Advertisement

ತಟಸ್ಥ ಕೇಂದ್ರದಲ್ಲಿ ಭಾರತ-ಪಾಕ್‌ ಟೆನಿಸ್‌: ಎಐಟಿಎ ಮನವಿ ಸಾಧ್ಯತೆ

09:12 AM Aug 09, 2019 | keerthan |

ಹೊಸದಿಲ್ಲಿ: ಭಾರತ-ಪಾಕಿಸ್ಥಾನ ನಡುವೆ ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿರುವ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯಾವಳಿ ಯನ್ನು ತಟಸ್ಥ ಕೇಂದ್ರದಲ್ಲಿ ಆಡಿಸುವಂತೆ ಭಾರತೀಯ ಟೆನಿಸ್‌ ಅಸೋಸಿಯೇಶನ್‌ (ಎಐಟಿಎ) ವಿಶ್ವ ಟೆನಿಸ್‌ ಒಕ್ಕೂಟಕ್ಕೆ (ಐಟಿಎಫ್) ಮನವಿ ಮಾಡುವ ಸಾಧ್ಯತೆ ಇದೆ. ಕಾಶ್ಮೀರದ ಇತ್ತೀಚಿನ ಬೆಳವಣಿಗೆಯಿಂದ ಹೆಚ್ಚಿದ ರಾಜತಾಂತ್ರಿಕ ಬಿಕ್ಕಟ್ಟಿನ ಹಿನ್ನೆಲೆಯೇ ಇದಕ್ಕೆ ಕಾರಣ.

Advertisement

“ಕಾಶ್ಮೀರ ಬೆಳವಣಿಗೆ ಈ ಪಂದ್ಯಾವಳಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಖಂಡಿತ. ಆದರೆ ಕೂಡಲೇ ಯಾವುದೇ ನಿರ್ಧಾರಕ್ಕೆ ಬರಲಾಗದು. ಕೆಲವು ದಿನ ಕಾದು ನೋಡಬೇಕಾಗುತ್ತದೆ. ಬಳಿಕ ನಾವು ಪರಿಸ್ಥಿತಿಯನ್ನು ವಿಶ್ವ ಟೆನಿಸ್‌ ಒಕ್ಕೂಟಕ್ಕೆ ಮನವರಿಕೆ ಮಾಡಬೇಕಿದೆ. ಅಗತ್ಯ ಬಿದ್ದರೆ ತಟಸ್ಥ ಕೇಂದ್ರದಲ್ಲಿ ಇದನ್ನು ನಡೆಸುವಂತೆ ಐಟಿಎಫ್ಗೆ  ಮನವಿ ಮಾಡಲಿದ್ದೇವೆ’ ಎಂದು ಎಐಟಿಎ ಕಾರ್ಯದರ್ಶಿ ಹಿರಣೊಯ್‌ ಚಟರ್ಜಿ ಹೇಳಿದ್ದಾರೆ.

ಕೇಂದ್ರದ ನಿರ್ಧಾರವೂ ಮುಖ್ಯ
“ಎರಡು ದೇಶಗಳ ಟೆನಿಸ್‌ ಸಂಸ್ಥೆಗಳ ನಡುವೆ ಸೌಹಾರ್ದ ವಾತಾವರಣವಿದೆ. ಆದರೆ ಸಮಸ್ಯೆ ಇರುವುದು ಎರಡು ದೇಶ ಗಳ ನಡುವಿನದ್ದು. ಹೀಗಾಗಿ ಕೇಂದ್ರ ಸರಕಾರದ ನಿರ್ಧಾ ರವೂ ನಮಗೆ ಮುಖ್ಯವಾಗುತ್ತದೆ. ಫ‌ಲಿತಾಂಶಕ್ಕಿಂತ ನಮಗೆ ಆಟಗಾ ರರ ಸುರಕ್ಷತೆ ಮುಖ್ಯ’ ಎಂಬುದಾಗಿ ಚಟರ್ಜಿ ಹೇಳಿದ್ದಾರೆ.

ಆಡದಿದ್ದರೆ ದಂಡ, ಹಿಂಭಡ್ತಿ
“ಇಲ್ಲಿ ವೀಸಾ ಸಮಸ್ಯೆಯೂ ಇದೆ. ಅವರು ವೀಸಾ ನೀಡದೇ ಹೋದರೆ ನಾವು ಪಾಕಿಸ್ಥಾನಕ್ಕೆ ತೆರಳುವ ಪ್ರಶ್ನೆಯೇ ಇಲ್ಲ. ಪಾಕಿಸ್ಥಾನ ಈಗಾಗಲೇ ಸಾಕಷ್ಟು ಪಂದ್ಯಾವಳಿಗಳನ್ನು ತಟಸ್ಥ ತಾಣಗಳಲ್ಲಿ ಆಡಿದೆ. ಆದರೆ ನಾವು ಪಾಕಿಗೆ ಹೋಗುವುದೇ ಇಲ್ಲ ಎಂದು ಹೇಳಿ ತಂಡವನ್ನು ದಂಡನೆಗೊಳಪಡಿಸಲು ಬಯಸುವುದಿಲ್ಲ. ಅಲ್ಲಿನ ಭದ್ರತಾ ವ್ಯವಸ್ಥೆ ಏನಿದ್ದರೂ ವಿಶ್ವ ಟೆನಿಸ್‌ ಒಕ್ಕೂಟದ್ದು. ಹೀಗಾಗಿ ಅದು ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ’ ಎಂದು ಚಟರ್ಜಿ ಹೇಳಿದರು.
2017ರಲ್ಲಿ ಹಾಂಕಾಂಗ್‌ ತಂಡ ಪಾಕಿಸ್ಥಾನದಲ್ಲಿ ಗ್ರೂಪ್‌ 2 ಸೆಮಿಫೈನಲ್‌ ಆಡಲು ನಿರಾಕರಿಸಿದ್ದಕ್ಕೆ ಐಟಿಎಫ್ 10 ಸಾವಿರ ಡಾಲರ್‌ ದಂಡ ವಿಧಿಸುವ ಜತೆಗೆ, ತಂಡವನ್ನು ಏಶ್ಯ/ಓಶಿಯಾನದ ಕೆಳಮಟ್ಟದ ಗುಂಪಿಗೆ ಹಿಂಭಡ್ತಿ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next