇವರ ಬೇಸರಕ್ಕೆ ಕಾರಣ. ಇಲ್ಲಿನವರ ಆರೋಗ್ಯಕ್ಕೆ ಸಂಬಂಧಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳ ಬೇಕೆಂದು ಒತ್ತಾಯಿಸಿದರೂ ಪೂರ್ಣ ಮಟ್ಟದಲ್ಲಿ ಈಡೇರುತ್ತಿಲ್ಲ. ಡೆಂಗ್ಯೂ, ಮಲೇರಿಯಾದಂಥ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಆತಂಕದಲ್ಲೇ ಬದುಕು ಕಳೆಯಬೇಕಾದ ದಯನೀಯ ಸ್ಥಿತಿ ಹಲವು ಕುಟುಂಬಗಳದ್ದು.

Advertisement

Udayavani is now on Telegram. Click here to join our channel and stay updated with the latest news.

Next