Advertisement

ಫೆಬ್ರವರಿಯಲ್ಲಿ ಇಂಡಿಯಾ ಎನರ್ಜಿ ವೀಕ್‌

01:18 PM Dec 19, 2022 | Team Udayavani |

ಹಾವೇರಿ: ಮುಂದಿನ ಫೆಬ್ರವರಿಯಲ್ಲಿ ಕರ್ನಾಟಕದಲ್ಲಿ ಇಂಡಿಯಾ ಎನರ್ಜಿ ವೀಕ್‌-2023 ಅನ್ನು ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಶಿಗ್ಗಾವಿ ತಾಲೂಕಿನ ಕೋಣನಕೇರಿ ಗ್ರಾಮದಲ್ಲಿ ರವಿವಾರ ವಿಐಎನ್‌ಪಿ ಡಿಸ್ಟಿಲರೀಸ್‌ ಆ್ಯಂಡ್‌ ಶುಗರ್ಸ್‌ ಪ್ರೈವೇಟ್‌ ಲಿಮಿಟೆಡ್‌ ಆಯೋಜಿಸಿದ್ದ 3000 ಕೆಎಲ್‌ಪಿಡಿ ಎಥಿನಾಲ್‌ ಹಾಗೂ ಸಕ್ಕರೆ ಕಾರ್ಖಾನೆ ಉದ್ಘಾಟಿಸಿ ಮಾತನಾಡಿದ ಅವರು, ಎನರ್ಜಿ ವೀಕ್‌ ಕಾರ್ಯಕ್ರಮದಲ್ಲಿ ದೇಶ-ವಿದೇಶಗಳಿಂದ ಸುಮಾರು 10 ಸಾವಿರ ಪ್ರತಿನಿ ಧಿಗಳು ಭಾಗವಹಿಸುತ್ತಿದ್ದು, ಇಂಧನ ಉತ್ಪಾದನೆ, ನೀತಿಗಳ ಬಗ್ಗೆ ಚಿಂತನೆ ನಡೆಯುವ ಬೃಹತ್‌ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಹೆಚ್ಚು ಆರ್‌ಆ್ಯಂಡ್‌ಡಿ ಕೇಂದ್ರಗಳನ್ನು ಹೊಂದಿರುವ ಬೆಂಗಳೂರು ನಗರದಲ್ಲಿ ಇಂಧನ ಸಪ್ತಾಹ ಆಚರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದರು.

ಎಥೆನಾಲ್‌ ಕಾರ್ಖಾನೆ ಸ್ಥಾಪನೆಗೆ ಶೇ.6ರ ಬಡ್ಡಿ ಸಹಾಯಧನ: ಎಥೆನಾಲ್‌ ಕಾರ್ಖಾನೆಗಳಿಗೆ ಬಹಳ ಬೇಡಿಕೆಯಿದ್ದು, ಇದರ ಸ್ಥಾಪನೆಗೆ ಶೇ.6ರ ಬಡ್ಡಿ ಸಹಾಯಧನ ಹಾಗೂ ಶೇ.95ರಷ್ಟು ಆರ್ಥಿಕ ನೆರವು ನೀಡಲಾಗುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಸಂಗೂರು, ಹಿರೇಕೆರೂರುಗಳಲ್ಲಿ ಎಥೆನಾಲ್‌ ಘಟಕಗಳಿದ್ದು, ಇನ್ನೂ ಹೆಚ್ಚಿನ ಕಾರ್ಖಾನೆಗಳು ಬರಲಿವೆ. ಇವುಗಳಿಗೆ ಸರ್ಕಾರ ಅನುಮತಿ ನೀಡಲಿದೆ. ಎಥೆನಾಲ್‌ ಕಾರ್ಖಾನೆಗಳಿಂದ ರೈತರ ಅಭ್ಯುದಯ, ಸ್ಥಳೀಯರಿಗೆ ಉದ್ಯೋಗ ಹಾಗೂ ಸರ್ಕಾರಕ್ಕೆ ಆದಾಯ ಕಾಣಬಹುದಾಗಿದೆ ಎಂದರು.

