Advertisement

ಗುವಾಹಟಿಯಲ್ಲಿ ಸರಣಿ ಗೆಲ್ಲುವ ಗುರಿ

06:20 AM Oct 10, 2017 | |

ಗುವಾಹಟಿ: ರಾಂಚಿಯಲ್ಲಿ ಮಳೆಯ ನಡುವೆಯೂ ರಾರಾಜಿಸಿದ ಟೀಮ್‌ ಇಂಡಿಯಾ ಗುವಾಹಟಿಯಲ್ಲಿ ಮಂಗಳವಾರ ಆಸ್ಟ್ರೇಲಿಯ ವಿರುದ್ಧ 2ನೇ ಟಿ-20 ಪಂದ್ಯವನ್ನು ಆಡಲಿಳಿಯಲಿದೆ. ಇದನ್ನು ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳುವುದು ಕೊಹ್ಲಿ ಪಡೆಯ ಗುರಿ. ಇನ್ನೊಂದೆಡೆ ಆಸೀಸ್‌ಗೆ ಸರಣಿಯನ್ನು ಜೀವಂತವಾಗಿ ಉಳಿಸಿಕೊಳ್ಳಲೇಬೇಕಾದ ಒತ್ತಡ.

Advertisement

ಏಕದಿನದಲ್ಲಿ ಇಂಥದೇ ಒತ್ತಡಕ್ಕೆ ಸಿಲುಕಿದ್ದ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯ ಈ ಪ್ರಯತ್ನದಲ್ಲಿ ಸಫ‌ಲವಾಗಿರಲಿಲ್ಲ. ಸತತ 3 ಪಂದ್ಯವನ್ನು ಕಳೆದುಕೊಂಡು, ಸರಣಿ ಸೋತ ಬಳಿಕ ಬೆಂಗಳೂರಿನಲ್ಲಿ ಗೆಲುವಿನ ಶಾಸ್ತ್ರವೊಂದನ್ನು ಮುಗಿಸಿತ್ತು. ನಾಗ್ಪುರದಲ್ಲಿ ಮತ್ತೆ ಎಡವಿ ತನ್ನ ಸರಣಿ ಸೋಲನ್ನು 1-4ಕ್ಕೆ ಏರಿಸಿಕೊಂಡಿತ್ತು. ಟಿ-ಟ್ವೆಂಟಿಯಲ್ಲಿ ಏಕದಿನಕ್ಕಿಂತಲೂ ಕಳಪೆ ಪ್ರದರ್ಶನ ನೀಡುವ ಕಾಂಗರೂ ಬಳಗ ಬಲಾಬಲದ ಲೆಕ್ಕಾಚಾರದಲ್ಲಿ ಭಾರತಕ್ಕಿಂತ ಬಹಳಷ್ಟು ಹಿಂದಿರುವುದು ರಹಸ್ಯವೇನಲ್ಲ. ಹೀಗಾಗಿ ಗುವಾಹಟಿಯಲ್ಲಿ ಮೇಲುಗೈ ಸಾಧಿಸುವುದು ಪ್ರವಾಸಿಗರಿಗೆ ಅಷ್ಟು ಸುಲಭವಲ್ಲ ಎಂಬುದೊಂದು ಲೆಕ್ಕಾಚಾರ.

ರಾಂಚಿಯಲ್ಲಿ ಆಸ್ಟ್ರೇಲಿಯ ಒಂದು ಹಂತದಲ್ಲಿ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಸ್ಪಿನ್‌ ಆಕ್ರಮಣ ತೀವ್ರಗೊಂಡೊಡನೆ ಕಾಂಗರೂ ನಾಟಕೀಯ ಪತನಕ್ಕೆ ಸಿಲುಕಿತು. ಒಂದಕ್ಕೆ 55ರಲ್ಲಿದ್ದ ವಾರ್ನರ್‌ ಪಡೆ 114ಕ್ಕೆ ತಲಪುವಷ್ಟರಲ್ಲಿ 8 ವಿಕೆಟ್‌ ಉದುರಿಸಿಕೊಂಡಿತು. ಕೊನೆಗೆ ಮಳೆ ಕೂಡ ಆಸ್ಟ್ರೇಲಿಯನ್ನರ ರಕ್ಷಣೆಗೆ ಬರಲಿಲ್ಲ. 6 ಓವರ್‌ಗಳಲ್ಲಿ 48 ರನ್‌ ಗುರಿ ಪಡೆದ ಭಾರತ 5.3 ಓವರ್‌ಗಳಲ್ಲಿ ಒಂದು ವಿಕೆಟಿಗೆ 49 ರನ್‌ ಹೊಡೆದು ವಿಜಯೋತ್ಸವ ಆಚರಿಸಿತ್ತು.

