Advertisement

ಚೆನ್ನೈಯಲ್ಲಿ ಕಾವೇರಿಸಿಕೊಳ್ಳಲಿದೆ ಭಾರತ-ಆಸ್ಟ್ರೇಲಿಯ ಏಕದಿನ ಹೋರಾಟ

06:45 AM Sep 17, 2017 | Team Udayavani |

ಚೆನ್ನೈ: ಶ್ರೀಲಂಕಾಕ್ಕೆ ಅವರದೇ ನೆಲದಲ್ಲಿ 9-0 ವೈಟ್‌ವಾಶ್‌ ಮಾಡಿ ಬಹಳ ಎತ್ತರದಲ್ಲಿ ಹಾರಾಡುತ್ತಿರುವ ಟೀಮ್‌ ಇಂಡಿಯಾ ಮುಂದೀಗ ಹೊಸ ಸವಾಲೊಂದು ತೆರೆದುಕೊಂಡಿದೆ. ರವಿವಾರದಿಂದ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯವನ್ನು ತವರಿನ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಎದುರಿಸಲಿದೆ. 

Advertisement

ಚೆನ್ನೈಯಲ್ಲಿ ಸರಣಿ ಹೋರಾಟ ಕಾವೇರಿಸಿಕೊಳ್ಳಲಿದೆ.ಶ್ರೀಲಂಕಾವನ್ನು ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಮಣ್ಣುಮುಕ್ಕಿಸಿದ ಕೊಹ್ಲಿ ಪಡೆಗೆ ತವರಿನಲ್ಲಿ ಎದುರಾಗುವುದು ವಿಭಿನ್ನ ಹಾಗೂ ತೀವ್ರ ಪೈಪೋಟಿಯ ಸ್ಪರ್ಧೆ. ಅಂಥ ಕ್ಲೀನ್‌ಸ್ವೀಪ್‌ ಮ್ಯಾಜಿಕ್‌ ಅನ್ನು ಇಲ್ಲಿ ನಿರೀಕ್ಷಿಸುವಂತಿಲ್ಲ. ಲಂಕಾವನ್ನು ಸಾಮಾನ್ಯ ಕ್ಲಬ್‌ ತಂಡವೂ ಮಣಿಸಬಹುದೆಂಬುದು ಕ್ರಿಕೆಟಿನ ವಾಸ್ತವವಾಗಿತ್ತು. ಆದ್ದರಿಂದ ಭಾರತದ ಸಾಧನೆಯನ್ನು ವಿಶೇಷ ದೃಷ್ಟಿಯಿಂದ ನೋಡಬೇಕಾದ, ಈ ಸಾಧನೆಯಿಂದ ಬೀಗಬೇಕಾದ ಅಗತ್ಯವಿಲ್ಲ. ಹೀಗಾಗಿ ಆಸ್ಟ್ರೇಲಿಯವನ್ನು ತವರಿನಲ್ಲೇ ಎದುರಿಸುವುದಾದರೂ ಭಾರತದ ಪಾಲಿಗೆ ಇದು ಭಾರೀ ಸವಾಲಿನ ಸರಣಿಯಾಗಲಿದೆ. ಕ್ರಿಕೆಟ್‌ ಭಾಷೆಯಲ್ಲೇ ಹೇಳುವುದಾದರೆ “ಇದೊಂದು ಡಿಫ‌ರೆಂಟ್‌ ಬಾಲ್‌ ಗೇಮ್‌’; ಸಮಬಲದ ಹೋರಾಟ. ಯಾರೇ ಸರಣಿ ಗೆದ್ದರೂ ಅಂತರ 3-2ರ ಆಚೆ ವಿಸ್ತರಿಸದು ಎಂಬುದು ಸದ್ಯದ ಲೆಕ್ಕಾಚಾರ. ಅದೇನೇ ಇದ್ದರೂ ಆರಂಭಿಕ ಪಂದ್ಯದ ಗೆಲುವು ಇತ್ತಂಡಗಳಿಗೂ ಬಹಳ ಮುಖ್ಯ.

