Advertisement

Independence Day Special; ದೇಶದ ಅಪ್ರತಿಮ ಸಾಧನೆಗಳ ಒಂದು ಸಿಂಹಾವಲೋಕನ

12:53 AM Aug 15, 2023 | Team Udayavani |

ದೇಶವೀಗ 77ನೇ ಸ್ವಾತಂತ್ರ್ಯ ಸಂಭ್ರಮದಲ್ಲಿದೆ. ಸದ್ಯದ ದಿನಮಾನಗಳಲ್ಲಿ ಇರುವವರಿಗೆ ಸ್ವಾತಂತ್ರ್ಯ ಹೇಗೆ ಪ್ರಾಪ್ತಿಯಾಯಿತು ಎಂಬುದರ ಅರಿವು ಇರಲಾರದು. ಈ ಹಿನ್ನೆಲೆಯಲ್ಲಿ ಸಂದು ಹೋದ ದಶಕಗಳಲ್ಲಿ ದೇಶ ಅಂಬೆಗಾಲು ಇಡುತ್ತಾ, ಅಮೃತಕಾಲದ ಸಂಭ್ರಮದಲ್ಲಿರುವ ದೇಶದ ಅಪ್ರತಿಮ ಸಾಧನೆಗಳ ಒಂದು ಸಿಂಹಾವಲೋಕನ ಇಲ್ಲಿದೆ.

Advertisement

1947 ಆ.15- ದೇಶಕ್ಕೆ ಬ್ರಿಟೀಷ್‌ ಆಡಳಿತದಿಂದ ಮುಕ್ತಿ. ಭಾರತ ಮತ್ತು ಪಾಕಿಸ್ತಾನ ಎಂದು 2 ದೇಶಗಳನ್ನಾಗಿ ವಿಭಜನೆ ಸ್ವಾತಂತ್ರ್ಯದ ಬಳಿಕ ದೇಶದ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ನೀಡುವ ವಾಗ್ಧಾನ ಮಾಡಲಾಯಿತು.

1948- ಕಾಶ್ಮೀರ ದೇಶದ ಭಾಗವಾಯಿತು. ಅದೇ ವಿಚಾರಕ್ಕಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ಕಾಶ್ಮೀರದ ಮಹಾರಾಜ ಹರಿ ಸಿಂಗ್‌ ಕಾಶ್ಮೀರವನ್ನು ಭಾರತದ ಜತೆಗೆ ವಿಲೀನ ಮಾಡುವ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಮುಕ್ತಾಯ.

1950– ಸಂವಿಧಾನ ರಚನಾ ಸಭೆ 1949ರ ನ.26ರಂದು ಸಂವಿಧಾನವನ್ನು ಅಂಗೀಕರಿಸಿತು. ಅದು ಈ ದಿನದಿಂದ ಜಾರಿಗೆ ಬಂದಿದ್ದರಿಂದ ಗಣರಾಜ್ಯದಿನ ಎಂದು ಆಚರಣೆ.

1951- ಬ್ರಿಟಿಷ್‌ ಸರ್ಕಾರ ಆರಂಭಿಸಿದ್ದ ರೈಲ್ವೇ ಜಾಲವನ್ನು 1951ರಲ್ಲಿ ಭಾರತ ಸರ್ಕಾರದ ನಿಯಂತ್ರಣಕ್ಕೆ ಪಡೆದುಕೊಳ್ಳಲಾಯಿತು. ಆರಂಭದಲ್ಲಿ ಮೂರು ವಲಯಗಳನ್ನಾಗಿ ವಿಂಗಡಿಸಲಾಯಿತು.ಅದೇ ವರ್ಷ ದೇಶದ ಮೊದಲ ಸಾರ್ವತ್ರಿಕ ಚುನಾವಣೆ ನಡೆಸಲಾಯಿತು. ಕಾಂಗ್ರೆಸ್‌ 489 ಸ್ಥಾನಗಳ ಪೈಕಿ 364ರಲ್ಲಿ ಗೆದ್ದಿತ್ತು. ಜವಾಹರ್‌ಲಾಲ್‌ ನೆಹರೂ ದೇಶದ ಮೊದಲ ಪ್ರಧಾನಿಯಾದರು.ನವದೆಹಲಿಯಲ್ಲಿ ಮೊದಲ ಬಾರಿಗೆ ಏಷ್ಯನ್‌ ಗೇಮ್ಸ್‌ ಆಯೋಜನೆ ಮಾಡಲಾಗಿತ್ತು.

Advertisement

1953- ಟಾಟಾ ಸಂಸ್ಥೆಯಿಂದ ಆರಂಭಗೊಂಡಿದ್ದ ವಿಮಾನಯಾನಾ ಕಂಪನಿ ಏರ್‌ ಇಂಡಿಯಾವನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲಾಯಿತು. ಮುಂದಿನ 40 ವರ್ಷಗಳ ಕಾಲ ದೇಶೀಯ ವಿಮಾನಯಾನದ ಪ್ರಮುಖ ಸಂಸ್ಥೆಯಾಗಿತ್ತು.

1955- ಜು.1ರಂದು ಇಂಪೀರಿಯಲ್‌ ಬ್ಯಾಂಕ್‌ ಆಫ್ ಇಂಡಿಯಾವನ್ನು ಕೇಂದ್ರ ಸರ್ಕಾರ ರಾಷ್ಟ್ರೀಕರಣಗೊಳಿಸಿತು. ಆರ್‌ಬಿಐ ಅದರಲ್ಲಿನ ಶೇ.60ರಷ್ಟು ಪಾಲು ಪಡೆದುಕೊಂಡು ಭಾರತೀಯ ಸ್ಟೇಟ್‌ ಬ್ಯಾಂಕ್‌ ಎಂದು ಮರು ನಾಮಕರಣ ಮಾಡಿತು. ಅದು ಈಗ ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌

1956- ಏಷ್ಯಾದ ಮೊದಲ ಅಣು ಸ್ಥಾವರವನ್ನು ಆ ವರ್ಷದ ಆ.4ರಂದು ಲೋಕಾರ್ಪಣೆಗೊಳಿಸಲಾಗಿತ್ತು. ಅದಕ್ಕೆ ಅಪ್ಸರಾ ಪರಮಾಣು ಸ್ಥಾವರ ಎಂದು ಹೆಸರಿಸಲಾಗಿತ್ತು.

