Advertisement

Independence Day: 1942ರ ಅ. 10ರಂದು ಕಾರ್ಕಳದಲ್ಲೂ ನಡೆದಿತ್ತು ಹರತಾಳ

10:47 AM Aug 15, 2023 | Team Udayavani |

ಕಾರ್ಕಳ: 1942ರ ಕ್ವಿಟ್‌ ಇಂಡಿಯಾ ಚಳವಳಿ ಕಾವು ಕಾರ್ಕಳ ದಲ್ಲೂ ಇತ್ತು. ಆಗಸ್ಟ್‌ 8ರಂದು ಮುಂಬಯಿಯ ಕಾಂಗ್ರೆಸ್‌ ಅಧಿವೇಶನದಲ್ಲಿ ಚಳವಳಿ ಕುರಿತ ಠರಾವು ಅಂಗೀಕರಿಸಲಾಯಿತು. ಗಾಂಧೀಜಿಯವರು “ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂದು ಘೋಷಿಸಿ ಚಳವಳಿಯನ್ನು ತೀವ್ರಗೊಳಿಸಿದರು.

Advertisement

ಆಗಸ್ಟ್‌ 9ರಂದು ಕಾರ್ಕಳದಲ್ಲಿ ಎಂ.ಡಿ. ಅಧಿಕಾರಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಆವೇಶ ಭರಿತ ಭಾಷಣ ಮಾಡಿದರು. ಪೊಲೀಸರು ಲಾಠಿ ಪೆಟ್ಟು ನೀಡಿದರಲ್ಲದೇ, ಅವರನ್ನು ಬಂಧಿಸಿದರು. ಈ ಘಟನೆ ಖಂಡಿಸಿ ಕಾರ್ಕಳದಲ್ಲಿ ಜನರು ಆಗಸ್ಟ್‌ 10ರಂದು ಹರತಾಳ ಆಚರಿಸಿದರು. ಶಾಲೆಗಳಲ್ಲೂ ಈ ಹರತಾಳದ ಬಿಸಿ ಇತ್ತು. ಆಗ ವೆಂಕಟೇಶ ಪ್ರಭು, ಕೇಶವ ಶೆಣೈ ಮತ್ತು ಸುಬ್ರಾಯ ನಾರಾಯಣ ಮಲ್ಯರಿದ್ದ ಕಾರ್ಯಕರ್ತರ ತಂಡವು ಚಿಕಿತ್ಸೆ ಪಡೆ ಯುತ್ತಿದ್ದ ಎಂ.ಡಿ. ಅಧಿಕಾರಿಯವರನ್ನು ಕಾಣಲು  ಮಂಗಳೂರಿನ ನರ್ಸಿಂಗ್‌ ಹೋಂಗೆ ಹೋಗಿತ್ತು. ಅ. 9ಕ್ಕೆ ನಿಷೇಧಾಜ್ಞೆ ಮುರಿದು ಸತ್ಯಾಗ್ರಹ ಮಾಡಲು ಎಂ.ಡಿ. ಅಧಿಕಾರಿ ಸೂಚಿಸಿದರು.

ಕೆ. ಸದಾಶಿವರಾಯರ ಮನೆ ಸತ್ಯಾಗ್ರಹಿಗಳ ಭವನ ಈ ಆದೇಶದೊಂದಿಗೆ ವಾಪಸಾದ ತಂಡವು, ಕಾರ್ಯಕರ್ತರನ್ನು ಸಂಘಟಿಸಿತು. ಕಾರ್ಕಳದ ಕೆ. ಸದಾಶಿವ ರಾಯರ ಪಾಳು ಬಿದ್ದ ಮನೆ ಸತ್ಯಾಗ್ರಹಿಗಳ ಸ್ವರಾಜ್ಯ ಭವನವಾಗಿತ್ತು. ಅಲ್ಲಿಯೇ ನಡೆದ ಸಭೆಯಲ್ಲಿ ಸತ್ಯಾಗ್ರಹದ ನಿರ್ಧಾರ ಕೈಗೊಳ್ಳಲಾಯಿತು. ಅನಂತಶಯನದಲ್ಲಿ ಮೆರವಣಿಗೆ, ರಕ್ತದೋಕುಳಿ 1942 ಅಕ್ಟೋಬರ್‌ 9. ಕಾರ್ಕಳದ ಇತಿಹಾಸದಲ್ಲಿ ಅವಿಸ್ಮರಣೀಯ ದಿನ.

