Advertisement

ಇಂದಿರಾ ಕ್ಯಾಂಟೀನ್‌ ಪ್ರಗತಿ ಕುಂಠಿತ ಜನಪ್ರಿಯ ಯೋಜನೆ ವಿಳಂಬ ಬೇಡ

06:00 AM Nov 10, 2018 | |

ಯೋಜನೆಗೆ ಚಾಲನೆ ದೊರೆತು ವರ್ಷ ಕಳೆದಿದೆ. ಶೇ.50ರಷ್ಟೂ ಅನುಷ್ಠಾನವಾಗಿಲ್ಲ. ಸಮ್ಮಿಶ್ರ ಸರಕಾರ ಬಂದ ನಂತರ ವೇಗ ಕಡಿಮೆ ಯಾಗಿದೆ. ಕಾಂಗ್ರೆಸ್‌ ಯೋಜನೆ ಎಂಬ ಕಾರಣಕ್ಕೆ ನಿರ್ಲಕ್ಷಿಸಿದರೆ ಜನರಿಗೆ ಅನ್ಯಾಯ ಮಾಡಿದಂತೆ.

Advertisement

ಬಡ ಹಾಗೂ ಮಧ್ಯಮ ವರ್ಗದವರಿಗೆ ಕಡಿಮೆ ಬೆಲೆಗೆ ಮೂರು ಹೊತ್ತಿನ ಊಟ ನೀಡುವ ಉದ್ದೇಶವಿರುವ ಇಂದಿರಾ ಕ್ಯಾಂಟೀನ್‌ ಯೋಜನೆಗೆ ರಾಜಕೀಯ ಬಣ್ಣ ಲೇಪಿಸಿ, ಅದರ ಅನುಷ್ಠಾನ ನಿಗದಿತ ಅವಧಿಯೊಳಗೆ ಕೈಗೊಳ್ಳದೆ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಪ್ರತಿಯೊಂದು ಸರಕಾರವೂ ತನ್ನ ಆಡಳಿತ ಅವಧಿಯಲ್ಲಿ ಬಡ ಹಾಗೂ ಮಧ್ಯಮ ವರ್ಗದವರಿಗಾಗಿ ಒಂದಲ್ಲ ಒಂದು ಜನಪ್ರಿಯ ಯೋಜನೆ ಘೋಷಿಸುತ್ತದೆ. ಅಂತೆಯೇ ಕಾಂಗ್ರೆಸ್‌ ಸರಕಾರ ಸಹ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೆಸರಿನಲ್ಲಿ ಇಂದಿರಾ ಕ್ಯಾಂಟೀನ್‌ ಯೋಜನೆ ಜಾರಿಗೆ ತಂದಿದೆ. ಜನರಿಗೆ ನೇರವಾಗಿ ತಲುಪಿ ಅನುಕೂಲವಾಗುವ ಇಂತಹ ಯೋಜನೆಗಳು ಶೀಘ್ರ ಅನುಷ್ಠಾನವಾಗಿ ಜನಪರ ಯೋಜನೆಗಳಾಗಿ ಮಾರ್ಪಡಬೇಕೇ ಹೊರತು, ಯೋಜನೆ ತಂದಿದ್ದು ಬೇರೊಂದು ಪಕ್ಷ ಎಂಬ ಕಾರಣಕ್ಕೆ ಅದರ ಅನುಷ್ಠಾನದಲ್ಲಿಯೂ ರಾಜಕೀಯ ತಂದು ವಿಳಂಬ ಧೋರಣೆ ಅನುಸರಿಸುವುದು ಸೂಕ್ತವಲ್ಲ. 

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರ ಭಾಗದಲ್ಲಿನ ಎಲ್ಲ ಬಡವರಿಗೂ ಮೂರು ಹೊತ್ತಿನ ಊಟ ಕಡಿಮೆ ಬೆಲೆಯಲ್ಲಿ ದೊರೆಯುವಂತೆ ಮಾಡಲು ಇಂದಿರಾ ಕ್ಯಾಂಟೀನ್‌ ಯೋಜನೆ ಜಾರಿಗೊಳಿಸಿ ದ್ದರು. ಕಾಂಗ್ರೆಸ್‌ ತನ್ನ ಓಟು ಬ್ಯಾಂಕ್‌ ವೃದ್ಧಿಗಾಗಿ ಈ ಯೋಜನೆ ಜಾರಿಗೊಳಿ ಸಿತು ಎಂಬ ಆರೋಪಗಳಿದ್ದರೂ, ಕ್ಯಾಂಟೀನ್‌ಗಳಲ್ಲಿ ಸದ್ಯಕ್ಕೆ ನಿತ್ಯ 3 ಲಕ್ಷ ಜನರಿಗೆ ಅನುಕೂಲವಾಗುತ್ತಿದೆ. 

