Advertisement

ಎಲ್‌ಎಸಿಯಲ್ಲಿ ಚೀನದ ಷಡ್ಯಂತ್ರ ಎದುರಿಸಲು ಭಾರತೀಯ ಸೇನೆ ಸಜ್ಜು

12:17 AM Oct 21, 2021 | Team Udayavani |

ಭಾರತ ಮತ್ತು ಪಾಕಿಸ್ಥಾನ ನಡುವಣ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನವು ಜಮ್ಮು-ಕಾಶ್ಮೀರದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುವ ಕುತಂತ್ರದಲ್ಲಿ ತೊಡಗಿದ್ದರೆ ಇತ್ತ ಅರುಣಾಚಲ ಪ್ರದೇಶ ವಲಯದ ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ)ಯ ತನ್ನ ಒಳಪ್ರದೇಶಗಳಲ್ಲಿ ಚೀನ ಸೇನಾ ಕಾರ್ಯಾಚರಣೆಗಳನ್ನು ಹೆಚ್ಚಿಸಿದೆಯಲ್ಲದೆ ಅಧಿಕ ಸಂಖ್ಯೆಯಲ್ಲಿ ಯೋಧರನ್ನು ನಿಯೋಜಿಸಿದೆ. ಎಲ್‌ಎಸಿಯಲ್ಲಿನ ಈ ಬೆಳವಣಿಗೆಗಳು ಗಡಿಯಲ್ಲಿ ಒಂದಿಷ್ಟು ಆತಂಕಕ್ಕೆ ಕಾರಣವಾಗಿದ್ದು ಮತ್ತೊಮ್ಮೆ ಚೀನ ಗಡಿ ಸಂಘರ್ಷಕ್ಕೆ ಸಂಚು ರೂಪಿಸಿದೆಯೇ ಎಂಬ ಅನುಮಾನ ಕಾಡತೊಡಗಿದೆ.

Advertisement

ವರ್ಷದ ಹಿಂದೆ ಲಡಾಖ್‌ ಘರ್ಷಣೆಗೂ ಮುನ್ನ ಚೀನದ ಪಡೆಗಳು ಇದೇ ಮಾದರಿಯಲ್ಲಿ ಗಡಿ ಭಾಗದಲ್ಲಿ ಗಸ್ತು ತಿರುಗುವಿಕೆಯನ್ನು ಹೆಚ್ಚಿಸಿದ್ದವು. ಎಲ್‌ಎಸಿಯಲ್ಲಿ ತಿಂಗಳುಗಳ ಕಾಲ ನಡೆದ ಸಂಘರ್ಷದಲ್ಲಿ ಭಾರತ ದಿಟ್ಟ ಪ್ರತ್ಯುತ್ತರ ನೀಡಿದ ಬಳಿಕ ಉಭಯ ದೇಶಗಳ ನಡುವೆ ಹಲವಾರು ಸುತ್ತಿನ ಸೇನಾ ಮಟ್ಟದ ಮಾತುಕತೆಗಳು ನಡೆದು ಕೊನೆಯಲ್ಲಿ ಚೀನ ತನ್ನ ಪಡೆಗಳನ್ನು ಎಲ್‌ಎಸಿಯಿಂದ ವಾಪಸ್‌ ಕರೆಸಿಕೊಳ್ಳಲು ಸಮ್ಮತಿಸಿತ್ತು. ಇದರ ಹೊರತಾಗಿಯೂ ಎಲ್‌ಎಸಿಯಲ್ಲಿ ಗಸ್ತು ಹೆಚ್ಚಿಸಿದ್ದೇ ಅಲ್ಲದೆ ಗಡಿ ಪ್ರದೇಶದಲ್ಲಿ ವಿವಿಧ ಸೇನಾ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೆತ್ತಿಕೊಂಡಿತ್ತು.

ಕಳೆದೊಂದು ವಾರದಿಂದೀಚೆಗೆ ಗಡಿಯಲ್ಲಿ ಚೀನ ಸೇನೆಯ ವಿವಿಧ ಪಡೆಗಳ ಜಂಟಿ ತಾಲೀಮು, ಸಮರಾಭ್ಯಾಸ ಚಟುವಟಿಕೆಗಳನ್ನೂ ಹೆಚ್ಚಿಸಿದೆ. ಚೀನ ಸೇನೆಯ ವಾರ್ಷಿಕ ತರಬೇತಿಯ ಭಾಗವಾಗಿ ಸೇನಾ ಚಟುವಟಿಕೆಗಳು ತೀವ್ರವಾಗಿವೆ ಎನ್ನಲಾಗಿದೆಯಾದರೂ ಗಡಿ ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಯೋಧರನ್ನು ನಿಯೋಜಿಸಿರುವುದು ಚೀನದ ನಡೆಯ ಕುರಿತಂತೆ ಅನುಮಾನಗಳು ಮೂಡುವಂತೆ ಮಾಡಿದೆ.

