Advertisement

ವಿಶ್ವಕಪ್‌ ಕ್ರಿಕೆಟ್‌ ಮತ್ತು ಭಾರತ-ಪಾಕ್‌ ಪಂದ್ಯ

03:25 AM Mar 02, 2019 | Team Udayavani |

ಪುಲ್ವಾಮ ದಾಳಿಯ ಬಳಿಕ ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್‌ ಮತ್ತೆ ಕಾವೇರಿಸಿಕೊಂಡಿದೆ. ಇದಕ್ಕೆ ಕಾರಣ, ಮುಂಬರುವ ಏಕದಿನ ವಿಶ್ವಕಪ್‌ ಕ್ರಿಕೆಟ್‌. ಈ ಪ್ರತಿಷ್ಠಿತ ಕೂಟದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಆಡಬೇಕೇ, ಪಾಕಿಸ್ತಾನ ಈ ಕೂಟದಲ್ಲಿ ಪಾಲ್ಗೊಳ್ಳುವುದರಿಂದ ಭಾರತ ವಿಶ್ವಕಪ್‌ ಪಂದ್ಯಾವಳಿಯನ್ನೇ ಬಹಿಷ್ಕರಿಸಬೇಕೇ, ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸಿ ಕ್ರಿಕೆಟ್‌ ನಿಷೇಧ ಹೇರಬೇಕೇ… ಹತ್ತು ಹಲವು ಪ್ರಶ್ನೆಗಳು ತೂರಿಬರುತ್ತಿವೆ. ಐಸಿಸಿ, ಬಿಸಿಸಿಐ, ಕೇಂದ್ರ ಸರಕಾರ, ವಿಶ್ವ ಕ್ರಿಕೆಟ್‌ ವಲಯಗಳೆಲ್ಲ ಜಟಿಲ ಸಮಸ್ಯೆಯನ್ನು ಹೊತ್ತು ಕೂತಿವೆ.

Advertisement

 ಕ್ರಿಕೆಟ್‌ನಿಂದ ಶಾಂತಿ ಲಭಿಸಿದೆಯೇ?
ಕ್ರಿಕೆಟ್‌ “ಶಾಂತಿಯ ಸಂಧಾನಕಾರ’, ಕ್ರಿಕೆಟ್‌ನಿಂದ ಎರಡು ರಾಷ್ಟ್ರಗಳ ನಡುವಿನ ಬಾಂಧವ್ಯ ಸುಧಾರಿಸುತ್ತದೆ ಎಂಬುದೆಲ್ಲ ಭಾರತ-ಪಾಕಿಸ್ತಾನ ವಿಷಯದಲ್ಲಿ ಸುಳ್ಳಾಗಿರುವುದಕ್ಕೆ ಪುಲ್ವಾಮ ದಾಳಿಯೇ ಸಾಕ್ಷಿ. ಇದರಿಂದ ಕ್ರೀಡೆಗಿಂತ ದೇಶ ದೊಡ್ಡದು ಎಂಬ ಅಭಿಮಾನ ಎಲ್ಲೆಡೆ ವ್ಯಕ್ತವಾಗುತ್ತಿದೆ. ಹೀಗಾಗಿ ವಿಶ್ವಕಪ್‌ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಆಡುವುದು ಬೇಡ ಎಂಬ ಕೂಗು ತೀವ್ರಗೊಂಡಿದೆ.

ಹಾಗೆಯೇ, ನಾವೇಕೆ ಪಾಕಿಸ್ತಾನಕ್ಕೆ ಪುಕ್ಕಟೆ ಎರಡಂಕ ಕೊಡಬೇಕು, ವಿಶ್ವಕಪ್‌ನಲ್ಲಿ ಪಾಕ್‌ ವಿರುದ್ಧ ಭಾರತ ಸೋಲಿಲ್ಲದ ದಾಖಲೆ ಹೊಂದಿರುವುದರಿಂದ ಅವರನ್ನು ಇನ್ನೊಮ್ಮೆ ಹೆಡೆಮುರಿ ಕಟ್ಟಿ ಸಂಭ್ರಮಿಸೋಣ ಎಂಬ ಹೇಳಿಕೆಗಳೂ ಬಂದಿವೆ. ಮೇಲ್ನೋಟಕ್ಕೆ ಎರಡೂ ಸರಿ ಎನಿಸುತ್ತದೆ.