1958- ಆಸ್ಕರ್‌ ಪ್ರಶಸ್ತಿಯ ವಿದೇಶಿ ಸಿನಿಮಾ ವಿಭಾಗದಲ್ಲಿ ಅತ್ಯುತ್ತಮ ವಿದೇಶಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾದ ಮೊದಲ ಸಿನಿಮಾ “ಮದರ್‌ ಇಂಡಿಯಾ’ ಕಿಂಗ್‌ ಆಫ್ ಇಂಡಿಯನ್‌ ರೋಡ್ಸ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಅಂಬಾಸಿಡರ್‌ ಕಾರು ದೇಶದ ರಸ್ತೆಗಳಲ್ಲಿ ಸಂಚಾರ ಶುರು. ಕೋಲ್ಕತಾದ ಉತ್ತರಾಪಾರದಲ್ಲಿ ಹಿಂದುಸ್ತಾನ್‌ ಮೋಟರ್ಸ್‌ನಿಂದ ಉತ್ಪಾದನೆ. ಬ್ರಿಟಿಷ್‌ ಕಾರು ಉತ್ಪಾದಕ ಸಂಸ್ಥೆ ಮೋರಿಸ್‌ ಮೋಟರ್ಸ್‌ನ ಮೋರಿಸ್‌ ಆಕ್ಸ್‌ಫ‌ರ್ಡ್‌ ಸೀರಿಸ್‌3ರಿಂದ ಪ್ರೇರಿತ ಮಾಡೆಲ್‌

1960– ದೇಶದಲ್ಲಿ ಆಹಾರ ಉತ್ಪಾದನೆಗಾಗಿ ಹಸಿರು ಕ್ರಾಂತಿ ಶುರು. ಹೆಚ್ಚಿನ ಪ್ರಮಾಣದಲ್ಲಿ ಗೋಧಿ ಮತ್ತು ಬೇಳೆ ಕಾಳುಗಳ ಉತ್ಪಾದನೆ.

1961– ವರದಕ್ಷಿಣೆ ನಿಷೇಧ ಕಾಯ್ದೆಗೆ ಸಂಸತ್‌ನಲ್ಲಿ ಅಂಗೀಕಾರ. ಬಹಳ ಕಾಲದಿಂದ ಜಾರಿಯಲ್ಲಿದ್ದ ಪದ್ಧತಿ ನಿಷೇಧಿಸುವ ನಿಟ್ಟಿನಲ್ಲಿ ಜು.1ರಂದು ಹೊಸ ಕಾಯ್ದೆಗೆ ಅನುಮೋದನೆ.

1963– ದೇಶದಿಂದ ಮೊದಲ ಬಾರಿಗೆ ರಾಕೆಟ್‌ ಉಡಾವಣೆ. 1963 ನ.21ರಂದು ತಿರುವನಂತಪುರದ ತುಂಬ ಎಂಬಲ್ಲಿಂದ ಅದನ್ನು ಉಡಾಯಿಸಲಾಗಿತ್ತು. ಅದುವೇ ದೇಶದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಶ್ರೀಕಾರ.

1968– ದೇಶಕ್ಕೆ ಮೊದಲ ಗ್ರ್ಯಾಮಿ ಅವಾರ್ಡ್‌ನ ಸಂಭ್ರಮ. ಪಂ.ರವಿಶಂಕರ್‌ ಅವರ “ವೆಸ್ಟ್‌ ಮೀಟ್ಸ್‌ ಈಸ್ಟ್‌’ ಗೆ ಈ ಗೌರವ. ಬೆಸ್ಟ್‌ ಚೇಂಬರ್‌ ಮ್ಯೂಸಿಕ್‌ ಪರ್‌ಫಾರ್ಮೆನ್ಸ್‌’ನಲ್ಲಿ ಈ ಗೌರವ.

1969– ಜು.19ರಂದು ಆ ಸಂದರ್ಭದಲ್ಲಿ ಖಾಸಗಿ ಕ್ಷೇತ್ರದಲ್ಲಿ ಇದ್ದ 14 ಬ್ಯಾಂಕ್‌ಗಳ ರಾಷ್ಟ್ರೀಕರಣ. ಅಲಹಾಬಾದ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌, ಯುನೈಟೆಡ್‌ ಬ್ಯಾಂಕ್‌ ಆಫ್ ಇಂಡಿಯಾ, ಯುಕೋ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌, ಬ್ಯಾಂಕ್‌ ಆಫ್ ಬರೋಡ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಬ್ಯಾಂಕ್‌ ಆಫ್ ಇಂಡಿಯಾ, ಬ್ಯಾಂಕ್‌ ಆಫ್ ಮಹಾರಾಷ್ಟ್ರ, ಸೆಂಟ್ರಲ್‌ ಬ್ಯಾಂಕ್‌ ಆಫ್ ಇಂಡಿಯಾ, ಇಂಡಿಯನ್‌ ಬ್ಯಾಂಕ್‌, ದೇನಾ ಬ್ಯಾಂಕ್‌ ಮತ್ತು ಯೂನಿಯನ್‌ ಬ್ಯಾಂಕ್‌.

ದೇಶದ ಮೊದಲ ವಾಣಿಜ್ಯಿಕ ಪರಮಾಣು ವಿದ್ಯುತ್‌ ಉತ್ಪಾದನಾ ಕೇಂದ್ರ ಶುರು. ಅಮೆರಿಕ, ಅಂತಾರಾಷ್ಟ್ರೀಯ ಅಣು ಶಕ್ತಿ ಆಯೋಗದ ಜತೆಗಿನ ಒಪ್ಪಂದದ ಅನ್ವಯ ತಾರಾಪುರ ಅಣು ವಿದ್ಯುತ್‌ ಕೇಂದ್ರ ಸ್ಥಾಪಿಸಲಾಗಿತ್ತು. ಅ.29ರಂದು ಕೇಂದ್ರದಿಂದ ವಾಣಿಜ್ಯಿಕವಾಗಿ ವಿದ್ಯುತ್‌ ಉತ್ಪಾದನೆ ಮಾಡಿ, ಆರಂಭಿಕವಾಗಿ 210 ಮೆಗಾ ವ್ಯಾಟ್‌ ವಿದ್ಯುತ್‌ಶಕ್ತಿಯನ್ನು ಉತ್ಪಾದಿಸಲಾಯಿತು.

1970– ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಮಾಣದಲ್ಲಿ ಹಾಲು ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಆಪರೇಷನ್‌ ಫ್ಲಡ್‌ ಎಂಬ ಧ್ಯೇಯ ವಾಕ್ಯದೊಂದಿಗೆ ಅದನ್ನು ಆರಂಭಿಸಲಾಗಿತ್ತು. ದಿ. ವರ್ಗೀಸ್‌ ಕುರಿಯನ್‌ ಅದಕ್ಕೆ ಕಾರಣಕರ್ತರು. ಅದರಿಂದಾಗಿ ಹಾಲಿನ ಕೊರತೆ ಎದುರಿಸುತ್ತಿದ್ದ ನಮ್ಮ ದೇಶದಲ್ಲಿ ಜಗತ್ತಿನ ಪ್ರಮುಖ ಹಾಲು ಉತ್ಪಾದನೆ ಮಾಡುವ ರಾಷ್ಟ್ರಗಳ ಸಾಲಿಗೆ ಬರುವಂತಾಯಿತು.

