Advertisement

ಅಂಧರು ಮಹಾನುಬಾವುಲು

11:05 AM Mar 18, 2017 | Team Udayavani |

ಅದು ದಕ್ಷಿಣ ಆಫ್ರಿಕಾದಲ್ಲಿ ನಡೆದ 2014ರ ಅಂಧರ ಏಕದಿನ ವಿಶ್ವಕಪ್‌ ಟೂರ್ನಿ. ಲೀಗ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಬ್ಯಾಟಿಂಗ್‌ ಮಾಡುತ್ತಿದ್ದ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳು ಸಿಂಗಲ್‌ ರನ್‌ ಕದಿಯುವ ಯತ್ನದಲ್ಲಿ ಕ್ರೀಸ್‌ನಲ್ಲಿಯೇ ಡಿಕ್ಕಿಯಾಗಿ ರಪ್ಪನೆ ಬಿದ್ದರು. ಅದೇ ಕ್ಷಣದಲ್ಲಿ ಭಾರತೀಯರು ರನೌಟ್‌ ಮಾಡಿದ್ದಕ್ಕೆ ಅಂಪೈರ್‌ ಕೂಡ ಔಟ್‌ ಎಂದು ತೀರ್ಪು ಕೊಟ್ಟರು. ಡಿಕ್ಕಿಯ ರಭಸಕ್ಕೆ ಇಬ್ಬರು ಬ್ಯಾಟ್ಸ್‌ಮನ್‌ಗಳಿಗೂ ರಕ್ತ ಬಸಿಯುತ್ತಿತ್ತು. ಇದನ್ನು ಕಂಡ ಭಾರತೀಯ ಆಟಗಾರರು ಅಂಪೈರ್‌ ಬಳಿಗೆ ತೆರಳಿ ತೀರ್ಪನ್ನು ವಾಪಸ್‌ ತೆಗೆದುಕೊಳ್ಳಿ ಅವರಿಬ್ಬರಿಗೂ ಆಡಲು ಅವಕಾಶ ನೀಡಿ ಎಂದು ಮನವಿ ಮಾಡಿದರು. ಅಂತೆಯೇ ಅವರು ಮತ್ತೆ ಬ್ಯಾಟಿಂಗ್‌ ಮಾಡಿದರು. ಆದರೆ ಅಂತಿಮವಾಗಿ ಪಂದ್ಯದಲ್ಲಿ ಭಾರತವೇ ಜಯಸಾಧಿಸಿತು. ಭಾರತೀಯರ ಹೃದಯ ವೈಶಾಲ್ಯತೆ ಕಂಡು ದಕ್ಷಿಣ ಆಫ್ರಿಕಾ ಆಟಗಾರರು, ಪ್ರೇಕ್ಷಕರು ಕೂಡ ಭಾರತೀಯರ ಜಯಕ್ಕೆ ಸಂಭ್ರಮಿಸಿದರು.

Advertisement

ಹೌದು, ತಮ್ಮ ಗೆಲುವಿಗೆ ವಿರೋಧಿ ತಂಡ ಖುಷಿ ಪಡುವಂತೆ ಮಾಡಿದ ಶ್ರೇಯಸ್ಸು ಭಾರತದ ಅಂಧರ ತಂಡಕ್ಕಿದೆ. ಇದೊಂದು ಉದಾಹರಣೆ ಅಷ್ಟೇ, ಪ್ರತಿ ಟೂರ್ನಿಯಲ್ಲಿ ಇಂತಹ ಘಟನೆಗಳಿಗೆ ಬರವಿಲ್ಲ.

ಅಂಧರು ಕ್ರಿಕೆಟ್‌ ಆಡುವುದನ್ನು ನೋಡಿ ವಾಹ್‌! ಅಂದಿದ್ದೇವೆ. ಅವರ ಕ್ಷೇತ್ರ ರಕ್ಷಣೆ, ಬ್ಯಾಟಿಂಗ್‌ ವೈಖರಿ, ಮೈದಾನದಲ್ಲಿ ಅವರು ತೋರುವ ಉತ್ಸಾಹ ನಮ್ಮನ್ನು ಮೂಕವಿಸ್ಮಿತರನ್ನಾಗಿಸಿದೆ. ಕೆಲವೊಮ್ಮೆ ಬ್ಯಾಟ್ಸ್‌ಮನ್‌ ಸ್ಲಿಪ್‌ನತ್ತ ಬಾರಿಸಿರುವ ಚೆಂಡಿಗೆ ಗಲ್ಲಿ ಮತ್ತು ಪಾಯಿಂಟ್‌ನಲ್ಲಿರುವ ಕ್ಷೇತ್ರರಕ್ಷಕ ಕೂಡ ಡೈಹೊಡೆಯುವುದನ್ನು ನೋಡಿ, ಪಾಪ! ಅಂತ ಮೊಮ್ಮಲ ಮರುಗಿದ್ದೇವೆ. ಆದರೆ ಅವರಿಗೆ ಕ್ರಿಕೆಟ್‌ ಅನ್ನುವುದು ಫ್ಯಾಷನ್‌, ಇಲ್ಲಿ ಹಲವು ಬಾರಿ ಬಿದ್ದಿದ್ದಾರೆ, ಎದ್ದಿದ್ದಾರೆ.