ಜೈವಿಕ ಇಂಧನಕ್ಕೆ ಮಹತ್ವ: ನಮ್ಮ ದೇಶದ ಮುಂದಿರುವ ಸವಾಲುಗಳನ್ನು ಹೇಗೆ ಬಗೆಹರಿಸಬೇಕೆಂದು ಮೋದಿ ಪ್ರಧಾನಿಯಾದ ಕೂಡಲೇ ದೂರದೃಷ್ಟಿಯಿಂದ ಚಿಂತನೆ ಮಾಡಿದ್ದರು. ಆರ್ಥಿಕತೆ ಬೆಳೆಯಲು ವಿದ್ಯುತ್‌ ಉತ್ಪಾದನೆ ಜತೆಗೆ ಪರಿಸರದ ರಕ್ಷಣೆಯೂ ಆಗಬೇಕು. ಜೈವಿಕ ಇಂಧನಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ವಾಜಪೇಯಿ ಕಾಲದಲ್ಲಿ ಎಥೆನಾಲ್‌ ಘಟಕ ಪ್ರಾರಂಭವಾಯಿತು. 2024ಕ್ಕೆ ಶೇ.10ರಷ್ಟು ಗುರಿ ಸಾಧಿ ಸಬೇಕೆಂದಿತ್ತು. ಆದರೆ, 2022ಕ್ಕೇ ಈ ಗುರಿ ಸಾಧಿಸಲಾಗಿದೆ. 2025ಕ್ಕೆ ಶೇ.20ರಷ್ಟು ಎಥೆನಾಲ್‌ ಸೇರಿಸಲಾಗುವುದು ಎಂದು ತೀರ್ಮಾನಿಸಲಾಗಿದೆ. ದೇಶದ ಶೇ.20ರಷ್ಟು ತೈಲ ಆಮದು ಕಡಿಮೆಯಾಗಲಿದೆ. ಆರ್ಥಿಕ ಹೊರೆ ಕಡಿಮೆಯಾಗಿ, ಸ್ವತ್ಛ ಇಂಧನದ ಉತ್ಪಾದನೆಯೂ ಸಾಧ್ಯವಾಗುತ್ತದೆ. ಇದು ದೂರದೃಷ್ಟಿಯ ನಾಯಕನ ಕೆಲಸ. ಬಹಳಷ್ಟು ತೈಲ ಉತ್ಪಾದಿಸುವ ಸಂಸ್ಥೆಗಳು ಇದನ್ನು ಸ್ವೀಕರಿಸಿರಲಿಲ್ಲ. ದಿಟ್ಟ ನಾಯಕತ್ವದ ವಿಚಾರವಿದ್ದಾಗ ಸಮಸ್ಯೆಗಳು ತಾನೇ ತಾನಾಗಿ ನಿವಾರಣೆಯಾಗುತ್ತವೆ. ನರೇಂದ್ರ ಮೋದಿ ಬಂದ ನಂತರ ಇದಕ್ಕೆ ಚಾಲನೆ ದೊರತು, ಸ್ವತ್ಛ ಇಂಧನ, ಇಂಧನದ ದಕ್ಷತೆಯೂ ಇದೆ. ಎನ್‌ ಡಿಎ ಸರ್ಕಾರ, ಮೋದಿ ನಾಯಕತ್ವ ಬಂದ ಮೇಲೆ ಇದೆಲ್ಲವೂ ಸಾಧ್ಯವಾಗಿವೆ. ಎಥೆನಾಲ್‌ ಘಟಕಕ್ಕೆ ಬೇಡಿಕೆ ಬಹಳ ಇದೆ ಎಂದರು.

