Advertisement

ಟಿ20: ಭಾರತದಿಂದ ಮಿಷನ್‌-2024:  ಇಂದಿನಿಂದ ಭಾರತ-ಶ್ರೀಲಂಕಾ ಟಿ20 ಸರಣಿ

12:02 AM Jan 03, 2023 | Team Udayavani |

ಮುಂಬಯಿ: ಕಳೆದ ಟಿ20 ವಿಶ್ವಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫ‌ಲವಾದ ಟೀಮ್‌ ಇಂಡಿಯಾ, ಇದೀಗ ಮುಂದಿನ ವರ್ಷದ ವಿಶ್ವಕಪ್‌ಗಾಗಿ “ಮಿಷನ್‌-2024′ ಯೋಜನೆಯೊಂದಿಗೆ ಅಭಿಯಾನ ಆರಂಭಿಸಲಿದೆ. ಇದಕ್ಕೆ ಹೊಸ ವರ್ಷಕ್ಕಿಂತ ಉತ್ತಮ ಸಮಯ ಬೇರೊಂದಿಲ್ಲ. ಈಗಾಗಲೇ ಶ್ರೀಲಂಕಾ ತಂಡ ಭಾರತಕ್ಕೆ ಕಾಲಿಟ್ಟಿದೆ.

Advertisement

ಮಂಗಳವಾರ “ವಾಂಖೇಡೆ ಸ್ಟೇಡಿಯಂ’ನಲ್ಲಿ ಮೊದಲ ಮುಖಾಮುಖೀ ಏರ್ಪಡಲಿದೆ.

ಹೊಸ ನಾಯಕ, ಹೊಸ ಹುರುಪಿನ ಹೊಸ ಹೊಸ ಮುಖಗಳು… ಈ ರೀತಿಯಾಗಿ ಟೀಮ್‌ ಇಂಡಿಯಾದ ಯುವ ಪಡೆಯೊಂದು ಹೋರಾಟಕ್ಕೆ ಅಣಿಯಾಗಿದೆ. ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಕೆ.ಎಲ್‌. ರಾಹುಲ್‌ ಈ ಸರಣಿಯಿಂದ ಬೇರ್ಪಟ್ಟಿದ್ದಾರೆ. ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರಿಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ. ಪಾಂಡ್ಯ ಅವರನ್ನು ಟಿ20 ತಂಡದ ಪೂರ್ಣ ಪ್ರಮಾಣದ ನಾಯಕನಾಗಿ ಮುಂದುವರಿ ಸುವುದು ಬಿಸಿಸಿಐ ಯೋಜನೆ. ಈ ಮೂಲಕ ಬಿಸಿ ರಕ್ತದ ಯುವ ಆಟಗಾರರನ್ನು ಹುರಿಗೊಳಿಸಿ 2024ರ ವಿಶ್ವಕಪ್‌ಗೆ ಸಶಕ್ತ ತಂಡವನ್ನು ರೂಪಿಸುವುದು ಮಂಡಳಿಯ ಗುರಿಯಾಗಿದೆ. ಇದಕ್ಕೆ ಇನ್ನೂ 18 ತಿಂಗಳಿದೆಯಾದರೂ ಶ್ರೀಲಂಕಾ ಸರಣಿಯನ್ನೇ ಮೊದಲ ಮೆಟ್ಟಿಲಾಗಿ ಮಾಡಿಕೊಳ್ಳುವುದು ಜಾಣ ನಿರ್ಧಾರ ಎಂಬುದರಲ್ಲಿ ಎರಡು ಮಾತಿಲ್ಲ.
ಅಂತೆಯೇ ಇದು ಏಕದಿನ ವಿಶ್ವಕಪ್‌ ವರ್ಷವೂ ಹೌದು. ಭಾರತದ ಆತಿಥ್ಯದಲ್ಲೇ ಈ ಪ್ರತಿಷ್ಠಿತ ಪಂದ್ಯಾವಳಿ ನಡೆಯಲಿದೆ. ನಮ್ಮವರ ಮೊದಲ ಆದ್ಯತೆ 50 ಓವರ್‌ಗಳ ಪಂದ್ಯಗಳಿಗಿರಬೇಕು ನಿಜ. ಆದರೆ ಮಂಡಳಿ ಬಳಿ ಇದಕ್ಕೂ ಪ್ರತ್ಯೇಕ ಕಾರ್ಯತಂತ್ರಗಳಿವೆ.