1974
ಪೋಖ್ರಾನ್‌ 1:
“ಸ್ಮೈಲಿಂಗ್ ಬುದ್ಧ’ ಎಂಬ ಕೋಡ್‌ನೇಮ್‌ನೊಂದಿಗೆ 1974ರಲ್ಲಿ ಭಾರತವು ಮೊದಲ ಪರಮಾಣು ಬಾಂಬ್‌ಗಳ ಪರೀಕ್ಷೆ ನಡೆಸಿದ ವರ್ಷವಿದು. ಈ ಪರೀಕ್ಷೆಯ ಮೂಲಕ ಭಾರತವು 5 ಅಣ್ವಸ್ತ್ರಸಜ್ಜಿತ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಗೊಂಡು ಇತಿಹಾಸ ನಿರ್ಮಿಸಿತು.

1974
ಸಾಗರ್‌ ಸಾಮ್ರಾಟ್‌
ಭಾರತದ ಮೊತ್ತಮೊದಲ ಕರಾವಳಿಯಾಚೆಗಿನ ತೈಲ ಬಾವಿ ಕೊರೆಯುವ ಸಾಗರ್‌ ಸಾಮ್ರಾಟ್‌ ಎಂಬ ಡ್ರಿಲ್ಲಿಂಗ್‌ ರಿಗ್‌ 1974ರಲ್ಲಿ ಮೊದಲ ತೈಲ ಬಾವಿಯನ್ನು ಕೊರೆಯಿತು. ಇದು ಮುಂಬೈ ಕರಾವಳಿಯಿಂದ ಸುಮಾರು 176 ಕಿ.ಮೀ. ದೂರದಲ್ಲಿದ್ದು, ತೈಲ ಮತ್ತು ನೈಸರ್ಗಿಕ ಅನಿಲ ನಿಗಮ(ಒಎನ್‌ಜಿಸಿ)ವು ಇದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದೆ.

1975

ಆರ್ಯಭಟ ಉಡಾವಣೆ
ಭಾರತದ ಮೊತ್ತಮೊದಲ ಸ್ವದೇಶಿ ನಿರ್ಮಿತ ಉಪಗ್ರಹ “ಆರ್ಯಭಟ’ ಅನಾವರಣಗೊಂಡ ವರ್ಷವಿದು. ಈ ಉಪಗ್ರಹವನ್ನು ಸಂಪೂರ್ಣವಾಗಿ ಭಾರತದಲ್ಲೇ ವಿನ್ಯಾಸಗೊಳಿಸಲಾಗಿತ್ತು. ಸೋವಿಯತ್‌ನ ಕಾಸ್ಮೋಸ್‌-3ಎಂ ರಾಕೆಟ್‌ 1975ರ ಏ.19ರಂದು ಆರ್ಯಭಟ ಉಪಗ್ರಹವನ್ನು ಹೊತ್ತುಕೊಂಡು ನಭಕ್ಕೆ ಚಿಮ್ಮಿತು. ಎಕ್ಸ್‌ರೇ ಖಗೋಳಶಾಸ್ತ್ರ, ವೈಮಾನಿಕಶಾಸ್ತ್ರ ಮತ್ತು ಸೌರ ಭೌತಶಾಸ್ತ್ರದ ಅಧ್ಯಯನಕ್ಕಾಗಿ ಇದನ್ನು ವಿನ್ಯಾಸಗೊಳಿಸಲಾಗಿತ್ತು.

1978
ಕಂಪ್ಯೂಟರ್‌ ಮಾರಾಟ:
ಭಾರತದ ಮೊದಲ ಪರ್ಸನಲ್‌ ಕಂಪ್ಯೂಟರ್‌ ಎಚ್‌ಸಿಎಲ್‌ 8ಸಿ ಮಾರಾಟವಾಗಿದ್ದು ಇದೇ ವರ್ಷ

1979
ಮಂಡಲ್‌ ಆಯೋಗ ರಚನೆ
ಭಾರತದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಸಮುದಾಯಗಳನ್ನು ಗುರುತಿಸುವ ಉದ್ದೇಶದಿಂದ 1979ರಲ್ಲಿ ಬಿ.ಪಿ.ಮಂಡಲ್‌ ನೇತೃತ್ವದಲ್ಲಿ ಮಂಡಲ್‌ ಆಯೋಗವನ್ನು ರಚಿಸಲಾಯಿತು.

1981
ಮುಂಬೈನಲ್ಲಿ ಇನ್ಫೋಸಿಸ್‌ ಸಂಸ್ಥೆ ನೋಂದಣಿಯಾಗಿದ್ದು 1981ರ ಜುಲೈ 2ರಂದು. ನಂತರದಲ್ಲಿ ಈ ಸಂಸ್ಥೆಯು ಭಾರತದಲ್ಲಿ ಐಟಿ ಮತ್ತು ಬಿಪಿಒ ಸೇವೆಗಳಲ್ಲಿ ಕ್ರಾಂತಿ ಸೃಷ್ಟಿಗೆ ಕಾರಣವಾಯಿತು.

1983
ಮೊದಲ ವಿಶ್ವಕಪ್‌ ಕಿರೀಟ
1983ರಲ್ಲಿ ಕಪಿಲ್‌ ದೇವ್‌ ನೇತೃತ್ವದ ಭಾರತ ಕ್ರಿಕೆಟ್‌ ತಂಡ ವೆಸ್ಟ್‌ ಇಂಡೀಸ್‌ ಅನ್ನು 43 ರನ್‌ಗಳಿಂದ ಸೋಲಿಸಿ, ಮೊದಲು ವಿಶ್ವಕಪ್‌ ಕಿರೀಟವನ್ನು ಮುಡಿಗೇರಿಸಿಕೊಂಡಿತು.

1983
ಮೊದಲ ಆಸ್ಕರ್‌
ಆಸ್ಕರ್‌ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬ ಖ್ಯಾತಿಗೆ ಭಾನು ಅಥೈಯಾ ಅವರು ಪಾತ್ರರಾಗಿದ್ದು ಇದೇ ವರ್ಷ. ರಿಚರ್ಡ್‌ ಅಟೆನ್‌ಬೊರೋ ಅವರ ಸಿನಿಮಾ “ಗಾಂಧಿ’ಯಲ್ಲಿ ಅತ್ಯುತ್ತಮ ವಸ್ತ್ರ ವಿನ್ಯಾಸಕರಾಗಿ ಹೊರಹೊಮ್ಮಿದ ಭಾನು ಅವರು 1983ರಲ್ಲಿ ಅಕಾಡೆಮಿ ಪ್ರಶಸ್ತಿಗೆ ಭಾಜನರಾದರು.

1984
ಬಾಹ್ಯಾಕಾಶ ಸಾಧನೆ
ಭಾರತವು ತನ್ನ ಮೊದಲ ಗಗನಯಾತ್ರಿ ರಾಕೇಶ್‌ ಶರ್ಮಾ ಅವರನ್ನು 1984ರಲ್ಲಿ ಬಾಹ್ಯಾಕಾಶಕ್ಕೆ ಕಳುಹಿಸಿತು. ಸೋವಿಯತ್‌ ಒಕ್ಕೂಟದೊಂದಿಗಿನ ಜಂಟಿ ಯೋಜನೆ ಇದಾಗಿತ್ತು.