ವರ್ಷಾರಂಭದಲ್ಲಿ 4 ಪಂದ್ಯಗಳ ಟೆಸ್ಟ್‌ ಸರಣಿ ಆಡಲು ಬಂದ ಆಸ್ಟ್ರೇಲಿಯದ ವಿರುದ್ಧ ಭಾರತ 4-0 ಕ್ಲೀನ್‌ಸ್ವೀಪ್‌ ಫ‌ಲಿತಾಂಶ ದಾಖಲಿಸಲಿದೆ ಎಂಬ ಲೆಕ್ಕಾಚಾರ ಹೇಗೆ ತಲೆ ಕೆಳಗಾಯಿತು ಎಂಬುದನ್ನು ಮರೆಯುವಂತಿಲ್ಲ. ಭಾರತದ ಸರಣಿ ಗೆಲುವಿನ ಅಂತರ 2-1ಕ್ಕೆ ಇಳಿದಿತ್ತು. ಹೀಗಾಗಿ ಯಾರೂ ಈ ಸಲ “ಕ್ಲೀನ್‌ಸ್ವೀಪ್‌’ ಭವಿಷ್ಯ ನುಡಿದಿಲ್ಲ!
ಆಸ್ಟ್ರೇಲಿಯ ತನ್ನಿಬ್ಬರು ಪ್ರಧಾನ ವೇಗಿಗಳಾದ ಮಿಚೆಕ್‌ ಸ್ಟಾರ್ಕ್‌, ಜೋಶ್‌ ಜ್ಯಾಝಲ್‌ವುಡ್‌ ಸೇವೆಯಿಂದ ವಂಚಿತವಾಗಿದೆ. ಆರಂಭಕಾರ ಆರನ್‌ ಫಿಂಚ್‌ ಗಾಯಾಳಾಗಿದ್ದಾರೆ. ಆದರೂ ಕಾಂಗರೂ ಶಕ್ತಿಗುಂದಿಲ್ಲ. ಏಕದಿನಕ್ಕೆ ಹೇಳಿ ಮಾಡಿಸಿದಂತಿರುವ ಆಟಗಾರರ ಪಡೆಯನ್ನೇ ಅದು ಹೊಂದಿದೆ. ನಾಯಕ ಸ್ಮಿತ್‌, ಪ್ರಚಂಡ ಫಾರ್ಮ್ನಲ್ಲಿರುವ ವಾರ್ನರ್‌, ಹೆಡ್‌, ಮ್ಯಾಕ್ಸ್‌ವೆಲ್‌, ಸ್ಟೊಯಿನಿಸ್‌, ಫಾಕ್ನರ್‌, ಕಮಿನ್ಸ್‌, ಝಂಪ, ಕೋಲ್ಟರ್‌ ನೈಲ್‌ ಅವರೆಲ್ಲ ಹೋರಾಟಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಇವರಲ್ಲಿ ಅನೇಕರಿಗೆ ಐಪಿಎಲ್‌ ಆಡಿದ ಧಾರಾಳ ಅನುಭವ ಇರುವುದೊಂದು ಪ್ಲಸ್‌ ಪಾಯಿಂಟ್‌. ಫಿಂಚ್‌ ಗೈರಿನಿಂದ ವಾರ್ನರ್‌ಗೆ ಸೂಕ್ತ ಜೋಡಿ ಸಿಗಲಿಕ್ಕಿಲ್ಲ ಎಂಬುದೊಂದೇ ಆಸ್ಟ್ರೇಲಿಯದ ಸದ್ಯದ ಚಿಂತೆ.

ಪ್ರಯೋಗಕ್ಕೊಂದು ವೇದಿಕೆ
ಭಾರತಕ್ಕೆ ಎಡಗೈ ಆರಂಭಕಾರ ಶಿಖರ್‌ ಧವನ್‌ ಸೇವೆ ಲಭಿಸುತ್ತಿಲ್ಲ. ಸ್ಪಿನ್ನರ್‌ ಅಕ್ಷರ್‌ ಪಟೇಲ್‌ ಅಭ್ಯಾಸದ ವೇಳೆ ಗಾಯಾಳಾಗಿದ್ದಾರೆ. ಆದರೂ ತಂಡ ಸಾಕಷ್ಟು ಬಲಿಷ್ಠವಾಗಿಯೇ ಇದೆ.