ಇಂದಿರಾ ಕ್ಯಾಂಟೀನ್‌ನಲ್ಲಿ ಗುಣ ಮಟ್ಟದ ಊಟ ದೊರೆಯುವುದಿಲ್ಲ, ಕಡಿಮೆ ಜನರಿಗೆ ಆಹಾರ ವಿತರಿಸಿ ಹೆಚ್ಚಿಗೆ ಬಿಲ್‌ ಪಡೆಯಲಾಗುತ್ತಿದೆ ಎಂಬ ದೂರುಗಳನ್ನು ಇಂದಿರಾ ಕ್ಯಾಂಟೀನ್‌ಗಳು ಎದುರಿಸುತ್ತಿವೆ. ಆ ಬಗ್ಗೆ ತನಿಖೆ ಆಗಬೇಕು ಮತ್ತು ಅದರ ಹಿಂದೆ ಇರುವ ರಾಜಕೀಯ ಪುಢಾರಿಗಳೂ ಅನಾವರಣಗೊಳ್ಳಬೇಕು. ಆದರೆ, ತಳಮಟ್ಟದ ಸಮುದಾಯವನ್ನು ನೇರವಾಗಿ ತಲುಪುವಂತಹ ಯೋಜನೆಯನ್ನು ಒಂದು ಪಕ್ಷಕ್ಕೆ ಸೀಮಿತಗೊಳಿಸಿ, ಅದು ಜನರಿಗೆ ತಲುಪದಂತೆ ಮಾಡಲು ಮುಂದಾಗುವುದು ಕೂಡಾ ಸರಿಯಲ್ಲ.

ಇಂದಿರಾ ಕ್ಯಾಂಟೀನ್‌ ಬೆಂಗಳೂರಿನಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಭಾಗಗಳ ಜನರಿಗೂ  ಕ್ಯಾಂಟೀನ್‌ ಸೇವೆ ವಿಸ್ತರಿಸುವ ಸದುದ್ದೇಶವೋ ಅಥವಾ ರಾಜಕೀಯ ಉದ್ದೇಶಕ್ಕಾಗಿಯೋ ಸಿದ್ದರಾಮಯ್ಯ ರಾಜ್ಯದ 249 ಕಡೆಗಳಲ್ಲಿ ಕ್ಯಾಂಟೀನ್‌ ನಿರ್ಮಿಸುವ ಯೋಜನೆಗೆ ಚಾಲನೆ ನೀಡಿದ್ದು, ಯೋಜನೆಯಿಂದ ಕಾಂಗ್ರೆಸ್‌ಗೆ ಅನುಕೂಲವಾಗಿದೆಯೋ, ಇಲ್ಲವೋ ಎನ್ನುವುದಕ್ಕಿಂತಲೂ ಅದು ಜನರಿಗೆ ಎಷ್ಟರ ಮಟ್ಟಿಗೆ ಅನುಕೂಲವಾಗಿದೆ ಎಂಬುದು ಇಲ್ಲಿ ಪ್ರಮುಖ ವಿಚಾರವಾಗುತ್ತದೆ. 

Advertisement

ಯೋಜನೆಗೆ ಚಾಲನೆ ದೊರೆತು ವರ್ಷ ಕಳೆದಿದೆ. ಆದರೆ, ಈವರೆಗೆ ಶೇ.50ರಷ್ಟು ಅನುಷ್ಠಾನವಾಗಿಲ್ಲ. ಸಮ್ಮಿಶ್ರ ಸರಕಾರ ಬಂದ ಅನಂತರ ಯೋಜನೆ ಅನುಷ್ಠಾನ ವೇಗ ಕಡಿಮೆಯಾಗಿದೆ. ಒಂದು ವೇಳೆ ಕಾಂಗ್ರೆಸ್‌ ಜಾರಿಗೆ ತಂದ ಯೋಜನೆ ಎಂಬ ಕಾರಣಕ್ಕಾಗಿ ಇಂದಿರಾ ಕ್ಯಾಂಟೀನ್‌ ಯೋಜನೆಯನ್ನು ಜೆಡಿಎಸ್‌ ನಿರ್ಲಕ್ಷಿಸಿದರೆ, ಅದು ರಾಜ್ಯದ ಜನರಿಗೆ ಮಾಡಿದ ಅನ್ಯಾಯವಾಗುತ್ತದೆ. 