1984
ಭಾರತಕ್ಕೆ ಮೊದಲ ಮೆಟ್ರೋ ಪರಿಚಯವಾಗಿದ್ದು ಅಕ್ಟೋಬರ್‌ 24, 1984ರಲ್ಲಿ. ಕೋಲ್ಕತ್ತಾದಲ್ಲಿ 3.4 ಕಿ.ಮೀ. ದೂರವನ್ನು ಈ ಮೆಟ್ರೋ ಸಂಚರಿಸಿತ್ತು.

1986
ಅಂತರ್ಜಾಲ ಸೇವೆ ಶುರು
1986ರಲ್ಲಿ ಭಾರತದಲ್ಲಿ ಅಂತರ್ಜಾಲ ಸೇವೆ ಆರಂಭವಾಯಿತು. ಆದರೆ, ಆರಂಭದಲ್ಲಿ ಕೇವಲ ಶೈಕ್ಷಣಿಕ ಮತ್ತು ಸಂಶೋಧನಾ ಸಮುದಾಯಕ್ಕೆ ಮಾತ್ರ ಈ ಸೇವೆ ಲಭ್ಯವಾಗಿತ್ತು.

1987
ವಿಶ್ವಕಪ್‌ ಆತಿಥ್ಯ
ಭಾರತವು ಮೊದಲ ಬಾರಿಗೆ ವಿಶ್ವಕಪ್‌ ಆತಿಥ್ಯ ವಹಿಸಿದ ವರ್ಷವಿದು. 1987ರ ಕ್ರಿಕೆಟ್‌ ವರ್ಲ್x ಕಪ್‌ ಭಾರತ ಮತ್ತು ಪಾಕಿಸ್ತಾನದಲ್ಲಿ ನಡೆಯಿತು. ಇಂಗ್ಲೆಂಡ್‌ನ‌ ಹೊರಗೆ ವಿಶ್ವಕಪ್‌ ಪಂದ್ಯ ಆಯೋಜನೆಯಾಗಿದ್ದು ಇದೇ ಮೊದಲಾಗಿತ್ತು. ಈ ಕೂಟದಲ್ಲಿ ಆಸ್ಟ್ರೇಲಿಯಾ ತನ್ನ ಮೊಟ್ಟಮೊದಲ ಟ್ರೋಫಿಯನ್ನು ಗೆದ್ದಿತು.

1990
ಏರ್‌ಲಿಫ್ಟ್
ಯುದ್ಧಪೀಡಿತ ಕುವೈಟ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ಸುರಕ್ಷಿತವಾಗಿ ಏರ್‌ಲಿಫ್ಟ್ ಮಾಡುವ ಕಾರ್ಯಾಚರಣೆ 1990ರ ಆಗಸ್ಟ್‌ 13ರಂದು ಆರಂಭವಾಗಿ 1990ರ ಅಕ್ಟೋಬರ್‌ 20ರವರೆಗೂ ನಡೆಯಿತು. ಸುಮಾರು 1.75 ಲಕ್ಷ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವಲ್ಲಿ ಏರ್‌ಇಂಡಿಯಾ ಪ್ರಮುಖ ಪಾತ್ರ ವಹಿಸಿತು.

1991
ಜಾಗತೀಕರಣ
ಭಾರತದ ಆರ್ಥಿಕತೆಯು ಜಾಗತೀಕರಣಕ್ಕೆ ಮುಕ್ತವಾದ ವರ್ಷವಿದು. ವಿದೇಶಿ ಹೂಡಿಕೆದಾರರಿಗೆ ಭಾರತದಲ್ಲಿ ಮುಕ್ತ ವ್ಯಾಪಾರದ ಬಾಗಿಲು ತೆರೆದು, ವ್ಯಾಪಾರಕ್ಕೆ ಅನುವು ಮಾಡಿಕೊಡಲಾಯಿತು.

1993
ಮೊದಲ ಪಿಎಸ್‌ಎಲ್‌ವಿ ಉಡಾವಣೆ
ಆಂಧ್ರದ ಶ್ರೀಹರಿಕೋಟದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ 1993ರ ಸೆಪ್ಟೆಂಬರ್‌ 20ರಂದು ಪಿಎಸ್‌ಎಲ್‌ವಿ-ಡಿ1 ಬಾಹ್ಯಾಕಾಶ ನೌಕೆಯು ಉಡಾವಣೆಗೊಂಡಿತು. ಇದು ಪಿಎಸ್‌ಎಲ್‌ವಿಯ ಮೊದಲ ಉಡಾವಣೆಯಾಗಿತ್ತು. ಆದರೆ, ನೌಕೆಯು ಹೊತ್ತೂಯ್ದ ಐಆರ್‌ಎಸ್‌-1ಇ ಉಪಗ್ರಹವು ಕಕ್ಷೆ ಸೇರುವಲ್ಲಿ ವಿಫ‌ಲವಾಯಿತು.

1994
ಭುವನ ಸುಂದರಿ ಕಿರೀಟ
1994ರಲ್ಲಿ ಮೊದಲ ಬಾರಿಗೆ ಭಾರತಕ್ಕೆ ಭುವನ ಸುಂದರಿ ಕಿರೀಟ ಲಭಿಸಿತು. ಸುಷ್ಮಿತಾ ಸೇನ್‌ ಅವರು ಭುವನ ಸುಂದರಿ ಎಂಬ ಖ್ಯಾತಿಗೆ ಪಾತ್ರರಾದ ಭಾರತದ ಮೊದಲ ಚೆಲುವೆ ಎನಿಸಿಕೊಂಡರು.

1994
ದೇಶೀಯವಾಗಿ ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂ.ಗಳನ್ನು ಬಾಚಿಕೊಂಡ ಮೊದಲ ಸಿನಿಮಾ ಎಂಬ ಖ್ಯಾತಿಗೆ ಸಲ್ಮಾನ್‌ ಖಾನ್‌-ಮಾಧುರಿ ದೀಕ್ಷಿತ್‌ ನಟನೆಯ “ಹಮ್‌ ಆಪೆRà ಹೇ ಕೌನ್‌’ ಪಾತ್ರವಾಯಿತು. ವಿಶ್ವಾದ್ಯಂತ 200 ಕೋಟಿ ರೂ. ಗಳಿಸಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಯೂ ಇದೇ ಸಿನಿಮಾಗೆ ಲಭಿಸಿದೆ.

1995
ಭಾರತವು ಮೊದಲ ಬಾರಿಗೆ ಮೊಬೈಲ್‌ ಕರೆಯನ್ನು ಮಾಡಿದ್ದು ಮತ್ತು ಸ್ವೀಕರಿಸಿದ್ದು ಜುಲೈ 31, 1995ರಂದು. ಅಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಜ್ಯೋತಿ ಬಸು ಅವರು ಕೇಂದ್ರ ಸಂವಹನ ಸಚಿವ ಸುಖ್‌ ರಾಮ್‌ ಅವರಿಗೆ ನೋಕಿಯಾ ಹ್ಯಾಂಡ್‌ಸೆಟ್‌ ಬಳಸಿಕೊಂಡು ಮೊದಲ ಮೊಬೈಲ್‌ ಕರೆ ಮಾಡಿದ್ದರು.