ಇದು ಆಸ್ಟ್ರೇಲಿಯ ವಿರುದ್ಧ ಭಾರತ ಆಚರಿಸಿದ ಸತತ 7ನೇ ಗೆಲುವು. ಇದನ್ನು ಎಂಟಕ್ಕೇರಿಸಿಕೊಂಡು ಸರಣಿ ವಶಪಡಿಸಿಕೊಳ್ಳುವುದು ಟೀಮ್‌ ಇಂಡಿಯಾಕ್ಕೆ ದೊಡ್ಡ ಸವಾಲೇನೂ ಅಲ್ಲ ಎನ್ನಬಹುದು. ಭಾರತ ಕೊನೆಯ ಸಲ ಆಸ್ಟ್ರೇಲಿಯಕ್ಕೆ ಟಿ-ಟ್ವೆಂಟಿಯಲ್ಲಿ ಸೋತದದ್ದು 2012ರ ಸೆ. 28ರಂದು!

ಆಸ್ಟ್ರೇಲಿಯದ ಬಹಳಷ್ಟು ಆಟಗಾರರು ಐಪಿಎಲ್‌ನಲ್ಲಿ ಆಡಿ ಭಾರತದ ವಾತಾವರಣಕ್ಕೆ ಹೊಂದಿಕೊಂಡಿದ್ದಾರೆ. ಭಾರತ ಎನ್ನುವುದು ಇವರಲ್ಲಿ ಅನೇಕರಿಗೆ “ಎರಡನೇ ಮನೆ’ಯೇ ಆಗಿದೆ. ಆದರೆ ಪ್ರವಾಸ ಮುಗಿಯುತ್ತ ಬಂದರೂ ಸಾಧನೆಯಲ್ಲಿ ಮಾತ್ರ ಆಸೀಸ್‌ ಸುಧಾರಿಸಲೇ ಇಲ್ಲ. ಉಸ್ತುವಾರಿ ನಾಯಕ ಡೇವಿಡ್‌ ವಾರ್ನರ್‌ ಆತಿಥೇಯರಿಗೆ ಈವರೆಗೆ “ವಾರ್ನಿಂಗ್‌’ ನೀಡಿಲ್ಲ. ಐಪಿಎಲ್‌ನ ಮತ್ತೂಬ್ಬ ನಾಯಕ ಮ್ಯಾಕ್ಸ್‌ವೆಲ್‌ ಈ ಸರಣಿಯಲ್ಲಿ ಗಳಿಸಿದ್ದು 39, 14, 5 ಹಾಗೂ 17 ರನ್‌ ಮಾತ್ರ. ಆರಂಭಕಾರ ಫಿಂಚ್‌ ಮಾತ್ರ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಉಳಿದವರ ಬಗ್ಗೆ ಹೇಳದಿರುವುದೇ ಲೇಸು. ನಾಯಕ ಸ್ಮಿತ್‌ ಗಾಯಾಳಾಗಿ ಹೊರಬಿದ್ದದ್ದು ಕಾಂಗರೂಗಳಿಗೆ ಗಾಯದ ಮೇಲೆ ಬರೆ ಬಿದ್ದಂತಾಗಿದೆ.