ಟೂರ್ನಿಗೂ ಮುನ್ನ 15 ದಿನ ಅಭ್ಯಾಸ
ವೃತ್ತಿಪರ ಆಟಗಾರರಂತೆ ನಿರಂತರ ಅಭ್ಯಾಸ ನಡೆಸುವವರಲ್ಲ. ವಿಶ್ವಕಪ್‌ ಟೂರ್ನಿಗೂ 15 ದಿನ ಮುನ್ನ ಮತ್ತು ದೇಶಿಯ ಟೂರ್ನಿಯಾಗಿದ್ದರೆ ವಾರಕ್ಕೂ ಮುನ್ನ ಅಭ್ಯಾಸ ನಡೆಸುವುದು ಇವರ ವಾಡಿಕೆ. ಉಳಿದ ಸಮಯದಲ್ಲಿ ಅವರಾಯಿತು ಅವರ ಕೆಲಸವಾಯಿತು.  ಇಲ್ಲಿವರೆಗೂ ಕರ್ನಾಟಕದ 15ಕ್ಕೂ ಅಧಿಕ ಆಟಗಾರರು ಭಾರತ ಅಂಧರ ತಂಡದಲ್ಲಿ ಆಡಿದ್ದಾರೆ. ಯಾರಿಗೂ ಸರ್ಕಾರಿ ನೌಕರಿಯಿಲ್ಲ. ಅಲ್ಲಿ ಇಲ್ಲಿ ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವುದು ಗಮನಾರ್ಹ. ಭಾರತದಲ್ಲಿ ಯಾವ ಆಟಗಾರರಿಗೂ ಪಂದ್ಯದ ಸಂಭಾವನೆಯಿಲ್ಲ. ಬಿಸಿಸಿಐ ಮಾನ್ಯತೆಯೂ ಸಿಕ್ಕಿಲ್ಲ. ಟೂರ್ನಿ ಗೆದ್ದಾಗ ಬಹುಮಾನದ ಮೊತ್ತ, ಸರ್ಕಾರ ನೀಡುವ ಪ್ರೋತ್ಸಾಹ ಧನವೇ ಆಧಾರ. ಇವರೆಲ್ಲರಿಗೂ ಆಧಾರವಾಗಿರುವುದು ಸಮರ್ಥನಂ ಅಂಗವಿಕಲ ಸಂಸ್ಥೆ.

ಬಿ1 ಆಟಗಾರರು ಸೂಕ್ಷ್ಮ
ಒಂದು ತಂಡದಲ್ಲಿ ಬಿ1(ಸಂಪೂರ್ಣ ಅಂಧರು), ಬಿ2 (3 ಮೀ. ನೋಡುವವರು), ಬಿ3 (5 ರಿಂದ 6 ಮೀ. ನೋಡುವವರು) ಆಟಗಾರರು ಇರುತ್ತಾರೆ. ತಂಡಕ್ಕೆ ನಾಲ್ವರು ಬಿ1 ಆಟಗಾರರು ಕಡ್ಡಾಯ. ಅದೇ ರೀತಿ ಮೂವರು ಬಿ2 ಆಟಗಾರರು ಮತ್ತು ನಾಲ್ವರು ಬಿ3 ಆಟಗಾರರು ಇರುತ್ತಾರೆ. ಬಿ1 ಆಟಗಾರರಿಗೆ ಸಂಪೂರ್ಣ ಗೈಡ್‌ ಮಾಡುವವನು ವಿಕೆಟ್‌ ಕೀಪರ್‌ ಆಗಿರುತ್ತಾನೆ. ಬಿ1 ಕ್ಷೇತ್ರರಕ್ಷಕನ ಯಾವ ಕಡೆ ಚೆಂಡು ಬರುತ್ತಿದೆ ಅನ್ನುವುದನ್ನು ಕೂಗಿ ಹೇಳುತ್ತಾನೆ. ಹೀಗಾಗಿ ಬಿ1 ಆಟಗಾರರ ಲಕ್ಷ್ಯ ವಿಕೆಟ್‌ ಕೀಪರ್‌ ಕರೆಯ ಮೇಲಿರುತ್ತದೆ. ಬ್ಯಾಟಿಂಗ್‌ನಲ್ಲಿಯೂ ಅಷ್ಟೇ ಬಿ1 ಆಟಗಾರ ಬಾರಿಸಿರುವ
ರನ್‌ಗೆ ಡಬಲ್‌ ರನ್‌ ನೀಡಲಾಗುತ್ತದೆ. ಅಂದರೆ 1 ರನ್‌ ಹೊಡೆದರೆ 2ರನ್‌ ನೀಡಲಾಗುತ್ತದೆ. ಹೊರಗಡೆ ಸುತ್ತಾಡುವಾಗಲೂ ಅಷ್ಟೇ. ಇತರೆ ಆಟಗಾರರು ಬಿ1 ಆಟಗಾರರನ್ನು ಕೈ ಹಿಡಿದು ನಡೆಸುತ್ತಿರುತ್ತಾರೆ. ಹೀಗಾಗಿ ತಂಡದಲ್ಲಿರುವ ಆಟಗಾರರಲ್ಲಿ ಅಣ್ಣ ತಮ್ಮಂದಿರಿಗಿಂತ ಹೆಚ್ಚಿನ ಬಾಂಧವ್ಯ ಇವರಲ್ಲಿದೆ.

