Advertisement

ಹಲವು ಅತ್ಯಾಚಾರಗಳಿಗೆ ಬೆಚ್ಚಿ ಬಿದ್ದ ಭಾರತ

09:47 AM Dec 05, 2019 | Lakshmi GovindaRaju |

ತೆಲಂಗಾಣದಲ್ಲಿ ನಡೆದ ಯುವತಿಯ ಅತ್ಯಾಚಾರ-ಹತ್ಯೆ ಪ್ರಕರಣವು ದೇಶವನ್ನು ಬೆಚ್ಚಿ ಬೀಳಿಸಿದೆ. ನಿರ್ಭಯಾ ಪ್ರಕರಣದ ನಂತರ ದೇಶದಲ್ಲಿ ಎಷ್ಟೇ ಕಠಿಣ ಕಾನೂನು ತಂದರೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳ ಪ್ರಮಾಣ ತಗ್ಗುತ್ತಿಲ್ಲ, ಬದಲಾಗಿ ಹೆಚ್ಚಾಗುತ್ತಲೇ ಇವೆ‌….

Advertisement

ನಿರ್ಭಯಾ ಪ್ರಕರಣದ ನಂತರ ದೇಶದಲ್ಲಿ ಅತ್ಯಾಚಾರ ಪ್ರಕರಣಗಳನ್ನು ತಡೆಯಲು ಕಠಿಣಾತಿಕಠಿಣ ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆಯಾದರೂ, ಇದರಿಂದಾಗಿ ಅಪರಾಧ ಪ್ರಕರಣಗಳ ಸಂಖ್ಯೆಯೇನೂ ಇಳಿಯುತ್ತಲೇ ಇಲ್ಲ.ಈ ಒಂದು ವಾರದಲ್ಲಿ ತೆಲಂಗಾಣ, ತಮಿಳುನಾಡು, ಜಾರ್ಖಂಡ್‌, ರಾಂಚಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಗಳೇ ಇದಕ್ಕೆ ಸಾಕ್ಷಿ. ಆದರೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದು, ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗುತ್ತಿರುವುದು, ಬೆಳಕಿಗೆ ಬರುತ್ತಿರುವುದು ಬೆರಳೆಣಿಕೆಯ ಪ್ರಕರಣಗಳಷ್ಟೇ…ನಿಜಕ್ಕೂ ಅತ್ಯಾಚಾರ ಪ್ರಕರಣಗಳ ಅಂಕಿ ಅಂಶಗಳನ್ನು ನೋಡಿದಾಗ, ಬೆಚ್ಚಿಬೀಳಿಸುವಂಥ ವಾಸ್ತವ ಕಣ್ಣೆದುರಾಗುತ್ತದೆ. ದೇಶದಲ್ಲಿ ಪ್ರತಿ ವರ್ಷ ಸಾವಿರಾರು ಹೆಣ್ಣುಮಕ್ಕಳು ದುರುಳರಿಗೆ ಬಲಿಯಾಗುತ್ತಿದ್ದಾರೆ. ನಿರ್ಭಯಾ ಪ್ರಕರಣದ ನಂತರದಿಂದ ದೂರು ದಾಖಲಿಸುವವರ ಸಂಖ್ಯೆ ಅಧಿಕವಾಗುತ್ತಿದೆ, ಈ ಕಾರಣಕ್ಕಾಗಿಯೇ ಅತ್ಯಾಚಾರದ ಪ್ರಮಾಣ ಅಧಿಕವಾದಂತೆ ತೋರುತ್ತಿದೆ ಎನ್ನಲಾಗುತ್ತದಾದರೂ, ದಾಖಲಾಗುವ ದೂರುಗಳ ಪ್ರಮಾಣವೇ ಎದೆ ನಡುಗಿಸುವಂತಿದೆ. ಇನ್ನು ಮರ್ಯಾದೆಗೆ- ಬೆದರಿಕೆಗೆ/ಪೊಲೀಸರ ಸಂಧಾನದಿಂದಾಗಿ ದಾಖಲಾಗದ ಪ್ರಕರಣಗಳ ಸಂಖ್ಯೆ ನಾಲ್ಕು ಪಟ್ಟು ಅಧಿಕವಿರಬಹುದು ಎಂಬುದು ಒಂದು ಅಂದಾಜು. ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಾಗಲೆಲ್ಲ, ತಪ್ಪಿತಸ್ಥರಿಗೆ ನೇಣು ಶಿಕ್ಷೆಯಾಗಬೇಕು ಎಂಬ ಕೂಗು ಜೋರಾಗುತ್ತದೆ. ಕಳೆದ ವರ್ಷ ಕೇಂದ್ರ ಸರ್ಕಾರ 12ವರ್ಷದೊಳಗಿನ ಮಕ್ಕಳ ಅತ್ಯಾಚಾರಿಗಳಿಗೆ ನೇಣುಶಿಕ್ಷೆ ವಿಧಿಸುವಂಥ ಕಾನೂನನ್ನೂ ತಂದಿದೆ. ಆದರೆ, ನಮ್ಮ ಅತ್ಯಂತ ನಿಧಾನಗತಿಯ ನ್ಯಾಯ ವ್ಯವಸ್ಥೆಯಲ್ಲಿ ದುರುಳರಿಗೆ ಶಿಕ್ಷೆಯಾಗುವುದೇ ಇಲ್ಲ. ದೇಶದಲ್ಲಿ ಕಳೆದ 16 ವರ್ಷದಲ್ಲಿ ಹತ್ಯಾಚಾರ(ಅತ್ಯಾಚಾರ+ಕೊಲೆ) ಪ್ರಕರಣದಲ್ಲಿ ನೇಣುಗಂಬವೇರಿದ್ದು ಕೇವಲ ಒಬ್ಬ ವ್ಯಕ್ತಿ ಮಾತ್ರ, ಅದೂ 2004ರಲ್ಲಿ.