1995
ಸಾರ್ವಜನಿಕರಿಗೂ ಅಂತರ್ಜಾಲ
ದೇಶದಲ್ಲಿ ಇಂಟರ್ನೆಟ್‌ ಸೇವೆಯು ಸಾರ್ವಜನಿಕರಿಗೂ ಲಭ್ಯವಾಗಿದ್ದು 1995ರ ಆಗಸ್ಟ್‌ 15ರಂದು. ವಿದೇಶ ಸಂಚಾರ್‌ ನಿಗಮ ಲಿಮಿಟೆಡ್‌(ವಿಎಸ್‌ಎನ್‌ಎಲ್‌) ಸಂಸ್ಥೆಯು ಭಾರತದಲ್ಲಿ ಅಂತರ್ಜಾಲ ಸೇವೆಯನ್ನು ನಾಗರಿಕರಿಗೆ ಒದಗಿಸಿತು.

1996
ಇವಿ ಶಕೆ ಆರಂಭ
ಭಾರತವು ಮೊದಲ ವಿದ್ಯುತ್‌ಚಾಲಿತ ವಾಹನವನ್ನು ಕಂಡಿದ್ದು 1996ರಲ್ಲಿ. ಸ್ಕೂಟರ್ಸ್‌ ಇಂಡಿಯಾ ಪ್ರೈ.ಲಿ. ಸಂಸ್ಥೆಯು ಮೂರು ಚಕ್ರಗಳ ವಿದ್ಯುತ್‌ಚಾಲಿತ ವಾಹನವನ್ನು ತಯಾರಿಸಿತ್ತು. ಅದಕ್ಕೆ “ವಿಕ್ರಮ್‌ ಸಫಾ’ ಎಂದು ನಾಮಕರಣ ಮಾಡಲಾಗಿತ್ತು. ಇಂತಹ ಸುಮಾರು 400 ವಾಹನಗಳನ್ನು ತಯಾರಿಸಿ, ಮಾರಾಟ ಮಾಡಲಾಗಿತ್ತು.

1998
ಪೋಖ್ರಾನ್‌-2:
ಆಪರೇಷನ್‌ ಶಕ್ತಿ ಅನ್ವಯ 1998ರ ಮೇನಲ್ಲಿ ರಾಜಸ್ಥಾನದ ಪೋಖ್ರಾನ್‌ ನಲ್ಲಿ 5 ಸರಣಿ ಪರಮಾಣು ಬಾಂಬ್‌ಗಳ ಪರೀಕ್ಷೆ ನಡೆಸಲಾಯಿತು. ಈ ಮೂಲಕ ಭಾರತ ಪೂರ್ಣಪ್ರಮಾಣದ ಅಣ್ವಸ್ತ್ರ ಸಜ್ಜಿತ ರಾಷ್ಟ್ರವೆಂಬ ಖ್ಯಾತಿಗೆ ಪಾತ್ರವಾಗಿದೆ.

ದೇಶದ ಮೊದಲ ಸುದ್ದಿವಾಹಿನಿ ಆರಂಭ :
ಸ್ಟಾರ್‌ ನೆಟ್ ವರ್ಕ್ ಸಂಸ್ಥೆಯು ದೇಶದ ಮೊದಲ 24 ಗಂಟೆಯೂ ಪ್ರಸಾರವಾಗುವ ಸುದ್ದಿ ಮಧ್ಯಮ ಸ್ಟಾರ್‌ ನ್ಯೂಸ್‌ ಚಾನೆಲ್‌ ಅನ್ನು ಸ್ಥಾಪಿಸಿತು.

1999
ದೆಹಲಿ-ಲಾಹೋರ್‌ ಬಸ್‌ ಸೇವೆ :
ಫೆಬ್ರವರಿ 19ರಂದು ದೆಹಲಿ-ಲಾಹೋರ್‌ ಬಸ್‌ ಸೇವೆ ಆರಂಭವಾಯಿತು. ಅಲ್ಲದೇ, ಅಂದಿನ ಪ್ರಧಾನಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ ಅವರು ಅದೇ ಬಸ್‌ನಲ್ಲಿ ಲಾಹೋರ್‌ ಸಮ್ಮೇಳನಕ್ಕೆ ತೆರಳಿದ್ದರು.
ಕಾರ್ಗಿಲ್‌ ವಿಜಯ :
ಪಾಕಿಸ್ತಾನ ಪಡೆಗಳು ಎಲ್‌ಒಸಿ ಪ್ರವೇಶಿಸಿ ಆಕ್ರಮಿಸಿಕೊಂಡಿದ್ದ ಟೈಗರ್‌ ಹಿಲ್‌ ಪ್ರದೇಶವನ್ನು ಆಪರೇಷನ್‌ ವಿಜಯ್‌ ಮೂಲಕ ಭಾರತೀಯ ಸೇನಾಪಡೆ ಮರುವಶಪಡಿಸಿಕೊಳ್ಳುವ ಮೂಲಕ ಕಾರ್ಗಿಲ್‌ ಕದನದಲ್ಲಿ ಗೆಲುವು ಸಾಧಿಸಿತು.

2000
3 ರಾಜ್ಯಸ್ಥಾಪನೆ :
ನವೆಂಬರ್‌1, 09 ಹಾಗೂ 15ನೇ ತಾರೀಖಿನಂದು ಛತ್ತೀಸ್‌ಗಢ, ಉತ್ತರಾಖಂಡ ಹಾಗೂ ಜಾರ್ಖಂಡ್‌ ರಾಜ್ಯಗಳನ್ನು ಸ್ಥಾಪಿಸಲಾಯಿತು.ಈ ಮೂಲಕ ಭಾರತದ ರಾಜ್ಯಗಳ ಸಂಖ್ಯೆ 25ರಿಂದ 28ಕ್ಕೆ ಏರಿಕೆಯಾಯಿತು.

2001
ದೇಶದ ಅತಿದೊಡ್ಡ ಹೆದ್ದಾರಿ ಯೋಜನೆ :
ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸರ್ಕಾರವು ದೇಶದ ಮೊದಲ ಅತಿದೊಡ್ಡ ಹೆದ್ದಾರಿ ಯೋಜನೆಯಾದ ಸುವರ್ಣ ಚತುಭುìಜ ಹೆದ್ದಾರಿಯನ್ನು ಲೋಕಾರ್ಪಣೆಗೊಳಿಸಿತು. ದಹಲಿ-ಮುಂಬೈ-ಚೆನ್ನೈ -ಕೋಲ್ಕತ್ತಾ ರಾಜ್ಯಗಳನ್ನು ಈ ರಸ್ತೆ ಸಂಪರ್ಕಿಸಿತು.
ಜಿಎಸ್‌ಎಲ್‌ವಿ ಉಡಾವಣೆ:
ಪ್ರಯೋಗಾರ್ಥ ಸಂಪರ್ಕ ಉಪಗ್ರಹ ಜಿಸ್ಯಾಟ್‌-1 ಅನ್ನು ಹೊತ್ತು ದೇಶದ ಮೊಟ್ಟ ಮೊದಲ ಜಿಎಸ್‌ಎಲ್‌ವಿ ರಾಕೆಟ್‌ ನಭಕ್ಕೆ ಚಿಮ್ಮಿತು.

