Advertisement

ಚಿಂಚೋಳಿಗೆ ಪ್ರಚಾರಕ್ಕೆ ಬಂದಿದ್ರು ಇಂದಿರಾ

10:40 AM May 07, 2018 | |

ಕಲಬುರಗಿ: ಚಿಂಚೋಳಿ ಮತ್ರಕ್ಷೇತ್ರ ಅತಿಯಾಗಿ ಹಿಂದುಳಿದಿದ್ದರೂ ರಾಜಕೀಯವಾಗಿ ತನ್ನದೇ ಆದ ಖ್ಯಾತಿ ಹೊಂದಿದೆ. ವಿವಿಧ ಪಕ್ಷಗಳ ರಾಷ್ಟ್ರಮಟ್ಟದ ನಾಯಕರು ಚುನಾವಣೆ ಪ್ರಚಾರಕ್ಕೆ ಆಗಮಿಸಿ ಇಲ್ಲಿನ ರಾಜಕೀಯಕ್ಕೆ ರಂಗು ನೀಡಿದ ಇತಿಹಾಸ ಇಲ್ಲಿದೆ. ಚಿಂಚೋಳಿ ಸಾಮಾನ್ಯ ವಿಧಾನಸಭೆ ಕ್ಷೇತ್ರ ಮತ್ತು ಕಲಬುರಗಿ ಲೋಕಸಭೆ ಕ್ಷೇತ್ರಕ್ಕೆ ಚುನಾವಣೆಗಳು ನಡೆದಾಗ ವಿವಿಧ ಪಕ್ಷಗಳ ರಾಷ್ಟ್ರಮಟ್ಟದ ನಾಯಕರು ಪಟ್ಟಣಕ್ಕೆ ಆಗಮಿಸಿದ್ದರು ಮತ್ತು ಆಗಮಿಸುತ್ತಿದ್ದಾರೆ.

Advertisement

1974ರಲ್ಲಿ ಸಂಸದರಾಗಿದ್ದ ಧರ್ಮರಾವ್‌ ಅಫಜಲಪುರಕರ್‌ ನಿಧನರಾದ ನಂತರ ನಡೆದ ಲೋಕಸಭೆ ಉಪ ಚುನಾವಣೆ ವೇಳೆಯಲ್ಲಿ ಜನಸಂಘದ ಅಭ್ಯರ್ಥಿಯಾಗಿದ್ದ ವೇಳೆ ಡಿ.ಎಚ್‌. ಇಲ್ಲಾಳ ಪರ ಚುನಾವಣೆ ಪ್ರಚಾರ ಕೈಗೊಳ್ಳಲು ಕುಶಾಬಾವು ಠಾಕ್ರೆ, ಸುಂದರಸಿಂಗ್‌ ಭಂಡಾರಿ, ಜಗನ್ನಾಥರಾವ್‌ ಜೋಶಿ ಆಗಮಿಸಿದ್ದರು. 

ಲೋಕಸಭೆ ಚುನಾವಣೆ ವೇಳೆ ಮಾಜಿ ಪ್ರಧಾನಮಂತ್ರಿ ಚಂದ್ರಶೇಖರ 1979ರಲ್ಲಿ ಹಳೆ ಆಸ್ಪತ್ರೆ ಪಕ್ಕದಲ್ಲಿದ್ದ ವಿದ್ಯುತ್‌ ಉಪಕೇಂದ್ರದಲ್ಲಿ ಜನತಾ ಪಕ್ಷದ ಅಭ್ಯರ್ಥಿ ವೈಜನಾಥ ಪಾಟೀಲ ಪರ ಪ್ರಚಾರ ಕೈಗೊಳ್ಳಲು ಆಗಮಿಸಿದ್ದರು.
 
ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಅಧಿನಾಯಕಿ ಹಾಗೂ ಆಗಿನ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರು 1976ರಲ್ಲಿ ವಿಧಾನಸಭೆಗೆ ಚುನಾವಣೆ ನಡೆಯುವ ಸಂದರ್ಭದಲ್ಲಿ ಸೇಡಂನಿಂದ ಬೀದರಗೆ ಹೋಗುವ ಮಾರ್ಗ ಮಧ್ಯದಲ್ಲಿ ಪಟ್ಟಣಕ್ಕೆ ರಾತ್ರಿ ವೇಳೆ ಆಗಮಿಸಿ ಈಗಿನ ಸರಕಾರಿ ಕನ್ಯಾ ಕಾಲೇಜು (ಪೊಲೀಸ್‌ ಪರೇಡ್‌) ಮೈದಾನದಲ್ಲಿ ಆಗಿನ ಕಾಂಗ್ರೆಸ್‌ ಅಭ್ಯರ್ಥಿ ದೇವೇಂದ್ರಪ್ಪ ಘಾಳಪ್ಪ ಜಮಾದಾರ ಪರ ಹಾತ್‌ ನಿಶಾನ್‌ ಕೋ ವೋಟ್‌ ಡಾಲಿಯೇ ಎಂದು ಮಾತನಾಡಿ ನೆರೆದ ಜನರ ಗಮನ ಸೆಳೆದಿದ್ದರು. 

