Advertisement

ಇಂದಿರಾ ಇಫೆಕ್ಟ್

06:00 AM Jun 15, 2018 | |

ನಂಗೆ ನೀವು ಮದುವೆ ಮಾಡಿ ಉದ್ಧಾರ ಮಾಡೋದೇನೂ ಬೇಡ. ನನ್ನ ಪಾಲನ್ನು ನನಗೆ ಕೊಡಿ ಸಾಕು. ನನ್ನ ಪಾಡಿಗೆ ನಾನು ಇರ್ತೇನೆ” ಎಂದು ಅವಳು ಹಿರಿಯರೆದುರು ನಿಂತು ನುಡಿದಾಗ ಬಹುಶಃ ಹೊಳೆಯೂ ಒಂದರೆಗಳಿಗೆ ಹರಿಯುವುದನ್ನು ಮರೆತು ನಿಂತಿತು. ಅವಳು ಆ ಮನೆಯ ಕಿರಿಯ ಮಗಳು ಮತ್ತು ನೋಡಲು ಕಪ್ಪಾಗಿದ್ದಳು. ಅದರಲ್ಲಿ ಅವಳ ತಪ್ಪೇನೂ ಇರಲಿಲ್ಲ. ಸಾಲಾಗಿ ಮದುವೆಯಾಗಿ ಹೋದ ಆರು ಹೆಣ್ಮಕ್ಕಳಿಗೆ ಅಮ್ಮನ ಗೌರವರ್ಣ ಕೊಡುಗೆಯಾಗಿ ಬಂದಿದ್ದರೆ ಇವಳೊಬ್ಬಳು ಅಪ್ಪನ ಕಡುವರ್ಣವನ್ನು ಹೊತ್ತು ಬಂದಿದ್ದಳು. ಅವಳು ದೊಡ್ಡವಳಾಗುವ ಹೊತ್ತಿಗೆ ಉಳುವವನೆ ಹೊಲದೊಡೆಯ ಎಂಬ ಕಾನೂನು ಚಾಲ್ತಿಗೆ ಬಂದದ್ದರಿಂದಲಾಗಿ ಅವಳ ಬಗ್ಗೆ ಗಮನ ನೀಡಲು ಮನೆಮಂದಿಗ್ಯಾರಿಗೂ ಪುರುಸೊತ್ತಿರಲಿಲ್ಲ. ದಿನಕ್ಕೊಂದು ಗದ್ದೆ ಉಳುವವರ ಪಾಲಾಗಿ ಹೋಗುತ್ತಿದ್ದರೆ ಮನೆಯ ಗಂಡುಗಳೆಲ್ಲ ಅದರ ಉಸಾಬರಿಯಲ್ಲಿ ಮುಳುಗಿಹೋಗಿದ್ದರು. ತಡರಾತ್ರಿಯಲ್ಲಿ ತಲೆಕೆಡಿಸಿಕೊಳ್ಳುತ್ತಲೇ ಹಾಸಿಗೆಗೆ ಬರುವ ಗಂಡಂದಿರೊಡನೆ ಮನೆಯ ಸೊಸೆಯಂದಿರು ಇವಳ ಮದುವೆಯ ಪ್ರಸ್ತಾವ ಸಲ್ಲಿಸುತ್ತಿದ್ದರಾದರೂ ಅವರು ಆ ವಿಷಯದ ಬಗ್ಗೆ ಒಂದಿನಿತೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಹಾಗೆಯೇ ದಿನಗಳು, ವರ್ಷಗಳು ಉರುಳುತ್ತ, ಇರುವ ಭೂಮಿಯೆಲ್ಲ ಹೆರವರ ಪಾಲಾದುದಕ್ಕೆ ಚಿಂತಿಸುತ್ತ, ಇರುವುದನ್ನು ಹಂಚಿಕೊಳ್ಳುವ ಹೊಂಚುಹಾಕುತ್ತ¤ ಕಾಲಕಳೆದ ಅಣ್ಣಂದಿರಿಗೆ ತಂಗಿಯ ಯೌವ್ವನ ಸೋರಿಹೋಗುತ್ತಿದ್ದುದರ ಅರಿವೇ ಇರಲಿಲ್ಲ. ಇತ್ತ ಮದುವೆಯಾಗಿ ಹೋದ ಅಕ್ಕಂದಿರೋ ತಾವು ತವರಿಗೆ ಬಂದಾಗ ಬಸಿರು, ಬಾಣಂತನ ಎಂದು ತಮ್ಮ ಕಷ್ಟಕ್ಕೆ ಒದಗುತ್ತಿದ್ದ ಅವಳನ್ನು ದುಡಿಸಿಕೊಂಡರೇ ಹೊರತು, ಗಂಡನ ಮನೆ ಸೇರಿದ ಮೇಲೆ ತಮ್ಮದೇ ಚಳ್ಳೆಪಿಳ್ಳೆಗಳ ನಿಭಾವಣೆಯಲ್ಲಿ ಮುಳುಗಿಹೋದರು.