ನೇಣು ಶಿಕ್ಷೆ ಹೆಸರಿಗಷ್ಟೇ
ಭಾರತದಲ್ಲಿನ ನ್ಯಾಯದಾನ ಪ್ರಕ್ರಿಯೆಯು ಎಷ್ಟು ನಿಧಾನವಿದೆಯೆಂದರೆ, ನಿರ್ಭಯಾ ಅತ್ಯಾಚಾರ-ಹತ್ಯೆ ಘಟನೆ(2012) ನಡೆದು ಇಷ್ಟು ವರ್ಷಗಳಾದರೂ ಆರೋಪಿಗಳು ಇನ್ನೂ ಜೈಲಿನಲ್ಲಿಯೇ ಇದ್ದಾರೆ. ಆರೋಪಿಗಳಿಗೆ ತ್ವರಿತ ಶಿಕ್ಷೆ ಜಾರಿಮಾಡುವುದಕ್ಕಾಗಿ ಫಾಸ್ಟ್‌ಟ್ರ್ಯಾಕ್‌ ನ್ಯಾಯಾಲಯವನ್ನು ಸ್ಥಾಪಿಸಲಾಯಿತು. 9 ತಿಂಗಳಲ್ಲೇ( ಸೆ. 2013) ಫಾಸ್ಟ್‌ಟ್ರ್ಯಾಕ್‌ ನ್ಯಾಯಾಲಯ ಅಪರಾಧಿಗಳಿಗೆ ಮರಣದಂಡನೆ ವಿಧಿಸಿದೆಯಾದರೂ, ಇಷ್ಟು ವರ್ಷವಾದರೂ ಅವರು ನೇಣುಗಂಬವೇರಿಲ್ಲ. ಈಗಲೂ ಅಪರಾಧಿಗಳು ನ್ಯಾಯಾಲಯಕ್ಕೆ ಮೊರೆ ಇಡುತ್ತಿದ್ದಾರೆ. ಸುಪ್ರೀಂ ಕೋರ್ಟ್‌ ಅವರ ಮನವಿಯನ್ನು ತಿರಸ್ಕರಿಸಿದೆಯಾದರೂ, ಈಗವರು ರಾಷ್ಟ್ರಪತಿಗಳಿಗೆ ಅಪೀಲು ಸಲ್ಲಿಸಬಹುದಾಗಿದೆ. 2018ರಲ್ಲಿ ಕೇಂದ್ರ ಸರ್ಕಾರ 12ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸುವ ಕಾನೂನು ತಂದಿದೆ. ಆದರೆ ಇಷ್ಟೆಲ್ಲ ಕಾನೂನು ತಂದರೂ ಅಪರಾಧಿಗಳು ಕುಣಿಕೆಗೆ ಕುತ್ತಿಗೆಯೊಡ್ಡುವುದು ಅಪರೂಪವೇ. ಅತ್ಯಾಚಾರಿಗಳಿಗೆಂದಲ್ಲ, ಕಳೆದ ಐದು ವರ್ಷಗಳಲ್ಲಿ ಒಬ್ಬ ಅಪರಾಧಿಯೂ ನೇಣುಗಂಬವೇರಿಲ್ಲ. 2015ರಲ್ಲಿ ಉಗ್ರ ಯಾಕೂಬ್‌ ಮೆಮನ್‌ನನ್ನು ಗಲ್ಲಿಗೇರಿಸಿರುವುದೇ ಕೊನೆ. ದಶಕಗಳಿಂದ ನೂರಾರು ಅಪರಾಧಿಗಳಿಗೆ ನಮ್ಮ ನ್ಯಾಯಾಲಯಗಳು ಮರಣದಂಡನೆ ತೀರ್ಪು ನೀಡುತ್ತಲೇ ಬಂದಿವೆ. 2017ರಲ್ಲೇ ದೇಶದಲ್ಲಿ 109 ಅಪರಾಧಿಗಳು ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ. ಇವರಲ್ಲಿ 43 ಅಪರಾಧಿಗಳು (39 ಪ್ರತಿಶತ) ಅತ್ಯಾಚಾರವೆಸಗಿ ಸಂತ್ರಸ್ತೆಯ ಕೊಲೆಯಲ್ಲಿ ಮಾಡಿದ್ದಕ್ಕಾಗಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ. 2016ರಲ್ಲಿ 24 ಅಪರಾಧಿಗಳಿಗೆ “ಅತ್ಯಾಚಾರ-ಹತ್ಯೆ’ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಆದರೆ ಈ ಪ್ರಕರಣದಲ್ಲಿ ಅಪರಾಧಿಯನ್ನು ನೇಣಿಗೇರಿಸಿದ್ದು 2004ರಲ್ಲಿ(ಧನಂಜಯ್‌ಚಟರ್ಜಿ ಎಂಬ ವ್ಯಕ್ತಿ ಹದಿಹರೆಯದ ಹೆಣ್ಣುಮಗಳ ಅತ್ಯಾಚಾರ-ಕೊಲೆ ಮಾಡಿದ್ದಕ್ಕೆ ನೇಣಿಗೇರಿಸಲಾಗಿತ್ತು) ಅಂದರೆ ಅಜಮಾಸು 16 ವರ್ಷಗಳಲ್ಲಿ ಒಬ್ಬೇ ಒಬ್ಬ ಅತ್ಯಾಚಾರಿಯೂ ನೇಣುಗಂಬವೇರಿಲ್ಲ.