ಇಂದಿರಾಗಾಂಧಿ  ಅವರನ್ನು ನೋಡಲು ತಾಲೂಕಿನ ಅನೇಕ ಗ್ರಾಮಗಳಿಂದ ಜನರು ಆಗಮಿಸಿದ್ದರು. ಇದೇ ವೇಳೆ ಅವರ ಜೊತೆ ಕಾಂಗ್ರೆಸ್‌ ಮುಖಂಡ ಗುಂಡೂರಾವ್‌ ಆಗಮಿಸಿದ್ದರು. ಮಲ್ಲಿಕಾರ್ಜುನ ಖರ್ಗೆ ಜತೆಯಲ್ಲಿದ್ದರು. ಅಂದಿನ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹಾಗೂ 1985ರಲ್ಲಿ ಚಿಂಚೋಳಿ ಕ್ಷೇತ್ರದಿಂದ ಶಾಸಕರಾಗಿದ್ದ ಹಿರಿಯರಾದ ಎಂ. ವೀರಯ್ಯ ಸ್ವಾಮಿ ಈ ಕುರಿತು ಮಾಹಿತಿ ನೀಡಿದ್ದಾರೆ.

ಆಂಧ್ರದ ಟಿ. ಅಂಜಯ್ಯ ಪಟ್ಟಣಕ್ಕೆ ಆಗಮಿಸಿ ವಿಧಾನಸಭೆಗೆ ಸ್ಪರ್ಧಿಸಿದ್ದ ದೇವೇಂದ್ರಪ್ಪ ಘಾಳಪ್ಪ ಜಮಾದಾರ ಪರ ಪ್ರಚಾರ ಭಾಷಣ ಮಾಡಿದ್ದರು. ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಮಾಜಿ ಸಚಿವ ವೈಜನಾಥ ಪಾಟೀಲ ಪರವಾಗಿ ಆಗಿನ ಉಪಪ್ರಧಾನಿ ದೇವಿಲಾಲ್‌, ಆಗಿನ ಕೇಂದ್ರ ಸಚಿವರಾದ ರಾಮವಿಲಾಸ್‌ ಪಾಸ್ವಾನ್‌, ಜಾರ್ಜ್‌ ಫರ್ನಾಂಡಿಸ್‌ ಪಟ್ಟಣಕ್ಕೆ ಆಗಮಿಸಿ ಪ್ರಚಾರ ಕೈಗೊಂಡಿದ್ದರು.

Advertisement

1980ರಲ್ಲಿ ಧರ್ಮಸಿಂಗ್‌ ಪ್ರಥಮಬಾರಿ ಲೋಕಸಭೆ ಚುನಾವಣೆಗೆ ನಿಂತಾಗ ಆಂಧ್ರಪ್ರದೇಶದ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಚೆನ್ನಾರೆಡ್ಡಿ ಅವರು ಆಗಮಿಸಿದ್ದರು. ನಂತರ ಕೇರಳದ ಕಾಂಗ್ರೆಸ್‌ ನಾಯಕ, ಇಂದಿರಾಗಾಂಧಿ ಅವರ ಆಪ್ತ ಸಿ.ಎಂ. ಸ್ಟೀಫನ್‌ ಲೋಕಸಭೆ ಚುನಾವಣೆಗೆ ನಿಂತಿದ್ದರು. ಆಗ ಧರ್ಮಸಿಂಗ್‌ ರಾಜೀನಾಮೆ ನೀಡಿದ್ದರು.

ಚಿಂಚೋಳಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದವರಲ್ಲಿ ವೀರೇಂದ್ರ ಪಾಟೀಲ ಎರಡು ಸಲ ಮುಖ್ಯಮಂತ್ರಿಗಳಾಗಿದ್ದರು. ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದ ದೇವೇಂದ್ರಪ್ಪ ಘಾಳಪ್ಪ ಜಮಾದಾರ ಎರಡು ಸಲ ಮತ್ತು 1994ರಲ್ಲಿ ವೈಜನಾಥ ಪಾಟೀಲ ಒಂದು ಸಲ ಸಚಿವರಾಗಿದ್ದರು. ಇವರೆಲ್ಲರ ಪರ ಪ್ರಚಾರ ಕೈಗೊಳ್ಳಲು ಅನೇಕ ರಾಷ್ಟ್ರೀಯ ನಾಯಕರು ಆಗಮಿಸಿದ್ದರು. 1983ರಲ್ಲಿ ಅಂದಿನ ಬಿಜೆಪಿ ಹಿರಿಯ ನಾಯಕರಾಗಿದ್ದ ಅಟಲಬಿಹಾರಿ ವಾಜಪೇಯಿ ಪಟ್ಟಣಕ್ಕೆ ಆಗಮಿಸಿ ಪಟ್ಟಣದ ಭೀಮಶೆಟ್ಟಿ ಪಾಟೀಲ ಅವರಿಗೆ ಸೇರಿದ ಅಂಬ್ರಾಯಿ (ಮಾವಿನ ಗಿಡಗಳ ಜಾಗ)ಯಲ್ಲಿ ಪಕ್ಷದ ಪ್ರಚಾರವನ್ನು ಮಾಡಿದ್ದರು.

ಈ ವೇಳೆ ಆರ್‌ಎಸ್‌ಎಸ್‌ನ ಹಿರಿಯರಾದ ಅನಂತಶರ್ಮಾ, ಅಶೋಕ ಪಾಟೀಲ, ಶ್ಯಾಮಸುಂದರ ಮೂಲಿ, ಮಧುಸೂಧನ
ಕಾಟಾಪುರ ಇವರ ಜತೆಯಲ್ಲಿದ್ದರು. 2012ರಲ್ಲಿ ಸುನೀಲ ವಲ್ಯಾಪುರೆ ಬಿಜೆಪಿ ಆಡಳಿತದಲ್ಲಿ ಕೇವಲ ಆರು ತಿಂಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಈಗಿನ ವಿಧಾನಸಭೆಚುನಾವಣೆ ಸಂದರ್ಭದಲ್ಲಿ ಇವರ ಪರವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಚಾರಕ್ಕೆ ಆಗಮಿಸಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿ ಡಾ| ಉಮೇಶ ಜಾಧವ್‌ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿ ಪ್ರಚಾರ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next