ತಂಡದ ಸ್ವರೂಪ
ನ್ಯೂಜಿಲ್ಯಾಂಡ್‌ನ‌ಲ್ಲಿ ನಡೆದ ಮಳೆಪೀಡಿತ ಟಿ20 ಸರಣಿಯನ್ನು ಹಾರ್ದಿಕ್‌ ಪಾಂಡ್ಯ ಪಡೆ ಜಯಿಸಿದ್ದನ್ನು ಮರೆಯುವಂತಿಲ್ಲ. ಅಲ್ಲಿಯೂ ಅನುಭವಿ ಆಟಗಾರರಿರಲಿಲ್ಲ. ಆದರೆ ರಿಷಭ್‌ ಪಂತ್‌, ಭುವನೇಶ್ವರ್‌ ಕುಮಾರ್‌ ಇದ್ದರು. ಲಂಕಾ ವಿರುದ್ಧ ಇವರಿಬ್ಬರಿಗೂ ವಿಶ್ರಾಂತಿ ನೀಡಲಾಗಿದೆ. ಅದರಲ್ಲೂ ಪಂತ್‌ ರಸ್ತೆ ಅಪಘಾತಕ್ಕೆ ಸಿಲುಕಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಿವೀಸ್‌ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿದ ಪಂತ್‌, ಕೀಪಿಂಗ್‌ ಕೂಡ ನಡೆಸಿದ್ದರು. ಲಂಕಾ ವಿರುದ್ಧ ಈ ಎರಡೂ ಸ್ಥಾನ ತುಂಬಬಲ್ಲ ಆಟಗಾರನೆಂದರೆ ಇಶಾನ್‌ ಕಿಶನ್‌. ಬಾಂಗ್ಲಾ ಪ್ರವಾಸದ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿ ಮೆರೆದಿರುವ ಇಶಾನ್‌ ಕಿಶನ್‌ ಪ್ರಚಂಡ ಫಾರ್ಮ್ ನಲ್ಲಿದ್ದಾರೆ.

ಇಶಾನ್‌ ಕಿಶನ್‌ ಅವರೊಂದಿಗೆ ಋತುರಾಜ್‌ ಗಾಯಕ್ವಾಡ್‌ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ. ಶುಭಮನ್‌ ಗಿಲ್‌ ವನ್‌ಡೌನ್‌ನಲ್ಲಿ ಬರಬಹುದು. ಅನಂತರ ಸೂರ್ಯಕುಮಾರ್‌ ಯಾದವ್‌, ಹಾರ್ದಿಕ್‌ ಪಾಂಡ್ಯ ಇದ್ದಾರೆ. ಮಧ್ಯಮ ಸರದಿಗೆ ಬಲ ತುಂಬಲು ಸಂಜು ಸ್ಯಾಮ್ಸನ್‌, ದೀಪಕ್‌ ಹೂಡಾ ಮತ್ತು ರಾಹುಲ್‌ ತ್ರಿಪಾಠಿ ನಡುವೆ ಪೈಪೋಟಿ ಇದೆ. ಸರಣಿಯಲ್ಲಿ ಎಲ್ಲರಿಗೂ ಅವಕಾಶವನ್ನು ಹಂಚಿಕೊಡುವುದು ಉತ್ತಮ ನಡೆಯಾಗಲಿದೆ.

Advertisement

ಪಾಂಡ್ಯ ಅವರೊಂದಿಗೆ ವಾಷಿಂಗ್ಟನ್‌ ಸುಂದರ್‌, ಅಕ್ಷರ್‌ ಪಟೇಲ್‌ ಆಲ್‌ರೌಂಡರ್‌ ಪಾತ್ರ ನಿಭಾಯಿಸಬೇಕಾಗುತ್ತದೆ. ಅನುಭವಿ ಸ್ಪಿನ್ನರ್‌ ಚಹಲ್‌ ಮ್ಯಾಜಿಕ್‌ ಮಾಡುವರೋ, ದುಬಾರಿ ಆಗುವರೋ ಎಂಬ ಪ್ರಶ್ನೆ ಇದೆ.
ಭಾರತದ ವೇಗದ ಬೌಲಿಂಗ್‌ ವಿಭಾಗ ಯುವಕರಿಂದ ಕೂಡಿದೆ. ಅರ್ಷದೀಪ್‌ ಸಿಂಗ್‌, ಹರ್ಷಲ್‌ ಪಟೇಲ್‌, ಉಮ್ರಾನ್‌ ಮಲಿಕ್‌, ಇನ್ನೂ ಹೊಸಬರಾದ ಶಿವಂ ಮಾವಿ, ಮುಕೇಶ್‌ ಕುಮಾರ್‌ ಅವರೆಲ್ಲ ಲಂಕಾ ಪಡೆಗೆ ಹೇಗೆ ಕಡಿವಾಣ ಹಾಕಬಲ್ಲರು ಎಂಬ ಕುತೂಹಲ ಎಲ್ಲರದು.