ಶಿವರಾಮ್‌ ಹೆಬ್ಟಾರರ ಪರಿಶ್ರಮ: ಶಿವರಾಮ್‌ ಹೆಬ್ಟಾರ್‌ ಅವರ ಹೆಸರಿನಲ್ಲಿ ಶಿವ ಹಾಗೂ ರಾಮ ಇಬ್ಬರೂ ಇದ್ದಾರೆ. ಶಿವನ ಹಾಗೆ ಸಾಧನೆ, ರಾಮನ ಹಾಗೆ ನ್ಯಾಯವನ್ನೂ ಒದಗಿಸುತ್ತಾರೆ. ದೇವರ ಆಶೀರ್ವಾದ ಅವರ ಮೇಲಿದೆ. ಅವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ಪರಿಶ್ರಮದಿಂದ ದುಡಿದು ಮೇಲೆ ಬಂದವರು. ಅವರ ಮಗ ವಿವೇಕ, ಹೆಸರಿನ ತಕ್ಕ ಹಾಗೆ ವಿವೇಕಿ ಹಾಗೂ ಜ್ಞಾನಿಯಾಗಿದ್ದು, ಆತನ ಪರಿಶ್ರಮದಿಂದ ಇವೆಲ್ಲವೂ ಸಾಧ್ಯವಾಗಿದೆ ಎಂದು ಹೇಳಿ, ಅವರ ಕುಟುಂಬದವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಶಿವರಾಮ್‌ ಹೆಬ್ಟಾರ್‌, ಮುರುಗೇಶ್‌ ನಿರಾಣಿ, ಆರ್‌.ಅಶೋಕ್‌, ಭೈರತಿ ಬಸವರಾಜ, ಕೋಟ ಶ್ರೀನಿವಾಸ ಪೂಜಾರಿ, ಶಂಕರಪಾಟೀಲ ಮುನೇನಕೊಪ್ಪ, ಸಂಸದ ಜಿ.ಎಂ.ಸಿದ್ದೇಶ್ವರ, ಮೇಲ್ಮನೆ ಸದಸ್ಯ ಆರ್‌. ಶಂಕರ್‌, ಮಾಜಿ ಶಾಸಕರಾದ ಸುರೇಶಗೌಡ ಪಾಟೀಲ, ಶಿವರಾಜ ಸಜ್ಜನರ ಇತರರು ಇದ್ದರು. ವಿವೇಕ ಹೆಬ್ಟಾರ ನಿರೂಪಿಸಿದರು.

Advertisement

ಎಥೆನಾಲ್‌ ಕಾರ್ಖಾನೆಯಿಂದ ಸ್ಥಳೀಯರಿಗೆ ಉದ್ಯೋಗ

ಮುಂದಿನ 50 ವರ್ಷಗಳಲ್ಲಿ ಜೈವಿಕ ಇಂಧನಕ್ಕೆ ಬಹಳ ಬೇಡಿಕೆ ಬರುತ್ತದೆ. ಪರಿಸರ, ಆರ್ಥಿಕತೆ ಹಾಗೂ ಇಂಧನಶಕ್ತಿ ಇವುಗಳು ಒಂದಕ್ಕೊಂದು ಬೆಸೆದುಕೊಂಡಿವೆ. ಇವುಗಳ ಸಮತೋಲನ ಕಾಯ್ದುಕೊಳ್ಳುವ ಮೂಲಕ ಆರ್ಥಿಕತೆಯಲ್ಲಿ ಅಭಿವೃದ್ಧಿ ಕಾಣಬಹುದಾಗಿದೆ. ಕರ್ನಾಟಕ ಪ್ರಗತಿಪರ ರಾಜ್ಯವಾಗಿದ್ದು, ದೇಶದ ಮುಂದಿನ ಭವಿಷ್ಯ ಬರೆಯುವ ಕಾರ್ಯ ರಾಜ್ಯದಲ್ಲಾಗುತ್ತಿದೆ. ಕರ್ನಾಟಕ ಇಂದು ಚಿಂತನೆ ಮಾಡಿ ಕಾರ್ಯರೂಪಕ್ಕೆ ತರುವುದನ್ನು ಭಾರತ ನಂತರ ಮಾಡುತ್ತದೆ. ಆ ಶಕ್ತಿ ಕರ್ನಾಟಕ ರಾಜ್ಯಕ್ಕಿದೆ. ಈ ಕಾರ್ಖಾನೆಯಲ್ಲಿ ಶಿಗ್ಗಾವಿ ಕ್ಷೇತ್ರದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ದೊರೆಯಲಿ ಹಾಗೂ ಮುಂದಿನ ದಿನಗಳಲ್ಲಿ ಕಾರ್ಖಾನೆ ವಿಸ್ತರಣೆಯಾಗಲಿ ಎಂದು ಸಿಎಂ ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next