Advertisement

ಇಂದಿರಾ ಕ್ಯಾಂಟೀನ್ ಹೆಸರಲ್ಲಿ ಲೂಟಿ, ಸದನದಲ್ಲಿ ರಾಮದಾಸ್ ಏಕಾಂಗಿ!

03:28 PM Jul 13, 2018 | Team Udayavani |

ಬೆಂಗಳೂರು: ಇಂದಿರಾ ಕ್ಯಾಂಟೀನ್ ಹೆಸರಿನಲ್ಲಿ ಲೂಟಿ ಮಾಡಲಾಗುತ್ತಿದೆ. ಈ ಬಗ್ಗೆ ತನ್ನಲ್ಲಿ ದಾಖಲೆಗಳಿವೆ ಎಂದು ಬಿಜೆಪಿ ಶಾಸಕ ಎಸ್ .ಎ.ರಾಮದಾಸ್ ಆರೋಪಿಸಿದ್ದರು. ಈ ಬಗ್ಗೆ ಚರ್ಚೆ ನಡೆಸಲು ಅವಕಾಶ ಕೊಡಬೇಕೆಂದು ಕೋರಿದ್ದರು. ಆದರೆ ಸ್ಪೀಕರ್ ರಮೇಶ್ ಕುಮಾರ್ ಅವರು ಅವಕಾಶ ಕೊಡದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ರಾಮದಾಸ್ ಸಭಾತ್ಯಾಗ ನಡೆಸಿದರು. ಆದರೆ ಬಿಜೆಪಿ ಈ ಸಂದರ್ಭದಲ್ಲಿ ಅವರಿಗೆ ಸಾಥ್ ಕೊಡದೇ, ರಾಮದಾಸ್ ಏಕಾಂಗಿಯಾದ ಪ್ರಸಂಗ ನಡೆಯಿತು.

Advertisement

ಶುಕ್ರವಾರ ವಿಧಾನಸಭೆಯ ಕಲಾಪದಲ್ಲಿ ರಾಮದಾಸ್ ಅವರು ಮಾತನಾಡಿ, ಇಂದಿರಾ ಕ್ಯಾಂಟೀನ್ ಹೆಸರಿನಲ್ಲಿ ಲೂಟಿ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಪ್ರತಿ ದಿನ 1.5 ಲಕ್ಷ ಜನ ಊಟ ಮಾಡುತ್ತಿದ್ದಾರೆ. ಆದರೆ 6,72,750 ಜನ ಊಟ ಮಾಡಿದ್ದಾರೆ ಎಂದು ಹೇಳುತ್ತಾರೆ. ಎಷ್ಟು ಜನ ಇಂದಿರಾ ಕ್ಯಾಂಟೀನ್ ಊಟ ಮಾಡುತ್ತಿದ್ದಾರೆಂಬ ಬಗ್ಗೆ ದಾಖಲೆಗಳಿಲ್ಲ ಎಂದು ದೂರಿದರು.

ಇಂದಿರಾ ಕ್ಯಾಂಟೀನ್ ನಲ್ಲಿ ಒಬ್ಬರಿಗೆ 250 ಗ್ರಾಂ ಆಹಾರ ಕೊಡುವುದಾಗಿ ಹೇಳಿದ್ದಾರೆ. ವಿಪರ್ಯಾಸವೆಂದರೆ ಕ್ಯಾಂಟೀನ್ ನಲ್ಲಿ ಆಹಾರ ಕೊಡಲು ಯಾವುದೇ ತೂಕದ ಮಾಪನಗಳಿಲ್ಲ ಎಂದು ಹೇಳಿ ದಾಖಲೆಯನ್ನು ಸದನದ ಮುಂದಿಟ್ಟಿದ್ದರು.

ಈ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್ ನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ, ಇದು ಸುಳ್ಳು ಆರೋಪ ಎಂದಾಗ ಅಸಮಾಧಾನಗೊಂಡ ರಾಮದಾಸ್ ಅವರು ಕಲಾಪದಿಂದ ಹೊರನಡೆದಿದ್ದರು. ಈ ವೇಳೆ ಬಿಜೆಪಿ ಉಳಿದ ಸದಸ್ಯರ ರಾಮದಾಸ್ ಅವರನ್ನು ಬೆಂಬಲಿಸದೇ ಮೌನಕ್ಕೆ ಶರಣಾಗಿದ್ದರು. ಇಂದಿರಾ ಕ್ಯಾಂಟೀನ್ ಗಳ ಅಕ್ರಮದ ಬಗ್ಗೆ ಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ರಾಮದಾಸ್ ಕಲಾಪಕ್ಕೆ ತೆರೆ ಬಿದ್ದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next