Advertisement

ಅತ್ಯುತ್ತಮವಾಗಿದೆ ಭಾರತದ ಆರ್ಥಿಕತೆ: ಆರ್‌. ಬಿರಾದಾರ್‌

01:02 PM Jun 09, 2022 | Team Udayavani |

ಹಂಸಭಾವಿ: ಭಾರತದಲ್ಲಿ ಕೋವಿಡ್‌ ನಂತರದಲ್ಲಿ ಕಂಡು ಬಂದ ಆರ್ಥಿಕ ಬೆಳವಣಿಗೆ ಇತರೆ ದೇಶಗಳಿಗೆ ಹೋಲಿಸಿದರೆ ಅತ್ಯುತ್ತಮ ಸ್ಥಿತಿಯಲ್ಲಿದೆ ಎಂದು ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ|ಆರ್‌. ಆರ್‌. ಬಿರಾದಾರ್‌ ಹೇಳಿದರು.

Advertisement

ಸ್ಥಳೀಯ ಮೃತ್ಯುಂಜಯ ವಿದ್ಯಾಪೀಠದ ಮಹಾಂತಸ್ವಾಮಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಹಾಗೂ ವಾಣಿಜ್ಯಶಾಸ್ತ್ರ ವಿಭಾಗಗಳ ವತಿಯಿಂದ ನಡೆದ “ಕೋವಿಡ್‌-19 ಪೆಂಡಮಿಕ್‌ ನಂತರದ ಭಾರತದ ಆರ್ಥಿಕ ಚೇತರಿಕೆ’ (ಇಂಡಿಯಾಸ್‌ ಎಕನಾಮಿಕ್‌ ರಿಕವರಿ ಆಫ್ಟರ್‌ ದ ಕೋವಿಡ್‌ -19 ಪೆಂಡಮಿಕ್‌; ರೋಡ್‌ಮ್ಯಾಪ್‌ ಪಾರ್‌ ಸ ಸ್ಟೈನ್ಡ್‌ ಗ್ರೌಥ್‌ ರಿಕವರಿ) ಕುರಿತ ರಾಜ್ಯ ಮಟ್ಟದ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ನಮ್ಮ ದೇಶ ಸುಸ್ಥಿರ ಅಭಿವೃದ್ಧಿಯ ಗುರಿ, ರೈತರ ಆದಾಯ ದ್ವಿಗುಣ ಹಾಗೂ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಎಂಬ ಮೂರು ಪ್ರಮುಖ ಮಹತ್ವಾಕಾಂಕ್ಷೆಗಳನ್ನು ಹೊಂದಿದೆ. ಕೋವಿಡ್‌ ಪೂರ್ವದ ಸ್ಥಿತಿಗತಿಯಲ್ಲಿದ್ದ ಅನುಭೋಗ, ಹೂಡಿಕೆ, ಉದ್ಯೋಗ, ರಫ್ತು ಮುಂತಾದವುಗಳ ಮೂಲಕ ಆರ್ಥಿಕತೆಯ ವರ್ತುಲಾಕಾರದ ಚಲನೆ, ನಂತರ ಮೊದಲ ಹಾಗೂ ಎರಡನೇ ಅಲೆಯ ಸಮಯದಲ್ಲಿ ನಲುಗಿದ ಆರ್ಥಿಕ ವ್ಯವಸ್ಥೆಯನ್ನು ವಿಶ್ಲೇಷಿಸಿದರು.

ಜೊತೆಗೆ ಅಂತಾರಾಷ್ಟ್ರೀಯ ಪರಿಣಾಮಗಳು ಮತ್ತು ಚೇತರಿಕೆ ವಿವರಿಸುತ್ತಾ ಅಮೆರಿಕ, ಇಂಗ್ಲೆಂಡ್‌, ಚೀನಾ ಹಾಗೂ ಜರ್ಮನಿ ದೇಶದ ಆರ್ಥಿಕತೆಯ ಉದಾಹರಣೆ ನೀಡಿದರು. ಭಾರತದ ವಿತ್ತ ಆಕಾರದ ಆರ್ಥಿಕ ಚೇತರಿಕೆ ವಿವರಿಸಿದ ಅವರು, ಕೃಷಿ, ಗಣಿಗಾರಿಕೆ, ಉತ್ಪಾದನಾ ವಲಯ, ಎಲೆಕ್ಟ್ರಾನಿಕ್‌, ಗ್ಯಾಸ್‌, ನೀರು ಪೂರೈಕೆ, ಕಟ್ಟಡ ನಿರ್ಮಾಣ, ಹೋಟೆಲ್‌ ಉದ್ಯಮ, ಹಣಕಾಸು ವಲಯ, ರಿಯಲ್‌ ಎಸ್ಟೇಟ್‌, ಸಾರ್ವಜನಿಕ ಆಡಳಿತ ಮುಂತಾದ ವಲಯಗಳ ಸೂಕ್ಷ್ಮ ಅಂಶಗಳ ಬಗ್ಗೆ ಚರ್ಚಿಸಿದರು.