ಹಿರಿಯ ಗಾಂಧಿವಾದಿ ಕೆ. ವೆಂಕಟೇಶ ಪ್ರಭುಗಳ ನಾಯಕತ್ವದಲ್ಲಿ ಸತ್ಯಾಗ್ರಹಿಗಳ ತಂಡ ಅಂದು ಬೆಳಗ್ಗೆ ಅನಂತಶಯನ
ದೇಗುಲದಿಂದ ಮೆರವಣಿಗೆ ಹೊರಟಿತು. ಆಗ ನಿಷೇಧಾಜ್ಞೆ ಜಾರಿಯಲ್ಲಿತ್ತು. ಅದನ್ನು ಉಲ್ಲಂಘಿಸಿದ ಕಾರಣಕ್ಕೆ 40 ಜನ ಸಶಸ್ತ್ರ ಪೊಲೀಸ್‌ ಪಡೆಯೊಂದಿಗೆ ಅಧಿಕ ಸಂಖ್ಯೆಯಲ್ಲಿದ್ದ ಪೊಲೀಸರಿಗೆ ಆಗಿನ ವಲಯ ಅಧಿಕಾರಿ ಅಣ್ಣಪ್ಪಯ್ಯ ಸತ್ಯಾಗ್ರಹಿಗಳ ಮೇಲೆ ಲಾಠಿ ಪ್ರಹಾರಕ್ಕೆ ಆದೇಶವಿತ್ತರು. ಪೊಲೀಸರು ಲಾಠಿ ಕುಣಿದಾಡತೊಡಗಿದವು.

ತಲೆಗೆ ಭಾರೀ ಪೆಟ್ಟುಬಿದ್ದು ರಕ್ತ ಚಿಮ್ಮಿದಾಗ ಸತ್ಯಾಗ್ರಹಿಗಳು ಒಬ್ಬೊಬ್ಬರಾಗಿ ನೆಲಕಚ್ಚಿದರು, ಸ್ಮತಿ ತಪ್ಪಿ ಬಿದ್ದರೂ ಇವರ ಮೇಲಿನ ಲಾಠಿ ಪ್ರಹಾರ ತಣ್ಣಗಾಗಿರಲಿಲ್ಲ. ಸತ್ಯಾಗ್ರಹಿಗಳಿಗೆ ನೀರು ಎರಚಿ ಉಪವಾಸ ಮಾಡಲುಹೋದ ಸತ್ಯಾಗ್ರಹಿ ಸುಬ್ರಾಯ ನಾರಾಯಣ ಮಲ್ಯ ಸಹ ಪೋಲೀಸರ ಲಾಠಿ ಪ್ರಹಾರಕ್ಕೆ ಗುರಿಯಾದರು. ಹೀಗೆ ಕಾರ್ಕಳದ 25ಕ್ಕೂ ಅಧಿಕ ಮಂದಿ ಸ್ವಾತಂತ್ರ್ಯ ಹೋರಾಟಗಾರರು ಜೈಲು ಸೇರಿದರು. ಅಂದು ಮೆರವಣಿಗೆಯಲ್ಲಿ ಭಾಗವಹಿಸಿ ಪೊಲೀಸರಿಂದ ಲಾಠಿ ಪೆಟ್ಟು ತಿಂದು 6 ತಿಂಗಳು ಕಾಲ ಜೈಲು ಶಿಕ್ಷೆ ಅನುಭವಿಸಿದ ಕಾರ್ಕಳದ ಪಾಂಡುರಂಗ ಪ್ರಭುಗಳು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

Advertisement

ಅವರು ನೆನಪಿಸಿಕೊಳ್ಳುವಂತೆ, “ನನ್ನ ಅಣ್ಣ ಕೃಷ್ಣ ಕಾಮತ್‌, ನರಸಿಂಹ ಕಾಮತ್‌ ಕೂಡ ಚಳವಳಿಯಲ್ಲಿ ಭಾಗವಹಿಸಿದ್ದರು. ಕಾರ್ಕಳದವರಷ್ಟೆ ಅಲ್ಲದೆ ಕುಂದಾಪುರ, ಮೂಡುಬಿದಿರೆ ಮತ್ತಿತರ ಕಡೆಯಿಂದಲೂ ಪ್ರತಿಭಟನೆ ನಡೆಸಿ ಜೈಲು ಸೇರಿದ್ದು ನೆನಪಿದೆ. ಅಂದಿನ ಬ್ರಿಟಿಷರ ದಬ್ಟಾಳಿಕೆ, ಪೊಲೀಸರ ದೌರ್ಜನ್ಯ ಇನ್ನೂ ಮರೆತಿಲ್ಲ’ ಎನ್ನುತ್ತಾರೆ. ಸ್ವಾತಂತ್ರ್ಯ ಸಂಗ್ರಾಮದ ಮೆರವಣಿಗೆ ನಡೆದ ಅನಂತಶಯನದಲ್ಲಿ ಸ್ಮಾರಕವಾಗಿ ಧ್ವಜಸ್ತಂಭ ಸ್ಥಾಪಿಸಲಾಗಿದ್ದು, 1957ರ ಆ. 15ರಂದು ಸ್ವಾತಂತ್ರ್ಯ ಹೋರಾಟಗಾರ ಕೆ. ವೆಂಕಟೇಶ ಪ್ರಭು ಶಂಕುಸ್ಥಾಪನೆ ನೆರವೇರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next