Advertisement

ಸಿಡ್ನಿಯಲ್ಲಿ ಗೆದ್ದ ‘ಟೆಸ್ಟ್ ಕ್ರಿಕೆಟ್’: ವಿಹಾರಿ ವೀರೋಚಿತ ಹೋರಾಟ; ಪಂದ್ಯ ಉಳಿಸಿದ ಭಾರತ

12:43 PM Jan 11, 2021 | Team Udayavani |

ಸಿಡ್ನಿ: ಬಾರ್ಡರ್- ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯದ ಐದನೇ ದಿನದಾಟ ‘ರಿಯಲ್ ಟೆಸ್ಟ್ ಕ್ರಿಕೆಟ್’ ಗೆ ಸಾಕ್ಷಿಯಾಯಿತು. ಗಾಯಗೊಂಡಿದ್ದರೂ ಕೊನೆಯ ತನಕ ತಾಳ್ಮೆಯುತ ಬ್ಯಾಟಿಂಗ್ ನಡೆಸಿದ ಹನುಮ ವಿಹಾರಿ ಮತ್ತು ಸಾಥ್ ನೀಡಿದ ಆರ್. ಅಶ್ವಿನ್ ಪಂದ್ಯ ಡ್ರಾ ಆಗುವಂತೆ ನೋಡಿಕೊಂಡರು.

Advertisement

ಆಸೀಸ್ ನೀಡಿದ 407 ರನ್ ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ 131 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 334 ರನ್ ಗಳಿಸಿತು. ಇದರೊಂದಿಗೆ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.

ವಿಹಾರಿ ವಿರೋಚಿತ ಬ್ಯಾಟಿಂಗ್

ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಹನುಮ ವಿಹಾರಿ ಅತ್ಯಂತ ತಾಳ್ಮೆಯುತ ಬ್ಯಾಟಿಂಗ್ ನಡೆಸಿದರು. ಆರಂಭದಲ್ಲಿ ಸ್ನಾಯುರಜ್ಜು ಸೆಳೆತಕ್ಕೆ ಒಳಗಾದ ವಿಹಾರಿ ನೋವಿನ ನಡುವೆಯೂ ಬ್ಯಾಟಿಂಗ್ ನಡೆಸಿದರು. 161 ಎಸೆತ ಎದುರಿಸಿದ ವಿಹಾರಿ ಗಳಿಸಿದ್ದು ಕೇವಲ 23 ರನ್ ಆದರೂ ತನ್ನ ಸಾರ್ವಕಾಲಿಕ ಶ್ರೇಷ್ಠ ಇನ್ನಿಂಗ್ಸ್ ಆಡಿದರು.

ವಿಹಾರಿಗೆ ಉತ್ತಮ ಸಾಥ್ ನೀಡಿದ ಅಶ್ವಿನ್ 128 ಎಸೆತಗಳಲ್ಲಿ 39 ರನ್ ಗಳಿಸಿದರು. ಕಾಂಗರೂಗಳ ನಿಖರ ದಾಳಿ, ಚಕ್ರವ್ಯೂಹದಂತಹ ಫೀಲ್ಡಿಂಗ್ ನಡುವೆಯೂ ಅತ್ಯಂತ ತಾಳ್ಮೆಯಿಂದ ಆಡಿದರು.

Advertisement

ಪಂತ್ ಅಬ್ಬರ

ಇದಕ್ಕೂ ಮೊದಲು ಬ್ಯಾಟಿಂಗ್ ಭಡ್ತಿ ಪಡೆದ ಪಂತ್ ಉತ್ತಮ ಇನ್ನಿಂಗ್ ಆಡಿದರು. ಏಕದಿನ ಶೈಲಿಯಲ್ಲೇ ಬ್ಯಾಟ್ ಬೀಸಿದ ಪಂತ್ 97 ರನ್ ಗಳಿಸಿ ಔಟಾಗುವ ಮೂಲಕ ಶತಕ ವಂಚಿತರಾದರು. ಮೂರು ಸಿಕ್ಸರ್ ಮತ್ತು 12 ಬೌಂಡರಿ ಬಾರಿಸಿದ ಪಂತ್ ಶತಕದ ಹೊಸ್ತಿಲಲ್ಲಿ ಎಡವಿದರು.

ಪಂತ್ ಮತ್ತು ಪೂಜಾರ ಶತಕದ ಜೊತೆಯಾಟವಾಡಿದರು. ರಕ್ಷಾಣಾತ್ಮಕವಾಗಿ ಆಡಿದ ಪೂಜಾರ 77 ರನ್ ಗಳಿಸಿ ಔಟಾದರು. ಇದೇ ವೇಳೆ ಪೂಜಾರ ಟೆಸ್ಟ್ ಕ್ರಿಕೆಟ್ ನಲ್ಲಿ ಆರು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು.

ಸರಣಿಯಲ್ಲಿ ಎರಡೂ ತಂಡಗಳು ತಲಾ ಒಂದು ಪಂದ್ಯ ಗೆದ್ದಿದೆ. ಮುಂದಿನ ಪಂದ್ಯ ಬ್ರಿಸ್ಬೇನ್ ನಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next