ವಿಶ್ವಕಪ್‌ನಲ್ಲಿ ಭಾರತ ಆಡದೇ ಹೋದರೆ, ಪಾಕಿಸ್ತಾನಕ್ಕೆ ನಿಷೇಧ ಹೇರಿದರೆ ಯಾವ ಚಿಂತೆಯೂ ಇಲ್ಲ. ಆದರೆ “ನಿಷೇಧ’ ಎನ್ನುವುದು ಅಷ್ಟು ಸುಲಭದಲ್ಲಿ ಹೇರಲ್ಪಡುವ ಸಂಗತಿಯಲ್ಲ. ಅಂದು ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟ್‌ ಬಸ್ಸಿನ ಮೇಲೆ ಭಯೋತ್ಪಾದಕ ದಾಳಿ ನಡೆದಾಗಲೇ ಪಾಕಿಸ್ತಾನವನ್ನು ವಿಶ್ವ ಕ್ರಿಕೆಟ್‌ನಿಂದ ದೂರ ಇಡಬೇಕಿತ್ತು. ಆದರೆ ಹಾಗಾಗಲಿಲ್ಲ.

ಫೈನಲ್‌ನಲ್ಲಿ ಎದುರಾದರೆ?: ಈ ಬಾರಿಯ ವಿಶ್ವಕಪ್‌ ರೌಂಡ್‌ ರಾಬಿನ್‌ ಲೀಗ್‌ ಮಾದರಿಯನ್ನು ಹೊಂದಿದೆ. ಇದರಂತೆ ಭಾರತ-ಪಾಕಿಸ್ತಾನ ಮುಖಾಮುಖೀ ನಡೆಯಬೇಕಿದೆ. ಈ ಪಂದ್ಯವನ್ನು ಭಾರತ ತ್ಯಜಿಸಿದರೆ ಎರಡಂಕ ನಷ್ಟವಾಗುತ್ತದೆ. ಪಾಕಿಗೆ ಲಾಭವಾಗುತ್ತದೆ. ಇದರಿಂದ ಭಾರತದ ಸೆಮಿಫೈನಲ್‌ ಪ್ರವೇಶಕ್ಕೇನೂ ಅಡ್ಡಿಯಾಗಲಿಕ್ಕಿಲ್ಲ ಎಂದೇ ಭಾವಿಸೋಣ. ಅಕಸ್ಮಾತ್‌ ಭಾರತ-ಪಾಕಿಸ್ತಾನ ತಂಡಗಳೇ ಫೈನಲ್‌ನಲ್ಲಿ ಎದುರಾದರೆ? ಆಗಲೂ ಭಾರತ “ಕಪ್‌’ ಬಿಟ್ಟುಕೊಡುತ್ತದೆಯೇ? ಈ ಬಗ್ಗೆ ಈಗಲೇ ಚಿಂತಿಸಿ ಸೂಕ್ತ ಯೋಜನೆಯನ್ನು ರೂಪಿಸಬೇಕಾದ ಅಗತ್ಯವಿದೆ.

