Advertisement

ಹೊಸಂಗಡಿಗೆ ಇಂದಿರಾ ಗಾಂಧಿ ವಸತಿ ಶಾಲೆ ಮಂಜೂರು

05:00 AM Jul 24, 2017 | Harsha Rao |

ವೇಣೂರು: ಗ್ರಾಮಸ್ಥರ ಬೇಕು-ಬೇಡಗಳ ಮಧ್ಯೆ ಕೊನೆಗೂ ಬೆಳ್ತಂಗಡಿ ತಾಲೂಕಿನ ಹೊಸಂಗಡಿಗೆ ಮೊರಾರ್ಜಿ ದೇಸಾಯಿ ಶಾಲೆ ಅನುಮೋದನೆಗೊಂಡು, ಮುಂಡಾಜೆಯಲ್ಲಿ ಪ್ರಸಕ್ತ ಸಾಲಿನ ತರಗತಿ ಆರಂಭಗೊಂಡಿದೆ.
2017-18ನೇ ಶೆ„ಕ್ಷಣಿಕ ವರ್ಷದಿಂದಲೇ ಹೊಸಂಗಡಿಗೆ ಕರ್ನಾಟಕ ಸರಕಾರವು ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಮಂಜೂರುಗೊಳಿಸಿದ್ದು, ಹೊಸಂಗಡಿಯಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವವರೆಗೆ ಈ ಶಾಲೆಯು ಮುಂಡಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡದಲ್ಲಿ ನಡೆಯಲಿದೆ. ಪ್ರಸ್ತುತ ಆರನೇ ತರಗತಿವರೆಗೆ ನಡೆಯುತ್ತಿದ್ದು, ಇದರ ಉದ್ಘಾಟನಾ ಸಮಾರಂಭವು ಜು. 25ರಂದು ಜರಗಲಿದೆ.

Advertisement

ಮುಂಡಾಜೆ ಶಾಲೆಯ ರೂಪುರೇಷೆ
1993-94ರಲ್ಲಿ ಡಾ| ಬಿ.ಆರ್‌ ಅಂಬೇಡ್ಕರ್‌ ಜನ್ಮ ಶತಾಬ್ಧ ವರ್ಷದ ಅಂಗವಾಗಿ ಕರ್ನಾಟಕ ಸರಕಾರವು ಪ್ರತಿಯೊಂದು ಶೆ„ಕ್ಷಣಿಕ ವಿಭಾಗಕ್ಕೆ ಒಂದರಂತೆ ನಾಲ್ಕು ನವೋದಯ ಮಾದರಿ ವಸತಿ ಶಾಲೆಗಳನ್ನು ದಲಿತರು ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ಆರಂಭಿಸಿತು. ಮೈಸೂರು ವಿಭಾಗದ ಮೊತ್ತ ಮೊದಲ ಶಾಲೆಯಾಗಿ ಮುಂಡಾಜೆಯ ನವೋದಯ ಮಾದರಿ ವಸತಿ ಶಾಲೆಯು ಆರಂಭವಾಯಿತು. ಸಮಾಜ ಕಲ್ಯಾಣ ಇಲಾಖೆಯೇ ನೇರವಾಗಿ ಈ ಶಾಲೆಯನ್ನು ನಿರ್ವಹಿಸುತ್ತಿತ್ತು. ಅದಾಗಲೇ ಸ್ಥಾಪನೆಗೊಂಡಿದ್ದ ಕೇಂದ್ರ ಸರಕಾರದ ಜವಾಹರ್‌ ನವೋದಯ ವಿದ್ಯಾಲಯಗಳನ್ನು ಮಾದರಿಯಾಗಿರಿಸಿಕೊಂಡು ಮುಂಡಾಜೆ ಶಾಲೆಯನ್ನು ರೂಪಿಸಲಾಗಿತ್ತು.