2005
ಆರ್‌ಟಿಐ ಕಾಯ್ದೆ ಪಾಸ್‌ :
ಸರ್ಕಾರಿ ಸಾರ್ವಜನಿಕ ಇಲಾಖೆಗಳ ಕುರಿತು ದೇಶದ ಯಾವುದೇ ಪ್ರಜೆಯು ತನಗೆ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳಲು ಅವಕಾಶ ನೀಡುವ ಆರ್‌ಟಿಐ ಮಸೂದೆಗೆ ಲೋಕಸಭೆ 2005ರಲ್ಲಿ ಅನುಮೋದನೆ ನೀಡುವ ಮೂಲಕ ಕಾಯ್ದೆ ಜಾರಿಗೊಂಡಿತು.
ನರೇಗಾ ಜಾರಿ :
ವಿಶ್ವದ ಅತಿದೊಡ್ಡ ಉದ್ಯೋಗ ಖಾತರಿ ಯೋಜನೆಯಾಗಿರುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಕಾಯ್ದೆ ಜಾರಿಗೊಂಡಿತು. ಈ ಮೂಲಕ ಮೊದಲ ಹಂತದಲ್ಲಿ ಗ್ರಾಮೀಣ ಭಾಗದ ಜನರಿಗೆ ವರ್ಷದಲ್ಲಿ 100 ದಿನಗಳ ಉದ್ಯೋಗ ಖಾತರಿಯನ್ನು ನೀಡಲಾಯಿತು. ಇದೇ ಸಮಯದಲ್ಲೇ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯಕ್ಕೆ ತಡೆ ನೀಡುವ ಕೌಟುಂಬಿಕ ದೌರ್ಜನ್ಯ (ತಡೆ) ಕಾಯ್ದೆ ಜಾರಿಯಾಯಿತು.

2006
ನಾಥುಲಾ ಪಾಸ್‌ ಮತ್ತೆ ಸಂಚಾರಕ್ಕೆ ಮುಕ್ತ :
ಭಾರತ ಚೀನಾ ನಡುವಿನ ಮೂರು ಮುಕ್ತ ವ್ಯಾಪಾರ ಗಡಿಗಳಲ್ಲಿ ಒಂದಾಗಿರುವ, ಸಿಕ್ಕಿಂ ಮತ್ತು ಟಿಬೆಟ್‌ಗೆ ಸಂಪರ್ಕ ಕಲ್ಪಿಸುವ ಹಿಮಾಲಯದ ತಪ್ಪಲಿನ ನಾಥುಲಾ ಪಾಸ್‌ ಅನ್ನು ಮತ್ತೆ ತೆರಯಲಾಯಿತು. ಈ ಮಾರ್ಗವನ್ನು 1962ರಲ್ಲಿ ಸಿನೋ-ಇಂಡಿಯಾ ಯುದ್ಧ ಸಂದರ್ಭದಲ್ಲಿ ಭಾರತ ಮುಚ್ಚಿತ್ತು.

2007
ಟಿ-20 ವಿಶ್ವಕಪ್‌ ಗೆಲುವು :
ಮಹೇಂದ್ರ ಸಿಂಗ್‌ ಧೋನಿ ನೇತೃತ್ವದ ಭಾರತದ ಕ್ರಿಕೆಟ್‌ ತಂಡವು ಪಾಕಿಸ್ತಾನವನ್ನು ಮಣಿಸಿ, ದಕ್ಷಿಣ ಆಫ್ರಿಕಾದಲ್ಲಿ ಆರಂಭಗೊಂಡ ವಿಶ್ವಕಪ್‌ 20-20 ಸರಣಿಯ ಮೊದಲ ಗೆಲುವನ್ನೇ ಭಾರತದ ಮುಡಿಗೇರಿಸಿತು.

2008
ಇಸ್ರೋ ಚಂದ್ರಯಾನ :
ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ (ಇಸ್ರೋ)ದ ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ ಉಡಾವಣೆಗೊಂಡು, ಚಂದ್ರನಲ್ಲಿ ನೀರಿನ ಅಣುಗಳನ್ನು ಪತ್ತೆಹಚ್ಚಲಾಗಿತ್ತು.
ಒಲಿಂಪಿಕ್‌ ಮೊದಲ ಚಿನ್ನ:
ದೇಶ ಸ್ವಾತಂತ್ರ್ಯಗೊಂಡ ಬಳಿಕ ಮೊಟ್ಟ ಮೊದಲ ಬಾರಿಗೆ ಒಲಿಂಪಿಕ್‌ ಗೇಮ್‌ ಏರ್‌ ರೈಫ‌ಲ್‌ನಲ್ಲಿ ಭಾರತದ ಅಭಿನವ್‌ ಬಿಂದ್ರಾ ಗೆಲುವು ಸಾಧಿಸಿ, ಚಿನ್ನದ ಪದಕ ಗೆದ್ದುಕೊಂಡಿದ್ದರು.

2009
ಶಿಕ್ಷಣ ಹಕ್ಕು ಕಾಯ್ದೆ ಜಾರಿ :
ಸಮಾಜದ ವರ್ಗಬೇಧವನ್ನು ತೊಡೆದು ಎಲ್ಲ ಮಕ್ಕಳಿಗೂ ಶಿಕ್ಷಣವನ್ನು ಕಲಿಯುವುದು ಮೂಲಭೂತ ಹಕ್ಕು ಎಂದು ಘೊಷಿಸಿದ ಶಿಕ್ಷಣ ಹಕ್ಕು ಕಾಯ್ದೆಯನ್ನು ಸಂಸತ್‌ ಅನುಮೋದಿಸಿತು. ಇದು ಖಾಸಗಿ ಶಾಲೆಗಳಲ್ಲೂ ಬಡ ಮಕ್ಕಳಿಗೆ ಶೇ.25ರಷ್ಟು ಸೀಟ್‌ ಮೀಸಲಿರಿಸಲು ಪ್ರಸ್ತಾಪಿಸಿತ್ತು.
ಪರಮಾಣು ಸಜ್ಜಿತ ಜಲಾಂತರ್ಗಾಮಿ:
ಪರಮಾಣು ಸಜ್ಜಿತ ಖಂಡಾಂತರ ಕ್ಷಿಪಣಿ ವ್ಯವಸ್ಥೆ ಹೊಂದಿದ್ದ ದೇಶದ ಮೊಟ್ಟ ಮೊದಲ ದೇಶಿ ನಿರ್ಮಿತ ಜಲಾಂತರ್ಗಾಮಿ ಐಎನ್‌ಎಸ್‌ ಹರಿಹಂತ್‌ ಅನ್ನು 2009ರ ಜುಲೈ 26ರಂದು ಅನಾವರಣಗೊಳಿಸಲಾಯಿತು

