Advertisement

ಇಂದು ಟೀಮ್‌ ಇಂಡಿಯಾ ರಂಗಪ್ರವೇಶ

09:12 AM Jun 06, 2019 | Team Udayavani |

ಸೌತಾಂಪ್ಟನ್‌: ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಸುದೀರ್ಘ‌ ಕಾಯುವಿಕೆ ಕೊನೆಗೊಳ್ಳುವ ಕ್ಷಣ ಸಮೀಪಿಸಿದೆ. ವಿರಾಟ್‌ ಕೊಹ್ಲಿ ಸಾರಥ್ಯದ ಭಾರತ 12ನೇ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಬುಧವಾರ ಸೌತಾಂಪ್ಟನ್‌ ಅಂಗಳದಲ್ಲಿ ರಂಗಪ್ರವೇಶ ಮಾಡಲಿದೆ. ಟೀಮ್‌ ಇಂಡಿಯಾ ಮೇಲೆ ಕೋಟ್ಯಂತರ ಮಂದಿ ಇರಿಸಿದ ನಂಬಿಕೆ, ನಿರೀಕ್ಷೆಗಳೆಲ್ಲ ತಾರಕಕ್ಕೇರುವ ಗಳಿಗೆ ಇದಾಗಿದೆ.

Advertisement

ಮೊದಲೆರಡೂ ಪಂದ್ಯಗಳನ್ನು ಸೋತು ತೀವ್ರ ಒತ್ತಡ ಹಾಗೂ ಸಂಕಟದಲ್ಲಿರುವ ದಕ್ಷಿಣ ಆಫ್ರಿಕಾ ಭಾರತದ ಮೊದಲ ಎದುರಾಳಿ. ಕೊಹ್ಲಿ ಬಳಗ ಹರಿಣಗಳ ಸಂಕಟದ ಲಾಭವನ್ನೆತ್ತಿ ಮೊದಲ ಪಂದ್ಯದಲ್ಲೇ ಗೆಲುವಿನ ಖಾತೆ ತೆರೆದೀತೇ ಅಥವಾ ಅವಳಿ ಸೋಲುಗಳ ಸೇಡನ್ನು ಹರಿಣಗಳ ಪಡೆ ಭಾರತದ ಮೇಲೆ ತೀರಿಸಿಕೊಂಡೀತೇ ಎಂಬುದು ಈ ಪಂದ್ಯದ ಕುತೂಹಲ.

ಭಾರತಕ್ಕೆ ಮೊದಲ, ಆಫ್ರಿಕಾಕ್ಕೆ 3ನೇ ಪಂದ್ಯ!
ಈ ಪಂದ್ಯಾವಳಿಯಲ್ಲಿ ಭಾರತ ಕೊನೆಯ ತಂಡವಾಗಿ ಆಡಲಿಳಿಯಲಿದೆ. ಈಗಾಗಲೇ ವಿಶ್ವಕಪ್‌ ಆರಂಭವಾಗಿ 6 ದಿನಗಳೇ ಮುಗಿದಿವೆ. ಎಲ್ಲ ತಂಡಗಳು ಒಂದು-ಎರಡು ಪಂದ್ಯಗಳನ್ನಾಡಿ ಮುಗಿಸಿರುವ ಹೊತ್ತಿಗೆ ಭಾರತ ತನ್ನ ಮೊದಲ ಪಂದ್ಯ ಆಡುತ್ತಿದೆ. ಇದಕ್ಕಿಂತ ಮಿಗಿಲಾದ ಅಚ್ಚರಿಯೆಂದರೆ, ಎದುರಾಳಿ ದಕ್ಷಿಣ ಆಫ್ರಿಕಾ ಪಾಲಿಗೆ ಇದು 3ನೇ ಪಂದ್ಯ ಎಂಬುದು!

ಮೊದಲ ಸಲ ಕೊಹ್ಲಿ ಸಾರಥ್ಯ
ಭಾರತ ಇದೇ ಮೊದಲ ಸಲ ವಿರಾಟ್‌ ಕೊಹ್ಲಿ ಸಾರಥ್ಯದಲ್ಲಿ ವಿಶ್ವಕಪ್‌ ಆಡಲಿಳಿಯುತ್ತಿದೆ. 2011ರಲ್ಲಿ ತಂಡದ ಸಾಮಾನ್ಯ ಆಟಗಾರನಾಗಿದ್ದ ಕೊಹ್ಲಿ, ಕಳೆದ ಸಲ ಉಪನಾಯಕರಾಗಿದ್ದರು. ಭಾರತಕ್ಕೆ ಕಿರಿಯರ ವಿಶ್ವಕಪ್‌ ತಂದಿತ್ತ ಕಪ್ತಾನನೆಂಬ ಹೆಗ್ಗಳಿಕೆಯುಳ್ಳ ಕೊಹ್ಲಿ ಸೀನಿಯರ್‌ ವಿಶ್ವಕಪ್‌ನಲ್ಲೂ ಇದನ್ನು ಪುನರಾವರ್ತಿಸಬಲ್ಲರೇ ಎಂಬ ಕುತೂಹಲ ಸಹಜ.