ಲಂಕಾ ಏಷ್ಯಾ ಚಾಂಪಿಯನ್‌
ಶ್ರೀಲಂಕಾ ಏಷ್ಯಾ ಕಪ್‌ ಚಾಂಪಿಯನ್‌ ಎಂಬ ಹಣೆಪಟ್ಟಿಯೊಂದಿಗೆ ಈ ಸರಣಿಯನ್ನು ಆಡಲಿಳಿಯುತ್ತಿದೆ. ಹೀಗಾಗಿ ಸಹಜವಾಗಿಯೇ ಒತ್ತಡ ಹೆಚ್ಚು. ಆದರೆ ಭಾರತದ ಯುವ ಪಡೆಗೆ ಹೋಲಿಸಿದರೆ ಅನುಭವದಲ್ಲಿ ಒಂದೆರಡು ಮೆಟ್ಟಿಲು ಮೇಲಿದೆ ಎನ್ನಲಡ್ಡಿಯಿಲ್ಲ. “ಲಂಕಾ ಪ್ರೀಮಿಯರ್‌ ಲೀಗ್‌’ನ ತ್ರಿವಳಿ ಹೀರೋಗಳಾದ ಆವಿಷ್ಕ ಫೆರ್ನಾಂಡೊ, ಚಮಿಕ ಕರುಣಾರತ್ನೆ, ಸದೀರ ಸಮರವಿಕ್ರಮ ಅಪಾಯಕಾರಿಯಾಗಿ ಗೋಚರಿಸಬಹುದು.

ಭನುಕ ರಾಜಪಕ್ಸ ಲಂಕಾ ತಂಡದ ಕೀ ಬ್ಯಾಟ್ಸ್‌ ಮನ್‌. ಹಾಗೆಯೇ ಐಪಿಎಲ್‌ನಲ್ಲಿ ಮಿಂಚಿದ ವನಿಂದು ಹಸರಂಗ, ಧನಂಜಯ ಡಿ ಸಿಲ್ವ, ಲಹಿರು ಕುಮಾರ ಕೂಡ ಭಾರತಕ್ಕೆ ಸವಾಲಾಗುವುದರಲ್ಲಿ ಅನುಮಾನವಿಲ್ಲ. ಆದರೆ ನಮ್ಮವರು “ನಿರ್ಭೀತ ಕ್ರಿಕೆಟ್‌’ (ಫಿಯರ್‌ಲೆಸ್‌) ಆಡಿದರೆ ಲಂಕೆಯನ್ನು ಮಣಿಸುವುದು ಸಮಸ್ಯೆಯೇ ಆಗದು.

9 ಸರಣಿ, 8 ಗೆಲುವು
2022ರಲ್ಲಿ ಭಾರತದ ಟಿ20 ಆಟ ಹೇಗಿತ್ತು ಎಂಬ ಪ್ರಶ್ನೆಗೆ ಮಿಶ್ರ ಉತ್ತರ ಲಭಿಸುತ್ತದೆ. ಭಾರತ ಸರ್ವಾಧಿಕ 40 ಪಂದ್ಯಗಳನ್ನಾಡಿತು, 31 ಆಟಗಾರರನ್ನು ಕಣಕ್ಕಿಳಿಸಿತು, 9 ದ್ವಿಪಕ್ಷೀಯ ಸರಣಿಗಳಲ್ಲಿ ಎಂಟನ್ನು ತನ್ನದಾಗಿಸಿಕೊಂಡಿತು. ಇದು ಖುಷಿ ಕೊಡುವ ಸುದ್ದಿ.