2010
ಕಾಮನ್‌ವೆಲ್ತ್‌ ಆಯೋಜನೆ :
ಕಾಮನ್‌ವೆಲ್ತ್‌ ಕ್ರೀಡಾಕೂಟವನ್ನು ರಾಜಧಾನಿ ನವದೆಹಲಿಯಲ್ಲಿ ಭಾರತ ಆಯೋಜಿಸಿತ್ತಲ್ಲದೇ, 100 ಪದಕಗಳನ್ನು ಗೆಲ್ಲುವ ಮೂಲಕ ಆಸ್ಟ್ರೇಲಿಯಾದ ನಂತರ 2ನೇ ಸ್ಥಾನ ಪಡೆದುಕೊಂಡಿತ್ತು.

2011
2ನೇ ವಿಶ್ವಕಪ್‌ ಗೆಲುವು :
ಭಾರತದ ವಿಶ್ವಕಪ್‌ ಕೊರಗು ನಿವಾರಣೆ ಮಾಡಿದ ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಸಲ್ಲುತ್ತದೆ. 1983ರ ನಂತರ ಭಾರತ ವಿಶ್ವಕಪ್‌ ಗೆಲ್ಲುವಲ್ಲಿ ವಿಫ‌ಲವಾಗಿತ್ತು. ನಂತರ 2011ರಲ್ಲಿ ಶ್ರೀಲಂಕಾವನ್ನು ಮಣಿಸಿ ಗೆಲುವು ಮುಡಿಗೇರಿಸಿಕೊಂಡಿತು.

2012
ಭಾರತದಲ್ಲಿ 4ಜಿ ಶಕೆ ಆರಂಭ: ಮೊಟ್ಟ ಮೊದಲಬಾರಿಗೆ 4ಜಿ ಸೇವೆಯನ್ನು ಟೆಲಿಕಾಂ ಸಂಸ್ಥೆ ಏರ್‌ಟೆಲ್‌ ಪರಿಚಯಿಸಿತು.

2013
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಜಾರಿ:
1.2ಶತಕೋಟಿ ಭಾರತೀಯರ ಪೈಕಿ 3ನೇ 2ರಷ್ಟು ಮಂದಿಗೆ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯ ಒದಗಿಸಲು ಉದ್ದೇಶಿಸಿದ ರಾಷ್ಟ್ರೀಯ ಆಹಾರ ಭದ್ರತಾ ಮಸೂದೆಯು ಕಾಯ್ದೆಯಾಗಿ ಜಾರಿಗೊಂಡಿತು.

ಮಿಷನ್‌ ಮಂಗಳ ಯಶಸ್ವಿ :
ಮಂಗಳಗ್ರಹದಲ್ಲಿ ಶೋಧನೆಗೆ ಉದ್ದೇಶಿಸಿದ್ದ ಇಸ್ರೋದ ಮಹತ್ವಾಕಾಂಕ್ಷೆಯ ಮಿಷನ್‌ ಮಂಗಳ ಯೋಜನೆಯು ಯಶಸ್ವಿಯಾಗಿ ಉಡಾವಣೆಗೊಂಡಿತು. ಇದು ಏಷ್ಯಾದಲ್ಲಿ ಮಂಗಳನಲ್ಲಿಗೆ ಕಾಲಿಟ್ಟ ಮೊದಲ ದೇಶವೆಂಬ ಖ್ಯಾತಿಯನ್ನು ಭಾರತಕ್ಕೆ ತಂದುಕೊಟ್ಟಿದ್ದಲ್ಲದೇ, ವಿಶ್ವದಲ್ಲೇ ಮೊದಲ ಪ್ರಯತ್ನದಲ್ಲೇ ಯಶಸ್ಸುಕಂಡ ಮೊದಲ ದೇಶವೆಂಬ ಗರಿಮೆಯನ್ನೂ ಭಾರತಕ್ಕೆ ನೀಡಿತ್ತು.

2014
ಪೊಲಿಯೋ ಮುಕ್ತ ರಾಷ್ಟ್ರ :
ಭಾರತವನ್ನು ಪೊಲಿಯೋ ಮುಕ್ತ ರಾಷ್ಟ್ರವೆಂದು ವಿಶ್ವಸಂಸ್ಥೆ ಪ್ರಮಾಣೀಕರಿಣಿಸಿ ಘೋಷಿಸಿತು.
29ನೇ ರಾಜ್ಯ ನಿರ್ಮಾಣ :
ಆಂಧ್ರಪ್ರದೇಶದ ವಾಯುವ್ಯ ಭಾಗವು ತೆಲಂಗಾಣ ರಾಜ್ಯವಾಗಿ ವಿಂಗಡನೆಗೊಂಡು, ದೇಶದ 29ನೇ ರಾಜ್ಯವಾಗಿ ಮಾರ್ಪಾಡಾಯಿತು.
ಸ್ವತಂತ್ರ ಜಿಪಿಎಸ್‌ ವ್ಯವಸ್ಥೆ :
ಮೊಟ್ಟ ಮೊದಲ ಬಾರಿಗೆ ಅಮೆರಿಕದ ಜಿಪಿಎಸ್‌ ಮಾದರಿಯಲ್ಲೇ ಭಾರತ ತನ್ನದೇ ಆದ ಜಿಪಿಎಸ್‌ ಉಪಗ್ರಹ ವ್ಯವಸ್ತೆಯನ್ನು ಉಡಾವಣೆಗೊಳಿಸಿತು

2017
ಜಿಎಸ್‌ಟಿ ಜಾರಿ :
ಪ್ರಮುಖ ಕೇಂದ್ರ ಮತ್ತು ರಾಜ್ಯ ತೆರಿಗೆಗಳನ್ನು ವಿಲೀನಗೊಳಿಸಿದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಭಾರತದಾದ್ಯಂತ 2017ರ ಜುಲೈ 1ರಂದು ಜಾರಿಗೊಂಡಿತು.
ತ್ರಿವಳಿ ತಲಾಖ್‌ ನಿಷೇಧ :
ಮುಸ್ಲಿಂ ಹೆಣ್ಣು ಮಕ್ಕಳಿಗೆ ಮೂರು ಬಾರಿ ತಲಾಖ್‌ ಹೇಳುವ ಮೂಲಕ ವಿಚ್ಛೇಧನ ನೀಡಬಹುದಾಗಿದ್ದ ನಿಯಮ ತ್ರಿವಳಿ ತಲಾಖ್‌ ಅನ್ನು ಸುಪ್ರೀಂಕೋರ್ಟ್‌ ನಿಷೇಧಿಸಿತು.
ಐಫೋನ್‌ ಮಾರಾಟ:
ಖ್ಯಾತ ಮೊಬೈಲ್‌ ತಯಾರಕ ಸಂಸ್ಥೆ ಆ್ಯಪಲ್‌ ಮೊಟ್ಟ ಮೊದಲ ಬಾರಿಗೆ ಭಾರತದಲ್ಲೇ ತಯಾರಾದ ಆ್ಯಪಲ್‌ ಐಫೋನ್‌ಗಳ ಮಾರಾಟ ಆರಂಭಿಸಿತು.