ಆಸ್ಟ್ರೇಲಿಯ ವಿರುದ್ಧ ಸದಾ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುವ ರೋಹಿತ್‌ ಶರ್ಮ ಜತೆ ಆರಂಭಿಕನಾಗಿ ಇಳಿಯುವವರ್ಯಾರು ಎಂಬುದೊಂದು ಕುತೂಹಲ. ಕೊಹ್ಲಿ ನೀಡಿದ ಸೂಚನೆ ಪ್ರಕಾರ ಈ ಅವಕಾಶ ಅಜಿಂಕ್ಯ ರಹಾನೆ ಪಾಲಾಗಬಹುದು. ಆಗ ಕೆ.ಎಲ್‌. ರಾಹುಲ್‌ ಮಿಡ್ಲ್ ಆರ್ಡರ್‌ನಲ್ಲಿ ಆಡಬೇಕಾಗುತ್ತದೆ. ಆದರೆ ಈ ಕ್ರಮಾಂಕಕ್ಕೆ ಅವರಿನ್ನೂ ಒಗ್ಗಿಕೊಂಡಿಲ್ಲ ಎಂಬುದು ಲಂಕಾ ಪ್ರವಾಸದಲ್ಲಿ ಸಾಬೀತಾಗಿದೆ. ಕೊಹ್ಲಿ, ಪಾಂಡೆ, ಜಾಧವ್‌, ಧೋನಿ, ಪಾಂಡ್ಯ ಅವರಿಂದ ಬ್ಯಾಟಿಂಗ್‌ ಸರದಿ ಮುಂದುವರಿಯಲಿದೆ. ಅರ್ಥಾತ್‌, ಭಾರತದ ಬ್ಯಾಟಿಂಗ್‌ ಲೈನ್‌ ಅಪ್‌ ಲಂಕಾ ಪ್ರವಾಸದಲ್ಲಿದ್ದುದಕ್ಕಿಂತ ಭಿನ್ನವೇನಲ್ಲ.

Advertisement

ಟೀಮ್‌ ಇಂಡಿಯಾ ಬೌಲಿಂಗ್‌ ದಾಳಿಯಲ್ಲಿ ಹೆಚ್ಚಿನ ಬದಲಾವಣೆ ಗೋಚರಿಸಿದೆ. ಅನುಭವಿಗಳಾದ ಶಮಿ, ಉಮೇಶ್‌ ಯಾದವ್‌ ಮರಳಿದ್ದಾರೆ. ಜತೆಗೆ ಭುವನೇಶ್ವರ್‌, ಬುಮ್ರಾ ಇದ್ದಾರೆ. ಸ್ಪಿನ್‌ ವಿಭಾಗದಲ್ಲಿ ಕುಲದೀಪ್‌, ಚಾಹಲ್‌, ಪಟೇಲ್‌, ಪಾರ್ಟ್‌ಟೈಮರ್‌ ಜಾಧವ್‌ ಅವರನ್ನು ನೆಚ್ಚಿಕೊಂಡಿದೆ. ಅಶ್ವಿ‌ನ್‌, ಜಡೇಜ ಅನುಪಸ್ಥಿತಿಯನ್ನು ಇವರು ಹೋಗಲಾಡಿಸುವರೇ ಎಂಬುದೊಂದು ಪ್ರಶ್ನೆ. ಅದೇನೇ ಇದ್ದರೂ ಭಾರತದ ಗುರಿ ಮಾತ್ರ ಒಂದೇ, ಅದು 2019ರ ವಿಶ್ವಕಪ್‌. ಹೀಗಾಗಿ ಈ ಸರಣಿಯೂ ಪ್ರಯೋಗಕ್ಕೊಂದು ವೇದಿಕೆ ಆಗಲಿದೆ.