Advertisement

ಸ್ಪಿನ್‌, ಡೆತ್‌ ಬೌಲಿಂಗ್‌ ಯಶಸ್ಸು
ಭಾರತದ ಯಶಸ್ಸು ಸ್ಪಿನ್‌ ಅಸ್ತ್ರ ಹಾಗೂ ಡೆತ್‌ ಬೌಲಿಂಗ್‌ ಆಕ್ರಮಣವನ್ನು ಅವಲಂಬಿಸಿದೆ. ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಮತ್ತು ಲೆಗ್‌ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ಅವರನ್ನು ನಿಭಾಯಿಸುವ ವಿದ್ಯೆ ಇನ್ನೂ ಕಾಂಗರೂಗಳಿಗೆ ಸಿದ್ಧಿಲ್ಲ. 4 ಏಕದಿನ ಹಾಗೂ ಒಂದು ಟಿ-ಟ್ವೆಂಟಿಯಲ್ಲಿ ಇವರಿಬ್ಬರೂ ಒಟ್ಟು 16 ವಿಕೆಟ್‌ ಉರುಳಿಸಿದ್ದಾರೆ. ಜಸ್‌ಪ್ರೀತ್‌ ಬುಮ್ರಾ ಮೊದಲ ಸ್ಪೆಲ್‌ನಲ್ಲಿ ದುಬಾರಿಯಾದರೂ ಡೆತ್‌ ಓವರ್‌ಗಳಲ್ಲಿ ಅಪಾಯಕಾರಿಯಾಗಿ ಎರಗುತ್ತಿದ್ದಾರೆ. ಇದಕ್ಕೆ ರಾಂಚಿ ಪಂದ್ಯ ತಾಜಾ ಉದಾಹರಣೆ. ಭುವನೇಶ್ವರ್‌ ದಾಳಿಯೂ ಹರಿತವಾಗಿಯೇ ಇದೆ. ಇವರೆಲ್ಲರ ಯಶಸ್ಸಿನಿಂದ ರಾಂಚಿಯಲ್ಲಿ ಪಾರ್ಟ್‌ಟೈಮ್‌ ಸ್ಪಿನ್ನರ್‌ ಕೇದಾರ್‌ ಜಾಧವ್‌ಗೆ ಬೌಲಿಂಗ್‌ ನಡೆಸುವ ಅವಕಾಶವೇ ಸಿಕ್ಕಿರಲಿಲ್ಲ. ಹೀಗಾಗಿ ಗುವಾಹಟಿಯಲ್ಲಿ ಆಶಿಷ್‌ ನೆಹ್ರಾ ಸೇರ್ಪಡೆ ಅನುಮಾನ ಎಂದೇ ಭಾವಿಸಬೇಕಾಗುತ್ತದೆ.

ಭಾರತದ ಬ್ಯಾಟಿಂಗ್‌ ಸರದಿ ಕೂಡ ಬಲಿಷ್ಠವಾಗಿಯೇ ಇದೆ. ರೋಹಿತ್‌, ಧವನ್‌, ಕೊಹ್ಲಿ, ಧೋನಿ, ಪಾಂಡ್ಯ, ಪಾಂಡೆ, ಜಾಧವ್‌ ದೊಡ್ಡ ಮೊತ್ತದ ಸವಾಲಿಗೆ ಸಜ್ಜಾಗಿಯೇ ಇದ್ದಾರೆ. ರಾಂಚಿಯಲ್ಲಿ ಕೇವಲ ಮೂವರಿಗಷ್ಟೇ ಕ್ರೀಸ್‌ ಇಳಿಯುವ ಅವಕಾಶ ಲಭಿಸಿತ್ತು. ಆಸ್ಟ್ರೇಲಿಯದ ಬಹುತೇಕ ಬೌಲರ್‌ಗಳಿಗೆ ಲಭಿಸಿದ್ದು ಒಂದೇ ಓವರ್‌ ಅವಕಾಶ. ಅಂದಹಾಗೆ ಗುವಾಹಟಿಯಲ್ಲೂ ಮಳೆಯ ಮುನ್ಸೂಚನೆ ಇದೆ.