Advertisement

ಕಾಲ ಉರುಳಿ ತಮ್ಮ ಮಕ್ಕಳು ಮದುವೆಯ ಪ್ರಾಯಕ್ಕೆ ಬಂದಾಗ ಅಕ್ಕಂದಿರಿಗೆಲ್ಲ ಮದುವೆಯಾಗದೇ ಉಳಿದ ತಂಗಿಯ ನೆನಪಾಗಿತ್ತು. ತಮ್ಮ ಮಕ್ಕಳನ್ನು ಮದುವೆಯಾಗುವವರು ಕುಲ, ಗೋತ್ರ ಜಾಲಾಡುವಾಗ ತವರಿನಲ್ಲಿ ಮದುವೆಯಾಗದೇ ಉಳಿದ ಇವಳು ಮಗ್ಗುಲ ಮುಳ್ಳಾಗುವಳೆಂಬ ಜಾಗ್ರತೆ ಇವಳ ಮದುವೆಯ ಒತ್ತಾಯವಾಗಿ ಮಾರ್ಪಟ್ಟಿತು. ಅಲ್ಲಿಂದೀಚೆ ವರಗಳ ಬೇಟೆ ಆರಂಭಗೊಂಡಿತು. ಸರಿಯಿರುವವಳನ್ನೇ ಮದುವೆ ಮಾಡಲು ಕಷ್ಟವಾಗಿರುವ ದಿನಗಳಲ್ಲಿ, ಮಾಸಲು ಬಣ್ಣದ, ವಯಸ್ಸು ಸ್ವಲ್ಪ$ಹೆಚ್ಚೇ ಆದ ಇವಳಿಗೆ ವರನನ್ನು ಹುಡುಕುವುದೆಂದರೇನು ಸಾಮಾನ್ಯವೆ? ಮನೆತುಂಬ ಮಕ್ಕಳಿದ್ದು ಹೆಂಡತಿಯನ್ನು ಕಳಕೊಂಡು ಎರಡನೆಯ ಮದುವೆಯಾಗುವವರು, ರೋಗಗ್ರಸ್ತರಾಗಿ ಮದುವೆಯಾಗದೇ ಉಳಿದವರು, ಕಣ್ಣು, ಕೈ, ಕಾಲು ಊನಗೊಂಡವರು- ಹೀಗೆ ಥರಾವರಿ ವರಗಳು ಅವಳನ್ನು ನೋಡಲು ಮನೆಗೆ ಲಗ್ಗೆಯಿಡತೊಡಗಿದರು. ಯೌವ್ವನದ ಕನಸನ್ನೆಲ್ಲ ಕಳಕೊಂಡಿದ್ದ ಅವಳಲ್ಲಿ ಮೂಡಿದ್ದ ಪ್ರೌಢತೆ ಇವರನ್ನೆಲ್ಲ ಒಪ್ಪಿಕೊಳ್ಳಲು ಬಿಡುತ್ತಿರಲಿಲ್ಲ. ಹಾಗಾಗಿ, ಬಂದವರೆಲ್ಲ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ತೆರಳುವುದು, ಮತ್ತೆ ಇನ್ನೂ ಅಂಥವರೇ ಬರುವುದು ನಡೆದೇ ಇತ್ತು. ಇದು ಯಾವ ಹಂತ ತಲುಪಿತೆಂದರೆ ಊರಲ್ಲಿ ಯಾರಾದರೂ ಅಪರಿಚಿತ ಭಿಕ್ಷುಕರನ್ನು ಕಂಡರೂ ಇವಳನ್ನು ನೋಡಲು ಬಂದವರಿರಬೇಕೆಂದು ಜನರು ಊಹಿಸುವಂತಾಗಿಹೋಯ್ತು. ಹೀಗೆ ಬಂದ ವರನೊಬ್ಬ ಅವನನ್ನು ಕಾಡುತ್ತಿದ್ದ ಉಬ್ಬಸದ ಕಾಯಿಲೆ ಉಲ್ಬಣಿಸಿ ಇವರ ಮನೆಯಲ್ಲೇ ವಾರವಿಡೀ ಇದ್ದು ಸುಧಾರಿಸಿಕೊಂಡು ಹೋಗಬೇಕಾಯ್ತು. ಇರಲಿ ಎಂದು ಇವಳೂ ಅವನಿಗೆ ಬಿಸಿನೀರು ಅದೂ ಇದೂ ಅಂತ ಮಾಡಿಕೊಟ್ಟರೆ, ಅತ್ತಿಗೆಯಂದಿರೆಲ್ಲ ಸೇರಿ “ಅವನನ್ನೇ ಮದುವೆಯಾಗಿ ಹೀಗೆಯೇ ಸೇವೆಮಾಡಿಕೊಂಡಿದ್ದರೇನು ದಾಡಿ?’ ಎಂದು ಇವಳ ಮದುವೆಯನ್ನು ಅವನೊಂದಿಗೆ ಮಾಡಿಸುವ ಯೋಜನೆಯನ್ನೇ ಹೆಣೆದುಬಿಟ್ಟಿದ್ದರು. ಇದನ್ನೆಲ್ಲ ನೋಡಿ ರೋಸಿಹೋದ ಅವಳು ಇಂದು ತನ್ನ ಪಾಲನ್ನು ನೀಡುವಂತೆ ಗಟ್ಟಿದನಿಯಲ್ಲಿ ಮಾತನ್ನಾಡಿದ್ದಳು. 

