Advertisement

ಹೊಸಬರ ಭಾರತ 225ಕ್ಕೆ ಆಲೌಟ್‌ : ಏಕಕಾಲಕ್ಕೆ ಐದು ಕ್ರಿಕೆಟಿಗರ ಪದಾರ್ಪಣೆ!

11:01 PM Jul 23, 2021 | Team Udayavani |

ಕೊಲಂಬೊ: ಬಹುತೇಕ ಹೊಸಬರಿಂದಲೇ ಕೂಡಿದ ಭಾರತ, ಆತಿಥೇಯ ಶ್ರೀಲಂಕಾ ಎದುರಿನ ಅಂತಿಮ ಏಕದಿನ ಪಂದ್ಯದಲ್ಲಿ 225 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಕುಸಿದಿದೆ. ಮಳೆಯಿಂದಾಗಿ ಓವರ್‌ ಸಂಖ್ಯೆಯನ್ನು 47ಕ್ಕೆ ಇಳಿಸಲಾಗಿತ್ತು. ಭಾರತದ ಇನ್ನಿಂಗ್ಸ್‌ 43.1 ಓವರ್‌ಗಳಲ್ಲಿ ಕೊನೆಗೊಂಡಿತು.

Advertisement

ಈಗಾಗಲೇ ಸರಣಿ ವಶಪಡಿಸಿ ಕೊಂಡ ಕಾರಣ ಕೋಚ್‌ ದ್ರಾವಿಡ್‌ ಭರ್ಜರಿ ಪ್ರಯೋಗಕ್ಕಿಳಿದರು. ಮೊದ ಲೆರಡು ಪಂದ್ಯಗಳಲ್ಲಿ ಅವಕಾಶ ಪಡೆಯದ ಹೊಸಬರನ್ನು ಭಾರೀ ನಂಬಿಕೆಯೊಂದಿಗೆ ಕಣಕ್ಕಿಳಿಸಿದರು. ಮುಖ್ಯವಾಗಿ ಬೌಲಿಂಗ್‌ ವಿಭಾಗದಲ್ಲಿ ಹೊಸಬರ ದಂಡೇ ಕಂಡುಬಂತು.

ಭಾರತದ ಓಪನಿಂಗ್‌ನಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ. ನಾಯಕ ಧವನ್‌ ಜತೆಗೆ ಪೃಥ್ವಿ ಶಾ ಅವರೇ ಇನ್ನಿಂಗ್ಸ್‌ ಆರಂಭಿಸಿದರು. ಎಸೆತಕ್ಕೊಂದರಂತೆ 49 ರನ್‌ ಮಾಡಿದ ಶಾ ಅವರದೇ ಭಾರತದ ಸರದಿಯ ಗರಿಷ್ಠ ಗಳಿಕೆ (8 ಬೌಂಡರಿ). ವನ್‌ಡೌನ್‌ನಲ್ಲಿ ಬಂದ ಸಂಜು ಸ್ಯಾಮ್ಸನ್‌ ಕೂಡ ಎಸೆತಕ್ಕೆ ಒಂದರಂತೆ 46 ರನ್‌ ಹೊಡೆದರು (5 ಬೌಂಡರಿ, 1 ಸಿಕ್ಸರ್‌).

ಇವರಿಬ್ಬರಿಂದ ದ್ವಿತೀಯ ವಿಕೆಟಿಗೆ 74 ರನ್‌ ಒಟ್ಟುಗೂಡಿತು. 13 ರನ್‌ ಮಾಡಿದ ಧವನ್‌ ವಿಕೆಟ್‌ 3ನೇ ಓವರಿನಲ್ಲಿ ಉರುಳಿತು. ಆಗ ಸ್ಕೋರ್‌ ಕೇವಲ 28 ರನ್‌ ಆಗಿತ್ತು.

ಮನೀಷ್‌ ಪಾಂಡೆ ಮತ್ತೂಮ್ಮೆ ವೈಫ‌ಲ್ಯ ಅನುಭವಿಸಿದರು. ಇವರ ಗಳಿಕೆ ಕೇವಲ 11 ರನ್‌. ಮಧ್ಯಮ ಕ್ರಮಾಂಕದಲ್ಲಿ ಆಧಾರವಾದವರು ಸೂರ್ಯಕುಮಾರ್‌ ಯಾದವ್‌. 37 ಎಸೆತ ಎದುರಿಸಿದ ಸೂರ್ಯ 7 ಬೌಂಡರಿ ನೆರವಿನಿಂದ 40 ರನ್‌ ಮಾಡಿದರು.