ಪ್ರಸ್ತುತ ಸಾಲಿನಲ್ಲಿ 43 ವಿದ್ಯಾರ್ಥಿಗಳು
ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿವರೆಗೆ ತರಗತಿಯನ್ನು ಹೊಂದಲಿದೆ. ಪ್ರಸ್ತುತ ಸಾಲಿನ 6ನೇ ತರಗತಿಗೆ 43 ವಿದ್ಯಾರ್ಥಿಗಳು ರಾಜ್ಯದ ವಿವಿಧ ಜಿಲ್ಲೆ
ಗಳಿಂದ ದಾಖಲಾತಿ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿ ನಿಲಯ ಸಂಪೂರ್ಣ ಉಚಿತವಾಗಿದ್ದು, ಶಾಲೆಗೆ ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳ ಆಯ್ಕೆ ನಡೆಯುತ್ತದೆ.

ಜಾಗ ಮೀಸಲು
ಹೊಸಂಗಡಿ ಗ್ರಾ.ಪಂ. ವ್ಯಾಪ್ತಿಯ ಮಲಿಯಾಳಪಲ್ಕೆಯಲ್ಲಿ 4.50 ಎಕ್ರೆ ಜಾಗವನ್ನು ಪಂಚಾಯತ್‌ ಮೀಸಲಿರಿಸಿದ್ದು, ಸರ್ವೇ ಕಾರ್ಯ ಮುಗಿದಿದೆ. ಅನುದಾನ ಬಂದ ಕೂಡಲೇ ಕಟ್ಟಡ ಕಾಮಗಾರಿ ನಡೆಯಲಿದೆ.

ಗ್ರಾಮಸಭೆಯಲ್ಲಿ ಪ್ರತಿಧ್ವನಿ
ಮೊರಾರ್ಜಿ ದೇಸಾಯಿ ವಸತಿ ಶಾಲೆಯು ಇದೀಗ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಹೆಸರಿನಡಿ ಅನುಮೋದನೆಗೊಂಡಿದೆ. ಈ ವಸತಿ ಶಾಲೆ ಹೊಸಂಗಡಿಗೆ ಅನುಮೋದನೆಗೊಳ್ಳಲಿದೆ ಎಂಬ ವಿಷಯ ತಿಳಿದ ಗ್ರಾಮಸ್ಥರು ಶಾಲೆಯ ಬಗ್ಗೆ ಪರ ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಶಾಲೆಗೆ ರಾಜ್ಯಮಟ್ಟದಲ್ಲಿ ವಿದ್ಯಾರ್ಥಿ
ಗಳನ್ನು ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಅವಕಾಶವಿಲ್ಲವೆಂದು ಗ್ರಾಮಸ್ಥರು ಶಾಲೆ ಅನುಮೋದನೆಗೆ ಎರಡೂ ಗ್ರಾಮಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ಪಂಚಾಯತ್‌ನಿಂದ ಎಕ್ರೆಗಟ್ಟಲೆ ಜಮೀನನ್ನು ಶಾಲೆಗೆ ನೀಡಲಾಗುತ್ತದೆ. ಆದರೆ ಸ್ಥಳೀಯ ವಿದ್ಯಾರ್ಥಿಗಳಿಗೆ ಅವಕಾಶ ಇಲ್ಲÉದಿದ್ದರೆ ಶಾಲೆ ಅನುಮೋದನೆಗೆ ಪಂಚಾಯತ್‌ ಅನುಮತಿ ನೀಡಬಾರದು ಎಂದು ಗ್ರಾಮಸ್ಥರು ವಿನಂತಿಸಿದ್ದರು. ಆದರೆ ಈ ಬಗ್ಗೆ ಗ್ರಾಮಸ್ಥರಿಗೆ ಸ್ಪಷ್ಟನೆ ನೀಡಲು ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಗೆ ಸಂಬಂಧಿತ ಯಾವುದೇ ಅಧಿಕಾರಿಗಳು ಈವರೆಗೆ ಗ್ರಾಮಕ್ಕೆ ಬಂದಿಲ್ಲ. ಪ್ರಸಕ್ತ ಸಾಲಿನಿಂದಲೇ ತರಗತಿಗಳು ಪ್ರಾರಂಭಗೊಂಡಿದ್ದರೂ ಯಾವುದೇ ಅಧಿಕಾರಿಗಳು ಹೊಸಂಗಡಿ ಪಂಚಾಯತ್‌ಗೆ ಮಾಹಿತಿ ನೀಡಿಲ್ಲ ಎಂಬ ಆರೋಪ ಗ್ರಾ.ಪಂ.ನಿಂದ ಕೇಳಿ ಬಂದಿದೆ.

