ಕೋಲ್ಕತ್ತಾ:ಬರೋಬ್ಬರಿ 72 ವರ್ಷಗಳಿಂದಲೂ ಇತ್ಯರ್ಥವಾಗದೇ ಉಳಿದಿದ್ದ ದೇಶದ ಅತ್ಯಂತ ಹಳೆಯ ಪ್ರಕರಣವೊಂದು ಈಗ ಇತ್ಯರ್ಥಗೊಂಡಿದೆ!
ಮತ್ತೊಂದು ವಿಶೇಷವೆಂದರೆ, ಸೋಮವಾರ ಈ ಪ್ರಕರಣವನ್ನು ಇತ್ಯರ್ಥಗೊಳಿಸಿದ ಕಲ್ಕತ್ತಾ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಅವರು ಜನಿಸಿದ್ದೇ ಈ ಕೇಸು ದಾಖಲಾದ 10 ವರ್ಷಗಳ ಬಳಿಕ!
ಹೌದು, ಅಚ್ಚರಿಯಾದರೂ ಇದು ಸತ್ಯ. 1951ರ ಜ.1ರಂದು ಬರ್ಹಾಂಪುರ ಬ್ಯಾಂಕ್ ಲಿ.ನ ವಿಸರ್ಜನೆ ಪ್ರಶ್ನಿಸಿ ಅರ್ಜಿ ಸಲ್ಲಿಕೆಯಾಗಿತ್ತು.
ಕಳೆದ ವರ್ಷ ಸೆಪ್ಟೆಂಬರ್ನಲ್ಲೂ ಈ ಅರ್ಜಿ ವಿಚಾರಣೆಗೆ ಬಂದಿತ್ತಾದರೂ, ಸಂಬಂಧಪಟ್ಟ ಯಾರೂ ಕೋರ್ಟ್ಗೆ ಹಾಜರಾಗಿರಲಿಲ್ಲ. ಈ ಕುರಿತು ಪರಿಶೀಲಿಸಿದಾಗ, 2006ರಲ್ಲೇ ಪ್ರಕರಣವು ಮಧ್ಯಸ್ಥಿಕೆ ಮೂಲಕ ಇತ್ಯರ್ಥವಾಗಿದೆ ಎಂಬ ವಿಚಾರ ಗೊತ್ತಾಯಿತು.
Related Articles
ಹೀಗಾಗಿ, ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಅವರು, ಕೇಸು ಇತ್ಯರ್ಥಗೊಂಡಿರುವುದಾಗಿ ಪ್ರಕಟಿಸಿದರು.
1952ರಲ್ಲಿ ದಾಖಲಾಗಿರುವ ಒಟ್ಟು 5 ಪ್ರಕರಣಗಳು ಇನ್ನೂ ಇತ್ಯರ್ಥಕ್ಕೆ ಬಾಕಿಯಿವೆ. ಈ ಪೈಕಿ 2 ಪ್ರಕರಣಗಳು ಬಾಕಿ ಉಳಿದಿರುವುದು ಕಲ್ಕತ್ತಾ ಹೈಕೋರ್ಟ್ನಲ್ಲೇ. ಮತ್ತೊಂದು ಪ್ರಕರಣ ಮದ್ರಾಸ್ ಹೈಕೋರ್ಟ್ನಲ್ಲಿದ್ದರೆ, ಉಳಿದವು ಬಂಗಾಳದ ಮಾಲ್ಡಾದ ಸಿವಿಲ್ ಕೋರ್ಟ್ನಲ್ಲಿವೆ.