Advertisement

1996ರ ವಿಶ್ವಕಪ್‌ ವೇಳೆ ಎಲ್‌ಟಿಟಿಇ ಭೀತಿಯಿಂದ ಆಸ್ಟ್ರೇಲಿಯ, ವೆಸ್ಟ್‌ ಇಂಡೀಸ್‌ ತಂಡಗಳು ಶ್ರೀಲಂಕಾದಲ್ಲಿ ಆಡಲು ನಿರಾಕರಿಸಿದ್ದವು. ಆಗ ಲಂಕೆಗೆ ಪುಕ್ಕಟೆ 4 ಅಂಕ ಲಭಿಸಿತ್ತು. ಕಡೆಗೆ ಫೈನಲ್‌ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆಯಿತು. ಲೀಗ್‌ ಹಂತದಲ್ಲಿ ಆಡಲು ನಿರಾಕರಿಸಿದ್ದ ಆಸ್ಟ್ರೇಲಿಯವೇ ಫೈನಲ್‌ನಲ್ಲಿ ಎದುರಾದಾಗ, ಮೇಲೆರಗಿ ಹೋದ ಶ್ರೀಲಂಕಾ ಚಾಂಪಿಯನ್‌ ಆದದ್ದು ಈಗ ಇತಿಹಾಸ. ಆದರೆ ಭಾರತ-ಪಾಕಿಸ್ತಾನ ವಿಷಯದಲ್ಲಿ ಈ ಘಟನೆಯನ್ನು ತುಲನೆ ಮಾಡಲಾಗದು.

* ಅಂದು ಕಾರ್ಗಿಲ್‌ ಕದನ: ಕಾಕತಾಳೀಯವೆಂಬಂತೆ, 1999ರಲ್ಲಿ ಇಂಗ್ಲೆಂಡ್‌ ಆತಿಥ್ಯದಲ್ಲೇ ವಿಶ್ವಕಪ್‌ ನಡೆದಾಗ ಆಗಲೂ ಭಾರತ-ಪಾಕಿಸ್ತಾನ ನಡುವೆ ಬಿಗು ವಾತಾವರಣ ನೆಲೆಸಿತ್ತು. ಕಾರಣ, ಕಾರ್ಗಿಲ್‌ ಯುದ್ಧ!

ವಿಶ್ವಕಪ್‌ ಮತ್ತು ಕಾರ್ಗಿಲ್‌ ಕದನ ಏಕಕಾಲದಲ್ಲಿ ನಡೆಯುತ್ತಿತ್ತು. ಅಂದು “ಸೂಪರ್‌ ಸಿಕ್ಸ್‌’ ಹಂತದಲ್ಲಿ ಭಾರತ-ಪಾಕ್‌ ಎದುರಾದವು. ಎಂದಿನಂತೆ ಭಾರತ ವಿಶ್ವಕಪ್‌ ಅಂಗಳದಲ್ಲಿ ಪಾಕಿಸ್ತಾನವನ್ನು ಹೊಡೆದುರುಳಿಸಿ ಸಂಭ್ರಮಿಸಿತು. ಅಂದು ಕೂಡ ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ಆಡಬಾರದು-ಆಡಬೇಕು ಎಂಬ ಕೂಗು ತೀವ್ರವಾಗಿಯೇ ಇತ್ತು. ಆದರೆ ನೇರಾನೇರ ಕಾರ್ಗಿಲ್‌ ಕದನಕ್ಕೆ ಪುಲ್ವಾಮದ ಕಳ್ಳ ದಾಳಿಯನ್ನು ಸಮೀಕರಿಸಲಾಗದು. ವಿಶ್ವಕಪ್‌ಗೆ ಇನ್ನೂ 3 ತಿಂಗಳಿರಬಹುದು, ಆದರೆ ಭಾರತ-ಪಾಕಿಸ್ತಾನ ಪಂದ್ಯದ ಕುರಿತು ಶೀಘ್ರದಲ್ಲಿ ಸ್ಪಷ್ಟ ಹಾಗೂ ದಿಟ್ಟ ನಿರ್ಧಾರವೊಂದಕ್ಕೆ ಬರಬೇಕಾದ ಅಗತ್ಯವಿದೆ.

-ಪ್ರೇಮಾನಂದ ಕಾಮತ್‌ 

Advertisement

Udayavani is now on Telegram. Click here to join our channel and stay updated with the latest news.

Next