ಹೆಣ್ಣುಮಕ್ಕಳಿಗೆ ಏಕಮೇವ ಆಸ್ತಿಯೆಂದರೆ ಅವಳ ಗಂಡ ಮಾತ್ರವೇ ಅಂದುಕೊಂಡಿದ್ದ ಆ ಮನೆಯ ಗಂಡು ಜಾತಿ ಇವಳ ಬೇಡಿಕೆಯನ್ನು ಕೇಳಿ ನಿಬ್ಬೆರಗಾಗಿತ್ತು. ನಿಧಾನವಾಗಿ ಸಾವರಿಸಿಕೊಂಡ ದೊಡ್ಡ ಅಣ್ಣ ಕೇಳಿದ್ದ, “ಆಸ್ತಿಯೇನೋ ಕೊಡಬಹುದು. ಆಳಲಿಕ್ಕೆ ನಿನ್ನಿಂದಾದೀತೇನು?’  ಅದಕ್ಕವಳು ಥಟ್ಟನೆ ಉತ್ತರಿಸಿದ್ದಳು, “ಯಾಕೆ ಇಂದಿರಾಗಾಂಧಿ ಇಡಿಯ ದೇಶವನ್ನೇ ಆಳುತ್ತಿಲ್ಲವೇನು?’ ಅವರ ನಂಬಿಕೆಯ ಅಡಿಪಾಯವನ್ನೇ ಅಲ್ಲಾಡಿಸಿದ ಈ ಉತ್ತರದಿಂದಾಗಿ ಅವರೆಲ್ಲರೂ ತಬ್ಬಿಬ್ಟಾದರು. ಇನ್ನು ಮಾತನಾಡಿ ಸುಖವಿಲ್ಲವೆಂದು ಎಲ್ಲ ಜವಾಬ್ದಾರಿಯನ್ನು ಅವಳ ಹುಟ್ಟಿಗೆ ಕಾರಣಕರ್ತನಾದ ತಂದೆಯ ಹೆಗಲಿಗೇರಿಸಿ ಅಲ್ಲಿಂದ ಜಾರಿಕೊಂಡರು.

ಊರಿನಲ್ಲಿಡೀ ಚುನಾವಣೆಯ ಕಾವು ಏರತೊಡಗಿತ್ತು. ಕೈಯ ಗುರುತೊಂದಲ್ಲದೇ ಬೇರೆ ಯಾವುದರ ಪರಿಚಯವಿಲ್ಲದ ಊರ ಜನರೆಲ್ಲ ನಿಶ್ಚಿಂತರಾಗಿದ್ದರೆ, ಇಂದಿರಮ್ಮನೇ ತಮ್ಮ ಮನೆಯ ಎಲ್ಲ ಅನಿಷ್ಟಗಳಿಗೆ ಕಾರಣಳೆಂಬ ಕೋಪದಲ್ಲಿರುವ ಅಣ್ಣಂದಿರು ಜನತಾ ಒಕ್ಕೂಟವನ್ನು ಗೆಲ್ಲಿಸುವ ತಂತ್ರ ರೂಪಿಸತೊಡಗಿದರು. ತಮ್ಮ ಸಂಪರ್ಕಕ್ಕೆ ಬರುವ ಎಲ್ಲರಿಗೂ ಈ ಸಲ ಬೇರೆ ಗುರುತಿಗೆ ಮತನೀಡುವಂತೆ ಮನವೊಲಿಸತೊಡಗಿದರು. ಊರ ಹೆಂಗಳೆಯರಿಗಂತೂ ಇದ್ಯಾವುದರ ಉಸಾಬರಿಯಿರಲಿಲ್ಲ. ಏಕೆಂದರೆ, ಅವರೆಲ್ಲರೂ ತಮ್ಮ ಗಂಡಸರು ಹೇಳಿದ ಗುರುತಿನ ಮುಂದೆ ಮುದ್ರೆಯೊತ್ತಿ ಬರುತ್ತಿದ್ದರು. ಅವರ ಚಿಂತೆಯೆಲ್ಲ ಓಟು ಹಾಕಲು ಹೋದಾಗ ಗಂಡನ ಹೆಸರು ಕೇಳಿದರೆ ಹೇಗೆ ಹೇಳುವುದು? ಎಂಬುದರ ಕಡೆಗೇ ಇತ್ತು. ಯಾಕೆಂದರೆ, ಜೀವವಿರುವವರೆಗೆ ಗಂಡನ ಹೆಸರನ್ನು ಹೇಳಬಾರದೆಂಬ ಪಾತಿವ್ರತ್ಯದ ನಿಯಮಕ್ಕೆ ಅವರು ಒಗ್ಗಿಕೊಂಡಿದ್ದರು. ಹಾಗಾಗಿ, ಗಂಡನ ಹೆಸರನ್ನು ಹೇಳಲೆಂದೇ ಜೊತೆಗೊಬ್ಬರನ್ನು ಕರೆದೊಯ್ಯುವ ಸನ್ನಾಹದಲ್ಲಿದ್ದರು. 