ಮಧ್ಯಮ ಕ್ರಮಾಂಕದಲ್ಲಿ ಅಷ್ಟೇನೂ ಬಲಿಷ್ಠವಲ್ಲ ಎಂಬುದನ್ನು ಹೊರತುಪಡಿಸಿದರೆ ಉಳಿದಂತೆ ಭಾರತ ತಂಡ ಸಶಕ್ತವಾಗಿಯೇ ಇದೆ. ಅಗ್ರ ಕ್ರಮಾಂಕದಲ್ಲಿ ರೋಹಿತ್‌, ಧವನ್‌, ಕೊಹ್ಲಿ; ಕೆಳ ಸರದಿಯಲ್ಲಿ ಧೋನಿ, ಪಾಂಡ್ಯ ತಂಡದ ನೆರವಿಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಕೇದಾರ್‌ ಜಾಧವ್‌ ಇನ್ನೂ ಚೇತರಿಸದ ಕಾರಣ ಕೆ.ಎಲ್‌. ರಾಹುಲ್‌ಗೆ ಬಾಗಿಲು ತೆರೆಯುವುದು ಬಹುತೇಕ ಖಚಿತ. ಬಾಂಗ್ಲಾ ಎದುರಿನ ಅಭ್ಯಾಸ ಪಂದ್ಯದಲ್ಲಿ ರಾಹುಲ್‌ ಜತೆಗೆ ಧೋನಿ ಕೂಡ ಶತಕ ಬಾರಿಸಿ ಮೆರೆದಿದ್ದಾರೆ.

Advertisement

ಆಲ್‌ರೌಂಡರ್‌ ವಿಭಾಗದಲ್ಲಿ ಹಾರ್ದಿಕ್‌ ಪಾಂಡ್ಯ ಮೇಲೆ ಭಾರೀ ನಿರೀಕ್ಷೆ ಇಡಲಾಗಿದೆ. ಜತೆಗೆ ರವೀಂದ್ರ ಜಡೇಜ ಕೂಡ ರೇಸ್‌ನಲ್ಲಿದ್ದಾರೆ. ವೇಗದ ಬೌಲಿಂಗ್‌ ವಿಭಾಗ ಬುಮ್ರಾ, ಶಮಿ, ಭುವನೇಶ್ವರ್‌ ಅವರಿಂದ ಹೆಚ್ಚು ವೈವಿಧ್ಯಮಯವಾಗಿದೆ. ಸ್ಪಿನ್‌ ವಿಭಾಗದಲ್ಲಿ ಕುಲದೀಪ್‌, ಚಾಹಲ್‌ ಭಾರತದ ಪ್ರಧಾನ ಅಸ್ತ್ರವಾಗಿದ್ದಾರೆ.

ಸಂಭಾವ್ಯ ತಂಡಗಳು
ದಕ್ಷಿಣ ಆಫ್ರಿಕಾ: ಕ್ವಿಂಟನ್‌ ಡಿ ಕಾಕ್‌, ಐಡನ್‌ ಮಾರ್ಕ್‌ರಮ್‌, ಫಾ ಡು ಪ್ಲೆಸಿಸ್‌, ಡೇವಿಡ್‌ ಮಿಲ್ಲರ್‌, ರಸ್ಸಿ ವಾನ್‌ ಡರ್‌ ಡುಸೆನ್‌, ಜೀನ್‌ಪಾಲ್‌ ಡ್ಯುಮಿನಿ, ಆ್ಯಂಡಿಲ್‌ ಫೆಲುಕ್ವಾಯೊ, ಕ್ರಿಸ್‌ ಮಾರಿಸ್‌/ಹಾಶಿಮ್‌ ಆಮ್ಲ, ಕಾಗಿಸೊ ರಬಾಡ, ಇಮ್ರಾನ್‌ ತಾಹಿರ್‌.

ಭಾರತ: ರೋಹಿತ್‌ ಶರ್ಮ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ (ನಾಯಕ), ಕೆ.ಎಲ್‌. ರಾಹುಲ್‌, ಕೇದಾರ್‌ ಜಾಧವ್‌, ಮಹೇಂದ್ರ ಸಿಂಗ್‌ ಧೋನಿ, ಹಾರ್ದಿಕ್‌ ಪಾಂಡ್ಯ, ಕುಲದೀಪ್‌ ಯಾದವ್‌, ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ, ಯಜುವೇಂದ್ರ ಚಾಹಲ್‌.

ರಬಾಡ ಅಪಾಯ
ದಕ್ಷಿಣ ಆಫ್ರಿಕಾವು ಕಳಪೆ ಫಾರ್ಮ್ ಮತ್ತು ಗಾಯದ ಸಮಸ್ಯೆಯಿಂದ ಬಳಲುತ್ತಿರಬಹುದು. ಆದರೆ ಕಾಗಿಸೊ ರಬಾಡ ಅವರ ಒಂದು ಅಪಾಯಕಾರಿ ದಾಳಿಯಿಂದ ತಂಡ ಮೇಲುಗೈ ಸಾಧಿಸಲೂಬಹುದು. ತನ್ನ ತೀಕ್ಷ್ಣವಾದ ವೇಗ ಮತ್ತು ಸಾಮರ್ಥ್ಯದಿಂದ ರಬಾಡ ಭಾರತಕ್ಕೆ ಕಂಟಕವಾಗುವ ಸಾಧ್ಯತೆಯಿದೆ. ಆರಂಭಿಕರಾದ ರೋಹಿತ್‌, ಧವನ್‌ ಅವರನ್ನು ಬೇಗನೇ ಔಟ್‌ ಮಾಡಿದರೆ ಭಾರತ ಒತ್ತಡಕ್ಕೆ ಬೀಳಬಹುದು. ಲೆಗ್‌ ಸ್ಪಿನ್‌ ದಾಳಿಯನ್ನು ಎದುರಿಸಲು ರೋಹಿತ್‌ ಒದ್ದಾಡುತ್ತಾರೆ. ಹೀಗಾಗಿ ಹೊಸ ಚೆಂಡನ್ನು ತಾಹಿರ್‌ಗೆ ನೀಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next