Advertisement

ಇದನ್ನೂ ಓದಿ :ತಿಮ್ಮಪ್ಪನ ದೇಗುಲಕ್ಕೆ ಡ್ರೋನ್‌ ನಿಗ್ರಹ ವ್ಯವಸ್ಥೆ : ರಕ್ಷಣಾ ವ್ಯವಸ್ಥೆ ಪಡೆದ ಮೊದಲ ದೇಗುಲ

ಸಂಕ್ಷಿಪ್ತ ಸ್ಕೋರ್‌: ಭಾರತ-43.1 ಓವರ್‌ಗಳಲ್ಲಿ 225 (ಶಾ 49, ಸ್ಯಾಮ್ಸನ್‌ 46, ಸೂರ್ಯಕುಮಾರ್‌ 40, ಧನಂಜಯ 44ಕ್ಕೆ 3, ಜಯವಿಕ್ರಮ 59ಕ್ಕೆ 3).

ತೃತೀಯ ಏಕದಿನ ಪಂದ್ಯದಲ್ಲಿ ಭಾರತದ ಐವರು ಕ್ರಿಕೆಟಿಗರು ಪದಾರ್ಪಣೆ ಮಾಡುವ ಮೂಲಕ ದಾಖ ಲೆಯನ್ನು ಸರಿದೂಗಿಸಿದರು. ಎಡಗೈ ಬ್ಯಾಟ್ಸ್‌ಮನ್‌ ನಿತೀಶ್‌ ರಾಣಾ, ಲೆಗ್‌ಸ್ಪಿನ್ನರ್‌ ರಾಹುಲ್‌ ಚಹರ್‌, ಎಡಗೈ ಪೇಸರ್‌ ಚೇತನ್‌ ಸಕಾರಿಯಾ, ಆಫ್ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ಕೃಷ್ಣಪ್ಪ ಗೌತಮ್‌ ಮತ್ತು ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸನ್‌ ಮೊದಲ ಸಲ ಭಾರತವನ್ನು ಪ್ರತಿನಿಧಿಸುವ ಅದೃಷ್ಟ ಸಂಪಾದಿಸಿದರು. ಆದರೆ ಭಾರೀ ನಿರೀಕ್ಷೆಯಲ್ಲಿದ್ದ ಕರ್ನಾಟಕದ ಉದಯೋನ್ಮುಖ ಆರಂಭಕರ ದೇವದತ್ತ ಪಡಿಕ್ಕಲ್‌ ಅವರಿಗೆ ಅವಕಾಶ ಸಿಗಲಿಲ್ಲ. ಇವರಲ್ಲಿ ರಾಹುಲ್‌ ಚಹರ್‌ ಮತ್ತು ಸಂಜು ಸ್ಯಾಮ್ಸನ್‌ ಈಗಾಗಲೇ ಟಿ20ಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಭಾರತ ಒಂದೇ ಏಕದಿನ ಪಂದ್ಯದಲ್ಲಿ ಐವರು ಹೊಸಬ ರಿಗೆ ಅವಕಾಶ ನೀಡಿದ ದ್ವಿತೀಯ ನಿದರ್ಶನ ಇದಾಗಿದೆ. 1980ರ ಆಸ್ಟ್ರೇಲಿಯ ಎದುರಿನ ಮುಂಬಯಿ ಪಂದ್ಯದಲ್ಲಿ ದಿಲೀಪ್‌ ದೋಶಿ, ಕೀರ್ತಿ ಆಜಾದ್‌, ರೋಜರ್‌ ಬಿನ್ನಿ, ಸಂದೀಪ್‌ ಪಾಟೀಲ್‌ ಮತ್ತು ಟಿ. ಶ್ರೀನಿವಾಸನ್‌ ಒಟ್ಟಿಗೇ ಒಡಿಐಗೆ ಪದಾರ್ಪಣೆ ಮಾಡಿದ್ದರು.

ಸಂಜು ಸ್ಯಾಮ್ಸನ್‌ ದಾಖಲೆ
ಸಂಜು ಸ್ಯಾಮ್ಸನ್‌ ಟಿ20 ಪಂದ್ಯಕ್ಕೆ ಪದಾರ್ಪಣೆಗೈದ 2,196 ದಿನಗಳ ಬಳಿಕ ಏಕದಿನ ಪಂದ್ಯ ಆಡಲಿಳಿದರು. ಅತ್ಯಧಿಕ ದಿನಗಳ ಅಂತರದ ಲೆಕ್ಕಾಚಾರದಲ್ಲಿ ಇದು ಭಾರತೀಯ ದಾಖಲೆಯಾಗಿದೆ. ವಿಶ್ವದಾಖಲೆ ವಿಂಡೀಸ್‌ನ ನಿಕ್ರುಮಾಹ್‌ ಬಾನರ್‌ ಹೆಸರಲ್ಲಿದೆ (3,407 ದಿನ).

Advertisement

Udayavani is now on Telegram. Click here to join our channel and stay updated with the latest news.

Next