3 ದಶಕಗಳ ಬಳಿಕ ಚೆನ್ನೈ
ಭಾರತ-ಆಸ್ಟ್ರೇಲಿಯ ಸರಿಯಾಗಿ 3 ದಶಕಗಳ ಬಳಿಕ ಚೆನ್ನೈಯಲ್ಲಿ ಏಕದಿನ ಪಂದ್ಯ ಆಡುತ್ತಿರುವುದು ವಿಶೇಷ. 1987ರ ರಿಲಯನ್ಸ್‌ ವಿಶ್ವಕಪ್‌ ಲೀಗ್‌ ಹಂತದಲ್ಲಿ ಇತ್ತಂಡಗಳು ಇಲ್ಲಿ ಎದುರಾಗಿದ್ದವು. ಉಸಿರು ಬಿಗಿ ಹಿಡಿಯುವಂತೆ ಮಾಡಿದ್ದ ಈ ಪಂದ್ಯವನ್ನು ಆಸೀಸ್‌ ಒಂದು ರನ್ನಿನಿಂದ ಗೆದ್ದಿತ್ತು. ಕೊನೆಯ ಸಲ ಭಾರತದಲ್ಲಿ ಇತ್ತಂಡಗಳ ದ್ವಿಪಕ್ಷೀಯ ಸರಣಿ ನಡೆದದ್ದು 2013ರಲ್ಲಿ. 7 ಪಂದ್ಯಗಳ ಈ ಮ್ಯಾರಥಾನ್‌ ಸರಣಿಯನ್ನು ಭಾರತ 3-2ರಿಂದ ಜಯಿಸಿತ್ತು. 2 ಪಂದ್ಯಗಳು ಪ್ರತಿಕೂಲ ಹವಾಮಾನದಿಂದ ರದ್ದಾಗಿದ್ದವು. ಈ ಸಲ ಚೆನ್ನೈನ ಆರಂಭಿಕ ಪಂದ್ಯಕ್ಕೇ ಮಳೆ ಭೀತಿ ಕಾಡತೊಡಗಿದೆ.

ಕೇರಳದ ಚೈನಾಮನ್‌ ಜತೆ
ಆಸೀಸ್‌ ಬ್ಯಾಟಿಂಗ್‌ ಅಭ್ಯಾಸ

ಭಾರತದ ಸರಣಿ ವೇಳೆ ಆಸ್ಟ್ರೇಲಿಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸುವುದೆಂದರೆ ಆತಿಥೇಯರ ಸ್ಪಿನ್‌ ದಾಳಿ. ಈ ಬಾರಿ ಅಶ್ವಿ‌ನ್‌, ಜಡೇಜ ತಂಡದಿಂದ ಹೊರಗುಳಿದರೂ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಬಗ್ಗೆ ಕಾಂಗರೂಗಳಿಗೆ ಹೆದರಿಕೆ ಇದ್ದೇ ಇದೆ. ಕಳೆದ ಪ್ರವಾಸದ ಧರ್ಮಶಾಲಾ ಟೆಸ್ಟ್‌ ಪಂದ್ಯದಲ್ಲಿ ಯಾದವ್‌ ಆಸೀಸ್‌ ಸರದಿಗೆ ಸಾಕಷ್ಟು ಹಾನಿ ಮಾಡಿದ್ದರು.

ಕುಲದೀಪ್‌ ಯಾದವ್‌ ಎಸೆತಗಳಿಗೆ ತಕ್ಕ ಜವಾಬು ನೀಡು ಯೋಜನೆಯಲ್ಲಿರುವ ಆಸ್ಟ್ರೇಲಿಯ, ಇದಕ್ಕಾಗಿ ಕೇರಳದ ಚೈನಾಮನ್‌ ಬೌಲರ್‌ ಕೆ.ಕೆ. ಜಿಯಾಸ್‌ ಅವರನ್ನು ಕರೆಸಿಕೊಂಡು ಬ್ಯಾಟಿಂಗ್‌ ಅಭ್ಯಾಸ ನಡೆಸಿದೆ. ಆಸ್ಟ್ರೇಲಿಯ ತಂಡದ ಸ್ಪಿನ್‌ ಸಲಹೆಗಾರ, ಭಾರತದವರೇ ಆದ ಎಸ್‌. ಶ್ರೀರಾಮ್‌ ಮಾಡಿದ ವ್ಯವಸ್ಥೆ ಇದಾಗಿದೆ.