Advertisement

ಮುಂಡಾಜೆ ಶಾಲೆಯೂ ಬೆಳ್ತಂಗಡಿಯಲ್ಲಿತ್ತು
ಮುಂಡಾಜೆ ಗ್ರಾಮದಲ್ಲಿ ಸದರಿ ಶಾಲೆಗಾಗಿ 30.50 ಎಕರೆ ಭೂಮಿಯನ್ನು ಕಾಯ್ದಿರಿಸಲಾಯಿತು. ಕಟ್ಟಡ ನಿರ್ಮಾಣವಾಗುವ ತನಕ ಶಾಲೆಯು ಬೆಳ್ತಂಗಡಿಯ ಹಳೆಕೋಟೆಯಲ್ಲಿರುವ ವಿದ್ಯಾರ್ಥಿ ವಸತಿ ನಿಲಯದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಸದರಿ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಅಂದಿನ ಸಮಾಜ ಕಲ್ಯಾಣ ಸಚಿವ ಕಾಗೋಡು ತಿಮ್ಮಪ್ಪ ಅವರು ಖುದ್ದು ಪರಿಶೀಲಿಸಿದ್ದರು. ಅಂದಿನ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಯವರಾದ ಚಂದ್ರಶೇಖರ ಮೂರ್ತಿ, ವಸತಿ ನಿಲಯದ ನಿಲಯ ಪಾಲಕರಾದ ಎನ್‌.ವೀರಪ್ಪ ನಾಯ್ಕ ಅವರು ಕಟ್ಟಡ ಕಾಮಗಾರಿಯ ಮೇಲುಸ್ತುವಾರಿಯನ್ನು ನಡೆಸುತ್ತಿದ್ದರು. ಜೂ. 23, 2004ರಂದು ಶಾಲೆಯು ಹಳೆಕೋಟೆಯಿಂದ ಮುಂಡಾಜೆಯ ತನ್ನ ಸ್ವಂತ ಕಟ್ಟಡಕ್ಕೆ ವರ್ಗಾವಣೆಗೊಂಡಿತು.

ಬೆಳ್ಳಿಹಬ್ಬದ ಸಂಭ್ರಮ
ಆರಂಭದಲ್ಲಿ ನಾಲ್ಕು ನೂರು ವಿದ್ಯಾರ್ಥಿಗಳಿಗಾಗಿ ಶಾಲೆಯನ್ನು ಯೋಜಿಸಲಾಗಿತ್ತು. ಅನಂತರದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಇನ್ನೂರೈವತ್ತಕ್ಕೆ ಮಿತಿಗೊಳಿಸಲಾಯಿತು. ಪ್ರಾರಂಭದಲ್ಲಿ ಇಂಗ್ಲಿಷ್‌ ಮಾಧ್ಯಮ ಶಾಲೆಯಾಗಿತ್ತು. ಅನಂತರ ಕನ್ನಡ ಮಾಧ್ಯಮ ಶಾಲೆಯಾಗಿ ಪರಿವರ್ತಿಸಲಾಯಿತು. 2004ರ ಅನಂತರ ಮತ್ತೆ ಇಂಗ್ಲಿಷ್‌ ಮಾಧ್ಯಮವಾಗಿ ಪರಿವರ್ತಿಸಲಾಗಿದ್ದು, ಪ್ರಸ್ತುತ ಕನ್ನಡವನ್ನು ಪ್ರಥಮ ಭಾಷೆಯಾಗಿ ಹೊಂದಿರುವ ಇಂಗ್ಲಿಷ್‌ ಮಾಧ್ಯಮ ಶಾಲೆಯಾಗಿದೆ. ಪ್ರಸ್ತುತ 210 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಈ ಶಾಲೆ ಇದೀಗ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ.

– ಪದ್ಮನಾಭ ವೇಣೂರು 

Advertisement

Udayavani is now on Telegram. Click here to join our channel and stay updated with the latest news.

Next