“ಬರ್ಸಾಪಾರ ಸ್ಟೇಡಿಯಂ’ನಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯ
ಅಸ್ಸಾಮ್‌ನ ರಾಜಧಾನಿ ಗುವಾಹಟಿ ನೂತನ ಕ್ರಿಕೆಟ್‌ ಸ್ಟೇಡಿಯಂಗೆ ಸಾಕ್ಷಿಯಾಗುತ್ತಿದೆ. ಈವರೆಗೆ ಗುವಾಹಟಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳೆಲ್ಲವೂ “ನೆಹರೂ ಸ್ಟೇಡಿಯಂ’ನಲ್ಲಿ ನಡೆದಿದ್ದವು. ಆದರೆ ಭಾರತ-ಆಸ್ಟ್ರೇಲಿಯ ನಡುವಿನ 2ನೇ ಟಿ-20 ಪಂದ್ಯ ಸಾಗುವುದು ನೂತನ “ಬರ್ಸಾಪಾರ ಸ್ಟೇಡಿಯಂ’ನಲ್ಲಿ. ಇದನ್ನು ಅಸ್ಸಾಮ್‌ ಮುಖ್ಯಮಂತ್ರಿ ಸರ್ಬಾನಂದ ಸೊನೋವಾಲ್‌ ಪಂದ್ಯಕ್ಕೂ ಮುನ್ನ ಉದ್ಘಾಟಿಸಲಿದ್ದಾರೆ.

ಈವರೆಗೆ ಇಲ್ಲಿ ಕೆಲವು ದೇಶಿ ಪಂದ್ಯಗಳನ್ನಾಡಲಾಗಿದೆ. ಕಳೆದ ವರ್ಷ ಹೈದರಾಬಾದ್‌-ಹಿಮಾಚಲ ಪ್ರದೇಶ ನಡುವಿನ ರಣಜಿ ಪಂದ್ಯವೂ ಇದರಲ್ಲೊಂದು. ಇಲ್ಲಿ ಹಿಮಾಚಲ 36 ರನ್ನಿಗೆ ಆಲೌಟ್‌ ಆದಾಗ “ಬರ್ಸಾಪಾರ’ ಪಿಚ್‌ ಬಗ್ಗೆ ಟೀಕೆಗಳು ಕೇಳಿಬಂದಿದ್ದವು. ಈಗ ಹೇಗಿದೆಯೋ ಗೊತ್ತಿಲ್ಲ.ನೆಹರೂ ಸ್ಟೇಡಿಯಂನಲ್ಲಿ ಈವರೆಗೆ ನಡೆದದ್ದು 16 ಏಕದಿನ ಪಂದ್ಯ ಮಾತ್ರ. ಇದರಲ್ಲಿ ಭಾರತ 12ರಲ್ಲಿ ಆಡಿದೆ. ಆರನ್ನು ಗೆದ್ದು, ನಾಲ್ಕರಲ್ಲಿ ಸೋಲನುಭವಿಸಿದೆ. 2 ಪಂದ್ಯ ರದ್ದುಗೊಂಡಿದೆ.

ಸಂಭಾವ್ಯ ತಂಡಗಳು
ಭಾರತ
: ಶಿಖರ್‌ ಧವನ್‌, ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ (ನಾಯಕ), ಮನೀಷ್‌ ಪಾಂಡೆ, ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ಮಹೇಂದ್ರ ಸಿಂಗ್‌ ಧೋನಿ, ಭುವನೇಶ್ವರ್‌ ಕುಮಾರ್‌, ಕುಲದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ಆಶಿಷ್‌ ನೆಹ್ರಾ.

ಆಸ್ಟ್ರೇಲಿಯ: ಡೇವಿಡ್‌ ವಾರ್ನರ್‌ (ನಾಯಕ), ಆರನ್‌ ಫಿಂಚ್‌, ಟ್ರ್ಯಾವಿಸ್‌ ಹೆಡ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮೊಸಸ್‌ ಹೆನ್ರಿಕ್ಸ್‌/ಮಾರ್ಕಸ್‌ ಸ್ಟೋಯಿನಿಸ್‌,  ಡೇನಿಯಲ್‌ ಕ್ರಿಸ್ಟಿಯನ್‌, ಟಿಮ್‌ ಪೇನ್‌, ನಥನ್‌ ಕೋಲ್ಟರ್‌ ನೈಲ್‌, ಆ್ಯಂಡ್ರೂé ಟೈ, ಆ್ಯಡಂ ಝಂಪ, ಜಾಸನ್‌ ಬೆಹೆÅಂಡಾಫ್ì.

ಆರಂಭ: ಸಂಜೆ 7.00
ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next