ಈ ವರ್ಷ ರಾಜ್ಯದಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳು
(2019ರಲ್ಲಿ 438 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 243 ಪ್ರಕರಣಗಳು ಪರಿಚಿತರಿಂದಲೇ ನಡೆದಿವೆ. 9 ಸಾಮೂಹಿಕ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.)

ಅಕ್ಟೋಬರ್‌ ತಿಂಗಳಲ್ಲಿ ದಾಖಲಾದ ಅತ್ಯಾಚಾರ ಪ್ರಕರಣ
ಬಳ್ಳಾರಿ-1, ಬೆಂಗಳೂರು ನಗರ-6, ಬೆಂಗಳೂರು ಗ್ರಾಮಾಂತರ-1, ಬೀದರ್‌-1,
ಚಾಮರಾಜ ನಗರ-1, ಚಿಕ್ಕಬಳ್ಳಾಪುರ-5, ಚಿತ್ರದುರ್ಗ-1, ಗದಗ-1, ಹಾಸನ-2, ಹಾವೇರಿ-1, ಕೆ.ಜಿ.ಎಫ್-1, ಕಲಬುರಗಿ-1, ಕೋಲಾರ-1, ಕೊಪ್ಪಳ-2, ಮಂಡ್ಯ-3, ಮೈಸೂರು ನಗರ-1, ಮೈಸೂರು ಜಿಲ್ಲೆ-1, ರಾಯಚೂರು-1, ರಾಮನಗರ-1, ಶಿವಮೊಗ್ಗ-3, ತುಮಕೂರು-1, ಉತ್ತರಕನ್ನಡ-1

Advertisement

2018ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ದಿನ 5 ಹೆಣ್ಣುಮಕ್ಕಳು ಅತ್ಯಾಚಾರಕ್ಕೆ, 8 ಹೆಣ್ಣುಮಕ್ಕಳು ಕಿರುಕುಳಕ್ಕೆ ಈಡಾಗಿದ್ದಾರೆ
ಭಾರತದಲ್ಲಿ ಪ್ರತಿ 5ರಲ್ಲಿ 4 ಮಹಿಳೆಯರು ಒಂದಲ್ಲ ಒಂದು ರೀತಿಯಲ್ಲಿ ಕಿರುಕುಳ ಅನುಭವಿಸಿರುತ್ತಾರೆ ಎನ್ನುತ್ತದೆ ರಾಯರ್ಸ್‌ ವರದಿ
ಎನ್‌ಸಿಆರ್‌ಬಿ ವರದಿಯ ಪ್ರಕಾರ 2007-2016ರ ನಡುವೆ ಮಹಿಳೆಯರ ವಿರುದ್ಧಧ ಅಪರಾಧ ಪ್ರಕರಣಗಳಲ್ಲಿ 83ಪ್ರತಿಶತ ಹೆಚ್ಚಳ

ಎದೆ ನಡುಗಿಸುವ ಅಂಕಿ-ಅಂಶ
2016: ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣ
3,38,594 2016ರಲ್ಲಿ ದಾಖಲಾದ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು
38,947 ಅತ್ಯಾಚಾರ ಪ್ರಕರಣ
2167 ಸಾಮೂಹಿಕ ಅತ್ಯಾಚಾರ ಪ್ರಕರಣ


Advertisement

Udayavani is now on Telegram. Click here to join our channel and stay updated with the latest news.

Next