ಡೆಲ್ಲಿ ಡೇರ್‌ಡೆವಿಲ್ಸ್‌ನ ಮಾಜಿ ಬೌಲರ್‌ ಜಿಯಾಸ್‌, ಗಾಯಾಳು ಆರನ್‌ ಫಿಂಚ್‌ ಹಾಗೂ ಅಪಾಯಕಾರಿ ಆರಂಭಕಾರ ಡೇವಿಡ್‌ ವಾರ್ನರ್‌ ಅವರನ್ನು ಹೊರತುಪಡಿಸಿ ಉಳಿದವರೆಲ್ಲರಿಗೂ ನೆಟ್ಸ್‌ನಲ್ಲಿ ಬೌಲಿಂಗ್‌ ನಡೆಸಿದ್ದಾಗಿ ಹೇಳಿದ್ದಾರೆ.
“ಫಿಂಚ್‌, ವಾರ್ನರ್‌ ಹೊರತುಪಡಿಸಿ ಆಸ್ಟ್ರೇಲಿಯದ ಉಳಿದೆಲ್ಲ ಟಾಪ್‌ ಆರ್ಡರ್‌ ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್‌ ನಡೆಸಿದ್ದೇನೆ. ಕೆಲವರಿಗೆ ಸಮಸ್ಯೆಯಾಗಿದೆ. ಆದರೆ ಫಾಕ್ನರ್‌ ಮತ್ತು ಮ್ಯಾಕ್ಸ್‌ವೆಲ್‌ ಚೆನ್ನಾಗಿ ನಿಭಾಯಿಸಿದರು’ ಎಂಬುದಾಗಿ 22 ಹರೆಯದ ಜಿಯಾಸ್‌ ಹೇಳಿದರು.

ತಂಡಗಳು
ಭಾರತ
: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮ, ಅಜಿಂಕ್ಯ ರಹಾನೆ, ಕೆ.ಎಲ್‌. ರಾಹುಲ್‌, ಮನೀಷ್‌ ಪಾಂಡೆ, ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ಮಹೇಂದ್ರ ಸಿಂಗ್‌ ಧೋನಿ, ಅಕ್ಷರ್‌ ಪಟೇಲ್‌, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬುಮ್ರಾ, ಉಮೇಶ್‌ ಯಾದವ್‌, ಮೊಹಮ್ಮದ್‌ ಶಮಿ, ಯಜುವೇಂದ್ರ ಚಾಹಲ್‌, ಕುಲದೀಪ್‌ ಯಾದವ್‌.

ಆಸ್ಟ್ರೇಲಿಯ: ಸ್ಟೀವ್‌ ಸ್ಮಿತ್‌ (ನಾಯಕ), ಡೇವಿಡ್‌ ವಾರ್ನರ್‌, ಹಿಲ್ಟನ್‌ ಕಾರ್ಟ್‌ರೈಟ್‌, ಟ್ರ್ಯಾವಿಸ್‌ ಹೆಡ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಾರ್ಕಸ್‌ ಸ್ಟೊಯಿನಿಸ್‌, ಮ್ಯಾಥ್ಯೂ ವೇಡ್‌, ಜೇಮ್ಸ್‌ ಫಾಕ್ನರ್‌, ನಥನ್‌ ಕೋಲ್ಟರ್‌ ನೈಲ್‌, ಪ್ಯಾಟ್‌ ಕಮಿನ್ಸ್‌, ಕೇನ್‌ ರಿಚರ್ಡ್‌ಸನ್‌, ಆ್ಯಶrನ್‌ ಅಗರ್‌, ಆ್ಯಡಂ ಝಂಪ, ಪೀಟರ್‌ ಹ್ಯಾಂಡ್ಸ್‌ಕಾಂಬ್‌, ಆರನ್‌ ಫಿಂಚ್‌.

ಆರಂಭ: 1.30
ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್, ಡಿಡಿ

Advertisement

Udayavani is now on Telegram. Click here to join our channel and stay updated with the latest news.

Next