ಆದರೆ 2 ಪ್ರಮುಖ ಕೂಟಗಳ ಫೈನಲ್ಸ್‌ ಮಾತ್ರ ಮರೀಚಿಕೆಯೇ ಆಗುಳಿಯಿತು. ಇವುಗಳೆಂದರೆ, ಏಷ್ಯಾ ಕಪ್‌ ಮತ್ತು ಟಿ20 ವಿಶ್ವಕಪ್‌. ಇದನ್ನು ಗೆಲ್ಲಲಾಗದಿದ್ದ ಮೇಲೆ ಬೇರೆ ಎಷ್ಟು ಪಂದ್ಯಗಳನ್ನು ಗೆದ್ದರೇನು ಎಂಬುದು ಎಲ್ಲರ ಪ್ರಶ್ನೆ.

ಅದಕ್ಕಾಗಿಯೇ ಈ “ಮಿಷನ್‌-2024′ ಯೋಜನೆ. ಮುಂದಿನ ವರ್ಷದ ಟಿ20 ವಿಶ್ವಕಪ್‌ ಗೆಲ್ಲಲು ಈಗಿನಿಂದಲೇ ಕಾರ್ಯತಂತ್ರ. ನಮ್ಮ ಯಂಗ್‌ ಟೀಮ್‌ ಇದರಲ್ಲಿ ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸೀತು ಎಂಬುದರ ನಿರೀಕ್ಷೆಯಲ್ಲಿರೋಣ.

ತಂಡಗಳು
ಭಾರತ:
ಹಾರ್ದಿಕ್‌ ಪಾಂಡ್ಯ (ನಾಯಕ), ಇಶಾನ್‌ ಕಿಶನ್‌, ಋತುರಾಜ್‌ ಗಾಯಕ್ವಾಡ್‌, ಶುಭಮನ್‌ ಗಿಲ್‌, ಸೂರ್ಯಕುಮಾರ್‌ ಯಾದವ್‌ (ಉಪನಾಯಕ), ದೀಪಕ್‌ ಹೂಡಾ, ರಾಹುಲ್‌ ತ್ರಿಪಾಠಿ, ಸಂಜು ಸ್ಯಾಮ್ಸನ್‌, ವಾಷಿಂಗ್ಟನ್‌ ಸುಂದರ್‌, ಯಜುವೇಂದ್ರ ಚಹಲ್‌, ಅಕ್ಷರ್‌ ಪಟೇಲ್‌, ಅರ್ಷದೀಪ್‌ ಸಿಂಗ್‌, ಹರ್ಷಲ್‌ ಪಟೇಲ್‌, ಉಮ್ರಾನ್‌ ಮಲಿಕ್‌, ಶಿವಂ ಮಾವಿ, ಮುಕೇಶ್‌ ಕುಮಾರ್‌.

ಶ್ರೀಲಂಕಾ:
ದಸುನ್‌ ಶಣಕ (ನಾಯಕ), ಪಥುಮ್‌ ನಿಸ್ಸಂಕ, ಆವಿಷ್ಕ ಫೆರ್ನಾಂಡೊ, ಸದೀರ ಸಮರವಿಕ್ರಮ, ಕುಸಲ್‌ ಮೆಂಡಿಸ್‌, ಭನುಕ ರಾಜಪಕ್ಸ, ಚರಿತ ಅಸಲಂಕ, ಧನಂಜಯ ಡಿ ಸಿಲ್ವ, ವನಿಂದು ಹಸರಂಗ (ಉಪನಾಯಕ), ಅಶೇನ್‌ ಬಂಡಾರ, ಮಹೀಶ್‌ ತೀಕ್ಷಣ, ಚಮಿಕ ಕರುಣಾರತ್ನೆ, ದಿಲ್ಶನ್‌ ಮದುಶಂಕ, ಕಸುನ್‌ ರಜಿತ, ದುನಿತ್‌ ವೆಲ್ಲಲಗೆ, ಪ್ರಮೋದ್‌ ಮದುಶಾನ್‌, ಲಹಿರು ಕುಮಾರ, ನುವಾನ್‌ ತುಷಾರ.

Advertisement

Udayavani is now on Telegram. Click here to join our channel and stay updated with the latest news.

Next