ಕೈಗಾರಿಕಾ ವಲಯ, ಬಂಡವಾಳ ಹೂಡಿಕೆ, ಕೊಳ್ಳುವ ನಿರ್ವಹಣಾ ಸೂಚ್ಯಂಕ, ಗ್ರಾಹಕ ಆತ್ಮವಿಶ್ವಾಸ ಸೂಚ್ಯಂಕ, ದೇಶದ ನಿರುದ್ಯೋಗದ ದರ, ಸಗಟು ಬೆಲೆ ಸೂಚ್ಯಂಕದ ಆಧಾರದ ಕುರಿತು ವಿವರಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೃತ್ಯುಂಜಯ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಎನ್‌.ಸಿ.ಅಕ್ಕಿ, ಇತ್ತೀಚಿನ ಕೆಲವೊಂದು ಆರ್ಥಿಕ ವಿಚಾರಗಳು ಸಾಮಾನ್ಯ ವ್ಯಕ್ತಿಗಳಿಗೂ ತಿಳಿಯುತ್ತವೆ. ಆದರೆ, ಒಬ್ಬ ಆರ್ಥಿಕ ತಜ್ಞ ಚಿಂತನೆ ನಡೆಸುವ ವಿಧಾನ ಹಾಗೂ ಒಬ್ಬ ಸಾಮಾನ್ಯ ವ್ಯಕ್ತಿ ಚಿಂತನೆ ನಡೆಸುವ ವಿಧಾನಗಳಲ್ಲಿ ವ್ಯತ್ಯಾಸಗಳಿರಬಹುದು. ಕೋವಿಡ್‌ ಸಮಯದಲ್ಲಿ ಸಮಾಜದ ವಿವಿಧ ವರ್ಗಗಳು ಅನುಭವಿಸಿದ ಕಷ್ಟಗಳು ತುಂಬಾ ಕ್ರೂರವಾಗಿದ್ದವು. ಬಹುಶಃ ವೇತನ ಪಡೆಯುವ ಸರ್ಕಾರಿ ನೌಕರರಿಗೆ ಅಷ್ಟೊಂದು ಸಮಸ್ಯೆಗಳು ಉಂಟಾಗಿಲ್ಲ ಎಂದರು.

Advertisement

ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾಪೀಠದ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಪಿ.ವಿ.ಕೆರೂಡಿ, ಅರ್ಥಶಾಸ್ತ್ರ ಒಂದು ಅದ್ಭುತ ವಿಷಯದ ಬಗ್ಗೆ ತಾರ್ಕಿಕ ಚಿಂತನೆ ನಡೆಸುವಂತೆ ಮಾಡುವಂತಹುದು. ವಿಷಯ ಇಂದು ಅದರ ಅವಶ್ಯಕತೆ ಹಾಗೂ ಅನಿವಾರ್ಯತೆ ಎಲ್ಲರಿಗೂ ತಿಳಿಯುವಂತಾಗಿದೆ. ಸಂಪನ್ಮೂಲ ವ್ಯಕ್ತಿಗಳು ಆರ್ಥಿಕತೆಯ ವಿವಿಧ ವಲಯಗಳಲ್ಲಿ ಸಂಭವಿಸಿದಂತಹ ನೈಜ ಏರುಪೇರುಗಳನ್ನು ಬಹಳ ವ್ಯವಸ್ಥಿತವಾಗಿ ವಿವರಿಸಿದ್ದಾರೆ ಎಂದರು.

ರಾಜ್ಯದ ವಿವಿಧ ಮಹಾವಿದ್ಯಾಲಯಗಳ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ 109 ಅಭ್ಯರ್ಥಿಗಳು ಭಾಗವಹಿಸಿದ್ದರು. ಉಪಪ್ರಾಚಾರ್ಯ ಎಂ.ಜಿ.ಬಂಡಿವಡ್ಡರ್‌, ಡಾ.ಎಸ್‌.ಎಸ್‌.ಮಠಪತಿ, ಪಿ.ವೆಂಕಟೇಶ್‌, ಹಮ್ಮಿಣಿ ಬಸವ್ವ, ಡಾ.ಕೋಟೆಶ್‌ ಬಿ., ಬೋಧಕ-ಬೋಧಕೇತರ ಸಿಬ್ಬಂದಿ ಹಾಜರಿದ್ದರು. ಮಹಾವಿದ್ಯಾಲಯದ ಪ್ರಾಚಾರ್ಯ ಎಸ್‌.ಎ.ತಿಪ್ಪೇಶ್‌ ಸ್ವಾಗತಿಸಿ, ಸಂ. ಸಂತೋಷ ಸಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂದೀಪ್‌ ಕುಲಕರ್ಣಿ ಪರಿಚಯಿಸಿದರು. ಹುಸೇನ್‌ ಸಾಬ್‌ ಕಳಗೊಂಡ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಡಾ|ಮಲ್ಲಿಕಾರ್ಜುನ ಕುಂಬಾರ್‌ ವಂದಿಸಿ, ಪಲ್ಲವಿ ಬೋಳಕಟ್ಟಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next