ಮನೆಯಿಂದ ಹೊರಗೆ ಹೊರಡುವಾಗ ಎಲ್ಲ ಹೆಂಗಸರನ್ನೊಮ್ಮೆ ಯಾವ ಚಿಹ್ನೆಗೆ ಮತಹಾಕುವಿರೆಂದು ವಿಚಾರಿಸುವ ಕ್ರಮವಿತ್ತು. ಹಾಗೆ ಕೇಳಿದಾಗ ಸೊಸೆಯಂದಿರೆಲ್ಲರೂ ಅವರು ಮತ ಹಾಕಬೇಕಾದ ಚಿಹ್ನೆಯನ್ನು ಹೆಸರಿಸಿ ಗಂಡನ ಮೆಚ್ಚುಗೆಗೆ ಪಾತ್ರರಾದರು. ಇವಳು ಮಾತ್ರ ಮುಗುಮ್ಮಾಗಿ ಮುಖ ಬಿಗಿದುಕೊಂಡೇ ಇದ್ದಳು. ಕೊನೆಯ ಅಸ್ತ್ರವಾಗಿ ಹಿರಿಯಣ್ಣ ಇವಳಲ್ಲಿ ಕೇಳಿದ, “ನೀನು ಯಾರಿಗೆ ವೋಟ್‌ ಹಾಕುವವಳು?’ ಸರಕ್ಕನೆ ಬಂತು ಉತ್ತರ, “ನಾನು ಇಂದಿರಾಗಾಂಧಿಗೇ ವೋಟು ಹಾಕುವವಳು’. ಅಣ್ಣ ಉಕ್ಕುತ್ತಿದ್ದ ಸಿಟ್ಟನ್ನು ನಿಯಂತ್ರಿಸುತ್ತ ಕೇಳಿದ, “ಯಾಕೆ?’ ಬಿಟ್ಟ ಬಾಣದಂತೆ  ಉತ್ತರಿಸಿದಳು, “ಇಂದಿರಾಗಾಂಧಿಗೆ ಮದುವೆಯಾಗದ ಮಗನಿದ್ದಾನೆ, ನನ್ನನ್ನು ಸೊಸೆಯಾಗಿ ಮಾಡಿಕೊಳ್ಳುವೆ ಎಂದಿದ್ದಾಳೆ, ಅದಕ್ಕೆ’

Advertisement

ದೂರದ ದೆಹಲಿಯಲ್ಲೆಲ್ಲೋ ಕುಳಿತು ರಾಜ್ಯವಾಳುವ ಹೆಣ್ಣುಮಗಳೊಬ್ಬಳು ಹೀಗೆ ತಮ್ಮ ಕುಟುಂಬವನ್ನು ಕಾಡುವ ಬಗೆಗೆ ಕಾರಣವೇನೂ ತಿಳಿಯದ ಅವಳ ತಂದೆ ಮಾರನೆಯ ದಿನವೇ ಜಮೀನಿನ ಪಹಣಿಯೊಂದಿಗೆ ಊರ ಶ್ಯಾನುಭೋಗರ ಕಚೇರಿಯ ಬಾಗಿಲನ್ನು ತಟ್ಟಿದರು.

ಸುಧಾ ಆಡುಕಳ

Advertisement

Udayavani is now on Telegram. Click here to join our channel and stay updated with the latest news.

Next