ಎಲ್‌ಎಸಿ ಸಮೀಪವೇ ಉಭಯ ದೇಶಗಳು ಮೂಲಸೌಕರ್ಯಗಳನ್ನು ಹೆಚ್ಚಿಸುವ ಕಾರ್ಯದಲ್ಲಿ ನಿರತವಾಗಿರುವುದರಿಂದ ಇದು ಕೆಲವೊಮ್ಮೆ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಆದರೆ ಈ ಬಾರಿ ಚೀನ ಭಾರೀ ಸಂಖ್ಯೆಯಲ್ಲಿ ತನ್ನ ಸೈನಿಕರನ್ನು ನಿಯೋಜಿಸಿರುವುದರಿಂದ ಭಾರತ ಕೂಡ ಯಾವುದೇ ತೆರನಾದ ಸಂಭಾವ್ಯ ಪರಿಸ್ಥಿತಿಯನ್ನು ಎದುರಿಸಲು ಸರ್ವಸನ್ನದ್ಧವಾಗಿದೆ. ಭಾರತೀಯ ಸೇನೆಯೂ ಎಲ್‌ಎಸಿಯಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಿದೆಯಲ್ಲದೆ ಡ್ರೋನ್‌, ರೇಡಾರ್‌ ನಿಗಾ ಮತ್ತು ಯೋಧರ ಗಸ್ತು ತಿರುಗುವಿಕೆಯನ್ನು ಹೆಚ್ಚಿಸಿದೆ.

ಇದನ್ನೂ ಓದಿ:ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

Advertisement

ಇದೇ ವೇಳೆ ಎಲ್‌ಎಸಿಯಲ್ಲಿನ ವಿವಾದಿತ ಪ್ರದೇಶಗಳ ಮೇಲೆ ಅಧಿಪತ್ಯ ಸ್ಥಾಪಿಸುವ ಷಡ್ಯಂತ್ರವಾಗಿ ತನ್ನ ಭೂಭಾಗದೊಳಗೆ ಸಣ್ಣ ಸಣ್ಣ ಸೇನಾ ಗ್ರಾಮಗಳನ್ನು ನಿರ್ಮಿಸುತ್ತಿದೆ. ಇದು ಚೀನದ ಸೇನಾ ಕಾರ್ಯತಂತ್ರದ ಭಾಗವೆನ್ನಲಾಗಿದ್ದು ಈ ಗ್ರಾಮಗಳಲ್ಲಿ ಟಿಬೆಟ್‌ ನಿವಾಸಿಗರು ಅಥವಾ ತನ್ನ ಯೋಧರಿಗೆ ಖಾಯಂ ಆಗಿ ವಾಸ್ತವ್ಯ ಹೂಡುವಂತೆ ಆದೇಶ ನೀಡುವ ಸಾಧ್ಯತೆಗಳಿವೆ ಮತ್ತು ಸಂಘರ್ಷದ ಸಂದರ್ಭದಲ್ಲಿ ಈ ಗ್ರಾಮಗಳನ್ನು ಚೀನ ಸೈನಿಕರು ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಚೀನದ ಯಾವುದೇ ಷಡ್ಯಂತ್ರ ವನ್ನು ವಿಫ‌ಲಗೊಳಿಸಲು ಭಾರತೀಯ ಸೇನೆ ಸರ್ವಸನ್ನದ್ಧವಾಗಿದೆ. ಯುದ್ಧ ಸನ್ನದ್ಧ ತಂಡವಾದ ಸಮಗ್ರ ಸಮರ ಪಡೆ (ಐಬಿಜಿ) ರಚನೆಗೆ ತಾತ್ವಿಕ ಒಪ್ಪಿಗೆ ಲಭಿಸಿರುವುದರಿಂದ ಯಾವುದೇ ತುರ್ತು ಸಂದರ್ಭದಲ್ಲಿ ಅತ್ಯಂತ ತ್ವರಿತ ಮತ್ತು ಪರಿಣಾಮಕಾರಿ ಕಾರ್ಯಾಚರಣೆಗೆ ಸಜ್ಜಾಗುವ ರೀತಿಯಲ್ಲಿ ಈ ತಂಡವನ್ನು ರಚಿಸಿದ್ದು ಅವಶ್ಯಬಿದ್ದಲ್ಲಿ ಈ ತಂಡವನ್ನು ಬಳಸಿಕೊಳ್ಳಲು ಭಾರತೀಯ ಸೇನೆ ನಿರ್ಧರಿಸಿದೆ. ಗಡಿ ಪ್ರದೇಶದಲ್ಲಿನ ಮೂಲಸೌಕರ್ಯ ಗಳನ್ನು ಹೆಚ್ಚಿಸುವ ಜತೆಯಲ್ಲಿ ಕಟ್ಟುನಿಟ್ಟಿನ ಕಣ್ಗಾವಲು, ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಿಕೊಂಡಿದ್ದು ಚೀನಕ್ಕೆ ಸಡ್ಡು ಹೊಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next