2018
ಸಲಿಂಗಕಾಮ ಅಪರಾಧವಲ್ಲ:
ಭಾರತದ ಸರ್ವೋತ್ಛ ನ್ಯಾಯಾಲಯವು ಸಲಿಂಗಕಾಮ ಅಪರಾಧವೆಲ್ಲವೆಂಬ ಐತಿಹಾಸಿಕ ತೀರ್ಪು ನೀಡಿತು.

2019
ಐಎಎಫ್ ಗೆ  ತೇಜಸ್‌ :
ದೇಶದ ಮೊಟ್ಟ ಮೊದಲ ದೇಶಿನಿರ್ಮಿತ ಯುದ್ಧ ವಿಮಾನ ತೇಜಸ್‌ಗೆ ಅಂತಿಮವಾಗಿ ಕಾರ್ಯಾಚರಣೆಗೆ ಅನುಮತಿ ಸಿಕ್ಕುವ ಮೂಲಕ ಭಾರತೀಯ ವಾಯುಪಡೆಗೆ ತೇಜಸ್‌ ಸೇರ್ಪಡೆಗೊಂಡಿತ್ತು.
ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆ :
ಭೂಮಿಯಿಂದಲೇ ಬಾಹ್ಯಾಕಾಶದಲ್ಲಿರುವ ಉಪಗ್ರಹಗಳನ್ನು ಹೊಡೆದುರುಳಿಸುವ ಕ್ಷಿಪಣಿ ವ್ಯವಸ್ಥೆ ಶಕ್ತಿ ಆ್ಯಂಟಿ ಸ್ಯಾಟಲೈಟ್‌ ಮಿಸೈಲ್‌ ಅನ್ನು ಭಾರತ ಯಶಸ್ವಿಯಾಗಿ ಪರೀಕ್ಷಿಸಿತು.
ಚಂದ್ರಯಾನ-2 :
ಚಂದ್ರನ ಮೇಲೆ ತನ್ನ ಮೊದಲ ಬಾಹ್ಯಾಕಾಶ ನೌಕೆಯನ್ನು ಇಳಿಸುವ ಭಾರತದ ಮೊದಲ ಪ್ರಯತ್ನ ನಡೆದಿದ್ದು 2019ರ ಜುಲೈ 22ರಂದು. ಅಂದು ಮಧ್ಯಾಹ್ನ 2.43ಕ್ಕೆ ಚಂದ್ರಯಾನ-2 ಅನ್ನು ಹೊತ್ತ ಬಲಿಷ್ಠ ಜಿಎಸ್‌ಎಲ್‌ವಿ ಎಂಕೆ-2 ರಾಕೆಟ್‌ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಯಿತು.

2020
ಕೊವ್ಯಾಕ್ಸಿನ್‌ :
ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಭಾರತದ ಮೊದಲ ಕೊರೊನಾ ನಿಗ್ರಹ ಕೊವ್ಯಾಕ್ಸಿನ್‌ ಲಸಿಕೆ ಭಾರತೀಯರಿಗೆ ಲಭ್ಯವಾಗಿದ್ದು 2020ರಲ್ಲಿ. ಭಾರತ್‌ ಬಯೋಟೆಕ್‌ ಕಂಪನಿಯು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್‌) ಮತ್ತು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್ ವೈರಾಲಜಿ(ಎನ್‌ಐವಿ) ಸಹಭಾಗಿತ್ವದಲ್ಲಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿತು.

2021
ಕೋವಿಡ್‌-19 ಲಸಿಕೆ ಅಭಿಯಾನ :
ಕೊರೊನಾ ಸೋಂಕಿನಿಂದ ರಕ್ಷಣೆ ಒದಗಿಸುವ ಕೋವಿಡ್‌-19 ಲಸಿಕೆ ವಿತರಣೆ 2021ರಲ್ಲಿ ಅತ್ಯಂತ ಕ್ಷಿಪ್ರವಾಗಿ ನಡೆಯಿತು. ಕೇವಲ 279 ದಿನಗಳಲ್ಲಿ ಶತಕೋಟಿ ಮಂದಿಗೆ ಮೊದಲ ಡೋಸ್‌ ವಿತರಣೆ ಪೂರ್ಣಗೊಂಡಿತು.

2021
ನೀರಜ್‌ಗೆ ಚಿನ್ನ :
ಜಪಾನ್‌ ರಾಜಧಾನಿಯಲ್ಲಿ ನಡೆದ ಟೋಕಿಯೋ ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್‌ ಎಸೆತ ವಿಭಾಗದಲ್ಲಿ ನೀರಜ್‌ ಚೋಪ್ರಾ ಅವರು ಚಿನ್ನದ ಪದಕಕ್ಕೆ ಮುತ್ತಿಕ್ಕಿ, ಇತಿಹಾಸ ಬರೆದ ವರ್ಷವಿದು. ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಒಲಿಂಪಿಕ್‌ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ ಮೆಡಲ್‌ ಗೆದ್ದ ಭಾರತೀಯ ಎಂಬ ಖ್ಯಾತಿಗೆ ನೀರಜ್‌ ಪಾತ್ರರಾದರು.

2022
ಎಸ್‌ಎಸ್‌ಎಲ್‌ವಿ ಉಡಾವಣೆ :
ಭಾರತದ ಹೊಸ ರಾಕೆಟ್‌ ಸ್ಮಾಲ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌(ಎಸ್‌ಎಸ್‌ಎಲ್‌ವಿ) ಆಂಧ್ರದ ಶ್ರೀಹರಿಕೋಟದಿಂದ 2022ರ ಆಗಸ್ಟ್‌ 7ರಂದು ಮೊದಲ ಬಾರಿಗೆ ನಭಕ್ಕೆ ಚಿಮ್ಮಿತು. ಈ ಬಾಹ್ಯಾಕಾಶ ನೌಕೆಯು 34 ಮೀಟರ್‌ ಎತ್ತರ ಮತ್ತು 120 ಟನ್‌ ತೂಕ ಹೊಂದಿತ್ತು.

2023
ಚಂದ್ರಯಾನ-3 :
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಹತ್ವಾಕಾಂಕ್ಷೆಯ ಯೋಜನೆ ಚಂದ್ರಯಾನ 3 ಯಶಸ್ವಿಯಾಗಿ ಉಡಾವಣೆಗೊಂಡು, ಚಂದ್ರನ ಕಕ್ಷೆ ಪ್ರವೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next