Advertisement

ಶ್ರವ್ಯ ಸೂಚನೆಗೆ ಚೆಂಡಿನಲ್ಲಿ ಬೇರಿಂಗ್‌
ಅಂಧರಿಗೆ ಶ್ರವ್ಯ ಸೂಚನೆ ಅತೀ ಮುಖ್ಯ. ಕ್ರಿಕೆಟ್‌ನಲ್ಲಿ ಬಳಸುವ ಚೆಂಡಿನ ಒಳಗಡೆ ಬೇರಿಂಗ್‌ಗಳನ್ನು ಬಳಸಲಾಗುತ್ತದೆ. ಚೆಂಡು ಪುಟಿದಾಗ ಶಬ್ದಬರುತ್ತದೆ. ಈ ಶಬ್ದವನ್ನು ಗ್ರಹಿಸಿ ಆಟಗಾರರು ಬ್ಯಾಟಿಂಗ್‌, ಕ್ಷೇತ್ರರಕ್ಷಣೆ ಮಾಡುತ್ತಾರೆ.

 ಇತ್ತೀಚೆಗೆ “ದಂಗಲ್‌’ ಚಿತ್ರ ವೀಕ್ಷಣೆ
ಅಂಧರು ಚಲನಚಿತ್ರ ನೋಡುತ್ತಾರಾ? ಕ್ರಿಕೆಟ್‌ ಪಂದ್ಯಗಳನ್ನು ವೀಕ್ಷಿಸುತ್ತಾರಾ? ಅನ್ನುವ ಕುತೂಹಲ ನಿಮ್ಮಲ್ಲಿಯೂ ಇದ್ದಿರಬಹುದು. ಕ್ರಿಕೆಟ್‌ ಪಂದ್ಯಗಳನ್ನು ಇವರು ಮಿಸ್‌ ಮಾಡುವುದೇ ಇಲ್ಲ. ಅದರಲ್ಲಿಯೂ ಭಾರತ-ಪಾಕಿಸ್ತಾನ ಪಂದ್ಯವಾದರೆ ಟೀವಿ ಮುಂದೆ ಝಂಡಾ ಹುಡಿ ಬಿಡುತ್ತಾರೆ. ಆದರೆ ಸೌಂಡ್‌ ದೊಡ್ಡದಾಗಿ ಇಟ್ಟುಕೊಳ್ಳುತ್ತಾರೆ. ಇವರಿಗೆ ವೀಕ್ಷಕ ವಿವರಣೆಯೇ ಮುಖ್ಯ. ಬಿ1 ಆಟಗಾರರು ಟೀವಿ ನೋಡುತ್ತಿದ್ದರೂ ಅವರ ಲಕ್ಷ್ಯ ವೀಕ್ಷಕ ವಿವರಣೆ ಮೇಲಿರುತ್ತದೆ. ಇತ್ತೀಚೆಗೆ ಭಾರತ ತಂಡದ ಆಟಗಾರರೆಲ್ಲ ಸೇರಿ ಅಮೀರ್‌ ಖಾನ್‌ ನಟನೆಯ “ದಂಗಲ್‌’ ಚಿತ್ರ ನೋಡಿ ಖುಷಿ ಪಟ್ಟಿದ್ದಾರೆ.