ಜನಪ್ರಿಯ ಯೋಜನೆಗಳನ್ನು ಸಿದ್ದರಾಮಯ್ಯ ಮಾತ್ರವೇ ಜಾರಿಗೊಳಿಸಿಲ್ಲ. ಈ ಹಿಂದಿನ ಪ್ರತಿಯೊಂದು ಸರಕಾರವೂ ಆಯಾ ಸಂದರ್ಭಕ್ಕೆ ಅನುಗುಣವಾಗಿ ಯೋಜನೆಗಳನ್ನು ಜಾರಿಗೊಳಿಸಿರುವ ಹಲವಾರು ನಿದರ್ಶನಗಳಿವೆ. ಹಿಂದೆ ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಜೋಡಿಯ ಸರಕಾರ ಲಾಟರಿ ಹಾಗೂ ಸಾರಾಯಿಯಿಂದ ಸಂಸಾರಗಳು ಹಾಳಾಗಬಾರದೆಂದು ರಾಜ್ಯದಲ್ಲಿ ಅವುಗಳನ್ನು ನಿಷೇಧಿಸಿದೆ. 

ಜತೆಗೆ, ಹೆಣ್ಣು ಮಕ್ಕಳು ಶಾಲೆಗಳಿಗೆ ಬರುವುದನ್ನು ಪ್ರೋತ್ಸಾಹಿಸಲು ಪ್ರೌಢಶಾಲೆಗೆ ಬರುವ ಹೆಣ್ಣು ಮಕ್ಕಳಿಗೆ ಸೈಕಲ್‌ ನೀಡುವ ಬಿ.ಎಸ್‌. ಯಡಿಯೂರಪ್ಪ ಅವರ ಯೋಜನೆ ಇಂದಿಗೂ ಜನಪ್ರಿಯ. ಸೈಕಲ್‌ ನೀಡುವ ಯೋಜನೆಯಿಂದಾಗಿ ಲಕ್ಷಾಂತರ ಹೆಣ್ಣು ಮಕ್ಕಳು ವಿದ್ಯಾವಂತರಾಗಿದ್ದು, ತಮ್ಮ ಜೀವನ ರೂಪಿಸಿಕೊಂಡಿದ್ದಾರೆ. ಇದು ಬಿಜೆಪಿ-ಜೆಡಿಎಸ್‌ ತಂದ ಯೋಜನೆ ಎಂಬ ಕಾರಣಕ್ಕೆ ಮುಂದೆ ಹೆಣ್ಣು ಮಕ್ಕಳಿಗೆ ಸೈಕಲ್‌ ನೀಡುವುದನ್ನು ನಿಲ್ಲಿಸಲು ಸಾಧ್ಯವೇ? ಅಥವಾ ಭ್ರೂಣ ಹತ್ಯೆ ತಡೆಯಲು ಜಾರಿಗೊಳಿಸಿದ ಭಾಗ್ಯಲಕ್ಷ್ಮೀ ಯೋಜನೆ ನಿಲ್ಲಿಸಲಾಗುತ್ತದೆಯೇ? ಅಂತಹ ಯೋಜನೆಗಳ ಸಾಲಿಗೆ ಇಂದಿರಾ ಕ್ಯಾಂಟೀನ್‌ ಸೇರಿದ್ದು, ಇಂದಿರಾ ಎಂಬ ಹೆಸರಿದೆ ಎಂಬ ಕಾರಣಕ್ಕಾಗಿ ಯೋಜನೆಯನ್ನು ನಿರ್ಲಕ್ಷಿಸುವುದು ಉಚಿತವಲ್ಲ.

Advertisement

Udayavani is now on Telegram. Click here to join our channel and stay updated with the latest news.

Next