ಹೊರದೇಶದ ಆಟಗಾರರ ಜತೆ ಹರಟೆ ಇಲ್ಲ
ಒಂದು ವಾರ ಇಲ್ಲವೇ ಎರಡು ವಾರಗಳ ಕಾಲ ವಿದೇಶ ಆಟಗಾರರ ಜತೆಗೆ ಇದ್ದರೂ ಪರಸ್ಪರ ಹರಟೆಯಿಲ್ಲ. ಬರೀ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದಕ್ಕೆ ಮಾತ್ರ ಸೀಮಿತ. ಇದಕ್ಕೆಲ್ಲ ಪ್ರಮುಖ ಕಾರಣವಾಗಿರುವು ಭಾಷೆಯ ಸಮಸ್ಯೆ. ಒಬ್ಬ ಆಟಗಾರ ಆಡುವ ಮಾತಿನ ಧ್ವನಿ ಮೇಲೆ ಇಂತಹದ್ದೇ ರಾಷ್ಟ್ರದ ಆಟಗಾರ ಎಂದು ಗುರುತಿಸುವ ಸಾಮರ್ಥ್ಯ, ಸೂಕ್ಷ್ಮತೆ ಬಿ1 ಆಟಗಾರರಲ್ಲಿದೆ.

ಸಚಿನ್‌, ಸೆಹ್ವಾಗ್‌ ಫೇವರಿಟ್‌
ಹೆಚ್ಚಿನ ಅಂಧ ಆಟಗಾರರಿಗೆ ಮಾಜಿ ಕ್ರಿಕೆಟಿಗರಾದ ಸಚಿನ್‌ ತೆಂಡುಲ್ಕರ್‌, ವೀರೇಂದ್ರ ಸೆಹ್ವಾಗ್‌ ಫೇವರಿಟ್‌. ಇವರು ಕ್ರೀಸ್‌ನಲ್ಲಿರುವಾಗ ಯಾರೂ ದೊಡ್ಡದಾಗಿ ಮಾತನಾಡುವ ಹಾಗಿಲ್ಲ. ಒಮ್ಮೆ ಮಾತನಾಡಿದರೆ ತಕ್ಷಣವೇ ಕೋಪ ಮಾಡಿಕೊಳ್ಳುವವರು ಬಿ1 ಆಟಗಾರರು. ಬಿ2, ಬಿ3 ಆಟಗಾರರು ಪಂದ್ಯ ನೋಡುತ್ತಿದ್ದರೆ ಬಿ1 ಆಟಗಾರರು ಸಂಪೂರ್ಣ ವೀಕ್ಷಕ ವಿವರಣೆಯನ್ನೇ ಗಮನಿಸುತ್ತಿರುತ್ತಾರೆ. ಹೀಗಾಗಿ ಅವರಿಗೆ ಕೋಪ ಬಂದೇ ಬಿಡುತ್ತೆ. ಇತ್ತೀಚಿನ ವರ್ಷಗಳಲ್ಲಿ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ಗೆ ಮಾರುಹೋಗಿದ್ದಾರೆ. ವೀರೇಂದ್ರ ಸೆಹ್ವಾಗ್‌, ಗೌತಮ್‌ ಗಂಭೀರ್‌, ವಿರಾಟ್‌ ಕೊಹ್ಲಿ ಸೇರಿದಂತೆ ಹಲವು ಆಟಗಾರರನ್ನು ಭೇಟಿ ಮಾಡಿರುವ ಖುಷಿ ಇವರಲ್ಲಿದೆ. ಅದರೆ ಸಚಿನ್‌ರನ್ನು ಭೇಟಿ ಮಾಡಲು ಆಗಿಲ್ಲ. ಈ ಬಾರಿಯಾದರೂ ಭೇಟಿ ಮಾಡಬೇಕು ಅನ್ನುವ ಆಸಕ್ತಿ ಇವರಲ್ಲಿದೆ.

ಪ್ರಧಾನಿ ಜತೆ 55 ನಿಮಿಷ


2014ರ ಏಕದಿನ ವಿಶ್ವಕಪ್‌ ಗೆದ್ದಾಗ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಅವಕಾಶ ಸಿಕ್ಕಿದ್ದು 3 ನಿಮಿಷ ಮಾತ್ರ. ಆದರೆ ಪ್ರಧಾನಿ ಇವರ ಜತೆ ಕಳೆದಿದ್ದು 55 ನಿಮಿಷ! ಹೌದು, ಒಂದಷ್ಟು ಮಾತು, ಹರಟೆ ಹೊಡೆದ ಮೋದಿ ಪ್ರತಿಯೊಬ್ಬರಿಂದಲೂ ಚೆಂಡಿನ ಮೇಲೆ ಸಹಿ ಹಾಕಿಸಿಕೊಂಡು ಮ್ಯೂಸಿಯಂನಲ್ಲಿಟ್ಟಿದ್ದಾರೆ. ಇದು ಅಂಧ ಆಟಗಾರರಲ್ಲಿ ಪ್ರೇರಣೆ ಖುಷಿ ತಂದಿದೆ.

ಮಂಜು ಮಳಗುಳಿ

Advertisement

Udayavani is now on Telegram. Click here to join our channel and stay updated with the latest news.

Next